Tuesday, December 16, 2008

ಕೆಲವು ಖತರ್ನಾಕ್ ಐಡಿಯಾಗಳು

ನಾನು : ನನ್ನ ತಲೆ ಕೆಟ್ಟೋಗಿದೆ.

Z :ಅದೇನು ಹೊಸ ವಿಷಯ ಅಲ್ಲ.

ನಾನು : ಆದ್ರೂ...ಸುಮ್ನೆ ಗೊತ್ತಿರ್ಲಿ ಅಂತ ಹೇಳ್ದೆ.

Z : ಓದ್ತಿದ್ದೀಯಾ ?

ನಾನು : ಪ್ರಯತ್ನ ಪಡ್ತಿದಿನಿ.

Z : ಇಷ್ಟೇ...

ನಾನು : ಹಾಗೇನಿಲ್ಲ. ತಕ್ಕ ಮಟ್ಟಿಗೆ ಓದಿದ್ದೀನಿ.

Z : ಓಕೆ.

ನಾನು : ನನ್ನ ತಲೆ ಎಷ್ಟು ಕೆಟ್ಟಿದೆ ಅಂದ್ರೆ ಪರೀಕ್ಷೆ ಆದ್ಮೇಲೆ ಏನೆಲ್ಲಾ ಮಾಡ್ಬೇಕು ಅಂತ ಸ್ಕೆಚ್ ಹಾಕಿದಿನಿ.

Z : ನಾನು ಮಹಾಮೃತ್ಯುಂಜಯ ಜಪ ಮಾಡೋ ಲೆವೆಲ್ ಗೆ ಸ್ಕೆಚ್ ಹಾಕಿದ್ದೀಯಾ ?

ನಾನು : ಯೆಸ್.

Z : ಶಿವ ಶಿವ .....

ನಾನು : ಉಹಹಹಹಹಾಆಆಆಆ....

Z : ನೀನ್ ಈ ಥರ ರಾಕ್ಷಸಿ ನಗು ನಕ್ರೆ ನನಗೆ ಸಖತ್ ಭಯ ಆಗತ್ತೆ.

ನಾನು : ಹೇ...ಎಲ್ಲಾ ಭಯ ನೂ ಈಗ್ಲೆ ಪಟ್ಕೊಂಡ್ ಸ್ಟಾಕ್ ಖಾಲಿ ಮಾಡ್ಕೋಬೇಡ.ಒಂದೊಂದು ಐಡಿಯಾ ಕೇಳಿ installment ನಲ್ಲಿ ಭಯ ಪಟ್ಕೋ.

Z :ಓಕೆ.

ನಾನು : ಭಯಪಟ್ಕೊಂಡಾದ್ಮೇಲೆ...ನೆಕ್ಸ್ಟ್ ಅನ್ನಬೇಕು...ಓಕೆ ?

Z : ಓಕೆ.

ನಾನು : ಐಡಿಯ ೧. ಅಡುಗೆ ಮನೆಗೆ ಹೋಗಿ ಸ್ಟೀಲ್ ಪಾತ್ರೆನೆಲ್ಲಾ ಹೊರಗಡೆ ಇಟ್ಟು ಲ್ಯಾಬ್ ಥರ ಪಿಂಗಾಣಿ ಪಾತ್ರೆಗಳನ್ನ ಇಡ್ಬೇಕು;without bothering about ಮಡಿ.

Z : ಅಮ್ಮ ಒದ್ದು ಓಡಿಸ್ತಾರೆ. ನಿನ್ನ ಮನೆ ನ ಪಿಂಗಾಣಿ ಲೆ ಕಟ್ಟಿಸಿಕೋ...ನನ್ನ ಅಡಿಗೆಮನೆ ಬಿಟ್ಟು ಬಿಡು ಅಂತ ಬೈದು, ಒದಿತಾರೆ.

ನಾನು :ಇದು ಬರೀ ಐಡಿಯಾ ಅಷ್ಟೆ. ಕಲ್ಪನೆ.

Z : ನಿನ್ನ ಒದಿಯೋ ಕಲ್ಪನೆ ಚೆನ್ನಾಗಿದೆ ನಿಜ್ವಾಗ್ಲು.

ನಾನು : ನಿಜ್ವಾಗ್ಲು ಒದಿತಿನಿ ನಿಂಗೆ.

Z : ಬೇಡಾ....ನೆಕ್ಸ್ಟ್.

ನಾನು : ಐಡಿಯಾ ೨ .ಆಗುಂಬೆ ಘಾಟ್ ನ ಮಳೆಲಿ ಒಬ್ಬಳೇ ನಡ್ಕೊಂಡ್ ಇಳಿಬೇಕು...ವಿಥೌಟ್ ಛತ್ರಿ.

Z : ವ್ಹಾಟ್ ?????????????? !!!!!!!!!!!!!!!!!!!!!!!!!!!!!!!!!!!! ನಿನಗೆ ಬದುಕೋ ಆಸೆ ಇಲ್ವಾ ?

ನಾನು : ಇಲ್ಲ.

Z : ಲೇ...ನಿನಗಿಲ್ದೆ ಇರ್ಬಹುದು..ಆದ್ರೆ ನನಗಿದೆ.

ನಾನು : ಸರಿ. ಇಟ್ಕೋ.

Z : ನಿಜ್ವಾಗ್ಲೂ ಈ ಥರ ಖತರ್ನಾಕ್ ಐಡಿಯಾ ಎಲ್ಲಾ ಯಾಕ್ ಹೊಳಿತಿದೆ ನಿಂಗೆ ?

ನಾನು : ಗೊತ್ತಿಲ್ಲ.

Z : ದೇವ್ರೆ...ಪ್ಲೀಸ್ ಕಾಪಾಡು.

ನಾನು : any reply from God ?

Z : Not reachable at the moment ಅಂತೆ....

ನಾನು : ಹೆ ಹೆ ನಂಗೊತ್ತಿತ್ತು....

Z : ಗ್ರ್ರ್ರ್ರ್ರ್ರ್ರ್ರ್ರ್ರ್ರ್...ನೆಕ್ಸ್ಟ್

ನಾನು : ಐಡಿಯಾ ೩ . ಅಣ್ಣ ಚಿಕ್ಕೋರಾಗಿದ್ದಾಗ ಒಂದು ಮೋಟರ್ ಸೈಕಲ್ ನ ಪೂರ್ತಿ ಬಿಚ್ಚಿ ಮತ್ತೆ ಅಸ್ಸೆಂಬಲ್ ಮಾಡಿದ್ರು...ನಾನು ಅಟ್ ಲೀಸ್ಟ್ ಒಂದು ಸೈಕಲ್ ನಾದ್ರೂ ಡಿಸ್ಮಾಂಟಲ್ ಮಾಡ್ಬೇಕಲ್ಲಾ....

Z : ಬೋಲೋ ಮೆಕಾನಿಕ್ ಲಕ್ಷ್ಮೀ ಕಿ..

ನಾನು : ಓಯ್....ಆಡ್ಕೋಬೇಡಾ....

Z : ಇಲ್ಲ...ಜೈಕಾರ ಹಾಕ್ತಿದಿನಿ. ನಿಜ್ವಾಗ್ಲು...ಸಿಕ್ಕಾಪಟ್ಟೆ ಖತರ್ನಾಕ್ ಐಡಿಯಾ ಇದು. ನೆಕ್ಸ್ಟ್.

ನಾನು : ಐಡಿಯಾ ೪. ಲೈಬ್ರರಿ ಒಂದರಲ್ಲಿ ಬಚ್ಚಿಟ್ಕೋಬೇಕು. ರಾತ್ರಿ ಲೈಬ್ರರಿ ಮುಚ್ಚಿದ್ಮೇಲೆ ನಾನು ಒಳಗಿಂದ ಲೈಟ್ ಹಾಕಿ, ಪುಸ್ತಕ ಓದಿ..ಹೊರಗಿರೋರನ್ನೆಲ್ಲಾ ಹೆದರಿಸಿ, ಕಿಟಕಿಯಿಂದ ಹಾರಿ ತಪ್ಪಿಸ್ಕೋಬೇಕು. ಮಾರನೆಯ ದಿನ ಪೇಪರ್ ನಲ್ಲಿ " ಲೈಬ್ರರಿಯಲ್ಲಿ ದೆವ್ವ? " ಅನ್ನೋ ಹೆಡ್ ಲೈನ್ಸ್ ಓದ್ಬೇಕು.

Z : ವಾಆಆಆ ವಾ ವಾಹ್ !!!! ಗುಮ್ ನಾಂ ಹೈ ಕೊಯಿ....

ನಾನು : ಹೆ ಹೆ...ಸಖತ್ತಾಗಿದೆ ಅಲ್ವಾ ?

Z : ನಿಜ್ವಾಗ್ಲು...ಏಕ್ ದಂ ಖತರ್ನಾಕ್ ! ನೆಕ್ಸ್ಟ್.

ನಾನು : ಐಡಿಯಾ ೫. ಒಂದು ದಿನ ಸಿಕ್ಕ್ ಸಿಕ್ಕಿದ ಬಸ್ಸು ಹತ್ತಿ ಎಲ್ಲೆಲ್ಲೋ ಕಳೆದು ಹೋಗಿ...ಆಮೇಲೆ ನಾನೇ ರಸ್ತೆ ಕಂಡು ಹಿಡಿದುಕೊಂಡು ಮನೆಗೆ ಬರ್ಬೇಕು.

Z : ಯಾಕ್ ವಾಪಸ್ ಬರ್ತೀಯಾ ? ಹೊಟೋಗು ಅತ್ಲಗೆ .

ನಾನು : ಅಲ್ವಾ ? ನಂಗೂ ಹಾಗೆ ಅನ್ಸಿತ್ತು. ಆದ್ರೆ, for reasons , ಹಾಗೆ ಮಾಡಕ್ಕೆ ಆಗಲ್ಲ.

Z : ಥುತ್ ! ನೀನೋ...ನಿನ್ನ ಐಡಿಯಾಗಳೋ....

ನಾನು : ಸಖತ್ ಖತರ್ನಾಕ್ ಅಲ್ವಾ ?

Z :ಹೌದ್ ಹೌದ್.

ನಾನು :ಇನ್ನೊಂದಿಷ್ಟ್ ಇವೆ...ಹೇಳಿಬಿಡ್ಲಾ ?

Z : ತಾಯಿ....ಪ್ಲೀಸ್...ಬೇಡ.

ನಾನು : ಯಾಕೆ ?

Z : ಭಯದ ಸ್ಟಾಕ್ ಖಾಲಿ ಆಗಿದೆ.

ನಾನು : ಓಹ್...sad. ಸರಿ, Replenish your depleted stocks and I will tell you more !

Z : [ದೇವ್ರೆ..ಕಾಪಾಡು..ಪ್ಲೀಸ್...ಬೇಗ !] Yeah sure, why not ?

ನಾನು : ಅಲ್ಲಿಯವರೆಗೂ line on hold.

Wednesday, December 3, 2008

ಸಿಕ್ಕಾಪಟ್ಟೆ ದೊಡ್ಡ ಸುದ್ದಿ !

Z : ಏನ್ ಸುದ್ದಿ..ಬೇಗ ಹೇಳು !!!

ನಾನು : ನಾನ್ ಹೇಳಿದ್ರೆ ನೀನು ಖಂಡಿತಾ ನಂಬಲ್ಲ.

Z : ಏನ್ ಅಂಥಾ ಶಾಕಿಂಗ್ ನ್ಯೂಸು ?

ನಾನು : ಶಾಕಿಂಗ್ ಏ...ನಿಜ್ವಾಗ್ಲು

Z : ಪ್ಲೀಸ್...ಬೇಗ ಹೇಳ್ಬಿಡು.

ನಾನು : ಓಕೆ...ಫೋನ್ ಗಟ್ಟಿಯಾಗಿ ಇಟ್ಕೋ...

Z : ಹೂ....ಇಟ್ಕೊಂಡಿದಿನಿ...

ನಾನು : ಮನಸ್ಸು ಗಟ್ಟಿ ಮಾಡ್ಕೊ.

Z : ಮಾಡ್ಕೊಂಡಿದಿನಿ.

ನಾನು : ವಿಷಯ ಏನಪ್ಪಾ ಅಂದ್ರೆ.... kyunki saas bhi kabhi bahu thi ಸೀರಿಯಲ್ಲು ಮುಗಿದು ಹೋಗಿದೆ.

Z : what ???????


DHUD !!!!!!!!!!!!!!!

SHATTTER !!!!!!!!!!!!!!!!!!!


ನಾನು : ಬಿದ್ಯಾ ಚೇರ್ ಇಂದ ? ಮತ್ತೆ ಏನ್ ಒಡೆದು ಹಾಕ್ದೆ ? ಇನ್ನು ವಿಷಯ ನೇ ಕಂಪ್ಲೀಟ್ ಆಗಿಲ್ಲ.....

Z : ಬಿದ್ದೆ...ಜೋರಾಗೆ ಬಿದ್ದೆ :( ...ಕಾಫಿ ಲೋಟ ಬಿತ್ತು ಕೆಳಗೆ ...ತಿಂಡಿ ತಟ್ಟೆ ಕೂಡಾ...ಇನ್ನೂ ನ್ಯೂಸ್ ಇದ್ಯಾ ?

ನಾನು : ಹೂ...

Z : ಹೇಳ್ಬಿಡು.

ನಾನು : kahaanii ghar ghar kii ನೂ ಮುಗ್ದಿದೆ !

Z : Oh my God !!!!!!!!!!!!!!!!!!!!!!!!!!!!!!!!!!!


ನಾನು : ಆಯ್ತ ಗಾಬರಿ ಆಗಿದ್ದು ?

Z : ಹೂ. But I still cant believe it. ಯಾವಾಗ್ ಶುರುವಾಗಿದ್ದ್ ಹೇಳು ಇವೆರಡು ಸೀರಿಯಲ್ಲು ?

ನಾನು : ಒಂಭತ್ತನೇ ಕ್ಲಾಸಿನಲ್ಲಿದ್ದಾಗ.

Z : ಈಗ ?

ನಾನು : ಎಮ್. ಎಸ್ಸಿ ಮುಗಿಸಿದೆ.

Z :ಅಲ್ಲಿವರ್ಗು ಬರ್ತಿತ್ತು ಈ ಸೀರಿಯಲ್ಲು...

ಯಾಕ್ ಮುಗಿತು ಈ ಸೀರಿಯಲ್ಲು ?

ನಾನು :What do you mean by ಯಾಕ್ ಮುಗಿತು ?

Z : ಅವೆಲ್ಲ ನೆವರ್ ಎಂಡಿಂಗ್ ಸೀರಿಯಲ್ಲು ಕಣೇ...ಅದಕ್ಕೆ ಮುಕ್ತಾಯ ನೆ ಇಲ್ಲ...

ನಾನು : ಹೇಗೆ ಹೇಳ್ತಿಯಾ ?

ನೋಡು...ಕ್ಯುಂಕಿ ಯ ನಾಯಕ (?) ಮಿಹಿರ್ first time ಸತ್ತಾಗ by public demand ಅವನನ್ನ ಬದುಕಿಸ್ಲಿಲ್ವ ? ಆಮೇಲೆ ಅವ್ನಿಗೆ amnesia ಅಂತ ಹೇಳ್ಸಿ ಮಂದಿರಾ ಬೇಡಿ ನ ಕರ್ಸಿಲ್ವಾ ? amnesia season started with this serial. ಅದಾದ್ಮೆಲೆ ಇಪ್ಪತ್ತ್ ವರ್ಷದ advancement. That also began with this serial. ಎಷ್ಟು ಸರ್ತಿ ಮಿಹರ್ ಸತ್ತ ? ಎಷ್ಟು ಸರ್ತಿ ಬದಲಾದ ? ಆ ಅಜ್ಜಿ ನೂರೈವತ್ತ್ ವರ್ಷ ಆದ್ರು ಬದ್ಕಿದ್ರು ? ಇನ್ನು ಕಥಾನಾಯಕಿ ತುಳಸಿ..ಆ ಮಹಾಮಾತೆ ? ಎಷ್ಟು ಕೋಟಿ ಸರ್ತಿ ಕಣ್ಣ್ ಕೆಕ್ಕರಿಸಿದ್ದಾಳೆ ? ಆಮೇಲೆ euthenesia (mercy killing) concept ನ ಜಾರಿಗೆ ತಂದು ಭಾರತದ ಸೀರಿಯಲ್ ಗಳ ರೂಪುರೇಷೆಯನ್ನೇ ಬದಲಿಸಿಬಿಟ್ಟಳಲ್ಲಾ ತುಳಸಿ ಮಾತೆ ? ( Actually Ekta Kapoor) ಇಷ್ಟೆಲ್ಲಾ ಮಾಡಿದ್ಮೇಲೆ ಫೈನಲ್ ಎಪಿಸೋಡ್ ಗೆ ಹತ್ತ್ ಎಪಿಸೋಡ್ ಮುಂಚೆ ಆ ನೂರೈವತ್ತು ವರ್ಷದ ಮುದುಕಿಯನ್ನ ಝಟ್ ಅಂತ ಸಾಯಿಸಿಬಿಟ್ಟ್ರು..ಆ ಆಸ್ತಿ ವಿಷಯ ನ ಕಡೆಗೂ ಬಗೆ ಹರಿಸಲೇ ಇಲ್ಲ...

Z : ಓ...ತಮಗೆ ಆಸ್ತಿ ವಿವಾದ ನೆಟ್ಟಗಾಗ್ಲಿಲ್ಲ ಅಂತ ಬೇಜಾರಾ ?

ನಾನು : ಇಲ್ಲಾ...ಎಂಡಿಂಗ್ ಅರ್ಥ ಆಗ್ಲಿಲ್ಲಾ ಅಂತ ಬೇಜಾರು.

Z : ಯಾಕೆ ?

ನಾನು : ನೋಡೂ...ಫಸ್ಟಫಾಲ್ ನಾನು ಸ್ಟಾರ್ ಪ್ಲಸ್ ಕಡೆ ಮುಖ ಹಾಕಿ ತುಂಬಾ ತಿಂಗಳುಗಳಾಗಿದ್ದವು. ರಿಯಾಲಿಟಿ ಷೋಗಳನ್ನ ಕೂಡಾ ನೋಡೋದು ಬಿಟ್ಟಿದ್ದೆ. ಒಂದಿನ ತಲೆ ಕೆಟ್ಟು ಟಿವಿ ಆನ್ ಮಾಡಿದೆ. ಅಲ್ಲೇ ಹುರುವಾಗಿದ್ದು ಗೋಳು. " ಆಖ್ರೀ ಎಪಿಸೋಡ್...ಕ್ಯೂಂಕಿ ಸಾಸ್ ಭಿ ಕಭೀ ಬಹೂ ಥಿ ಅಂತ ಆಡ್ ಬಂತು. ನಾನು ಕುಸಿದು ಕೂತೆ !! ಏನಾದ್ರು ಆಗ್ಲಿ, ಹೇಗ್ ಮುಗಿಸ್ತಾಳೇ ಈ ಮಹಾರಾಯ್ತಿ ಸೀರಿಯಲ್ ನ ಅಂತ ನೋಡಲು ಆವತ್ತು ರಾತ್ರಿ ನಿದ್ದೆಗೆಟ್ಟೆ. ಎದುರು ಮನೆ ನಂದಿನಿ ಗೆ ನಮ್ಮನೆ ಕಿಟಕಿಯಿಂದಲೇ ಕಿರುಚಿ ವಿಷಯ ತಿಳಿಸಿದೆ. ಅವರು ಕೂಡಾ ಆಸಕ್ತಿಯಿಂದ ನೋಡಲು ಕೂತರು. ನೋಡಿದ್ರೆ...ಅದ್ ಯೇನೋ ಹೇಳಿ ಮುಗ್ಸೇ ಬಿಟ್ಲು ಅರ್ಧ ಘಂಟೆಲೆ...ನನಗೆ ಅದು ಎಂಡಿಂಗ್ ಅನ್ನಿಸಲೇ ಇಲ್ಲ...ನಾಳೆ ಮತ್ತೆ ನೋಡಿದರಾಯ್ತು ಅಂತ ಫೋನಲ್ಲಿ ರಿಮೈಂಡರ್ ಹಾಕೊಂಡೆ.

Z : ಆಮೇಲೆ ?

ನಾನು : ಮಾರನೇ ದಿನದಿಂದ ಮುಂಬೈ ನಲ್ಲಿ ಸೀರಿಯಲ್ ನಿರ್ಮಾಪಕರಿಗೂ ಮತ್ತೆ ಅದೆಂಥದ್ದೋ ಸಂಘಕ್ಕೂ ಸಿಕ್ಕಾಪಟ್ಟೆ ಜಗಳ್ ಶುರು ಆಯ್ತು. ಎಲ್ಲ ಸೀರಿಯಲ್ ಗಳನ್ನ ಮೊದಲನೇ ಎಪಿಸೋಡ್ ಇಂದ telecast ಮಾಡಲು ಶುರು ಮಾಡಿದರು.

Z : ತಮಗೆ ಅದನ್ನ ನೋಡಿ ತಲೆ ಕೆಟ್ಟಿರತ್ತೆ...

ನಾನು : ಕೆಡೋದಾ..ಚೆಲ್ಲಾಪಿಲ್ಲಿ ಚಿಂದಿ ಚಿತ್ರಾನ್ನ ಆಗೋಯ್ತು. ಸರಿ ಮತ್ತೆ ನಾನು ಟಿವಿ ಕಡೆ ಮುಖ ಹಾಕಲೇ ಇಲ್ಲ.

Z : ಆಮೇಲೆ ?

ನಾನು : ಮೊನ್ನೆ ರೋಹಿಣಿ ಗೆ ಫೋನ್ ಮಾಡಿದೆ. ಹಾಗೆ ಮಾತಾಡ್ತಾ ಕ್ಯೂಂಕಿಯ ಕಥೆ ಶುರುವಾಯ್ತು. ನಾನು ಹೇಳಿದೆ ಕ್ಯೂಂಕಿ ಮುಗಿತು ಕಣೆ ಅಂತ. ಅವಳು ನಂಬಲೇ ಇಲ್ಲ. ಆಮೇಲೆ ಅವಳಿಗೆ ಆ ನಿರ್ಮಾಪಕರ ಜಗಳದ ಕಥೆ ಗೊತ್ತೇ ಇರ್ಲಿಲ್ಲ. ಆದರೂ ಅವಳು ಆ ಸೋ ಕಾಲ್ಡ್ "ಕಡೆಯ ಎಪಿಸೋಡ್ " ನೋಡಿದ್ದಳು. ನಾವಿಬ್ಬರೂ ಆ ಎಂಡಿಂಗ್ ನ ಅರ್ಥ ಏನಂತ ಹುಡುಕಲು ಶುರು ಮಾಡಿದ್ವಿ. ಕಡೆಗೆ ರೋಹಿಣಿ..

"ನೋಡು ಲಕ್ಷ್ಮೀ...ಏಕ್ತಾ ಕಪೂರ್ ಸೀರಿಯಲ್ ಗೇ ಅರ್ಥ ಇಲ್ಲ ಅಂದಮೇಲೆ ಇನ್ನು ಮುಕ್ತಾಯಕ್ಕೆ ಅರ್ಥ ಇದ್ಯಾ ?"

ಅಂದಳು.

ನಾನು ದೀಈಈಈಈಈರ್ಘವಾಗಿ ಯೋಚನೆ ಮಾಡಿದೆ. ಸರಿ ಅನ್ನಿಸಿತು. ಹೌದು ಕಣೆ...ನಿಜ ಅಂದೆ. ಆದರೆ ನಮ್ಮಿಬ್ಬರಿಗೂ ಎಂಡಿಂಗ್ ಅಲ್ಲಿ ತೋರಿಸಿದ ಕಹಾನಿ ಘರ್ ಘರ್ ಕೀ ಸೀರಿಯಲ್ಲಿಗೂ ಕ್ಯೂಂಕಿ ಸಾಸ್ ಭಿ ಕಭಿ ಬಹೂ ಥಿ ಸೀರಿಯಲ್ಲಿಗೂ ಏನ್ ಸಂಬಂಧ ಅಂತ ಇನ್ನೂ ಅರ್ಥ ಆಗ್ಲಿಲ್ಲ. ಹೆಚ್ಚು ತಲೆ ಕೆಡಿಸಿಕೊಳ್ಳಲು ನಮ್ಮಿಬ್ಬರಿಗೂ ಸಮಯ ಇರ್ಲಿಲ್ಲ. ಇಲ್ಲಾಂದಿದ್ರೆ ಅದಕ್ಕು ಒಂದು ಅರ್ಥ ಹುಡುಕ್ತಿದ್ವಿ.

Z : ವಾಹ್ ವಾಹ್ !! ಏನ್ detctive agents ನೀವು !

ನಾನು : ಇನ್ನೇನ್ ಮತ್ತೆ ? ;-)

Z : ಥುಥ್! ಇರ್ಲಿ...ಸೋ ಇವಾಗ ಏಕ್ತಾ ಕಪೂರ್ ಅವಳ highest TRP rated serials ನ ಮುಗಿಸಿದ್ದಾಳೆ.

ನಾನು : ಹೂಂ...

Z : ಯಾಕೆ ಅಂತ ಗೊತ್ತಿಲ್ಲ ಯಾರಿಗೂ...

ನಾನು : ಹೂಂ....

Z : ನೀನು ಗೆಸ್ಸ್ ಮಾಡು ನೋಡಣ ?

ನಾನು : ನಾನು ಗೆಸ್ಸ್ ಮಾಡೋದಾದ್ರೆ,

  • ತಿರುಪತಿಯಿಂದ ತಿಮ್ಮಪ್ಪನ ಪ್ರಸಾದದ ಕೊರಿಯರ್ ಅಪ್ಪಿ ತಪ್ಪಿ ರಾಹುಕಾಲದಲ್ಲಿ ಬಾಲಾಜಿ ಟೆಲಿಫಿಲಮ್ಸ್ ತಲುಪಿರತ್ತೆ.
  • ಸಿದ್ದಿವಿನಾಯಕ್ ದೇವಸ್ಥಾನಕ್ಕೆ ಇವರಿಗೆ ಯಮಗಂಡಕಾಲದಲ್ಲಿ ಪ್ರವೇಶ ಸಿಕ್ಕಿರತ್ತೆ.
  • ಅವಳ production unit ನಲ್ಲಿ 118ನೇ ಗಣಪತಿಯನ್ನು ಇಟ್ಟಿದ್ದ ಜಾಗದ ವಾಸ್ತು ಸರಿ ಇರಲ್ಲ.
  • ಅವರ studio ವಾಸ್ತು feng shui ಅನುಸಾರ ಇರಲಿಕ್ಕಿಲ್ಲ.
  • Director ವಾಸ್ತು ಪ್ರಕಾರ camera ಇಟ್ಟಿರಲ್ಲ.
  • actors reality show ಗೆ ಡೇಟ್ಸ್ ಕೊಟ್ಟಿರುತ್ತಾರೆ...ಸಿಗೋದಿಲ್ಲ.
  • ಡ್ಯಾನ್ಸ್ ಮಾಡಿ ಮಾಡಿ ಕೈ ಕಾಲು ನೋವು ಬಂದಿರತ್ತೆ...ನ್ಯಾಚುರಲ್ ಸ್ಲೋ ಮೋಷನ್ ನಲ್ಲಿ act ಮಾಡ್ತಿರ್ತಾರೆ, ಆದ್ರೆ ಆಗ chasing scene ನಡಿತಿರತ್ತೆ.
  • actors ಗೆ ತಾತನ ಅಜ್ಜಿ ಅತ್ತೆಯ ರೋಲ್ ಮಾಡೊ ಅಷ್ಟು ವಯಸ್ಸೇ ಆಗಿರಲ್ಲ...ತಗಾದೆ ತೆಗ್ದಿರ್ತಾರೆ.
ಇಷ್ಟು ನನ್ನ ಗೆಸ್ಸುಗಳು.

Z : ಉಫ್ಹ್ಹ್ಹ್ಹ್ಹ್ಹ್ !!!!!!!!!!! ಕಷ್ಟ ಈ ಸುದ್ದಿಯನ್ನ ಅರಗಿಸಿಕೊಳ್ಳೋದು.

ನಾನು : ಇದು ನಿಜ Z ...ಪ್ಲೀಸ್ ನಂಬು...ಸತತ ಒಂಭತ್ತು ವರ್ಷಗಳ torture ನಂತರ ಸರಿಯಲ್ ಮುಗಿದಿವೆ.

ಸೀರಿಯಲ್ ಮುಗಿದಿದೆ.....

ನಿಜ್ವಾಗ್ಲೂ....................

ನಿಜ್ ನಿಜ್ವಾಗ್ಲೂ ಮುಗಿದಿದೆ !

Sunday, November 30, 2008

Are we Republic anymore ????????

ನಾನು : ಒಬ್ಬಳೇ ಹೋಗ್ತಿಯಾ ಅಂತ ಕೇಳಿದರು ಅಮ್ಮ. ಜೀವನದಲ್ಲಿ ಮೊದಲನೇ ಸರ್ತಿ ಮನೆ ಬಿಟ್ಟು ಹೊರಗೆ ಹೋಗ್ತಿರೋ ಹಾಗೆ.

Z : ಇನ್ನೇನ್ ಮತ್ತೆ. ವಿದ್ಯಮಾನಗಳು, ವಾರ್ತೆಗಳಿಂದ ಏನು ಕಡಿಮೆ ಗಾಬ್ರಿ ಆಗಿರತ್ತ ? ನೀನೇನಂದೆ ?

ನಾನು : ಆಗಿದ್ದು ಇಷ್ಟು. ನಾನು ಕಂಪನಿಯಿಂದ ಕಳಿಸಬೇಕಿದ್ದ ಹೊಸ ವರ್ಷಕ್ಕೆ ಗ್ರೀಟಿಂಗ್ ಕಾರ್ಡ್ ಸೆಲೆಕ್ಟ್ ಮಾಡಲು ಜಯನಗರಕ್ಕೆ ಹೋಗಬೇಕಿತ್ತು. ಹೊರಗೆ ಭಯಂಕರ (ನನಗೆ ಮಾತ್ರ) ಚಳಿ. ಆದ್ರೆ I had to go.

ಅಮ್ಮ : ಅಣ್ಣನಿಗೆ ಫೋನ್ ಮಾಡು. ಕಾರ್ ನಲ್ಲಿ ಹೋಗು. ಒಬ್ಬೊಬ್ಬ್ಳೇ ಅಲಿಬೇಡಾ. ಪ್ಲೀಸ್.

ನಾನು : ಯಾಕೆ ?

ಅಮ್ಮ: ನೆಕ್ಸ್ಟ್ ಟಾರ್ಗೆಟ್ಟ್ ಬೆಂಗಳೂರು...

ನಾನು : ಶುಭ ನುಡಿ.

ಅಮ್ಮ: ಹೇಗ್ ನುಡ್ಯಕ್ಕಾಗತ್ತೆ ? ನಿಂಗೇನ್ ಗೊತ್ತು ನಮ್ ಯೋಚ್ನೆ ?

ನಾನು : ಯೋಚ್ನೆ ಮಾಡ್ಬೇಡ. ನಿನಗೆ ತೃಪ್ತಿ ಆಗತ್ತೆ ಅಂದ್ರೆ ಹತ್ತ್ ಹತ್ತ್ ನಿಮಿಷಕ್ಕೂ ಫೋನ್ ಮಾಡ್ಲಾ ?

ಅಮ್ಮ: ಅವೆಲ್ಲಾ ಬೇಡ. ನನಗೆ ಧೈರ್ಯ ಇದೆ. ಆದ್ರೂ ಈ ಚಳಿ ಲಿ ಹೋಗ್ಬೇಕಾ ?

ನಾನು : ಸಿಯಾಚಿನ್ ಗ್ಲೇಸಿಯರ್ ನಲ್ಲಿ ಟೆಂಪೆರೇಚರ್ರು ಮೈನಸ್ ೩೦ ಇರತ್ತೆ. ಅಲ್ಲಿ ನಮ್ಮ ವೀರ ಯೋಧರು ಬದುಕ್ಕೊಂಡು ದೇಶ ಕಾಯ್ತಿಲ್ವಾ ಇಲ್ಲೇನ್ ಚಳಿ ಮಹಾ..ನಾನ್ ಹೋಗ್ಬರ್ತಿನಿ.

ಅಮ್ಮ : ಹಿಂಗೆಲ್ಲಾ ಹೇಳಿದ್ರೆ ನಾನ್ ನಿನ್ನ ಕಳ್ಸ್ತಿನಿ ಅಂತ ಅಂದುಕೊಂಡಿದ್ಯ ?ಪ್ಲೀಸ್ ಸ್ವಲ್ಪ ದಿನ ಮನೇಲಿ ಇರ್ಬಾರ್ದ ?

ನಾನು : ಏನಾಗಲ್ಲಮ್ಮ...ಹೆದ್ರುಕೋಬೇಡ, ಪ್ಲೀಸ್ !

ಅಮ್ಮ: ಸರಿ ಏನಾದ್ರೂ ಮಾಡ್ಕೋ.

Z : ರಾಮ !

ನಾನು : ಆವಾಗ ಹಾಗ್ ಹೇಳಿ ಮನೆಯಿಂದ ಹೊರಗ್ ಬರೋದೇನೋ ಬಂದುಬಿಟ್ಟೆ. ಆದ್ರೆ ಬಂದ್ ಮೇಲೆ ಒಳಗೆ ಒಂಥರಾ ಭಯ ಶುರುವಾಯ್ತು. ಜಯನಗರದಲ್ಲಿ ನಾನು ಬಸ್ ಸ್ಟಾಪ್ ನಲ್ಲಿರೋವಾಗ ಸಡನ್ನಾಗಿ ಯಾರಾದ್ರು ಗುಂಡು ಹಾರಿಸಿಬಿಟ್ಟರೆ ? ಬಸ್ ನಲ್ಲೇ ಯಾರಾದ್ರೂ ಏನಾದ್ರು ಮಾಡಿಬಿಟ್ಟರೆ ? ಕಾಂಪ್ಲೆಕ್ಸ್ ಬ್ಲಾಸ್ಟ್ ಆದರೆ ? ಏನಿದು ಕ್ಷಣ ಕ್ಷಣಕ್ಕೂ ಇಷ್ಟೋಂದು uncertainty ? ಎಲೆಕ್ಟ್ರಾನ್ ( electron) ಜೀವನ ವಾಸಿ ಅನ್ನಿಸ್ತು ನನಗೆ ನನ್ನ ಜೀವನ compare ಮಾಡಿದ್ರೆ.

Z : ನಿಜ.

ನಾನು : ಮುಂಬೈ ನಲ್ಲಿ ನಡೆದ ಆ ಮಾರಣ ಹೋಮದ ಶಾಕ್ ಇಂದ ನಾನಂತೂ ಇನ್ನೂ ಹೊರಬಂದಿಲ್ಲ. ಅಲ್ಲಾ...ನಮ್ಮ ದೇಶಕ್ಕೆ ಹೀಗೂ ಒಂದು ದಾಳಿ ನಡೆಯಲಿದೆ ಅಂತ ಕನಸಿನಲ್ಲೂ ಎಣಿಸಿರಲಿಲ್ಲ. ಭಾರತದ ಪ್ರತಿಷ್ಟೆ, ಗೌರವ ಹಾಗೂ ಪ್ರೀತಿಪಾತ್ರವಾದ ಮುಂಬೈಯ ಮೇಲೆ ಇಂತಹಾ ಧಾಳಿಯೇ ? ಗೇಟ್ ವೇ ಆಫ್ ಇಂಡಿಯಾ ಭಯೋತ್ಪಾದಕರಿಗೆ ಹೆಬ್ಬಾಗಿಲಾಯ್ತೆ ?

Z : ಅನ್ಯಾಯ ಇದು. ಅಲ್ಲಾ...ಈ ಘಟನೆಯ ಉದ್ದೇಶ ಏನೂ ಅಂತ ?

ನಾನು : ಉದ್ದೇಷ ಅಸ್ಪಷ್ಟ . ರಾಜಕೀಯವೋ, ಮ(ದಾ)ತಾಂಧತೆಯೋ, ಜೆಹಾದ್ ಓ, ಭಯೋತ್ಪಾದನೆಯೋ, ಏನೋ ಎಂತೋ....

Z : ಆದ್ರೂ...massive attack .

ನಾನು : ಹೂ ಮತ್ತೆ. If they so much wanted to grab the world's attention, was there no way other than mass destruction ?


Z : ಹಾಗಲ್ಲ head ruled, ಇಂತಹ ಜನಕ್ಕೆ ಒಳ್ಳೇದು ಕೆಟ್ಟದ್ದು ಅನ್ನೋ ಪರಿಲಕ್ಪನೆ ಸರಿ ಇಲ್ಲ ಅನ್ನಿಸತ್ತೆ. fundamental error ಇದು.

ನಾನು : ಇರ್ಬಹುದು. ಆದ್ರೆ ಇಲ್ಲಿ ನಮ್ಮ ತಪ್ಪು ಹೆಚ್ಚಿದೆ .

Z : how can you make a statement like this ?

ನಾನು : That is because it is the truth. ನೋಡು...ಪ್ರಾಬ್ಲೆಮ್ ಶುರುವಾಗಿದ್ದು ಮುಂಬೈ ನಲ್ಲಿ ಅಲ್ಲ. ಪೂರ್ತಿ ಪಶ್ಚಿಮ ಕರಾವಳಿ ಲಿ. ದಿನಕ್ಕೆ ಕರಾವಳಿಯಿಂದ ಹೋಗುವ/ ಬರುವ ದೋಣಿಗಳ ಲೆಕ್ಕ ಸರಿಯಿರುವುದಿಲ್ಲ. ಕಸ್ಟಂ ಇಲಾಖೆಯ ಬಗ್ಗೆ ನಾನು ಮಾತಾಡದಿರುವುದು ಒಳಿತು. ಕಳೆದು ಹೋದ ದೋಣಿಗಳ ಬಗ್ಗೆ ತನಿಖೆ....ಬೇಡ ಅಲ್ಲ ಇವೆಲ್ಲ ಮಾತು ? ಕ್ಲೀಷೆ ಅನ್ಸತ್ತೆ.

Z : ಹು. ಆದ್ರೂ ನೆನ್ನೆ ಅಣ್ಣ ಹೇಳ್ತಿದ್ರಲ್ಲ...ನಮಗೆ " owningness " ಇಲ್ಲಾ ಅಂತ. ಅದು ನಿಜ ಅನ್ನಿಸತ್ತೆ. We don’t own over country at all. We own our property, we own our caste, creed. ನಮ್ಮ ಜಾತಿ, ಮತ, ಧರ್ಮಕ್ಕಿಂತಾ ಮೇಲೆ ನಾವಿರುವ ಈ ದೇಶ ನಮ್ಮದು ಅಂತ ನಮಗೆ ಅನ್ನಿಸಲ್ಲ. ಅದೇ ತೊಂದರೆ. ಲಂಚ ತಗೊಳ್ಳೋವಾಗ ನಮಗೆ ನಾವು ದೇಶಕ್ಕೆಮಾಡ್ತಿರೋ ದ್ರೋಹ ನೆನ್ಪಾಗಲ್ಲ. ಒಬ್ಬ ಸಮಾಜ ಘಾತುಕನನ್ನು ಹಾಗೇ ಬಿಟ್ಟರೆ ಅದರಿಂದ ಪ್ರಜೆಗಳ ಭದ್ರತೆಗೆ ಆಗುವ ಅಪಾಯದ ಅರಿವಿಲ್ಲ. ಪಾಸ್ಪೋರ್ಟೀಗೆ ನಮ್ಮ ದೇಶದ ಗುರುತು ಬೇಕು, ತಿಂದು ಕುಡಿದು ಸ್ವೇಚ್ಛೆಯಿಂಡ ತಿರುಗಾಡಲು ಭಾರತವೇ ಬೇಕು . This is seriously disgusting.

The most disappointing thing is- Our county declares itself " Sovereign Socialist Secular Democratic Republic" . ಯಾವ್ದಾದ್ರು ಒಂದು ಶಬ್ದನ ಅರ್ಥ ಮಾಡ್ಕೊಂಡಿದಾರಾ ಜನ ? ಹಾ ? ಅಥ್ವಾ ಆ ಶಬ್ದಗಳ ಥರ ನಡ್ಕೊಂಡಿದಾರ ರಾಜಕಾರಿಣಿಗಳು ? This attack is a blow to our Sovereignty. It is a black mark on socialism and the act is dead opposite to secularism. With democracy being a business...are we a Republic anymore ???????????????????????

ನಾನು : ಇನ್ನೊಂದು ಅತೀ ಸೀರಿಯಸ್ ವಿಷಯ ಇದೆ. ದೇಶದಲ್ಲಿ ಇರುವ ಅನ್ಯ ದೇಶೀಯರನನ್ನು ನಾವು ಸರಿಯಾಗಿ ಮಾನಿಟರ್ ಮಾಡ್ತಿಲ್ಲ. Cricket match ನೊಡಲು ಬರುವ ಅನ್ಯ ದೇಶೀಯಯರು ಭಾರತ ಬಿಟ್ಟು ಹೋದ್ರಾ ? ಗೊತ್ತಿಲ್ಲ. ಸರಿಯಾದ ಸಮಯದಲ್ಲಿ ವೀಸಾ ರೆನ್ಯೂ ಮಾಡದವರ ಮೇಲೆ ಕ್ರಮ ಜರುಗಿಸಲಾಗತ್ತಾ ? ಗೊತ್ತಿಲ್ಲ. ಎಲ್ಲದಕ್ಕು ನಮ್ಮ ದೇಶದಲ್ಲಿ ಒಂದು ದರಿದ್ರ ಉಡಾಫೆ. ಅಷ್ಟೆ. ಆಮೇಲೆ ಇಂತಹಾ ದಾಳಿಗಳಿಂದ ನಾವು ನಿದ್ದೆಯಿಂದ ಎದ್ದು, ನಮ್ಮ ಕಮಾಂಡೋಸ್ ಗಳನ್ನ ಬಿಟ್ಟು ಕಾರ್ಯಾಚರಣೆಯಲ್ಲಿ ಕೆಲ ಸಾವು ನೋವು ವೀರಮರಣಗಳಾದ ಮೇಲೆ, ನಮ್ಮ ವ್ಯವಸ್ಥೆಯ ಧಣಿಗಳ ತಲೆಯಲ್ಲಿ tube light on ಆಗತ್ತೆ. ಓಹ್...ತಪ್ಪಾಗಿದ್ದು ಇಲ್ಲಿ ಅಂತ. ಛೆ...ಧಿಕ್ಕಾರ ನಮ್ಮ ವ್ಯವಸ್ಥೆಗೆ.ನಮ್ಮ ವೀರ ಯೋಧರಿಗೆ ಭಾವಪೂರ್ಣ ಅಶ್ರುತರ್ಪಣ.

ನಮ್ಮ ದೇಶದವರು ಸಣ್ಣ ಸಣ್ಣ ಕ್ಲೂ ನೂ ಸೀರಿಯಸ್ಸಾಗಿ ತಗೊಳ್ಳೋ ವರ್ಗು ಉದ್ಧಾರ ಆಗಲ್ಲ Z.

Z : ಕರೆಕ್ಟು. ಆದ್ರೆ ನೀನು ಇನ್ನೊಂದು ವಿಷಯ ನ observe ಮಾಡಿದ್ಯಾ ? ಅಣ್ಣ point out ಮಾಡಿದ್ರಲ್ಲಾ ?

ನಾನು : ಏನು ?

Z : ಭಾರತದ ಪಾಪ್ಯುಲೇಷನ್ ಈಗ ಎಷ್ಟು ?

ನಾನು : 1132 million ಅನ್ನತ್ತೆ ವೆಬ್ ಸೈಟು.

Z :ಈ ಪಾಪ್ಯುಲೇಷನ್ ಗೆ ತಕ್ಕ ratio ನಲ್ಲಿ police and armed forces ಇದೆಯಾ ?

ನಾನು : ????????????????????

Z : ಇಲ್ಲ. ಸತ್ಯ ಒಪ್ಕೋ.

ನಾನು : ಹ್ಮ್ಮ್ಮ್

Z : ನೋಡು, ನಾವಿಲ್ಲಿ ಕೋಟ್ಯಂತರ ಜನ ಇದ್ದೀವಿ. ಅದರೆ ಸೈನ್ಯ ಇರೋದು ಕೆಲವು ಸಾವಿರ ಮಾತ್ರ. Its a dangerous difference in the order of magnitude. ಪಂಜಾಬ್ ನವರು ಹೋರಾಡ್ತಾರೆ...ಕೊಡವರು ಇದ್ದಾರೆ ಹೋರಾಡೋಕೆ ಅಂತ ದೇಶದ ಬಹಳ ಜನ ಸುಮ್ನೆ ಕೂತಿರ್ತಾರೆ. ಈಗ್ಲೂ ಸುಮ್ನೆ ಕೂತಿದಾರೆ. ನೀವೆಲ್ಲ ದಯವಿಟ್ಟು ಈ ಆರ್ಟಿಕಲ್ ನ ಓದಿ.


ಬೇರೆ ಏನು ಕೆಲ್ಸ ಸಿಕ್ಕಲಿಲ್ಲ ಅಂತ army ಸೇರೋ ಅಂಥಾ hopeless ಸ್ಥಿತಿ ಗೆ ತರಬಾರದು ನಾವು ನಮ್ಮ ದೇಶ ನ. ನಮ್ಮ ದೇಶ ಅಂತ ಒಂದಿದ್ದ್ರೆ ನೆ ನಾವು ಅಲ್ವಾ ? ತಂದೆ ತಾಯಂದ್ರು ಈಗ ಜಾಣರಾಗದೇ ಇದ್ರೆ ಮುಂದೆ inevitable ಆಗಿ " ಮನೆಯಿಂದ ಒಬ್ಬ ಸೈನಿಕ " ಅಂತ ಹೋಗ್ಲೇ ಬೇಕಾಗತ್ತೆ. ಬೇರೆ ದಾರಿ ಇರಲ್ಲ. ಅದರ ಬದ್ಲು ಮಕ್ಕಳಲ್ಲಿ ಮೊದಲು ದೇಶಭಕ್ತಿ ಭಾವನೆ ತುಂಬಿಸಿ ಅವ್ರನ್ನ ದೇಶಕ್ಕೆ ಹೋರಾಡೋ ಹಾಗೆ ಪ್ರೇರೇಪಿಸಬೇಕು. Atleast ನಾವೆ ನಮ್ಮನ್ನು defend ಮಾಡಿಕೊಳ್ಳುವ ಮಟ್ಟಿಗಾದರೂ ಬೆಳೆಸಬೇಕು. moreover, ಸೈನಿಕ ಅಂದ ತಕ್ಷಣ ಎಲ್ಲರು ಬಾರ್ಡರ್ ನಲ್ಲೇ ಇರ್ಬೇಕು ಅಂತ ಇಲ್ಲ. ಅದರಲ್ಲಿ ತುಂಬಾ ವಿಭಾಗಗಳಿರತ್ವೆ. ಅದಕ್ಕೆ distribute ಮಾಡ್ಬೇಕು ನಮ್ಮ ಜನಗಳನ್ನ. We have to fill in the gap. ಸಮಯ ಬಂದ್ರೆ ಪ್ರಾಣದ ಹಂಗು ತೊರೆದು ಹೋರಾಡೋ ಅಂಥಾ ಒಂದು ಮನೋಭಾವ ನ ಬೆಳೆಸಿಕೊಳ್ಳಬೇಕು. ಆ ಸಮಯ ಬರದೇ ಇರೋ ಹಾಗೆ vigilant ಆಗಿದ್ದು ಕಂಟ್ರೋಲ್ ಗೆ ತರ್ಬೇಕು ಪರಿಸ್ಥಿತಿ ನ. ತುರ್ತು ಪರಿಸ್ಥಿತಿನಲ್ಲಿ ಹೋರಾಡೋದು ಇದ್ದೇ ಇದೆ.

ನಾನು : I concur.

Z : ನಾನು ನೀನು ಅದ್ಯಾರಿಗೆ ಏನ್ ಅನ್ಯಾಯ ಮಾಡಿದ್ವೋ..ಆ ಪಾಪಕ್ಕೆ ಶಿಕ್ಷೆಯಾಗಿ ದೇವರು ನಮಗೆ ಬುದ್ಧಿ ಮಾತ್ರ ಕೊಟ್ಟ. ಶಕ್ತಿ ಕೊಡಲಿಲ್ಲ. ಮೋಸ ಆಗಿದೆ ನಮ್ಮಿಬ್ಬರಿಗೆ. ದೇವರಿಂದಲೇ !! ನಮ್ಮ ಕೈಲಿ ನಿಜ್ವಾಗ್ಲು ಆ ಶಕ್ತಿ ಇದ್ದಿದ್ದರೆ ನಾವು ಖಂಡಿತಾ ಆರ್ಮಿ ಸೇರ್ತಿದ್ವಿ. ನಮ್ಮ ತಂದೆ ಗೆ ಆರ್ಮಿ ಸೇರೋ ಆಸೆ ಇತ್ತು. ಆದ್ರೆ ನಮ್ಮ ತಾತ ಬಿಡಲಿಲ್ಲ. ನಮಗೆ ಸೇರ್ಬೇಕು ಅಂತ ಆಸೆ ಇದ್ರು, ಮನೇಲಿ ಒಪ್ಪಿದ್ರೂ ಇಲ್ಲಿ ದೇವರು ಒಪ್ಪಲಿಲ್ಲ ! Man proposes God disposes ಅನ್ನೋ ಗಾದೆಯ ಅತಿ ವಿಡಂಬನಾತ್ಮಕ ಉದಾಹರಣೆ ಬೇಕು ಪ್ರಪಂಚದಲ್ಲಿ ಅಂದ್ರೆ ಅದು ನಾವೆ.

ನಾನು : ನೆನಪಿಸಬೇಡ...ರಕ್ತ ಕುದಿಯತ್ತೆ.

Z :ನಮ್ಮ helplessness ಮೇಲೆ ನನಗೆ ಜಿಗುಪ್ಸೆ ಬರ್ತಿದೆ. ಕೆಲವರಿಗೆ ಶಕ್ತಿ ಇರತ್ತೆ, ಆಸೆ ನೆ ಇರಲ್ಲ. ಇನ್ನು ನಮ್ಮಂಥವರಿಗೆ ಆಸೆ ಇರತ್ತೆ, ಶಕ್ತಿ ಇರಲ್ಲ.

ನಾನು : ಬೇಡಾ......

Z : ಓಕೆ. coming back to the discussion, ಈಗ ನಮ್ಮ ದೇಶದ ಈ ಅತಂತ್ರ ಸ್ಥಿತಿ ಗೆ ನಾವೇ ಜವಾಬ್ದಾರರು. Where does the buck stop ? ಅಂತ ಕೂತ್ಕೊಂಡು ತಮಾಷೆ ನೋಡೊದನ್ನ ಬಿಟ್ಟು for once, ನಾವು ಎದ್ದು ಹೋರಾಡ್ಬೇಕು. ನಮ್ಮ ಕೈಯಲ್ಲಿ ಎಷ್ಟಾಗತ್ತೆ ಅಷ್ಟು, ಹೇಗಾಗತ್ತೆ ಹಾಗೆ, ಈ ದರಿದ್ರ ವ್ಯವಸ್ಥೆ ಮತ್ತು ಈ ಅಮಾನುಷ ಭಯೋತ್ಪಾದನೆ ವಿರುದ್ಧ ಹೋರಾಡ್ಬೇಕು. ನಾನಂತೂ ಹೀಗೆ ಅಂದುಕೊಂಡೀದಿನಿ. ನಮಗೆ ಮೋಸ ಆಗಿದೆ ನಿಜ. ಹಾಗಂತ ನಾನಂತೂ ಸುಮ್ಮನಿರಲ್ಲ. ನನ್ನ ಇರೋ ಶಕ್ತಿ ಬಳಸಿಯೇ ಈ ವ್ಯವಸ್ಥೆಯ , ಭಯೋತ್ಪಾದನೆ ವಿರುದ್ಧ ಹೋರಾಡ್ತಿನಿ.

I seriously think this event marks the beginning of a revolution, a revolution against a stinking system, revolution against terrorism. ಅಲ್ವಾ ?

Wednesday, November 26, 2008

ಪುಸ್ತಕೋತ್ಸವ ಮತ್ತು ವಸ್ತು ಪ್ರದರ್ಶನ

ನಾನು : ಸಿಕ್ಕಾಪಟ್ಟೆ ಮಾತಾಡೋದಿದೆ ನಿನ್ ಹತ್ರ.

Z :ಮಾತಾಡು

ನಾನು : ಟೈಮ್ ಇಲ್ಲ.

Z :ರೈಟ್ ಹೇಳು. ಮಾತಾಡ್ಬೇಕು ಅಂತಿಯಾ , ಟೈಂ ಇಲ್ಲಾ ಅಂತಿಯಾ...ಏನ್ ಅರ್ಥ ?

ನಾನು : ಗೊತ್ತಿಲ್ಲ.

Z :ಛೆ !

ನಾನು : ಈಗ ನಿನ್ನ ಹತ್ರ ಜಗಳ ಆಡೋದಕ್ಕೂ ಟೈಂ ಇಲ್ಲ. ನಿಂಗೆ ನಾನು ನಾಲ್ಕು ಪ್ರವಾಸ ಕಥನ ಹೇಳ್ಬೇಕು.

Z :ಯಪ್ಪಾ !

ನಾನು : ಯಾ...

Z :ಯಾವ್ಯಾವ್ದು ?

ನಾನು :

೧.ಮೈಸೂರು ಮತ್ತು ಜಾನಪದ ಲೋಕ.
೨. ಬೆಂಗಳೂರು ಪುಸ್ತಕೋತ್ಸವಕ್ಕೆ ಮತ್ತು ಚಿತ್ರಕಲಾ ಪರಿಷತ್ತಿನ ಪ್ರದರ್ಶನಕ್ಕೆ ಹೋಗಿದ್ದು
೩. ಗೊರವನಹಳ್ಳಿ ಮತ್ತು ದೇವರಾಯನದುರ್ಗಕ್ಕೆ ಹೋಗಿದ್ದು.
೪. ಕಡಲೆಕಾಯಿ ಪರಿಷೆ.

Z :ಹೋಪ್ಲೆಸ್ಸ್ ಫೆಲ್ಲೋ...ಓದೋದ್ ಬಿಟ್ಟು ಊರೂರು ತಿರುಗುತ್ತಿದ್ದೀಯಾ ?

ನಾನು :ಇಲ್ಲಾ...ತಿರುಗಾಡ್ಕೊಂಡ್ ಓದ್ತಿದ್ದೆ.

Z :ಇರ್ಲಿ...ಯಾವಾಗ್ ಹೇಳೋದು ನೀನು ಇವೆಲ್ಲಾ ?

ನಾನು :ಟೈಮ್ ಸಿಕ್ಕಾಗ.

Z :ನನಗೆ ಕೋಪ ಬರತ್ತೆ...

ನಾನು : ಪ್ಲೀಸ್ ಕೋಪ ಮಾಡ್ಕೋಬೇಡಾ...

Z :ಯಾವ್ದಾದ್ರು ಒಂದು ಪ್ರವಾಸ ಕಥನ ಹೇಳು.

ನಾನು : ಹ್ಮ್ಮ್....ಪುಸ್ತಕೋತ್ಸವದ ಬಗ್ಗೆ ಹೇಳುವೆ.

Z :ಹೇಳು.

ನಾನು : ಕುಮಾರಣ್ಣನ ಭವ್ಯದಿವ್ಯ ಸಮಾವೇಶ ನಡೆದ ಮಾರನೇ ದಿನ ನಾನು ಪುಸ್ತಕೋತ್ಸವಕ್ಕೆ ಹೋಗಲು ನಿರ್ಧರಿಸಿದೆ.

Z :ಗುಡ್. ಆಮೇಲೆ?

ನಾನು : ನನ್ನ ಸ್ನೇಹಿತೆ ರೋಹಿಣಿ ಬರ್ತಿನಿ ಅಂದಿದ್ಲು. ನಾವಿಬ್ಬರು ಕಾರ್ಪೋರೇಷನ್ ನಲ್ಲಿ ಮೀಟ್ ಮಾಡಿ ಒಟ್ಟಿಗೆ ಹೋಗೋದಿತ್ತು. ಆದ್ರೆ ಅವಳಿಗೆ ಅರ್ಜೆಂಟ್ ಮೀಟಿಂಗ್ ಬಂದು ಆಗಲ್ಲ ಅಂತ ನಾನ್ ಹೊರ್ಡೋ ಟೈಂ ಗೆ ಕರೆಕ್ಟಾಗಿ ಫೋನ್ ಮಾಡಿದಳು.

Z :ಪಾಪ...ಆಮೇಲೆ ?

ನಾನು :ಓಕೆ ಅಂದಿದ್ದೇ ನಾನು ಬಸ್ ಸ್ಟಾಪ್ ಗೆ ಬಂದು ನಿಂತೆ. ನನ್ನ ಅದೃಷ್ಟಕ್ಕೆ ಮೇಕ್ರಿ ಸರ್ಕಲ್ ಗೆ ಡೈರೆಕ್ಟ್ ಬಸ್ ಸಿಕ್ತು. ಆದ್ರೆ ಇವ ಎಲ್ಲಿ ನಿಲ್ಸ್ತಾನೆ ಅನ್ನೋ ಐಡಿಯಾ ಇರ್ಲಿಲ್ಲ. ನನಗೆ ಗೊತ್ತಿದ್ದಿದ್ದು ಆರ್ಮಿ ಕಮಾಂಡ್ ಹಾಸ್ಪಿಟಲ್ಲು ಮತ್ತು ರಾಮನ್ ಇನ್ಸ್ಟಿಟ್ಯೂಟ್ ಎರಡೇ..ಎಲ್ಲಾದ್ರೂ ಬಿಸಾಕಲಿ, ನಡೆಯೋದಿದ್ದೇ ಇದೆ ಅಂದುಕೊಂಡು ಹತ್ತಿದೆ ಬಸ್ಸು. ಸ್ಟಾಪ್ ಬಂದಾಗ ಹೇಳಿ ಅಂದಿದ್ದೇ ನಾನು ಕೆ. ವಿ. ಐಯ್ಯರ್ ಅವರ ಶಾಂತಲಾ ಕಾದಂಬರಿ ಲಿ ಮುಳುಗಿ ಹೋದೆ. ಮೂವತ್ತು ಪೇಜ್ ದಾಟಿದಾಗ ಚಾಮರಾಜಪೇಟೆ ಲಿ ಇದ್ದೆ. ಅರವತ್ತನೇ ಪೇಜಿಗೆ ಕೋತಿಬಂಡೆ. ಎಂಭತ್ತನೇ ಪೇಜ್ ಗೆ ಇಸ್ಕಾನು. ಆಮೇಲೆ ನಾನು ಕತ್ತೆತ್ತಲೇ ಇಲ್ಲ. ಬಸ್ಸು ತನ್ನ ಪಾಡಿಗೆ ತಾನು ಚಲಿಸುತ್ತಿತ್ತು. ಆಮೇಲೆ ಒಂದು ಪಾಯಿಂಟಲ್ಲಿ ಎಲ್ಲೊ ಬಿಸಿ ಗಾಳಿ ಶುರುವಾಯ್ತು. ನಾನು ಬೇಲೂರು ಹಳೇಬೀಡು ಗುಂಗಿನಲ್ಲಿದ್ದವಳು ಕತ್ತೆತ್ತಿದೆ. ಬಸ್ ನಿಂತಿದೆ ! ನೋಡಿದರೆ ಬಸ್ಸಲ್ಲಿ ಮೂರೇ ಜನ ! ಡ್ರೈವರ್ರು ಕಂಡಕ್ಟರ್ರು ಇಬ್ಬರೂ ಇಲ್ಲ! ಬಸ್ ನಿಂತಿರೋ ಜಾಗ ನೂ ನನಗೆ ಗೊತ್ತಾಗಲಿಲ್ಲ..ಮುಂದಿರೋರ್ ನ ಕೇಳಿದೆ. ಅವರು...ಮೇಡಮ್..ಇದು ಯಶ್ವಂತಪುರ...ಅವ್ರು ಊಟಕ್ಕೋ ಕಾಫಿಗೋ ಹೋಗಿದಾರೆ...ಬರ್ತಾರೆ ಅರ್ಧ ಘಂಟೆ ಲಿ ಅಂದರು. ಗಂಟೆ ಹನ್ನೊಂದು ಮುಕ್ಕಾಲು...ಊಟವೇ ಅಂದುಕೊಂಡೆ. ಪಕ್ಕದಲ್ಲಿ ಇನ್ನೊಂದು ಮೇಕ್ರಿ ಸರ್ಕಲ್ಗೆ ಹೋಗೋ ಬಸ್ಸು ಬಂದಿತು. ಪಾಸು ತಗೊಂಡಿದ್ದೆಯಾದ್ದರಿಂದ ಪುಳಕ್ ಅಂತ ಅಲ್ಲಿಗೆ ಹಾರಿದೆ.

Z :ಭೇಷ್ ! ಆಮೇಲೆ ?

ನಾನು : ಮೇಕ್ರಿ ಸರ್ಕಲ್ಲ್ ನಲ್ಲಿ ಬಸ್ಸು ನಿಂತಿತು. ದರಿದ್ರ ಟ್ರಾಫಿಕ್ಕು. ಕಷ್ಟ ಪಟ್ಟು ಇಳಿದೆ. ಅರಮನೆ ಮೈದಾನಕ್ಕೆ ಅಲ್ಲಿಂದ ಸ್ವಲ್ಪ ದೂರಾನೆ...ನಡೆದೆ.ಸಿಕ್ಕಾಪಟ್ಟೇ ಗೇಟ್ಗಳಿದಾವೆ..ಒಂದ್ ಕಡೆನಾದ್ರೂ ಡೈರೆಕ್ಷನ್ ಹಾಕ್ಬೇಡ್ವಾ? ನಾನು ದಾರಿ ಕೇಳಿದವರೆಲ್ಲ ಕನ್ನಡ ಬರ್ದೆ ಇರೋರು...ಕಡೆಗೆ ಒಬ್ಬ ಪುಣ್ಯಾತ್ಮ ನಾನು ಬುಕ್ ಫೆಸ್ಟಿವಲ್ ಅಂದಿದ್ದಕ್ಕೆ...ಗೋ ಸ್ತ್ರೈಟ್ ಅಂದ. ಸುಮಾರು ಒಂದು ಕಿಲೋಮೀಟರ್ ನಡೆದ ಮೇಲೆ ಇದು ಕಾಣಿಸ್ತು.


ಒಳಗೆ ಬಲಗಾಲಿಟ್ಟೆ. ಕೌಂಟರ್ ನಲ್ಲಿ ಟಿಕೆಟ್ ಪಡೆದು ಒಳಗೆ ಹೋದೆ.

Z :ಹೇಗಿತ್ತು ಫೀಲಿಂಗು ?

ನಾನು : Exhilarating as ever. ಪುಸ್ತಕ ಅಂದ್ರೆ ಪ್ರಾಣ ನನಗೆ...ಒಂದು ಸ್ಟಾಲನ್ನೂ ಬಿಡದೆ ಆಮೂಲಾಗ್ರವಾಗಿ ಎಲ್ಲಾ ಪುಸ್ತಕಗಳನ್ನೂ ನೋಡುತ್ತಾ ಬಂದೆ. ಆಂಗ್ಲ ನಾವೆಲ್ಲುಗಳನ್ನೆಲ್ಲಾ ಯಾಕೋ ಲೈಬ್ರರಿಯಲ್ಲೇ ಓದೋದು ಉತ್ತಮ ಅನ್ನಿಸಿತು.ಕನ್ನಡ ಪುಸ್ತಕಗಳಲ್ಲಿ ಒಂದೆರಡು ತಗೊಳ್ಳಲು ಆಸೆ ಆಯ್ತು. ಅಣ್ಣ " ನಿನ್ನನ್ನ ಪುಸ್ತಕ ಕೊಳ್ಳಲು ಬಿಟ್ಟರೆ ಟೆಂಪೋ ಅರೇಂಜ್ ಮಾಡ್ಬೇಕಾಗತ್ತೆ " ಅಂತ ಹೇಳಿ, ನೂರೈವತ್ತ್ ರುಪಾಯಿ ಕೈಲಿಟ್ಟು "ಎಷ್ಟ್ ತಗೋತ್ಯೋ ತಗೊ ಪುಸ್ತಕ ! " ಅಂದ್ರು !

Z :ಹೆ ಹೆ...ಸರೀಗ್ ಮಾಡಿದಾರೆ !

ನಾನು : ಅಯ್ಯೋ ಪಾಪಿ ! ನಗ್ತ್ಯಾ ? ಹೋದ್ ಸಲ ಒಂದು ಸಾವಿರ ರೂಪಾಯಿಯಷ್ಟು ಪುಸ್ತಕ ತಗೊಂಡಿದ್ವಿ...Strand book festival ನಲ್ಲಿ ನಾಲ್ಕು ಸಾವಿರದಷ್ಟು! ಏನು ಮಾಡಕ್ಕಾಗ್ಲಿಲ್ಲಾ ಈ ಸರ್ತಿ !!

Z :ಬೇಜಾರ್ ಮಾಡ್ಕೋಬೇಡಾ...ಸಿಕ್ಕಷ್ಟು ಸೀರುಂಡೆ ಅಲ್ವಾ ?

ನಾನು : ಹು...ನಾನು ತಗೊಂಡ್ರೆ ಕನ್ನಡ ಪುಸ್ತಕ ನೇ ತಗೊಳ್ಳೋದು ಅಂತ ನಿರ್ಧಾರ ಮಾಡಿದೆ.

Z :ಭೇಷ್. ಆಮೇಲೆ ?

ನಾನು : ತೇಜಸ್ವಿಯವರ ಮಿಸ್ಸಿಂಗ್ ಲಿಂಕ್ ಪುಸ್ತಕ ನ ಓದ್ಲೇ ಬೇಕು ಅಂತ ಗುರುಗಳು ಆದೇಶ ಹೊರಡಿಸಿದ್ರು. ಕೈಗೆ ಸಿಕ್ತು..ತಗೊಂಡೆ. ಆಮೇಲೆ ನಾನು ಕ್ಷಣ ಹೊತ್ತು ಆಣಿ ಮುತ್ತು ಕಾಲಂ ನ ವಿಜಯ ಕರ್ನಾಟಕದಲ್ಲಿ ಫಾಲೋ ಮಾಡ್ತಿದ್ದೆ...ಆ ಪುಸ್ತಕ ತಗೊಂಡೆ. ಗಾಂಧಿಜೀಯವರ ಆತ್ಮಕಥೆ ಪುಸ್ತಕ ನ ಆವತ್ತ್ ಸ್ಪೆಷಲ್ಲಾಗಿ ಮೂವತ್ತು ರುಪಾಯಿಗೆ ಮಾರುತ್ತಿದ್ದರು. ಬಿಟ್ಟರೆ ಈ ಚಾನ್ಸು ಸಿಕ್ಕೋದಿಲ್ಲ ಅಂತ ಇದೊಂದು ಆಂಗ್ಲ ಪುಸ್ತಕ ಕೊಂಡುಕೊಂಡೆ. ಫುಲ್ಲ್ ದುಡ್ದು ಖರ್ಚಾಗೋಯ್ತು. ಬಸ್ ಪಾಸ್ ಬಿಟ್ಟರೆ ಪರ್ಸಿನಲ್ಲಿ ಹುಡುಕಿದರೂ ಒಂದು ರುಪಾಯಿ ಇರಲಿಲ್ಲ.

Z :ಹೆ ಹೆ...ಆಮೇಲೆ ?

ನಾನು : ಒಂದು ವಿಷಯ ಮಾತ್ರ ಸಖತ್ ಬೇಜಾರ್ ಆಯ್ತು.

ನಮ್ಮ ರಿಸರ್ಚ್ ಲೆವೆಲ್ ಪುಸ್ತಕಗಳ ಹೊಸ ಟೈಟಲ್ಲುಗಳು ಒಂದೂ ಬಂದೇ ಇರಲಿಲ್ಲ. ನಮ್ಮ ಟಾಟಾ ಇನ್ಸ್ಟಿಟ್ಯೂಟ್ ನಲ್ಲೇ ಹೆಚ್ಚು ಟೈಟಲ್ ಗಳು ಲಭ್ಯವಿದ್ದವೂ ಅನ್ನಿಸಿತು. ರಿಯಾಯಿತಿಯು ಟಾಟಾ ಇನ್ಸ್ಟಿಟೂಟ್ ನಲ್ಲೇ ಜಾಸ್ತಿ. ವಿಜ್ಞಾನಕ್ಕೆ ಮತ್ತು ರಿಸರ್ಚಿಗೆ ಸಂಬಂಧಿಸಿದ ಪುಸ್ತಕಗಳೆಲ್ಲಾ ನನ್ನ ಹತ್ತಿರ ಈಗಾಗಲೇ ಇತ್ತು. ಇಲ್ಲಾ ಬುಕ್ ರಾಕ್ ನಲ್ಲಿ...ಇಲ್ಲಾ ಡಿವಿಡಿ ನಲ್ಲಿ...ಹೊಸದೇನೂ ಕಾಣದೇ ಸಂಕಟ ಆಯ್ತು.

Z : :( :(


ಎರಡು ಕಾಲು ಘಂಟೆಗಳ ಕಾಲ ಇನ್ನೂರ ಎಂಭತ್ತೇಳು ಸ್ಟಾಲ್ ಗಳನ್ನು ಸುತ್ತಿದ ನಂತರ ಅಮ್ಮ ಪ್ಯಾಕ್ ಮಾಡಿ ಕಳಿಸಿದ ಉಪ್ಪಿಟ್ಟನ್ನು ಹೊರಗೆ ಬಂದು ಕ್ಯಾಂಟೀನಲ್ಲಿ ಕುಳಿತು ತಿಂದೆ. ಆಮೇಲೆ ಚಿತ್ರಕಲಾ ಪರಿಷತ್ ಕಡೆ ಹೊರಟೆ.

Z : ಏನ್ ವಿಶೇಷ ಅಲ್ಲಿ ?

ನಾನು : ಕ್ರೇಜಿ ಕ್ರಾಫ್ಟ್ ಅನ್ನುವ ಒಂದು ತಂಡ ಕಾರು, ಮೋಟಾರ್ ಸೈಕಲ್ಲು ಮುಂತಾದ ವಾಹನಗಳ ಬಿಡಿ ಭಾಗಗಳನ್ನು ಉಪಯೋಗಿಸಿ ಸಕತ್ ದೊಡ್ಡ ಆಕೃತಿಗಳನ್ನು ಮಾಡಿದ್ದರು. ಎಲ್ಲಾ dismantleable. ಅಂದ್ರೆ ಕೆಲವನ್ನ ವೆಲ್ಡ್ ಮಾಡೀರ್ತಾರೆ, ಆದ್ರೆ ಎಲ್ಲಾ ವ್ಸೆಲ್ಡೆಡ್ ಅಲ್ಲ. ಸ್ಪಾನರ್ರು, ಸ್ಪಾರ್ಕ್ ಪ್ಲಗ್ಗು, ಗೇರು, ಲೆವೆರ್ರು , ಚೈನು ಎಲ್ಲಾ ಉಪ್ಯೋಗ್ಸಿ ಸಖತ್ತಾಗಿ ಮಾಡಿದ್ದಾರೆ. ಫೋಟೋ ತೆಗೆಯಬಾರದು ಅಂತ ಗೊತ್ತಿಲ್ದೇ ನಾನು ಎಲ್ಲಾ ಕ್ಲಿಕ್ಕಿಸಿಬಟ್ಟಿದ್ದೆ. ಆಮೇಲೆ ಅವ್ರು ಬೇಡ ಅಂದ್ರು...ಅಷ್ಟೊತ್ತಿಗೆ ನನ್ನ ಕೆಲ್ಸ ಮುಗ್ದಿತ್ತು. ಅದರ ಲಿಂಕ್ ಹಾಕ್ತಿದಿನಿ. ನೋಡ್ಬಿಡು. ಮಿಸ್ಸ್ ಮಾಡಿಕೊಂಡವರು ನಿಜ್ವಾಗ್ಲು ಇನ್ನೊಂದ್ ಸರ್ತಿ ಹಾಕಿದ್ರೆ ಹೋಗಿ ನೋಡಿ ಮಾತ್ರ...ಬಿಡ್ಬೇಡಿ. ಇದನ್ನ ಹಾಕ್ಬಾರ್ದು ಅಂತ ಇದ್ದೆ..ಆದ್ರೂ ನಿಂಗೆ ಬೇಜಾರ್ ಆಗ್ದೇ ಇರ್ಲಿ ಅಂತ ಹಾಕ್ತಿದಿನಿ.

Z : :) thanks.

ಇದನ್ನ ಮುಗಿಸಿಕೊಂಡು ಮನೆಗೆ ಬಂದಾಗ ಸಾಯಂಕಾಲ ಆರ್ ಘಂಟೆ. ಮತ್ತೆ ನನ್ನ ಓದು ಪ್ರಾರಂಭ !

Z : ಹ್ಮ್ಮ್ಮ್....


ನಾನು : ಸ್ಲೈಡ್ ಶೋ ಲಿಂಕು ಇಲ್ಲಿದೆ :

Saturday, November 22, 2008

ತಾಯಮ್ಮ- epilogue

ಓದುಗರು ಈ ಮೊದಲ ಮೂರು ಭಾಗಗಳನ್ನು ಓದಿದ ನಂತರ ಈ ಪೋಸ್ಟನ್ನು ಓದಬೇಕಾಗಿ ಪ್ರಾರ್ಥಿಸುತ್ತೇನೆ.

ತಾಯಮ್ಮ - ೧

ತಾಯಮ್ಮ - ೨

ತಾಯಮ್ಮ- ೩
*************
Z : ಈಗ ಏನಾಯ್ತು ?

ನಾನು : ಜಯಂತಿ ಒಂದು ವಾರ ಹೇಳದೇ ಕೇಳದೇ ಚಕ್ಕರ್ ಕೊಟ್ಟಳು. ಅಮ್ಮ ಇನ್ನೊಬ್ಬ ಕೆಲಸದವಳು ರಾಧ ಅನ್ನುವವಳನ್ನು ಕೆಲಸಕ್ಕೆ ಸೇರಿಸಿಕೊಂಡರು. ಅವಳಿಗೆ ಮನೆ ಕೆಲಸ ಮಾಡಿ ಅನುಭವವೇ ಇಲ್ಲ. ನಾವೇ ಎಲ್ಲಾ ಹೇಳಿಕೊಡಬೇಕಾಯ್ತು.

Z : ದೇವಾ !

ನಾನು : ಇನ್ನೇನ್ ಮಾಡೋದು ಹೇಳು. ಅವಳು ಬಾಲ್ಯ ವಿವಾಹದ ಮತ್ತೊಂದು ಎಕ್ಸಾಂಪಲ್ಲು. ಗಂಡ ಅಪ್ರತಿಮ ಕುಡುಕ. ಇಪ್ಪತ್ತೊಂದನೇ ಶತಮಾನದ ಮಾದರಿ ಹೆಣ್ಣಾಗಿ ಬದುಕಲಿಚ್ಛಿಸಿದ ಇವಳು ಗಂಡನನ್ನು ಬಿಟ್ಟು ಬೇರೆ ಮನೆ ಮಾಡಿದ್ದಳು. ಅವ ಅಲ್ಲಿಗೆ ದಿನಾ ರಾತ್ರಿ ಕುಡಿದು ಬಂದು ರಂಪ ಮಾಡುತ್ತಿದ್ದ. ಕಷ್ಟ ಎಂದು ಹೇಳಿಕೊಂಡಳಲ್ಲ ಎಂದು ನಾವು ಸ್ವಲ್ಪ ಜಾಸ್ತಿ ಸಂಬಳ ಕೊಡಲು ರೆಡಿಯಾದೆವು.

Z :ಹ್ಮ್ಮ್ಮ್....


ನಾನು : ಒಂದು ವಾರ ಎಲ್ಲಾ ನೆಟ್ಟಗಿತ್ತು. ಆಮೇಲೆ ನನಗೆ ಡಾಮೆಕ್ಸ್ ಫೆನಾಯಿಲೇ ಬೇಕು...ಗುಂಜೆಲ್ಲಾ ಆಗಲ್ಲ, ಸ್ಕಾಚ್ ಬ್ರೈಟೇ ಆಗ್ಬೇಕು, ಬಟ್ಟೆಗೆ ಸರ್ಫೇ ಆಗ್ಬೇಕು ಅಂತೆಲ್ಲಾ ಕ್ಯಾತೆ ತೆಗೆದಳು. ಅಮ್ಮನ ಕಣ್ಣು ಕೆಂಪಾಯ್ತಾದರೂ, ಅವರಿಗೆ ಹುಶಾರು ತಪ್ಪಿದರೆ ಮನೆ ದಿಕ್ಕು ತಪ್ಪುತ್ತದೆ ಎಂಬ ಒಂದೇ ಕಾರಣದಿಂದ ಎಲ್ಲವನ್ನು ತಂದದ್ದಾಯ್ತು. ಸ್ವತಃ ಸ್ವಯಂ ಸಾಕ್ಷಾತ್ ನಾನೇ ಸೂಪರ್ ಮಾರ್ಕೆಟ್ಟಿಗೆ ಹೋಗಿ ಎಲ್ಲಾ ತಂದೆ.

Z : ಆಮೇಲೆ ?

ನಾನು : ಕೆಲಸದಲ್ಲಿ ಒಂದು ಚೂರು ಅಚ್ಚುಕಟ್ಟಿರಲಿಲ್ಲವಾದ್ದರಿಂದ ಅಮ್ಮನ ಕೋಪ ನೆತ್ತಿಗೇರಿತು. ಒಂದೇ ವಾರದಲ್ಲಿ ಅರ್ಧ ಕೆ. ಜಿ ಸರ್ಫು ಖಾಲಿಯಾಗಿದ್ದಕ್ಕೆ ನಾನು ಸಿಡಿಮಿಡಿ ಅಂದೆ. ದಿನಕ್ಕೊಂದು ಸಬೀನಾ ಪ್ಯಾಕೆಟ್ಟು ಖರ್ಚಾಗುತ್ತಿತ್ತು. ಪಾತ್ರೆಯ ಫಳ ಫಳ ಅಷ್ಟಕ್ಕಷ್ಟೇ. ಡಾಮೆಕ್ಸ್ ಫೆನಾಯಿಲಿನ ಅಲರ್ಜಿಯಿಂದ ಅಮ್ಮನ ಗಂಟಲು ಕಟ್ಟಿ ಎರಡು ಸಂಗೀತ ಕಾರ್ಯಕ್ರಮ ಕ್ಯಾನ್ಸೆಲ್ ಮಾಡುವ ಮಟ್ತಿಗೆ ಹೋಗಿತ್ತು. ಕೊನೆಗೆ ಹೇಗೋ ಮ್ಯಾನೇಜ್ ಮಾಡಿದರು. ಅಷ್ಟೇ ಅಲ್ಲದೇ ಇವಳು ಪಾತ್ರೆಗಳೆಲ್ಲವನ್ನು ಜಜ್ಜಿ ಹಾಕಿದ್ದಳು. ತವರು ಮನೆಯ ಪಾತ್ರೆ, ಇಪ್ಪತ್ನಾಲ್ಕು ವರ್ಷದಿಂದ ನೆಟ್ಟಗಿದ್ದವು ಸೊಟ್ಟಗಾದವಲ್ಲ ಎಂದು ಅಮ್ಮ ಅಜ್ಜಿಗೆ ದಾವಣಗೆರೆಗೆ ಫೋನ್ ಮಾಡಿ ಗೋಳು ಹೇಳಿಕೊಂಡರು. ಅಜ್ಜಿ ಕೊಟ್ಟಿದ್ದ ಆರು ದೊಡ್ಡ ಲೋಟದ ಸೆಟ್ಟಿನಲ್ಲಿ ಐದು ನಾಪತ್ತೆ. ಮತ್ತೂ, ಅಣ್ಣ ತಂದಿದ್ದ ಜರ್ಮನ್ ಕಂಪನಿಯ ಚಾಕು ಕೂಡಾ ಅವಳು ಕದ್ದಿದ್ದಳು. ಬೇರೆ ಹೊಸ ಚಾಕು ತರಲು ಅಣ್ಣನಿಗೆ ಟೈಂ ಇರಲಿಲ್ಲ. ನಾನೇ ಹೋಗಿ ತಂದಿದ್ದಾಯ್ತು. ಅದನ್ನು ಪಳಗಿಸಲು ನಮಗೆ ಕಷ್ಟ ಆಯ್ತು. ಇತ್ತ ಇವಳು ನಾವು ಇವಳ ಕಳ್ಳತನವನ್ನು ಹಿಡಿಯುತ್ತೇವೆ ಎಂದು ಭಯ ಪಟ್ಟು ಒಂದು ವಾರ ಚಕ್ಕರ್ ಹಾಕಿದಳು. Princess of the ocean ಆದ ನಾನು ಮತ್ತೆ ಎಂದಿನಂತೆ Queen of kitchen ಆಗಿ, ಪಾತ್ರೆ ಮತ್ತು ಕಸ ಗುಡಿಸಿ ಸಾರಿಸಿ ಎಲ್ಲ ನೋಡಿಕೊಂಡಿದ್ದಾಯ್ತು. ಇದು ಸಾಲದು ಅಂತ ಹದಿನೈದು ವರ್ಷಗಳ ನಮ್ಮ ಐ ಎಫ್ ಬಿ ವಾಶಿಂಗ್ ಮಷೀನು ಕೆಟ್ಟು ಹಾಳಾಗಿ ಹೋಯ್ತು.

Z : ರಾಮಾ !

ನಾನು : ಅಮ್ಮನಿಗೆ ನಾನು ಕೆಲಸ ಮಾಡಿದರೆ ಪಿಎಚ್.ಡಿ ಗೆ ಓದಲಿಕ್ಕಾಗುವುದಿಲ್ಲ ಅಂತ ಬೇಜಾರು. ಕೆಲಸ ಮಾಡಲು ಹೋಗಿ ಅವರಿಗೆ ಹುಶಾರು ತಪ್ಪುತ್ತಿತ್ತು. ಅವರಿಗೆ ಹುಶಾರು ತಪ್ಪುವುದನ್ನು ತಪ್ಪಿಸಲು ನಾನು ಕೆಲಸ ಮಾಡುತ್ತಿದ್ದೆನಾದ್ದರಿಂದ ಓದು, ಬ್ಲಾಗಿಂಗ್ ಹಾಗೂ ಆರ್ಕುಟ್ಟಿಂಗ್ ಮೂರಕ್ಕು ಕತ್ತರಿ ಬಿತ್ತು. ನಮ್ಮ ಪೀಕಲಾಟ ನೋಡಲಾಗದೇ ಈ ಸರ್ತಿ ಅಣ್ಣನ ತಾಳ್ಮೆ ಮಿತಿ ಮೀರಿತು.ಅದಕ್ಕೆ ಅವರು ನಮ್ಮಿಬ್ಬರನ್ನು ಕರೆದು "ಅಡಿಗೆ ನೀನು ಮಾಡು, ಮಿಕ್ಕಿದ್ದೆಲ್ಲಾ ಲಕ್ಷ್ಮೀ ನೋಡ್ಕೊಳ್ಳಲಿ. ವೀಕೆಂಡ್ ನಲ್ಲಿ ಎಲ್ಲ ಕೆಲ್ಸ ಅಪರ್ಣ ನೋಡಿಕೊಳ್ಳತಕ್ಕದ್ದು. ನನ್ನ ಮತ್ತು ನಿನ್ನ ಬಟ್ಟೆ ಡ್ರೈ ಕ್ಲೀನ್ ಗೆ ಕಳಿಸೋಣ. ಮಕ್ಕಳು ಅವರ ಬಟ್ಟೆಯನ್ನು ಅವರವರೇ ಒಗೆದುಕೊಳ್ಳತಕ್ಕದ್ದು" ಎಂದು ಅಪ್ಪಣೆ ಮಾಡಿದರು.

Z : ಉಫ್ !!!!!!!

ನಾನು : ಬಟ್ಟೆ ಒಗೆಯುವುದನ್ನು ನಾನು ಎಂಜಾಯ್ ಮಾಡುತ್ತಿದ್ದೆ. ಸ್ಕೂಲಿನಲ್ಲಿದ್ದಾಗ ನಮ್ಮ ಬಟ್ಟೆ ನಾನೇ ಒಗೆಯುತ್ತಿದ್ದೆ. ಬಟ್ಟೆ, ಶೂಸು, ಲಂಚ್ ಬಾಸ್ಕೆಟ್ಟು ಎಲ್ಲಾ...ನನಗೇನು ತೊಂದರೆ ಆಗಲಿಲ್ಲ. ಕಷ್ಟಕ್ಕೆ ಸಿಕ್ಕಿದ್ದು ಅಪರ್ಣ. ಅವಳಿಗೆ ಬಟ್ಟೆ ಒಗೆದು ಗೊತ್ತಿಲ್ಲ. "ಈಗಲಾದರೂ ಕಲ್ತ್ಕೋ " ಅಂತ ನಿರ್ದಾಕ್ಷಿಣ್ಯವಾಗಿ ನಾನು ಅಪ್ಪಣೆ ಮಾಡಿದೆ.

Z : ಹೆ ಹೆ...

ನಾನು : ರಾಧಾ ಒಂದು ವಾರದ ನಂತರ ಮನೆಯ ಮುಂದೆ ಪ್ರತ್ಯಕ್ಷವಾಗಿ " ಅಮ್ಮ...ಕ್ಷಮಿಸಿ, ಮನೆಯಲ್ಲಿ ಕಷ್ಟ..." ಎಂದು ಪ್ರವರ ಊದತೊಡಗಿದಳು. ಅಮ್ಮ ಮೊದಲೇ ಪಾತ್ರೆಗಳ ಶೋಚನೀಯ ಸ್ಥಿತಿ ಕಂಡು, ತಮ್ಮ ಅತಿಪ್ರೀತಿಯ ಚಾಕು ಮತ್ತು ಲೋಟ ಕಳೆದುಕೊಂಡು ಹೈರಾಣಾಗಿದ್ದರು. ಅಣ್ಣ ಕೂಡಾ ಅವಳ ದುಡ್ಡು ಚುಕ್ತಾ ಮಾಡಿ ಅವಳನ್ನು ಕಳಿಸಿಬಿಡಬೇಕೆಂದು ಆಜ್ಞೆ ಮಾಡಿದ್ದರು. ಅವಳು ಯಥಾಪ್ರಕಾರ ಗೋಳಾಡಿದಳು. ಆದರೆ ಅಮ್ಮ ನಂಬಲಿಲ್ಲ. ನಮ್ಮ ಮನೆಯಲ್ಲಿ ಮಾತ್ರವಲ್ಲದೇ ಎದುರು ಮನೆ, ಪಕ್ಕದ ಮನೆಯವರೂ ಇವಳ ಕೆಲಸದ ಬಗ್ಗೆ ಅಪಸ್ವರ ಎತ್ತಿದ್ದರು. ಅವಳ ಕಲ್ಯಾಣ ಗುಣಗಳ ಪರಿಚಯ ಎಲ್ಲರಿಗೂ ಆಗಿತ್ತು. ಜಾಸ್ತಿ ಸಂಬಳ ಕೊಟ್ಟು ಚೆನ್ನಾಗಿ ಕೆಲಸ ಮಾಡದ ಕೆಲಸದವರಿಗಿಂತಾ ನಾವೇ ಹೇಗೋ ಮಾಡಿಕೊಳ್ಳುವುದು ಸರಿಯೆಂದು ಗೇಟ್ ಮೀಟಿಂಗ್ ನಲ್ಲಿ ಇವರೆಲ್ಲ ನಿರ್ಧರಿಸಿದ್ದರು.

Z : ಗೇಟ್ ಮೀಟಿಂಗ್ ನಡೆಯುತ್ತಿದ್ದಾಗ ತಾವೇನು ಮಾಡುತ್ತಿದ್ದಿರಿ ?

ನಾನು : ಪಾತ್ರೆ ತೊಳೆಯುತ್ತಿದ್ದೆ.

Z : ಮುಂದೆ ?

ನಾನು : ಅವಳನ್ನು ಓಡಿಸಿದ್ದಾಯ್ತು. ಮಾರನೇ ದಿನ ಬೆಳಿಗ್ಗೆ ನಮ್ಮ ಕಾರ್ ಡ್ರೈವರ್ ಒಂದು ಆಶ್ಚರ್ಯಕರ ಸುದ್ದಿ ತಂದ. ತಾಯಮ್ಮ ಡಾಕ್ಟರ್ ಆಂಟಿ ಮನೆಗೆ ಬಂದಿದ್ದಾರೆ ಅಂತ !

ನಾನು ಆಂಟಿ ಮನೆಗೆ ಶರವೇಗದಲ್ಲಿ ಓಡಿದೆ. ಆದರೆ ತಾಯಮ್ಮ ಅಷ್ಟೊತ್ತಿಗಾಗಲೇ ಹೊರಟು ಹೋಗಿದ್ದರು. ಅವರು ನಾಳೆ ಬಂದರೆ ನಮ್ಮ ಮನೆಗೆ ದಯವಿಟ್ಟು ಕಳಿಸಿಕೊಡಿ ಎಂದು ಬೇಡಿಕೊಂಡೆ. ಅವರು ಖಂಡಿತಾ ಕಳಿಸುವೆವು ಅಂದರು.

Z : ವಾಹ್ !

ನಾನು : ಮಾರನೆಯ ದಿನ ತಾಯಮ್ಮ ಪ್ರತ್ಯಕ್ಷ ! ನಾವು " ಏನ್ ತಾಯಮ್ಮ, ನೀನು ಕೆಲಸಕ್ಕೆ ಮತ್ತೆ ಬರುತ್ತಿದ್ದೀಯ ಅಂತ ಹೇಳೋದಲ್ವಾ? " ಅಂತ ಕೇಳಿದೆವು. ಅದಕ್ಕೆ ಅವರು " ಬೇರೆ ಕೆಲ್ಸದವರ ಹೊಟ್ಟೆ ಹೊಡೆಯಕ್ಕೆ ನಂಗೆ ಇಷ್ಟಾ ಇರ್ಲಿಲ್ಲ " ಅಂತ ಅಂದರು. ನಾವು " ಅಯ್ಯೋ ತಾಯಮ್ಮ ! ಒಂದು ಮಾತು ಹೇಳೋದಲ್ವ ? ನಾವು ನಿಮ್ಮನ್ನೇ ಇಟ್ಕೋತಿದ್ವಿ" ಎಂಡು ಹಳೆಯ ಕೆಲಸಗಾರರ ಮಹತ್ಸಾಧನೆಗಳನ್ನ ವರ್ಣಿಸಿದೆವು. ಅವರು ಸಿಕ್ಕಾಪಟ್ಟೆ ಬೇಜಾರ್ ಮಾಡಿಕೊಂಡರು.

Z : ಅವರು ಹೇಗಿದ್ದಾರೆ ಈಗ ?

ನಾನು : ಕೇಳ್ಬೇಡ. ಕೆಲ್ಸ ಮಾಡದೇ ಇದ್ದ್ರೆ ಕೂಳಿಲ್ಲ ಅನ್ನೋ ಅಸಹಾಯಕತೆಗೆ ಪಾಪ ಹೇಗೋ ಸುಧಾರ್ಸ್ಕೊಂಡೀದಾರೆ... ಗಂಡ ಫ್ಯಾಕ್ಟರಿಲಿ ಬಿದ್ದು ಮಂದಿಯ ಚಿಪ್ಪು ಮುರಿದಿದೆ. ಆಪರೇಷನ್ ಗೆ ದುಡ್ಡಿಲ್ಲ. ಚೀಟಿಯ ದುಡ್ಡನ್ನ ಮಗನ ಕಾಲೇಜಿಗೆ, ಒಡವೆಗೆ ಇಟ್ಟಿದ್ದ ದುಡ್ಡನ್ನ ಮಗಳ ಹೈ ಸ್ಕೂಲಿಗೆ ಮತ್ತು ಹಳ್ಳಿಯ ಗೇಯ್ಮೆಯ ಪಾಲಲ್ಲಿ ಬಂದ ದುಡ್ಡಲ್ಲಿ ಅವರು ಆಪರೇಶನ್ ಮಾಡಿಸಿಸೊಂಡು ಔಷಧಿ ಖರ್ಚಿಗೆ ನಾವು ಕೊಟ್ಟ ದುಡ್ಡು ಬಳಸಿದ್ದಾರೆ. ಗಂಡನ ಆಪರೇಶನ್ ಗೆ ದುಡ್ಡಿಲ್ಲ ಅಂದಾಗ ನಾವೆಲ್ಲಾ ಮತ್ತೆ ಒಂದೊಂದು ಸಾವಿರ ರುಪಾಯಿ ದುಡ್ಡು ಕೊಟ್ಟು ಆಪರೇಷನ್ ಗೆ ಕಳಿಸಿದೆವು. ಡಾಕ್ಟರ್ ಆಂಟಿ ಬೌರಿಂಗ್ ಆಸ್ಪತ್ರೆಯ ವೈದ್ಯರ ಪರಿಚಯ ಮಾಡಿಸಿದರು. ಆಪರೇಶನ್ ಗೆ ಪೈಸ ತೆಗೆದುಕೊಳ್ಳಲಿಲ್ಲ ವೈದ್ಯರು. ಆದರೆ ಕ್ಲೀನರ್, ವಾರ್ಡ್ ಬಾಯ್ ಗಳ ಲಂಚಕ್ಕೆ ಹಣ ಹೊಂದಿಸಲು ಇವರು ಸುಸ್ತಾಗಿ ಹೋದರಂತೆ. ಬಡವರ ರಕ್ತ ಹೀರುವ ಇಂಥಾ ಆಸ್ಪತ್ರೆಯ ಸಿಬ್ಬಂದಿ ವರ್ಗಕ್ಕೆ ತಾಯಮ್ಮ ಧಿಕ್ಕಾರ ಕೂಗಿ ಬಂದಿದ್ದಾರೆ. ದೇವರಂಥಾ ವೈದ್ಯರಿದ್ದರೂ ಇಂತಹ ಅಮಾನವೀಯ ವರ್ತನೆಯುಳ್ಳ ಸಿಬ್ಬಂದಿವರ್ಗದ ಮೇಲೆ ತಾಯಮ್ಮ ಕೆಂಡಕಾರಿ ಬಂದಿದ್ದಾರೆ.

Z : what a pity !

ನಾನು : Exactly ! ನೋಡು, ಎಂಥೆಂಥಾ ಆಶ್ವಾಸನೆಗಳನ್ನ ಕೊಡ್ತಾರೆ ರಾಜಕಾರಿಣಿಗಳು...ಸಚಿವರು, ಅಧಿಕಾರಿಗಳು ಎಲ್ಲ...ಗವರ್ನಮೆಂತ್ ಆಸ್ಪತ್ರೆಗಲಲ್ಲಿ ಕನಿಷ್ಟಮಟ್ಟದ ಶುಚಿತ್ವವನ್ನು ಕಾಪಾಡಲು ಅಧಿಕಾರಿಗಳಿಗೆ ಸಾಧ್ಯವಿಲ್ಲವೇ ? ತಾಯಮ್ಮ ಹೀಗೆ ಕೇಳಿದರು ನನ್ನನ್ನ- "ಅಲ್ಲವ್ವಾ...ಅವ್ರುಗಳ್ ಮನೇನ ಪಳಪಳ ಅಂತ ಹೊಳೆಯೋ ಹಾಗೆ ಇಟ್ಕೋತಾರಲ್ಲ...ಅವ್ರು ದುಡ್ಯೋ ಜಾಗನೂ ಅಂಗೇ ಇರ್ಬೆಕಲ್ವ್ರಾ ? ಏನ್ ಓದಿ ಏನ್ ಪ್ರಯೋಜ್ನ ಏನ್ ಔಶ್ದ ಹಾಕ್ ಏನ್ ಉಪ್ಯೋಗ ಜಾಗನೇ ಕಿಲೀನಾಗಿಲ್ಲಾ ಅಂದ್ರ?" ನಾನು ಏನೂ ಉತ್ತರಿಸಲಾಗದೇ ಸುಮ್ಮನಿದ್ದೆ.

Z : ಛೆ!

ನಾನು : ಈಗ ತಾಯಮ್ಮನ ಗಂಡ ಮನೆಗೆ ಬಂದಿದ್ದಾರೆ. ನಮಗೆ ನಾಳೆ ಬರಕ್ಕೆ ಆಗತ್ತೆ ಅಥ್ವಾ ಆಗಲ್ಲ ಅನ್ನೋದನ್ನ ಮೊದಲೇ ತಿಳಿಸುತ್ತಾರೆ. ಮೊದಲಿನಂತೆ ಅವರಿಗೆ ಹೆಚ್ಚು ಕೆಲಸ ಮಾಡಕ್ಕೆ ಆಗಲ್ಲ ಆದ್ದರಿಂದ ನಮ್ಮ ಬಟ್ಟೆಗಳನ್ನು ನಾವೇ ಒಗೆಯುತ್ತಿದ್ದೇವೆ. ಅವರಿಗೆ ಸ್ವಲ್ಪವೇ ಬಟ್ಟೆ ಹಾಕಲಾಗತ್ತೆ. ಅವರು ಮೂರೇ ಮೂರು ಮನೆಗಳನ್ನು ಒಪ್ಪಿಕೊಂಡು, ಕಾಯಿಯ ಅಂಗಡಿ ಕೂಡಾ ನಡೆಸುವ ಯೋಜನೆ ಹಾಕಿದ್ದಾರೆ. ಗಂಡನಿಗೆ ಇನ್ನು ಮುಂದೆ ನಡೆಯುವುದು ಕಷ್ಟ ಆಗುತ್ತದೆಯಾದ್ದರಿಂದ ಕುಳಿತು ಮಾಡಲು ಈ ವ್ಯಾಪಾರ ಸರಿ ಎಂದು ನಮ್ಮೊಡನೆ ಹೇಳಿಕೊಂಡರು. ಅವರು ಮನೆಯ ಕೆಲಸಕ್ಕೆ ವಾಪಸ್ ಬಂದರಲ್ಲಾ...ನಮಗೆ ಅದೇ ಸಂತೋಷ.

Z :True.

ನಾನು : ಇದು ತಾಯಮ್ಮನ ಕಥೆ. ಲಕ್ಷಕ್ಕೊಬ್ಬರು ಇಂಥಾ ಕೆಲ್ಸದವರು ಸಿಕ್ಕೋದು ಅನ್ನಿಸತ್ತೆ. ನಾವು ಅದೃಷ್ತವಂತರು. ಅಲ್ವಾ ?

Z :ಹು.

Tuesday, November 18, 2008

Task accomplished

ನಾನು : :-)

Z : ಸಾಕು ಕಿಸಿಬೇಡ.

ನಾನು : :-) :-) :-)


Z : ಸಾಕುಉಉಉಉಉಉಉಉಉಉಉಉ !!!!!!!!!!!!!!!!!!!!!!!!!!!!!!

ನಾನು : :-) :-) :-) :-) :-) :-) :-) :-) :-) :-) :-) :-)

Z : ಸಾಕೆಲೆ !

ನಾನು : ನನಗೆ ಎಷ್ಟು ಸಂತೋಷವಾಗಿದೆ ಅಂತ ನಿನಗೇನ್ ಗೊತ್ತು ?

Z : ನೀನು ಬಾಯ್ಬಿಟ್ಟಿದ್ದೇ ಮೊಟ್ಟ ಮೊದಲ ಸಂತೋಷ. ಇದಕ್ಕಿಂತಾ ಸಂತೋಷ ಬೇರೆ ಬೇಕೆ ?

ನಾನು : ಬೇಕು.

Z : ಬೇರೆ ಏನಕ್ಕೆ ಸಂತೋಷವಾಯ್ತು ನಿಂಗೆ ?

ನಾನು : ಜನ ಎಲ್ಲ " ಬಾಯ್ಬಿಟ್ಟು ಮಾತಾಡಮ್ಮ ತಾಯಿ..." ಅಂತ ಬೇಡ್ಕೊಂಡ್ರಲ್ಲ....ಸಿಕ್ಕ್ ಸಿಕ್ಕಾಪಟ್ಟೆ ಖುಶಿಯಾಯ್ತು ನಂಗೆ.

Z : :-)

ನಾನು : ಏನ್ ಗೊತ್ತಾ...ಅಮ್ಮ ಅಂತು..." ಈ ಥರ ನೀನ್ ಸೈಲೆಂಟಾಗಿದ್ರೆ ಮನೆ ಮನೆ ಥರ ನೇ ಇರಲ್ಲ...ಮಾತಾಡಿ ಪುಣ್ಯ ಕಟ್ಕೋ..." ಅಂದ್ರು. ನಾನು ಆಗ್ಲೂ ಸುಮ್ನಿದ್ದೆ.

Z : ಆಮೇಲೆ ?

ನಾನು : ಅಣ್ಣ ಅದನ್ನೇ ಲುಕ್ಕಲ್ಲಿ ಹೇಳಿದ್ರು. ಆವಾಗ ಯೋಚ್ನೆ ಮಾಡಕ್ಕೆ ಶುರು ಮಾಡ್ದೆ. ಮಾತಾಡ್ಲಾ ಬೇಡ್ವಾ ಅಂತ.

Z : ಆಮೇಲೆ ?

ನಾನು : ಇನ್ನೊಂದ್ 20 percent ಅಷ್ಟು ಸಂಶೋಧನೆ ಬಾಕಿ ಇತ್ತು ಆಗ...ಅದಕ್ಕೆ ಆವಾಗ್ಲೂ ಸುಮ್ನಿದ್ದೆ.

Z : ಇವತ್ತೇನ್ ಮಾತಾಡಿದ್ದು ಮತ್ತೆ ?

ನಾನು : ರಿಸರ್ಚಿನ ಒಂದು ಹಂತ ಮುಗಿತು.

Z : ಏನ್ ಘನಂದಾರಿ ರಿಸರ್ಚು ಮಾಡಿದ್ರಿ ತಾವು ?

ನಾನು : ನೋಡು...ಈ ಥರ ಅವಹೇಳನಕಾರಿಯಾಗಿ ಮಾತಾಡ್ಬೇಡ....

Z : ಆಯ್ತಮ್ಮ. ರಿಸರ್ಚು ಹೈಲೈಟ್ಸ್ ಒದರು...sorry sorry... ಹೇಳು.

ನಾನು : Z ನೋಡು..ನಾನು ಕೊಲ್ಲುವ ಮೌನದ ಮೇಲೆ ರಿಸರ್ಚು ಮಾಡಲು ಪ್ರಾರಂಭಿಸಿದ್ದೆಯಾದರೂ ತೀರ ಅವಶ್ಯಕ ಎನಿಸಿದಾಗ, ಮನೆಯವರಿಗೆ ನನ್ನ ರಿಸರ್ಚಿನ ಬಗ್ಗೆ ಗೊತ್ತಾಗದಿರುವಂತೆ ಆಗಾಗ ಒಂದೆರಡು ನುಡಿಮುತ್ತುಗಳನ್ನು ಉದುರಿಸುತ್ತಿದ್ದೆ. ಕಾಫಿ, ತಿಂಡಿ, ಊಟ, ಹಸಿವು, ಮಲ್ಕೋತಿನಿ, ಓದ್ತಿದಿನಿ, ಬ್ಯುಸಿ, ಆಗಲ್ಲ, ಹೌದು ಮತ್ತು ಇಲ್ಲ.

Z : ಓಕೆ.

ನಾನು : ಆದರೆ, ಬೇರೆ ಯಾರಾದರೂ ಕೇಳಿದರೆ ಏನ್ ಮಾಡಿದ್ರು ಬಾಯ್ ಬಿಡ್ತಿರ್ಲಿಲ್ಲ.

Z : ಒಹೋ !

ನಾನು : ಹೂ... ಆಗ ಅವ್ರು ನನ್ನ ಮೌನವನ್ನ ಏನೂ ಅಂತಲೇ ಅರ್ಥ ಮಾಡ್ಕೊಳ್ಳಕ್ಕಾಗ್ದೆ ಒದ್ದಾಡುತ್ತಿದ್ದಿದ್ದು ನೋಡಿ...ನಾನ್ ಆಮೇಲೆ ಎಷ್ಟ್ ನಕ್ಕಿದಿನಿ ಅಂದ್ರೆ............

Z : ಆಹಾ....

ನಾನು : ಕೇಳು ಕಥೆ ಪೂರ್ತಿ...ಒಬ್ಬೊಬ್ಬರದ್ದು ಒಂದೊಂದು ಥರ interpretation-ನ್ನು...ನಾನು topic of discussion-ನ್ನು !

Z : ಕರ್ಮಕಾಂಡ !

ನಾನು : ಒಬ್ಬರು ಅಮ್ಮನ ಬಳಿ ..." ಏನ್ ರೀ? ಎನಾಯ್ತು ನಿಮ್ಮ ಮಗಳಿಗೆ ? mood ಸರಿಗಿಲ್ವ ?

ಅಮ್ಮ speechless. ನಾನೂ.

ಇನ್ನೊಬ್ಬರು " ಪಾಪ ಓದಿ ಓದಿ ಸುಸ್ತಾಗಿರ್ಬೇಕು ರಿ...ಮಾತೇ ಹೊರಡ್ತಿಲ್ಲ, ತಲೆ ತುಂಬಾ ಕಾಲ್ಕ್ಯುಲೇಷನ್ ಅನ್ಸತ್ತೆ..."

ನನ್ನ ತಲೆಯಲ್ಲಿ ಆಗ electrodynamics + "ನಟಸಾರ್ವಭೌಮ " ಕಾದಂಬರಿ hangover.

ಮಗದೊಬ್ಬರು " ಪ್ರಾಯಶಃ ಅವ್ರ ಮನೆಲಿ ಯಾರಾದ್ರು ಬೈದಿರ್ಬೇಕು...ಇಲ್ಲಾಂದ್ರೆ ಇವ್ಳು ಹೀಗಲ್ಲ..."

ನಮ್ಮಮ್ಮನಿಂದ ನನಗೊಂದು ದಟ್ಟ ದರಿದ್ರ ಲುಕ್ಕು ಪ್ರದಾನ . ನಾನು ಅತಿವಿನಮ್ರಳಾಗಿ " returned with thanks" look ಕೊಟ್ಟೆ.

ಇದು ಮೇಲ್ನೋಟ.

Z : ಒಳನೋಟವನ್ನು ಪೇಳುವಂತಹವರಾಗಿ.

ನಾನು : ನಾನು ಈ ರಿಸರ್ಚು ಮಾಡಿದ ಮುಖ್ಯ ಉದ್ದೇಶ ಏನಪ್ಪಾ ಅಂದರೆ, ಮಾತೇ ಬರದವರನ್ನು ಸಮಾಜ ಹೇಗೆ ಅರ್ಥೈಸಿಕೊಳ್ಳುತ್ತದೆ ? ಅವರ ಸಂವೇದನೆ ಹೇಗಿರತ್ತೆ ? ನಾನು ಹಾಗೆ ಕೆಲವು ಕೈ ಸನ್ನೆಗಳನ್ನು ಅಭ್ಯಾಸ ಮಾಡಿಕೊಳ್ಳಲೂ ಶುರು ಮಾಡಿದ್ದೆ. ಆದರೆ ಅದರ ಪ್ರದರ್ಶನಕ್ಕೆ ಅವಕಾಶ ಸಿಗಲಿಲ್ಲ.

Z : ಯಾಕೆ ?

ನಾನು : ಅಣ್ಣ ಮಾತಾಡ್ತ್ಯೋ ಇಲ್ವೋ ಅಂತ ಗದರಿಸೋ ಚಾನ್ಸಸ್ ಜಾಸ್ತಿ ಇತ್ತು. ರಿಸ್ಕ್ ರನ್ ಮಾಡಾಕ್ಕಾಗ್ಲಿಲ್ಲ.

Z : :( pity.

ನಾನು : But still, I accomplished what all tasks I had set. ನಾನು ಐದು ಮುಖ್ಯ ಅಂಶಗಳನ್ನು ಗಮನಿಸಿದೆ.

೧. ನಾವು ಮಾತು ನಿಲ್ಲಿಸಿದಾಗ ಕಣ್ಣುಗಳು ಹೆಚ್ಚು expressive ಆಗುತ್ತವೆ. ನಮ್ಮ ಇತರ sense organs ಆಶ್ಚರ್ಯಕರ ರೀತಿಯಲ್ಲಿ ಚುರುಕಾಗುತ್ತವೆ.

೨. ಜನರು ತಮಗೆ ಗೊತ್ತಿಲ್ಲದೆಯೇ ನಮ್ಮನ್ನು sign language ನಲ್ಲಿ ಮಾತನಾಡಿಸಲು ಶುರು ಮಾಡುತ್ತಾರೆ.

೩. ನಾವೂ ನಮಗರಿವಿಲ್ಲದಂತೆಯೇ ತಲೆ ಅಲ್ಲಾಡಿಸುತ್ತಾ ಹುಂ ಉಹುಂ ಗುಟ್ಟುತ್ತಿರುತ್ತೇವೆ.

೪. ಮೌನವನ್ನು ಶೇಕಡಾ ಅರವತ್ತರಷ್ಟು ಜನ ಅಸಮಾಧಾನ ಅಂತಲೇ ಅರ್ಥಮಾಡಿಕೊಳ್ಳುತ್ತಾರೆ.

೫. ಜನರು ನಮ್ಮನ್ನು ಮಾತಾಡಿಸುವಾಗ ಯಾಕೋ ಒಂದು ಭಯದ ಛಾಯೆ ಕಾಣಿಸುತ್ತದೆ. ಅವರು ನಮನ್ನು ಹಿಂದೆ ಆಡಿಕೊಂಡಿದ್ದೋ, ಮೋಸ ಮಾಡಿದ್ದೋ, ಬೆನ್ನಿಗೆ ಚೂರಿ ಹಾಕಿದ್ದೋ ಇವರಿಗೆ ತಿಳಿದು ಹೋಯ್ತಾ ಅಂತೆಲ್ಲಾ ಯೋಚ್ನೆ ಮಾಡ್ತಾರೆ ಅನ್ಸತ್ತೆ. moreover, ಅವರು ಮಾತಾಡಿ ಮಾತಾಡಿ ಅಭ್ಯಾಸ ಆಗಿರೋವಾಗ ತಲೆಗೆ ಹೆಚ್ಚು ಕೆಲ್ಸ ಇರಲ್ಲ. ಇನ್ನೊಬ್ಬರ ಪ್ರತಿಕ್ರಿಯೆಯ ಮೇಲೆ ಅವರ ಮುಂದಿನ ಹೆಜ್ಜೆ ನಿಂತಿರುತ್ತದೆ. According to them, everything must be easily comprehensible. ಆದರೆ ನಮ್ಮಿಂದ ಪ್ರತಿಕ್ರಿಯೆಯೇ ಬರದಿದ್ದಾಗ ಇವರ ತಲೆ ಕೆಡುತ್ತದೆ. ಹೆಚ್ಚು ಯೋಚನೆ ಮಾಡಬೇಕಾಗುತ್ತದೆ. ಹೇಗಾದರೂ ಮಾಡಿ ಇವರನ್ನ ಮಾತಾಡಿಸಲೇಬೇಕೆಂದು ಕೆಲವರು ಮಾತ್ರ ಯೋಚಿಸುತ್ತಾರೆ. Trial and error methods ಇಂದ very few of themನಮ್ಮಿಂದ either by voice or by signs, reply ತಗೊಳ್ಳೋದ್ರಲ್ಲಿ successful ಆಗ್ತಾರೆ . most of them just don't even try ! Suppose, ನಾವು ಅವರ ಯೋಚನೆಯಂತೆ ನಡೆದುಕೊಳ್ಳದೇ ಇದ್ದರೆ ಬಹುಬೇಗ ಕೋಪವೂ ಬರುತ್ತದೆ. ಸಂಯಮ ಕಳೆದುಕೊಳ್ಳುತ್ತಾರೆ. ಮತ್ತು, ಅವರಿಗೆ ಆ ಕೂಡಲೆ ನಮ್ಮ ಪ್ರತಿಕ್ರಿಯೆಯನ್ನು ಅರ್ಥ ಮಾಡಿಕೊಳ್ಳೂವ ಶಕ್ತಿ ಕೂಡಾ ಇರುವುದಿಲ್ಲ. ಯಾಕಂದರೆ ಅವರು ವಿವೇಚನಾಶಕ್ತಿ ಹಾಗೂ ಸಂಯಮವನ್ನು ಕೋಪಕ್ಕೆ ಆಹುತಿ ನೀಡಿರುತ್ತಾರೆ. ಮತ್ತು, ಯೋಚನಾ ಲಹರಿಯನ್ನು ಯಾವ ಕಡೆ ಹರಿಯಬಿಡಬೇಕು ಅಂತ ತಿಳಿಯದೇ confuse ಆದವರು ಸುಮಾರು ಜನ ಇದ್ದಾರೆ. ಕಡೆಗೆ ಅವರು ನಮ್ಮ ಮೇಲೆ ಏನೇನು ಕತ್ತಿ ಮಸೆದಿದ್ದಾರೆ ಎಂದು ನಿಜ ಒಪ್ಪಿಕೊಂಡುಬಿಡುತ್ತಾರೆ. ನನಗೆ ಈ ಅನುಭವ ಆಗಿದೆ.

Z : ಆಹಾ ?

ನಾನು : ಯೆಸ್.

Z : ಆಮೇಲೆ ?

ನಾನು : ಇಷ್ಟು ದಿನ ಮೌನ ಯಾರನ್ನು "ಕೊಲ್ಲುತ್ತೆ" ಅಂತ ನೋಡ್ತಿದ್ದೆ. ಅದು ಸಾಮಾನ್ಯ ಮನುಷ್ಯರ ಸಂಯಮವನ್ನು ಕೊಂದಿರುವುದನ್ನು ನೋಡಿದ್ದೇನೆ. ಮೌನದಿಂದ ಸಂಯಮ ಬರತ್ತೆ ಅಂತ ಕೇಳಿದ್ದೆ....ಇದ್ಯಾಕೋ ಉಲ್ಟಾ ಹೊಡಿತು. ಯಾಕೆ ಅಂತ ಗೊತ್ತಾಗ್ಲಿಲ್ಲ. Moreover, ಜನ ಮನಸ್ಸಿಗೆ ಕಸರತ್ತು ಮಾಡಿಸಿರಲ್ಲ. ಈ ಮೌನವನ್ನ ಅರ್ಥ ಮಾಡಿಕೊಳ್ಳುವ ಕಸರತ್ತನ್ನು ಖಂಡಿತಾ ಜನ ಮಾಡಿರಲ್ಲ. ನನಗನ್ನಿಸತ್ತೆ, ಅದಕ್ಕೆ ಅವರಿಗೆ ಮೂಕರೊಂದಿಗೆ ಮಾತನಾಡಲು ಜಿಗುಪ್ಸೆ, ಅವರ ಕಂಡರೆ ಅಸಡ್ಡೆ. ಅರ್ಥ ಮಾಡಿಕೊಳ್ಳಲು ಕಷ್ಟ ಅನ್ನೋ ಒಂದೇ ಕಾರಣದಿಂದ ತಮ್ಮ patience ಕಳೆದುಕೊಳ್ಳುವ ಜನರಿಂದ ಮಾತುಬರದವರಿಗೆ ಅನಾಥ ಪ್ರಜ್ಞೆ ಕಾಡುತ್ತದೆ. ಅವರಿಗೆ ಅನುಕಂಪದ ಅವಶ್ಯಕತೆ ಖಂಡತಾ ಇಲ್ಲ, ಅವರನ್ನು ಅರ್ಥಮಾಡಿಕೊಳ್ಳುವವರ ಅವಶ್ಯಕತೆ ಇರತ್ತೆ. ನಾವು ಅವರ frequency match ಮಾಡಿಕೊಂಡರೆ ಅವರೂ ಸಿಕ್ಕಾಪಟ್ಟೆ ಮಾತಾಡ್ತಾರೆ :-)

Z : :-)


ನಾನು : ಈ ರಿಸರ್ಚನ್ನು ಪುಷ್ಟೀಕರಿಸಲು ನಾನು ಲೈಬ್ರರಿಯಲ್ಲಿ ಪುಸ್ತಕಗಳನ್ನು, ನೆಟ್ಟಲ್ಲಿ ರಿಸ್ಸರ್ಚು ಪೇಪರ್ಗಳನ್ನು ಹುಡುಕೋಣಾ ಅಂದರೆ, ನನ್ನ ಪಿಎಚ್.ಡಿ ಪರೀಕ್ಷೆ ಎಚ್ಚರದ ಘಂಟೆ ಬಾರಿಸುತ್ತಿದೆ. ಅದಾದ ಮೇಲೆ ಮೇಲ್ಕಂಡ ನನ್ನ observation ಗಳಲ್ಲಿ ಎಷ್ಟು ಸರಿ, ಎಷ್ಟು ತಪ್ಪು ಎಂಬುದನ್ನು ಕಂಡುಹಿಡಿಯಬೇಕಿದೆ. ಇದೊಂದು ಟೈಂ ಪಾಸ್ ಪ್ರಾಜೆಕ್ಟ್ ಆಗತ್ತೆ, ನಾನು ಯಾವ್ದಾದ್ರು ರಿಸರ್ಚ್ ಇನ್~ಸ್ಟಿಟೂಟ್ ನ ಲ್ಯಾಬ್ ಸೇರುವವರೆಗೂ. ಒಟ್ಟಿನಲ್ಲಿ phase 1 ಅಂತೂ ನನಗೆ ತೃಪ್ತಿಕೊಡುವ ರೀತಿಯಲ್ಲಿ ಮುಕ್ತಾಯ ಕಂಡಿದೆ. ಮುಂದಿನ ಫೇಸ್ ಅನ್ನು ಅತಿಶೀಘ್ರದಲ್ಲೇ ಆರಂಭಿಸುತ್ತೇನೆ.

Z : ಆಗ ಮತ್ತೆ ಮಾತಿಗೆ ಫುಲ್ ಸ್ಟಾಪಾ ?

ನಾನು : mostly. ಮುಂದಿನ ಬಾರಿ ನನ್ನ ಮೌನ ಜನರಿಗೆ ಅರ್ಥವಾಗತ್ತೆ ಅಂತ ನಂಬಿದ್ದೀನಿ. ಅರ್ಥವಾಗದಿದ್ದರೆ ಅದು ಅವರ ಯೋಚನಾಶಕ್ತಿಗೆ ಬಿಟ್ಟಿದ್ದು ಅಂತ ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ಫೇಸ್ ೨ ಮುಗಿದ ಮೇಲೆ ಮತ್ತೆ ಮಾತಾಡುವೆ. ಆದರೆ ಫೇಸ್ ೨ ಈಗಲೇ ಶುರು ಅಂತು ಮಾಡುವುದಿಲ್ಲ.

Z : ಸದ್ಯ.

ನಾನು : ಹೆ ಹೆಹೆಹೆ...

Z : ಆದ್ರೂ, ನೀನು at least ನನ್ನ ಜತೆಯಾದರೂ ಮಾತಾಡಬೇಕು. ಅದೊಂದು ಮಾತು ನಡೆಸಿಕೊಡು.

Well, lets ask everybody what they think about this.

ಓದುಗ ಬಂಧುಗಳೇ, ಮೌನದ ರಿಸರ್ಚಿನ ಎರಡನೆ ಹಂತ ಜಾರಿಯಲ್ಲಿರುವಾಗ head ruled (ನಾನು ) Z ರೊಂದಿಗೆ ಮಾತಾಡುವುದು ಸೂಕ್ತವೇ ? ನಿಮ್ಮ ಅತ್ಯಮೂಲ್ಯ ಮತವನ್ನು ಕಾಮೆಂಟ್ ಮೂಲಕ ಚಲಾಯಿಸಿ ಮತದಾನದ ಹಕ್ಕನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ.

ಎಲ್ಲರಿಗೂ ಒಂದೇ ಬಾರಿ ಮಾತ್ರ ಮತ ಚಲಾಯಿಸಲು ಅವಕಾಶ. ಮತವನ್ನು ಬದಲಿಸಿದರೆ ಅದನ್ನು ಪರಿಗಣಿಸಲಾಗುವುದಿಲ್ಲ.

ಮತ ಚಲಾಯಿಸಲು ಕಡೆಯ ದಿನಾಂಕ ಮೂವತ್ತು ನವೆಂಬರ್, ೨೦೦೮.

Z : ಬೇಗ ವೋಟ್ ಮಾಡಿ ...

(Line on hold)

Saturday, November 1, 2008

ರಾಜ್ಯೋತ್ಸವದ ಶುಭಾಶಯಗಳು

ಸಮಸ್ತ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ನಮ್ಮ ನಾಡು ಆವಿರ್ಭವಿಸಿ ಇಂದಿಗೆ ಐವತ್ಮೂರು ಶರದೃತುಗಳು. ಶರತ್ಕಾಲದ ಹುಣ್ಣಿಮೆಯಂತೆಯೇ ನಮ್ಮ ಭಾಷೆಯೂ ಮನೋಹರ, ಆಹ್ಲಾದಕರ. ಚಂದ್ರನ ಬೆಳುದಿಂಗಳಿಗೆ ಮೋಡದ ಅಡಚಣೆ ಇಲ್ಲದಿರೆ ಎಷ್ಟು ಚೆನ್ನವೋ, ಹಾಗೆಯೇ, ಶಾಸ್ತ್ರೀಯ ಸ್ಥಾನಮಾನ ದೊರಕುವುದೋ ಇಲ್ಲವೋ ಎಂಬ ಅನುಮಾನದ ಮೋಡವನ್ನು ಕೇಂದ್ರ ಸರಕಾರ ಸರಿಸಿ ಕನ್ನಡ ಚಂದ್ರಮನ ಧವಳಕಾಂತಿಯನ್ನು ಜಗತ್ತೆಲ್ಲ ಆಸ್ವಾದಿಸುವಂತೆ ಮಾಡಿದೆ. ಕನ್ನಡಿಗರ ಒಕ್ಕೊರಲ ಕೂಗಿಗೆ, ಸತತ ಪರಿಶ್ರಮಕ್ಕೆ, ಎಡೆಬಿಡದ ಹೋರಾಟಕ್ಕೆ ಇಂದು ನ್ಯಾಯ ಸಂದಿದೆ. ಕನ್ನಡಿಗರಿಗೆ ಈ ರಾಜ್ಯೋತ್ಸವ ನಿಜಕ್ಕೂ ಮಹೋತ್ಸವವಾಗಿದೆ.

ಶಾಸ್ತ್ರೀಯ ಸ್ಥಾನಮಾನ ಮೃತಭಾಷೆಗಳಿಗೆ ದೊರಕುತ್ತದೆ ಎಂಬ ಪ್ರತೀತಿ ಇದೆಯಾದರೂ ಯಾವ ಭಾಷೆಯೂ ಮೃತವಾಗಿಲ್ಲ, ತನ್ನ ರೂಪ ಬದಲಿಸಿದೆ ಎಂಬುದನ್ನು ಗಮನಿಸಬೇಕು. ನಮ್ಮ ಭಾಷೆ ಮೃತವಾಗದೇ ಮತ್ತಷ್ಟು ಸೊಗಡಿನಿಂದ ಕೂಡಿ ಅಮೃತವಾಹಿನಿಯಾಗಬೇಕೆಂಬುದು ಕನ್ನಡಿಗರ ಅಭಿಲಾಷೆಯಾಗಬೇಕು, ಅದಕ್ಕೆ ಪ್ರಾಮಾಣಿಕತೆಯಿಂದ ಶ್ರಮಿಸಬೇಕು.

ಜೈ ಕರ್ನಾಟಕ

ಸಿರಿಗನ್ನಡಂ ಗೆಲ್ಗೆ.

Sunday, October 26, 2008

ದೀಪದ ಹಬ್ಬದ ಶುಭಾಶಯ


ಅಡೋಬ್ ಫೋಟೋಶಾಪ್ ನಲ್ಲಿ (for the first time ) ನಾನೆ ಮಾಡಿದ ಶುಭಾಶಯ ಪತ್ರ. ಇಲ್ಲಿವರ್ಗೂ ಅದನ್ನ ಓಪನ್ನು ಮಾಡಿರಲಿಲ್ಲ. ಕನ್ನಡ ಶುಭಾಶಯಪತ್ರಗಳನ್ನು ಹುಡುಕಿದೆ...ಅದನ್ನ ಹುಡುಕುವುದರ ಬದಲು ನಾನೇ ಮಾಡಿದರೆ ಆ ಖುಶಿ ಬೇರೆ ಅನ್ನಿಸಿತು. ಅದಕ್ಕೆ ಐದು ಘಂಟೆಗಳ ಕಾಲ ಕಷ್ಟ ಪಟ್ಟು, ಫೋಟೋಶಾಪ್ ಉಪಯೋಗಿಸುವುದನ್ನು ತಕ್ಕ ಮಟ್ಟಿಗೆ ಕಲಿತು ಇದನ್ನ ಮಾಡಿದ್ದೇನೆ. ನಿಮಗೆಲ್ಲರಿಗೂ ಈ ದೀಪದ ಹಬ್ಬ ಸುಖ ಸಂತೋಷ, ನೆಮ್ಮದಿ, ಆಯಸ್ಸು, ಆರೋಗ್ಯ ಹಾಗೂ ನೆಮ್ಮದಿಯನ್ನು ಕೊಟ್ಟು ಬಾಳಿನಲ್ಲಿ ಬೆಳಕು ಮೂಡಿಸಲಿ ಎಂದು ಹಾರೈಸುತ್ತೇನೆ.

Friday, October 24, 2008

research status

ನಮಸ್ಕಾರ. ವಾರ್ತೆಗಳು. ಓದುತ್ತಿರುವವರು Z .

Head ruled ಅವರ ಕೊಲ್ಲುವ ಮೌನದ research ಭರ್ಜರಿಯಾಗಿ ಸಾಗುತ್ತಿದೆ.ಆದರೆ ಬೊಂಬೆಗಳ ವಿಡಿಯೋ ತೆಗೆಯುವಾಗ ಮಾತ್ರ ಕೊಟ್ಟ ಬ್ರೇಕ್ ಸಾರ್ಥಕವಾಗಿದೆ.

Head ruled ಅವರ ಮೌನ ಅರ್ಥಗಳಿಗಿಂತ ಅನರ್ಥ ಹಾಗೂ ನಾನಾರ್ಥಗಳಿಗೆ ಎಡೆಮಾಡಿಕೊಟ್ಟಿದೆ ಎಂಬುದು ಅವರ sudden ಮೌನದ ತನಿಖೆ ನಡೆಸಿದವರ ವರದಿ. ಕೆಲವರು "ಇವಳು ನಮ್ಮ ಲಕ್ಷ್ಮೀ ಅಲ್ಲವೇ ಅಲ್ಲ " ಎಂದು ನಮ್ಮನ್ನೂ ಸೇರಿಸಿ ಸಾರಾಸಗಟಾಗಿ ಆಪಾದಿಸಿ ಅನರ್ಥಕ್ಕೆ ಎಡೆ ಮಾಡಿಕೊಟ್ಟರೆ, ಇನ್ನು ಕೆಲವರು "ph.D entrance tension ಇರಬೇಕು", "mood ಸರಿಗಿಲ್ಲ ಅನ್ಸತ್ತೆ...ಯಾವ್ದಾದ್ರು ಪುಸ್ತಕವನ್ನು ಕೊಂಡುಕೋಬೇಡಾ ಅಂದ್ರಾ ಯಾರಾರು ? ", "ಮಳೆಗೆ ಕಾರಣ ಇವಳ ಮೌನವೇ " ಮತ್ತು "ಏನೋ ಪಾ...ಇತ್ತೀಚೆಗೆ ನಮ್ಮನ್ನೆಲ್ಲ ಮರ್ತೇ ಹೋಗಿದಾಳೆ" ಇತ್ಯಾದಿ ವ್ಯಾಖ್ಯಾನಗಳು ಕೇಳಿಬರುತ್ತಿವೆ. ph.D ವಿಷಯಕ್ಕೆ ಮಾತ್ರ ತಲೆಯಲ್ಲಾಡಿಸಿ ನಕ್ಕು ಸಮ್ಮತಿ ಸೂಚಿಸಿರುವ head ruled ಮಿಕ್ಕೆಲ್ಲದಕ್ಕೂ confused looks ಮತ್ತು ಅನರ್ಥದ ಕಾರಣಕ್ಕೆ ದರಿದ್ರವಾದ ಲುಕ್ ಒಂದನ್ನು ಎಸೆದಿದ್ದಾರೆ.

ಇದರ ಮಧ್ಯೆ ನಮ್ಮಿಬ್ಬರ ಸಖಿ ಹಿರಣ್ಮಯಿಯು [ Nokia phone ] ನೇಣುಹಾಕಿಕೊಂಡುದರ ಶೋಕ ತಡಿಯಲಾಗದೇ, ಸದ್ಯೋಜಾತನ ಮೊರೆ ಹೋಗಲಿಕ್ಕೆ ಪತಿ ಸಂಜೀವಿನಿ ವ್ರತದಂತೆ "ಸಖಿ ಸಂಜೀವಿನಿ ವ್ರತ" ದ ಮಂತ್ರಗಳನ್ನು ತಾವೇ ಕಂಡುಹಿಡಿದು,[ಪತಿಸಂಜೀವಿನಿ ವ್ರತದ ಮಂತ್ರಗಳ modification] ಬಾಯ್ಬಿಟ್ಟು ಮಂತ್ರ ಹೇಳುವ ಅಧಿಕಾರವಿಲ್ಲವಾದ್ದರಿಂದ ಮೌನವಾಗಿಯೇ ಓದಿ, ವ್ರತವನ್ನು ಮಾಡಿ, ಶಿವನ ಮೆಚ್ಚಿಸಿ ಹಿರಣ್ಮಯಿಗೆ ಜೀವ ತರಿಸಿದ್ದಾರೆ. ನೋಕಿಯಾ ಡೀಲರ್ ಬಳಿ ಭಾರೀ ಜಗಳವನ್ನೇ ನಿರೀಕ್ಷಿಸಿದ್ದ ನಮ್ಮ ತಂದೆ ಇವರು ಮನೆಯ ಹೊರಗೆ ಕಾಲಿಡದಿರುವುದನ್ನು ನೋಡಿ ಆಶ್ಚರ್ಯದಿಂದ ಹುಬ್ಬೇರಿಸಿದ್ದಾರೆ. ನಮಗೆ ವ್ರತದ ಬಗ್ಗೆ ಹೇಳಿ ಎಂದರೆ ಯಥಾ ಪ್ರಕಾರ blank look.

"ಯಾಕೆ ಈಥರ silent ಆಗಿದ್ದುಕೊಂಡು ಕೊಲ್ತಿಯಾ ?" ಅಂತ ಮನೆಯವರು ಸಿಕ್ಕಾಪಟ್ಟೆ ಕೂಗಾಡುವುದನ್ನು ಇವರು ಕೇಳಿದರೆ ಮೌನ ಮುರಿಯುವ ಸಾಧ್ಯತೆ ಇದೆ ಎಂದು ನಮ್ಮ ನಂಬಿಕೆ. ನಮ್ಮ ಅಂದಾಜಿನ ಪ್ರಕಾರ ಇನ್ನೆರಡು ತಿಂಗಳಾದರೂ ಈ ರಿಸರ್ಚು ನಡೆಯಲಿದೆ.ಆದರೆ ನಮ್ಮ ಅಂದಾಜಿನ ಸತ್ಯಾಸತ್ಯತೆಗಳ ಬಗ್ಗೆ ತಲೆಯಲ್ಲಾಡಿಸಲೂ ಸಹ ಇವರು ನಿರಾಕರಿಸಿದ್ದಾರೆ.

ಏತನ್ಮಧ್ಯೆ head ruled ಆಂಗ್ಲವನ್ನು ಮರೆತುಹೋಗಿದ್ದಾರೆ ಎಂಬ ಆಪಾದನೆಯನ್ನು ಮೌನವಾಗಿ ಸಹಿಸಿ ಎಲ್ಲರಿಗೂ ಆಶ್ಚರ್ಯದ shock ಕೊಟ್ಟು ಆಂಗ್ಲದ ಹೊಸದೊಂದು ಬ್ಲಾಗನ್ನು ಪ್ರಾರಂಭಿಸಿದ್ದಾರೆ[ನಮಗೆ ಹೇಳದೇ]. ಆದರೆ, ಅವರಿಗಿಂತ ನಾವೇ ಹೆಚ್ಚಾಗಿ ನೆಟ್ಟಿನಲ್ಲಿ ಬಿದ್ದಿರುತ್ತೇವೆಯಾದ್ದರಿಂದ ಅದರ ಲಿಂಕನ್ನು ಪತ್ತೆ ಮಾಡುವುದರಲ್ಲಿ ಯಶಸ್ವಿಯಾಗಿದ್ದೇವೆ. ಅದರ ಲಿಂಕ್ ಇಲ್ಲಿದೆ. ಲಿಂಕಿಗೆ ಭೇಟಿಕೊಟ್ಟಾಗ landline ನಲ್ಲಿ ಆದ ಮಾತುಕತೆಗಳು ನೋಡಸಿಗುತ್ತವೆ. ಅದೂ ಎರಡೇ ವಾಕ್ಯ ! [ಇದನ್ನು ಕೇಳಿಸಿಕೊಂಡವರು ತಲ್ಲಣಿಸಿಹೋಗಿದ್ದಾರೆ ಎಂಬುದು ಸೀಕ್ರೆಟ್ ಬ್ಯೂರೋ ರೆಪೋರ್ಟು] . ಅವರಿಗೆ ಆಕಸ್ಮಿಕವಾಗಿ ಹುಶಾರು ತಪ್ಪಿ, ವಿಧಿವಿಪರೀತದ ಆಟದಲ್ಲಿ ಸೋತಿರುವುದನ್ನೂ ನಾವು ಈ ಬ್ಲಾಗಿನಲ್ಲಿ ಕಾಣಬಹುದು.

ಇಲ್ಲಿಗೆ ವಾರ್ತಾಪ್ರಸಾರ ಮುಕ್ತಾಯವಾಯ್ತು. ನಮ್ಮ ಮುಂದಿನ ಭೇಟಿ ಎರಡು ತಿಂಗಳಾದ ಮೇಲೆ (ಪ್ರಾಯಶಃ), head ruled ಅವರ research analysis ಜೊತೆಗೆ. ಧನ್ಯವಾದಗಳು.

Sunday, October 5, 2008

ಕೊಲ್ಲುವ ಮೌನ ಅಂತೆ...ಹೇಗಿರತ್ತೆ ಅದು ?

Z : ನಿಂಗೆ ಜನ್ಮದಲ್ಲಿ ಗೊತ್ತಾಗಲ್ಲ ಬಿಡು ಇದು.

ನಾನು : ನೋಡು ಪ್ಲೀಸ್ ಈ ಥರ ಎಲ್ಲಾ under- estimate ಮಾಡ್ಬೇಡ ನನ್ನನ್ನ.

Z : ಎನ್ನೇನ್ ಮತ್ತೆ? ನಿಂಗೆ ಸೈಲೆಂಟಾಗಿ ಇರಕ್ಕೆ ಎಲ್ಲ್ ಬರತ್ತೆ?

ನಾನು : ನನಗೆ ಸೈಲೆಂಟಾಗಿರಕ್ಕೆ ಬರತ್ತೆ.

Z : ಭ್ರಮೆ.

ನಾನು : ಶಟಪ್ !ನೋಡು...ಈಗ ನಾನು ಈ "ಕೊಲ್ಲುವ ಮೌನ" ದ ಬಗ್ಗೆ ರಿಸರ್ಚು ಮಾಡ್ಲೇ ಬೇಕು. ಅದ್ ಹೇಗಿರತ್ತೆ ...ಯಾರ್ ಯಾರನ್ನ ಎಲ್ಲೆಲ್ಲಿ ಹೇಗ್ ಹೇಗೆ ಯಾವ್ ಯಾವ್ ಥರ ಕೊಲ್ಲತ್ತೆ ಅಂತ ನಾನ್ ನೋಡ್ಬೇಕ್.

Z : ನೀನು "ಕೊಲ್ಲುವ ಮೌನ" ನ action movie ಅಂದುಕೊಂಡಿದ್ಯಾ ಮಾ ಮಹತಾಯಿ ? ಭ್ರಮೆ !
ನೋಡು...ನೀನು ಆ ಬಿಗ್ ಬ್ಯಾಂಗ್ ಸ್ಫೋಟನ imitate ಮಾಡೋ experiment ನ ಮತ್ತೆ ಮಾಡ್ತಿನಿ ಅಂದ್ರೂ ನಾನ್ ಬೇಡಾ ಅನ್ನಲ್ಲ....ನಿನ್ನ ಕೈಲಿ ಆಗ್ದೇ ಇರೋ ಇಂಥಾ ಕೆಲ್ಸ ಎಲ್ಲ ಮಾಡ್ಬೇಡಾ....

ನಾನು : ನೋಡು ಎಂಥಾ hopeless negative approach ನಿಂದು! ಇನ್ನು ಶುರು ನೇ ಮಾಡಿಲ್ಲ experiment ನ...ಅಷ್ಟರಲ್ಲಿ ಶಕುನ ನುಡಿದುಬಿಟ್ಟಳು ದೊಡ್ಡ್ ಶಕುನದ ಪಕ್ಷಿ ಥರ. ಆಗಲ್ವಂತೆ ನನ್ನ ಕೈಲಿ. ಏನಾದ್ರು ಸರಿ ...ನಾನ್ ಸೈಲೆಂಟಾಗಿರೋದನ್ನ ಕಲಿಲೇ ಬೇಕು.

Z : ಮಕ್ಕಳು ಲಾಲಿಪಪ್ಪು ಬೇಕೇ ಬೇಕ್ ಅಂತ ಹಠ ಹಿಡ್ಯೋ ಹಾಗೆ ಹಠ ಹಿಡಿಬೇಡ.

ನಾನು :ಯಾಕೆ ಹಠ ಹಿಡಿಬಾರ್ದು ?

Z : ಲೋಕದ ಆರೋಗ್ಯಕ್ಕೆ ಒಳ್ಳೇದಲ್ಲ !

ನಾನು : ಅದು ಲೋಕದ ಕರ್ಮ ! ನನ್ನದಲ್ಲ.

Z : ನೋಡು head ruled... ಮಾತಾಡದೂ ಒಂದು ಟಾಲೆಂಟು.

ನಾನು : ಇರ್ಬಹುದು. ಹಾಗೇ ಸೈಲೆಂಟಾಗಿರೋದು ಒಂದು ಟಾಲೆಂಟಂತೆ.

Z : ಇರ್ಲಿ...ಅದಕ್ಕೆ ?

ನಾನು : ನಾನು ಆ ಟಾಲೆಂಟ್ ನ develop ಮಾಡ್ಕೋಬೇಕು ಈಗ. ನಾನು ಯಾವಾಗ್ ಬೇಕೋ ಆವಾಗ ನನ್ನ ಒರಿಜಿನಲ್ ಇಮೇಜ್ ಗೆ ವಾಪಸ್ ಬರ್ಬಹುದು. ಆದ್ರೆ ಈಗ...ಐ ವಾಂಟ್ ಟು ಟ್ರೈ ದ ಇಮೇಜ್ ಆಫ್ ಎ ಸೈಲೆಂಟ್ ಗರ್ಲ್.

Z : ಅಂಗಡಿಗೆಲ್ಲ ಹೋಗ್ಬೇಕಾದ್ರೆ ಮಾತಾಡ್ಬೇಕಾಗತ್ತಲ್ಲ....

ನಾನು : ಶಾಪಿಂಗ್ ಮಾಲ್ ಗೆ ಹೋಗೋದು. ಅಲ್ಲೆಲ್ಲ ನೋ ಮಾತು ನೋ ಕಥೆ. ಜಸ್ಟ್ ಕ್ಯಾಶ್ ಅಂಡ್ ಕ್ಯಾರಿ.

Z : ಮನೆಗೆ ಯಾರಾದ್ರು ಬಂದ್ರೆ ?

ನಾನು : ಸುಮ್ನೆ ಎಲ್ಲಾದಕ್ಕು ಒಂದು ಸ್ಮೈಲು, ಮತ್ತೆ ಮುಖದಲ್ಲೊಂದು ಕನ್ ಫೂಸ್ಡ್ ಲುಕ್ ಕೊಡೋದು. ಮಿಕ್ಕಿದ್ದನ್ನೆಲ್ಲ ಅಮ್ಮ ಮಾತಾಡ್ಕೋತಾರೆ. ಬರೋರೆಲ್ಲಾ ಒಂದೇ ಪ್ರಶ್ನೆ ಕೇಳ್ತಾರೆ. ನಂಗೆ ಆ ಪ್ರಶ್ನೆ ಕೇಳಿದರೆ ಇರಿಟೇಟ್ ಆಗತ್ತೆ ಅಂತ ಅಮ್ಮಂಗೆ ಗೊತ್ತಿದೆ. ಅದಕ್ಕೆ ಮೊದ್ಲಿಂದಲೂ ಆ ಪ್ರಶ್ನೆಗಳನ್ನ ಅಮ್ಮ ನೇ ಉತ್ತರಿಸುತ್ತಿದ್ದರು. ಈಗ್ಲೂ ಹಾಗೇ continue ಆಗತ್ತೆ ಅಷ್ಟೇ.

Z : ಫೋನ್ ಕಥೆ ?

ನಾನು : ಯೆಸ್. ಹಿರಣ್ಮಯಿ...ನೆನ್ನೆ ಇದರ ಬಗ್ಗೆ ನಾನು ಯೋಚ್ನೆ ಮಾಡ್ತಿದಿನಿ ಅಂತ ಗೊತ್ತಾಗಿ, ನಾನು ಇನ್ನು ಮಾತಾಡೊದು ದುರ್ಲಭ ಅಂತ ಮನಗಂಡು ಅವಳು ನೇಣು ಹಾಕೊಂಡ್ ಬಿಟ್ಲು. ಶ್ರದ್ಧಾಂಜಲಿ ಮತ್ತು ಶೋಕ ಸಭೆ ನಡಿಯುತ್ತದೆ ಮೂರ್ ದಿನ. ಆಮೇಲೆ ಮುಂದಿನ ಕಾರ್ಯಗಳ ಬಗ್ಗೆ ಯೋಚನೆ.

Z : ಬ್ಲಾಗು ?

ನಾನು : ಮಿಕ್ಕಿದ್ದೆಲ್ಲ ಬ್ಲಾಗ್ ಗಳು ವರ್ಕ್ ಆಗ್ತವೆ. ನಿನ್ನ ಜೊತೆ ಮಾತಾಡಲ್ಲ ಅಷ್ಟೇ.

Z : ಇವೆಲ್ಲ ಸ್ಕೋಪ್ ಬೇಡಾ...

ನಾನು : ನನ್ನನ್ನ discourage ಮಾಡೋರ್ ಹತ್ರ ನಾನ್ ಮಾತಾಡಲ್ಲ.

Z : ಇಲ್ಲ...ಸಾರಿ, ತಪ್ಪಯ್ತು. ಬೇರೆಯೋರ್ ಹತ್ರ ಎಲ್ಲ ಸೈಲೆಂಟಾಗಿರು ಬೇಕಾದ್ರೆ...ಆದ್ರೆ ನಿನ್ನ ಸೈಲೆನ್ಸು "ಕೊಲ್ಲುವ ಮೌನ" ಟಾರ್ಗೆಟ್ ರೀಚಾಯ್ತ ಇಲ್ವಾ ಅಂತ ಪ್ಲೀಸ್ ಹೇಳು.

ನಾನು : ....


Z : ಏನ್ ಲುಕ್ ಕೊಡ್ತ್ಯ ?

ನಾನು : ....


Z : ಮಾತಾಡೇ !!!

ನಾನು : .......


Z : ಅಯ್ಯೋ...ಹಠಕ್ಕೆ ಬಿದ್ಲಲ್ಲಪ್ಪಾ.....ಮಾತೇ ನಿಲ್ಲಿಸಿಬಿಟ್ಟಳಲ್ಲ...ಲೇ ಪ್ಲೀಸ್ ಮಾತಾಡು. ನನ್ನ ಜೊತೆ ಮಾತ್ರ ಮಾತಾಡು ! ಇನ್ಯಾರ್ ಜೊತೆ ಮಾತಾಡದಿದ್ರೂ ಓಕೆ !

ನಾನು : :-)

Z : ದರಿದ್ರ ಸ್ಮೈಲ್ ಬೇರೆ...ಹೇಳು ಮಾತಾಡ್ತ್ಯೋ ಇಲ್ವೋ ?

ನಾನು : ...........

Z : ಛೆ !

Tuesday, September 30, 2008

ನಾವು ಏನನ್ನು ಕಳೆದುಕೊಂಡಿದ್ದೇವೆ

ಕರ್ಮಕಾಂಡ ಪ್ರಭುಗಳು ಎರಡು ತಿಂಗಳ ನಂತರ ಬ್ಲಾಗಿಸಲು ಶುರುಮಾಡಿದ್ದಾರೆ. ತಮ್ಮ ತಲೆಯಲ್ಲಿ ಇಷ್ಟು ದಿನ ಕೊರೆಯುತ್ತಿದ್ದ ಹುಳುಗಳನ್ನು ಈಗ ನಮ್ಮ ತಲೆಗೆ ಬಿಡುವ ಮಹಾನ್ ಪುಣ್ಯಕಾರ್ಯ ಮಾಡಿದ್ದಾರೆ.

ಕರ್ಮಕಾಂಡ ಪ್ರಭುಗಳೆ, ನಿಮ್ಮ ಬ್ಲಾಗನ್ನು ನಾನೂ ಓದಿದೆ. ಬೆಂಗಳೂರಿನವರು ಕಥೆಗಳನ್ನು ಏಕೆ ಬರೆಯಲು ಸಾಧ್ಯವಿಲ್ಲ ಎಂಬ ಪ್ರಶ್ನೆ ಸಖತ್ತಾಗಿದೆ. ಇದಕ್ಕೆ ನನ್ನ ಅನಿಸಿಕೆ ಇಷ್ಟು. ನಿಮ್ಮ ಕಮೆಂಟ್ ಬಾಕ್ಸ್ ನಲ್ಲಿ ಏಕೆ ಹಾಕಲಿಲ್ಲ ಅಂತ ಆಮೇಲೆ ಹೇಳುವೆ.

ಹಳ್ಳಿಯವರ ಜೀವನದ ಬಗ್ಗೆ ನಾವು ಅನಭಿಜ್ಞರು. ಬರೀ ಟಿವಿ, ಪುಸ್ತಕದಿಂದ ಮಾತ್ರ ತಿಳಿದುಕೊಳ್ಳಬೇಕಷ್ಟೆ. ನಾವು ಗ್ರಾಮ ವಾಸ್ತವ್ಯ ಹೂಡಿ ಬರೆಯಲು ಸಾಧ್ಯವಾಗತ್ತೆಯಾದರೂ, ಮೂರು ದಿನಗಳಿಗಿಂತಾ ಹೆಚ್ಚಾಗಿ ಅಲ್ಲಿರಲಿಕ್ಕೆ ನಮ್ಮ ಐಷಾರಮಕ್ಕೆ ಒಗ್ಗಿದ ಮೈ ಬಿಡುವುದಿಲ್ಲ. ನೀವು ದೇಹ ದಂಡಿಸಲು ತಯಾರೋ ? ಹಾಗಿದ್ರೆ ಸೂಪರ್.

ಹಳ್ಳಿಯ ಜೀವನದ ತಿರುಳುಗಳನ್ನ ನಾನು ಕಾನೂರು ಹೆಗ್ಗಡತಿ ಪುಸ್ತಕವನ್ನು ಓದುತ್ತಾ ಈಗೀಗ ಸಲ್ಪ ಅರ್ಥ ಮಾಡಿಕೊಳ್ಳುತ್ತಿದ್ದೇನೆ. ನನಗನ್ನಿಸಿದು ಇಷ್ಟು : they live, we survive.



ನಾವು ಬದುಕುತ್ತಿಲ್ಲ, ಬದುಕಲು ಹೋರಾಡುತ್ತಿದ್ದೇವೆ. ಐಸ್ ಥಂಡರ್ ನಲ್ಲಿ ಕಾಫಿ ಕುಡಿಯುತ್ತಿರಬೇಕಾದರೆ ನಿಮಗೆ ಪಾರ್ಕಿಂಗ್ ಲಾಟಲ್ಲಿ ನಿಂತ ನಿಮ್ಮ ಪಲ್ಸರ್ ಬಗ್ಗೆ ಒಂಚೂರು ಭಯವಿಲ್ಲದಿದ್ದರೆ ನೀವು ಪರಮಸುಖಿ ಸಿಟಿಯುವಕ. ಜೆ.ಸಿ.ರೋಡಿನ ಜಂಕ್ಷನ್ನಲ್ಲಿ ನನ್ನ ಬದುಕಿನ ಗತಿಯೇನೆಂದು ನೀವು " ಹಾಗೇ ಸುಮ್ಮನೆ" ಯಾದರೂ ಯೋಚನೆ ಮಾಡಿರುತ್ತೀರಿ . ಪೆಟ್ರೋಲ್ ಬೆಲೆ ಹೆಚ್ಚಾಯ್ತೆಂದು, ಸಂಬಳದಲ್ಲಿ ಇನ್ನು ಉಳಿತಾಯ ಮಾಡುವುದು ಕಡಿಮೆಯಾಗಬಹುದೆಂದು ನೀವು ಒಂದ್ ಸರ್ತಿ ನೂ ಯೋಚ್ನೆ ಮಾಡಿಲ್ಲ ಅಂತ ನನಗೆ ಹೇಳ್ಬೇಡಿ.



ಹಾಗಂತ ಅನ್ಯ ಊರಿನವರು ಬದುಕಲು ಹೋರಾಟ ನಡೆಸುತ್ತಿಲ್ಲ ಅಂತ ಅಲ್ಲ, ಆದರೆ ಅದರ intensity ಬಗ್ಗೆ ನನಗೆ ಗೊತ್ತಿಲ್ಲ. ಅವರಿಗೆ ಏನಾದರಾಗಲಿ, ಪ್ರಕೃತಿ ಮಾತೆ ಜೊತೆಗಿದ್ದಾಳೆ. ಅವರೆಂದೂ ಪ್ರಕೃತಿಗೆ ಅನ್ಯಾಯ ಮಾಡಿಲ್ಲ, ಅದಕ್ಕೆ ನ್ಯೂಟನ್ನಿನ ಮೂರನೆಯ ನಿಯಮವನ್ನು ಪ್ರಕೃತಿಯೂ ಅನುಸರಿಸಿದ್ದಾಳೆ .ಅವಳು ಅಲ್ಲಿ ಶಾಂತ ಸ್ವರೂಪಿ, ಚಿತ್ತಪ್ರಚೋದಕಿ. ಥರಥರದ ಹೊಸ ಕ್ರಿಯಾಶಕ್ತಿ ಪ್ರಚೋದಕ ಸಮಸ್ಯೆಗಳು ಅಲಲ್ಲಿ ಸಿಗುತ್ತವೆ, ಅದನ್ನು ಬಿಡಿಸುತ್ತಾ ಬಿಡಿಸುತ್ತಾ ಅವರ ನೋಟ, ಯೋಚನಾಶಕ್ತಿ, ಎಲ್ಲವೂ ನಮಗಿಂತ ಹೆಚ್ಚು ಚೆನ್ನಾಗಿ ಬೆಳೆಯುತ್ತದೆ ಅಂತ ನನ್ನ ಅನಿಸಿಕೆ. ಇದು ಸರಿಯಿಲ್ಲದಿರಲೂ ಬಹುದು.


ಊಟ ವಸತಿಗಾಗಿ ಹೋರಾಡುವವರನ್ನು ನಾನು ಹಳ್ಳಿಯಲ್ಲಿ ನೋಡಿಲ್ಲ...(ನನ್ನ ಅತ್ಯಲ್ಪ ಪ್ರಯಾಣದ ಅನುಭವಗಳಲ್ಲಿ). ಊಟ ವಸತಿಗಾಗಿ ಇಲ್ಲಿ ನಾವು ಹೋರಾಡುವಾಗ ಕಾವ್ಯಮಯ ಚಿಂತನೆ ಮಾಡಲು ಸಾಧ್ಯವೇ ? ದಿನ ನಿತ್ಯದ ತಾಕಾಟ, ನಮ್ಮ ಅಹಂಕಾರದ ಅಟ್ಟಹಾಸದ ಮಧ್ಯ ನಮ್ಮ ಬದುಕಿನ ಕ್ಷಣಕ್ಷಣವನ್ನು "ಬದುಕು"ವುದು ಶಾಪಿಂಗ್ ಮಾಲಲ್ಲಿ ಚಾಕಲೇಟು ಖರೀದಿಸಿದಷ್ಟು ಸುಲಭವೇ ?

ಅಲ್ಲಿ ನಾನು ಒಳ್ಳೇ ಮನಸ್ಸಿರುವವರನ್ನ ಹೆಚ್ಚು ನೋಡಿದ್ದೇನೆ. ಉದಾತ್ತಚಿತ್ತರನ್ನ ನೋಡಿದ್ದೀನಿ. ಅರಿಷಡ್ವರ್ಗಗಳು ಪ್ರತಿ ಮಾನವನಲ್ಲಿ ಇರುತ್ತದೆಯಾದರೂ, ಅದು ಹೆಚ್ಚು expressive ಆಗದಂತೆ ಅಲ್ಲಿನ ಪ್ರಕೃತಿ ನೋಡಿಕೊಂಡಿದೆ. ಮತ್ತು, ಹಳ್ಳಿಯವರ ಸಂಸ್ಕೃತಿಯಲ್ಲಿ ಸಹಿಷ್ಣುತೆ by default, ಇದೆ. ಇವುಗಳಲ್ಲಿ ಒಂದಾದರೂ ನಿಮಗೆ ಸಿಟಿಯಲ್ಲಿ ಕಾಣಸಿಗುತ್ತದೆಯೆ? ನಾವು ಸಹಿಷ್ಣುಗಳೇ ? ಒಂದು ದಿನವೂ ನಾವು ಗೊಣಗಾಡದೇ ಇದ್ದೇವೆಯೇ ?

ಇನ್ನೊಂದು ಮಹತ್ವಪೂರ್ಣವಾದ ಅಂಶ ಊರಿನಲ್ಲಿರುವವರ ಜೀವನ ಶೈಲಿ. ಈಗೀಗ ಡಿಶ್ಶುಗಳು ಅಲ್ಲಿ ಕಾಲಿಟ್ಟಿದ್ದರೂ, ಜಾನಪದ ಗೀತೆಗಳನ್ನ ಅವರು ಮರೆತಿಲ್ಲ. ಟ್ರಾಕ್ಟರ್ರುಗಳು ಬಂದಿದ್ದರು ಎತ್ತುಗಳು ಅನಾಥವಾಗಿಲ್ಲ. ಹೊಸದನ್ನು ಅವರು ಸ್ವಾಗಿತಿಸಿದ್ದಾರೆ, ಅಳವಡಿಸಿಕೊಂಡಿದ್ದಾರೆ ಹೊರತು ನಮ್ಮಂತೆ ಎಲ್ಲದಕ್ಕೂ ದಾಸರಾಗಿಲ್ಲ. ಅವರ ಸಂಸ್ಕಾರ ನಮ್ಮ ಸಂಸ್ಕಾರದಷ್ಟು ಬಲಹೀನ ಮತ್ತು ಸತ್ವಹೀನವಾಗಿಲ್ಲ.

ನಾವು ಕಥೆ ಬರೆಯಲು ನಮ್ಮ ಜೀವನಶೈಲಿ, ವಾತಾವರಣ ಮತ್ತು ಸಂಸ್ಕಾರ, ಇವು ಮೂರು ಮುಖ್ಯ. ನಮ್ಮ ಬದುಕಿನಲ್ಲಿ ಈಗ ಬಾಳೆಯ ಎಲೆಯ ಸಂಸ್ಕಾರದ ಬದಲು ಬಫೆಟ್ ಕಲ್ಚರ್ ಇದೆ. ಗ್ಲೋವ್ಸ್ ಹಾಕಿ ಸಣ್ಣ ಕೈಮಾಡಿ ಊಟ ಬಡಿಸುವ "sophisticated and hygenic " ಅಡುಗೆಭಟ್ಟರಿದ್ದಾರೆಯೇ ನಲ್ಮೆಯಿಂದ ಇನ್ನೊಂದು ಸ್ವಲ್ಪ ತಿನ್ನು ಎಂದು ಪ್ರೀತಿಯಿಂದ ಬಡಿಸುವ ಬಂಧುಗಳಿಲ್ಲ. ವಿಭಕ್ತ ಕುಟುಂಬಗಳಿಂದಾಗಿ ನಮ್ಮ ಮನಸ್ಸು ವಿಭಾಗಿಸಲ್ಪಟ್ಟಿದೆ. ಪ್ರೀತಿಯ ಬದಲು ನಮ್ಮಲ್ಲಿ ಸ್ವಾರ್ಥ ಮತ್ತು competitive minds ಹೆಚ್ಚಾಗಿದೆ.

ವಾತಾವರಣದಲ್ಲಿ ಶಾಂತಿಯನ್ನು ಕಿತ್ತೊಗೆಯಲು ನಾವು ಟೊಂಕಕಟ್ಟಿ ನಿಂತಿದ್ದೇವೆ. ಮನಶ್ಶಾಂತಿಯ spelling ಅನ್ನು ಮರೆತಿದ್ದೇವೆ. ಮನಸ್ಸಲ್ಲಿ ಶಾಂತಿಯಿಲ್ಲದಿರುವಾಗ, ವಾತಾವರಣ ಅಶುದ್ಧ ಮತ್ತು ಜಿಗುಪ್ಸಾದಾಯಕವಾಗಿರುವಾಗ, ಬದುಕು ದುಸ್ತರವಾಗಿರುವಾಗ ನಾವು ಕಥೆ ಬರೆಯಲು ಸಾಧ್ಯವೇ ?

ಗುರುಗಳು ಡಿವಿಜಿ ಮತ್ತು ಮಾಸ್ತಿಯವರ ಹೆಸರುಗಳನ್ನು ಕಮೆಂಟಿನಲ್ಲಿ ಉಲ್ಲೇಖಿಸಿದ್ದರು. ಗುರುಗಳು ಒಂದನ್ನು ಮರೆತಿದ್ದಾರೆ. ಅವರುಗಳಿದ್ದ ಕಾಲದಲ್ಲಿ ಬೆಂಗಳೂರು " ಉದ್ಯಾನಗಳ ನಗರಿ"ಯಾಗಿದ್ದು, ನವನವೋನ್ಮೇಶಶಾಲಿನಿಯಾಗಿ ಪ್ರಕೃತಿಮಾತೆ ನಳನಳಿಸುತ್ತಿದ್ದಳು. ಈಗ ಬೆಂಗಳೂರು ಬೃಹತ್ತಾಗಿ ಬೆಳೆದು "ಅದ್ವಾನಗಳ ನಗರಿ"ಆಗಿದೆ. ಸ್ಪುರ್ತಿಯ ಸೆಲೆಗಳು ನಾಮಾವಶೇಷವಾಗಿವೆ.

ಅಂಥಾ ಕವಿಪುಂಗವರಿಗೆ ಸ್ಫೂರ್ತಿ ನೀಡಲು ಅವರ ಬಾಲ್ಯ ಚೆನ್ನಾಗಿತ್ತು, ನಮಗಿಂತ ಕೋಟಿ ಪಾಲು ಚೆನ್ನಾಗಿತ್ತು. ಶಾಲೆಯ ಪುಸ್ತಕದ ಭಾರ, ಮಾಥ್ಸ್ ಟೆಸ್ಟಿನ ಭಯ, ಅಪ್ಪನ ಬೆತ್ತ, ಅಮ್ಮನ ವರಾತ, ಆಟದ ಬಯಲುಗಳಿಲ್ಲದ ನಮ್ಮ ಬಡಾವಣೆ ಇವುಗಳ ಮಧ್ಯ ನಮ್ಮ ಬಾಲ್ಯ ನಾಪತ್ತೆಯಾಗಿದೆ. ಕಥೆ ಬರೆಯಲು ಬಾಲ್ಯದ ನೆನಪುಗಳು ಮುಖ್ಯ. ನಮಗೆ ನೆನಪು ಮಾಡಿಕೊಳ್ಳುವಂತಹಾ ನೆನಪುಗಳು ಇವೆಯೇ ? ನನಗಂತೂ ಇಲ್ಲ.

ಚಿಕ್ಕವಯಸ್ಸಿನಲ್ಲಿ ಅವರು ಅವಿಭಕ್ತ ಕುಟುಂಬದಲ್ಲಿದ್ದರು, ಕಥೆ ಹೇಳಲು ಅಜ್ಜಿ ತಾತಂದಿರಿದ್ದರು. ಆಟವಾಡಲು ಅಣ್ಣ ತಮ್ಮ ದಾಯಾದಿಗಳಿದ್ದರು. ನಮಗೀಗ ಯಾರಿದ್ದಾರೆ ಕರ್ಮಕಾಂಡ ಪ್ರಭುಗಳೇ ?

ನಾವಿಲ್ಲಿ ಏನು ಮಾಡುತ್ತಿದ್ದೇವೆ ಗೊತ್ತಾ ಕರ್ಮಕಾಂಡ ಪ್ರಭುಗಳೆ ? ಬುದ್ಧಿವಂತರಾಗಲು ಹೋಗಿ ಹೃದಯಶೂನ್ಯರಾಗುತ್ತಿದ್ದೇವೆ. ನಾವು ಏನನ್ನು ಕಳೆದುಕೊಂಡಿದ್ದೇವೆ ಗೊತ್ತಾ ? ನಮ್ಮನ್ನೇ !!

ಸ್ವಾರ್ಥದಲ್ಲಿ ನಾವು ನಮ್ಮತನ ಮರೆತಿದ್ದೇವೆ. ಮನಸ್ಸನ್ನು ಬೆಳೆಯಲು ಬಿಡದೇ ಮುಠ್ಠಾಳರಾಗಿದ್ದೇವೆ. ನಾವು ಹೃದಯಶೀಲರಾಗದ ಹೊರತು ನಾವು ಉದ್ಧಾರವಾಗುವುದಿಲ್ಲ. ನಾವು ಉದ್ಧಾರವಾಗದೇ ಕಥೆಗಳನ್ನು ಬರೆಯಲು ಸಾಧ್ಯವಿಲ್ಲ.

ಬೇರೆ ಊರುಗಳಿಂದ ಬಂದವರಿಗೆ ನೆನಪಿನ ಸರಕಿದೆ. ಅವರು ಕಥೆ ಬರೀತಾರೆ. ನಾವು ?

ಮತ್ತೆ, ಸುಶ್ರುತರ ಕಮೆಂಟು :

ನಗರದ ಕಥೆಗಲನ್ನು ಜನ ಯಾಕೆ ಸ್ವೀಕರಿಸುವುದಿಲ್ಲ ಅಂತ ಪ್ರತಿಭಾ ನಂದಕುಮಾರ್ ಅವರು ಕೇಳಿದರೆಂದಿದ್ದಾರೆ. ನನಗನ್ನಿಸಿದ್ದು ಇಷ್ಟು :


ಜನಕ್ಕೆ ನಗರದ ಕಷ್ಟಗಳ ನೈಜ ಚಿತ್ರಣಕ್ಕಿಂತ ಕಾಣದ ಹಳ್ಳಿಯ ಕಲ್ಪನೆಯೇ ಹೆಚ್ಚು ಚೇತೋಹಾರಿ. ಕೆಲಕಾಲವಾದರೂ ಕಲ್ಪನಾಛಾಯೆಯಲ್ಲಿ ಮನಸ್ಸು ಶಾಂತವಾಗಿರಬೇಕೆಂದು ಇಚ್ಛೆಪಡುವ ಮಂದಿಯೇ ಜಾಸ್ತಿ ಅಂತ ನನ್ನ ಭಾವನೆ.

ಸಖತಾಗಿ ಕೊರೆದಿದ್ದೇನೆ ಅನ್ನಿಸುತ್ತಿದೆ ಅಲ್ವಾ ? ಅದಕ್ಕೆ ಕಮೆಂಟಿನಲ್ಲಿ ಹಾಕಲಿಲ್ಲ. ನನ್ನ ಕೊರೆತಕ್ಕಂತಲೇ ಇದಿರುವಾಗ ನಾನು ಅಲ್ಲಿ ಯಾಕೆ ಬಂದು ಕೊರೆಯಲಿ ?ಸಖತಾಗಿ ಕೊರೆದಿದ್ದೇನೆ ಅನ್ನಿಸುತ್ತಿದೆ ಅಲ್ವಾ ? ಅದಕ್ಕೆ ಕಮೆಂಟಿನಲ್ಲಿ ಹಾಕಲಿಲ್ಲ. ನನ್ನ ಕೊರೆತಕ್ಕಂತಲೇ ಇದಿರುವಾಗ ನಾನು ಅಲ್ಲಿ ಯಾಕೆ ಬಂದು ಕೊರೆಯಲಿ ?

ಮತ್ತೆ, head ruled ನೆನ್ನೆ "absolutely right" ಅಂತ ಒಂದೆಳೆಯ ಕಮೆಂಟ್ ಕುಟ್ಟಿದ್ದಳು. ಪುಣ್ಯ, ಬ್ಲಾಗರ್ ವರ...ಪಬ್ಲಿಷ್ ಆಗ್ಲಿಲ್ಲ. ಅದಕ್ಕೆ ಇವತ್ತು ನಾನು ಗಲಾಟೆ ಮಾಡಿ, ಅವಳಿಗೂ ಜ್ಞಾನೋದಯ ಮಾಡಿಸಲಿಕ್ಕೆ, ಅವಳನ್ನು ಮಾತಾಡಲು ಬಿಡದೇ, ನಾನು ಮಾತಾಡಿದ್ದೇನೆ. ನಿಮ್ಮ ಅನಿಸಿಕೆಯನ್ನ ಹೇಳಿ ದಯವಿಟ್ಟು.

-------Z

Wednesday, September 24, 2008

ನಿಜವಾದ ಐವತ್ತನೇ ಪೋಸ್ಟ್ !

Z : ಏನ್ ಅರ್ಥ ? ಹಿಂದೆ ಬರ್ದಿದ್ದು ಐವತ್ತನೇದಲ್ವ ?

ನಾನು : ಅಲ್ಲ.

Z : ಮತ್ತೆ....

ನಾನು : ಬ್ಲಾಗರ್ ಗೆ ಕೌಂಟಿಂಗ್ ಬರಲ್ಲ ಅಂತ ನಂಗೆ ಗೊತ್ತಿರ್ಲಿಲ್ಲ. ನಲವತ್ತೊಂಭತ್ತನ್ನ ಐವತ್ತು ಅಂತ ಹೇಳಿ ನನಗೆ ಮೋಸ ಮಾಡಿದೆ...ನಾನು ಯಾವ ಕೋರ್ಟಲ್ಲಿ ಕೇಸ್ ಫೈಲ್ ಮಾಡಲಿ ಅಂತ ಯೋಚ್ನೆ ಮಾಡ್ತಿದಿನಿ.

Z : ಬ್ಲಾಗರ್ ಗೆ ಕೌಂಟಿಂಗ್ ಬರಲ್ವ ?

ನಾನು : unfortunately, yes. Blogger does not know how to count.

Z : ನೀನು ಬ್ಲಾಗರ್ ಅನ್ನು ಬೈಯ್ಯುವ ಮುನ್ನ ನಿನಗೆ ಕೆಲವು ಜ್ಞಾನೋದಯವನ್ನು ಮಾಡಿಸಬೇಕಿದೆ.

ನಾನು : ಸುಮ್ನೆ ತೊಂದ್ರೆ ತಗೋಬೇಡ.

Z : ಇಲ್ಲ, ತೊಂದ್ರೆ ತಗೋತಿನಿ. ಇಲ್ಲಾಂದ್ರೆ, ನೀನು "ಬ್ಲಾಗರ್ ನ ಬೈಯಕ್ಕೆ ನನ್ನ ಹತ್ರ ಶಬ್ದ ಗಳೇ ಇಲ್ಲ, ಅದಕ್ಕೆ characters ನಲ್ಲಿ ಬೈತಿನಿ" ಅಂತ 10 ! (ten factorial ) ways ನಲ್ಲಿ ಬೈತೀಯಾ.

ನಾನು : ಇಷ್ಟ ಪಟ್ಕೊಂಡ್ ತೊಂದ್ರೆ ತಗೋಳೋದ್ರಲ್ಲಿ ನಿಸ್ಸೀಮೆ ! ಸರಿ, ತೊಂದ್ರೆ ತಗೊ.

Z : ನೋಡು, ಬ್ಲಾಗರ್ ನಲ್ಲಿ ಆಟೋ ಸೇವ್ ಆಪ್ಶನ್ ಇದೆ. ಅದು ಡ್ರಾಫ್ಟ್ ಗಳನ್ನ ಆಟೋ ಸೇವ್ ಮಾಡತ್ತೆ. ನೀನು ಪ್ರತೀ ಸಲ ಟೈಪ್ ಮಾಡಿ ಸೇವ್ ಮಾಡಿದ್ದ್ ಮೇಲೆ microsoft word ನಲ್ಲಿ ಒಂದು ಕಾಪಿ ಇಟ್ಟುಕೊಳ್ಳೊ ಅವಶ್ಯಕತೆ ಇಲ್ಲ.

ನಾನು : !!!!!!!

Z : ವೈಟ್...ಇಷ್ಟ್ ಬೇಗ ಗಾಬ್ರಿ ಆಗ್ಬೇಡ. ಇನ್ನೊಂದಿಷ್ಟ್ ಇದೆ. ನೀನು ಖಾಲಿ ಪೋಸ್ಟ್ ನ ಸ್ವಲ್ಪ ಹೊತ್ತು ಹಾಗೆ ಬಿಟ್ಟಿದ್ದರೆ ಅದು ಒಂದು ಹೊಸಾ ಪೋಸ್ಟ್ ಆಗಿ ಸೇವ್ ಆಗತ್ತೆ.

ನಾನು : !!!!!!!!!!!!!!!!!!!!

Z : ಬ್ಲಾಗರ್ ಪೋಸ್ಟ್ ಗಳನ್ನ published, unpublished ಅಂತ categorize ಮಾಡಲ್ಲ. ಡ್ರಾಪ್ಟ್ ಸಮೇತ ಕೌಂಟ್ ಮಾಡಿರತ್ತೆ.

ನಾನು : ಅದೇ ತಪ್ಪು. ಏನ್ ಧಾಡಿ ಅದಕ್ಕೆ ವಿಭಾಗೀಕರ್ಸಕ್ಕೆ ?

Z : ಬ್ಲಾಗರ್ ಪಾಪ ನಿಧಾನಕ್ಕೆ ಬೆಳಿತಿದೆ. ನೀನು growth ನ accelerate ಮಾಡ್ಬೇಡ.

ನಾನು : ಅನ್ಯಾಯ !!!!!!!!!!!!!!!!!!!!!!!!!!!!!!!

Z : ಶ್ !!!!!!!! ಕಿರ್ಚ್ಬೇಡ !! ಒಮ್ಮೊಮ್ಮೆ ಮೊಬೈಲಲ್ಲಿ ನಮಗೆ ನಮಗೆ ಗೊತ್ತಿರೋರಿಂದ್ಲೇ ಪೋನ್ ಬಂದಿರತ್ತೆ...ನಾವ್ ಹಲೋ ಹಲೋ ಅಂತ ಹೊಡ್ಕೋತಿರ್ತಿವಿ...ಅವ್ರಿಗೆ ಕಾಲ್ ಬಟನ್ ಪ್ರೆಸ್ ಆಗಿದೆ ಅಂತ ಗೊತ್ತೇ ಇರಲ್ಲ...ಆಮೇಲೆ ನಾವ್ ಫೋನ್ ಮಾಡಿ ಯಾಕ್ ಏನು ಮಾತಾಡ್ತಿಲ್ಲ ಅಂದ್ರೆ ನಾವ್ ಫೋನ್ ಮಾಡಿದ್ವಾ ಅಂತ ಅವ್ರು ನಮ್ಮನ್ನೇ ಕೇಳಲ್ವಾ....ಹಾಗೆ ಇದು ನು !!!

ನಾನು : ಗ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್.............

Z : ಶಾಂತಿ ಸಹನೆ ಧೈರ್ಯ ತಾಳ್ಮೆ !!!

ನಾನು : ಇವರು ಯಾರೂ ನನಗೆ ಗೊತ್ತಿಲ್ಲ !!!

Z : ಇವ್ರು ಮನುಷ್ಯರಲ್ವೆ ಹೋಪ್ಲೆಸ್ಸ್ ಫೆಲ್ಲೋ...

ನಾನು : ಓಹ್ !! ಅದಕ್ಕೆ ಗೊತ್ತಿಲ್ಲ.

Z : ಅದ್ ಹೋಗ್ಲಿ...ಹಿಂದೆ ತಾವು ಒಂದು ಬ್ಲಾಂಕ್ ಪೋಸ್ಟನ್ನು ಸೇವ್ ಮಾಡಿ ಅದನ್ನ ನೋಡದೇ ಇದ್ದುದರ ಪರಿಣಾಮವಾಗಿ, ನಲವತ್ತೊಂಭತ್ತು published ಪೋಸ್ಟ್ ಗಳು, ಒಂದು unpublished ಪೋಸ್ಟ್ ಸೇರಿ ಐವತ್ತಾಗಿದೆ.
ಜ್ಞಾನೋದಯ ಆಯ್ತ ?

ನಾನು : pling !!! ಆಯ್ತು.

Z : ನಲವತ್ತೊಂಭತ್ತನೇ ಪೋಸ್ಟ್ ನಲ್ಲಿ ಬರೆದಿದ್ದನ್ನ ಇಲ್ಲಿಗೆ carry forward ಮಾಡ್ಕೊಂಬಿಡಿ ಎಲ್ಲಾರು ದಯವಿಟ್ಟು... ಧನ್ಯವಾದಗಳು !!

Tuesday, September 23, 2008

50 !

ನಾನು : ಏರ್ಟೆಲ್, ಸ್ಪೈಸ್, ಹಚ್, ರಿಲೈಯನ್ಸ್, ಟಾಟಾ ಇಂಡಿಕಾಮ್, ಐಡಿಯಾ ಮತ್ತು ವರ್ಜಿನ್ ಮೊಬೈಲ್ ಕಂಪನಿಗಳ ಓನರ್ಸು ಸಾರಾಸಗಟಾಗಿ, ಸಂಪದ್ಭರಿತವಾಗಿ ಹೊಟ್ಟೆ ಉರ್ಕೊಂಡಿದ್ದಾರೆ ಅಂತ ಹೇಳಲು ನಗೆ ಅತೀವ ಸಂತೋಷವಾಗುತ್ತಿದೆ.

Z : ಹೆ ಹೆ ? ಯಾಕೆ ?

ನಾನು : just imagine...ನಮ್ಮ ಮಾತಿನ length ಗೆ ಐವತ್ತು ಕಾಲ್ ಗಳನ್ನ !!! as such crorepatis ಅವ್ರು... ನಾವು ಅವರ ಕನೆಕ್ಷನ್ ನಲ್ಲಿ ಮಾತಾಡಿದ್ದಿದ್ದ್ರೆ ಇನ್ನೂ ಉದ್ಧಾರ ಆಗಿ multi-billionaires ಆಗಿರ್ತಿದ್ರು...ಅವರನ್ನ millionaires ಆಗೇ ಉಳಿಸಿದೀವಲ್ಲ ಅವರ್ಯಾರಿಗೂ business ಕೊಡದೇ...ಅದೇ ದೊಡ್ಡ ಸಾಧನೆ ನಾವ್ ಮಾಡಿರೋದು .

Z : commendable.... ಅಲ್ವ ?

ನಾನು : undoubtedly. ಬ್ಲಾಗರ್ ಬಿಟ್ಟಿಯಾಗಿರೋದ್ರಿಂದ, ಬರಹ ಐ . ಎಮ್. ಈ. ಮತ್ತು ಬರಹ ಡೈರೆಕ್ಟ್ ಇರೋದ್ರಿಂದ, ಗೂಗಲ್ ಡಾಕ್ಯುಮೆಂಟ್ ಆಫ್ಲೈನಲ್ಲೂ ವರ್ಕ್ ಆಗತ್ತೆ ಆದ್ದರಿಂದ, ಮತ್ತು ಬಿ.ಎಸ್.ಎನ್ .ಎಲ್ ಇತ್ತೀಚೆಗೆ ಕಡಿಮೆ ವರಗಳನ್ನ ಕೊಡ್ತಿರೋದ್ರಿಂದ ನಾವು ಈಮಟ್ಟಿಗೆ ಮಾತಾಡಲು ಸಾಧ್ಯವಾಗಿದೆ. ಅವರಿಗೆಲ್ಲ ಒಂದೊಂದ್ ಥ್ಯಾಂಕ್ಸನ್ನು ಈ ಸಂದರ್ಭದಲ್ಲಿ ನಾವು ಹೇಳಲೇ ಬೇಕು.

ಥ್ಯಾಂಕ್ಸ್ ಆಲ್ ಆಫ್ ಯೂ ! ಥ್ಯಾಂಕ್ಸ್ ಫಾರ್ ಆಲ್ ದ ಹೆಲ್ಪ್ !

Z : ಡಿಟ್ಟೊ !

ನಾನು : ಮತ್ತು, ನಮ್ಮ ಮಾತನ್ನು ಕೇಳಿಸಿಕೊಂಡು, ತುಂಬಾ ಜನ ಸಿಕ್ಕಾಪಟ್ಟೆ ನಕ್ಕಿದ್ದಾರಂತೆ...

Z : ಯಾಕಂತೆ ?

ನಾನು : ಗೊತ್ತಿಲ್ಲ...ನಿಜ್ವಾಗ್ಲೂ ಗೊತ್ತಿಲ್ಲ. ಇವ್ರೆಲ್ಲಾ ಯಾಕ್ ನಕ್ಕಿದ್ರು ಅನ್ನೊದರ ಬಗ್ಗೆ ರಿಸರ್ಚ್ ಮಾಡಬೇಕಿದೆ.

Z : ಮಾಡ್ಬೇಕ್ ಮಾಡ್ಬೇಕ್. ನನಗನ್ನಿಸತ್ತೆ, ಅವರಿಗೆ ನಿನ್ನ ಪಾಡನ್ನು ನೋಡಿಯೇ ನಗು ಬಂದಿದೆ ಅಂತ.

ನಾನು : ಸೈಲೆನ್ಸ್ ಐ ಸೇ !

Z : (ನ ಬ್ರೂಯಾತ್ ಸತ್ಯಂ ಅಪ್ರಿಯಂ )...ಹೋಗ್ಲಿ ಬಿಡು. ಮಾತು ಕೇಳಿಸಿಕೊಂಡು ನಕ್ಕಿದವರಿಗೆಲ್ಲ ನಾನು ಥ್ಯಾಂಕ್ಸ್ ಹೇಳ್ತಿನಿ. ಎಲ್ಲಾರ್ಗೂ ಥ್ಯಾಂಕ್ಸು !!

ನಾನು : ನಮ್ಮನಾಡಿನ ಸದಸ್ಯರು, ಪ್ರಣತಿ ಟೀಮ್ ಮೆಂಬರ್ಸು, ಮತ್ತೆ ಮಾತ್ ಕೇಳ್ಸ್ಕೊಂಡು ತಮ್ಮ ಅಮೂಲ್ಯ ಕಮೆಂಟನ್ನು ನಮ್ಮ ಫೋನಿನ ಕಮೆಂಟೆಂಬ ಇನ್ ಬಾಕ್ಸ್ ನಲ್ಲಿ ಹಾಕಿರೋ ಸಮಸ್ತರಿಗೂ ನನ್ನ ಅನಂತಾನಂತ ವಂದನೆಗಳು.

Z : ಸಿಕ್ಕಾಪಟ್ಟೆ ದೊಡ್ಡ್ ಸೆಂಟೆನ್ಸು...ರಿಪೀಟ್ ಮಾಡಕ್ಕಾಗಲ್ಲ,ಅದಕ್ಕೆ---> ಡಿಟೋ !!

ನಾನು : ಇನ್ನೊಂದ್ ಆಶ್ಚರ್ಯಕರ ವಿಷಯ ಏನಪ್ಪಾ ಅಂದರೆ, ಇಲ್ಲೊಬ್ಬರಿಗೆ ನಮ್ಮ ಮಾತು ಕೇಳಿ ಹೊಟ್ಟೆಕಿಚ್ಚಾಗಿದೆಯಂತೆ ! ಯಾಕೆ ಅಂತ seriously ನನಗೆ ಅರ್ಥ ಆಗಿಲ್ಲ ! ಅಲ್ಲ, ಅಂಥಾ ಅಥಿರಥ ಮಹಾರಥರ ಹೆಸರುಗಳ ಮಧ್ಯ ನಮ್ಮ ಹೆಸರು ಇರೋದನ್ನ ನೋಡಿಯೇ ನನ್ನ ಹುಬ್ಬು ಹೈ ಜಂಪ್ ಹೊಡಿತಿದೆ.

Z : ಕರೆಕ್ಟ್ ! ಅಂಥವರ ಲಿಸ್ಟಲ್ಲಿ ನಮ್ಮ ಹೆಸರನ್ನ ಸೇರ್ಸಿರೋದು ಒಂಥರಾ ನಡುಕ ತರಿಸ್ತಿಲ್ವಾ ನಿನಗೆ ?

ನಾನು : sort of . ಅಲ್ಲ, ಹೊಟ್ಟೆ ಕಿಚ್ಚು ಪಟ್ಟುಕೊಂಡಿರೋರನ್ನೂ ಸೇರ್ಸಿ ಆ ಲಿಸ್ಟ್ ನಲ್ಲಿರೋರೆಲ್ಲ ಸಿಕ್ಕ್ ಸಿಕ್ಕಾಪಟ್ಟೆ ದೊಡ್ಡ್ ಮನುಷ್ಯರು. established bloggers-u. ಅತ್ಯದ್ಭುತ ಬರಹಗಾರರು. ಆ ಲಿಸ್ಟ್ನಲ್ಲಿರೋರ ಥರಾ ಎಲ್ಲ ನಾವು ಕಥೆ ಕವನ ಬರಿತಿವಾ ? ಅಥ್ವಾ ಅವರ ಥರ ವಿಧ ವಿಧ angle ಗಳಲ್ಲಿ ವಿಷಯಗಳನ್ನೆಲ್ಲಾ ವಿಮರ್ಶೆ ಎಲ್ಲಾ ಮಾಡ್ತಿವಾ ? ಬರೀ ಹರಟೆ ಕೊಚ್ಚ್ತೀವಿ ! ಅದಕ್ಕೆ ಇವರು ನಮ್ಮ ಮಾತನ್ನ ಆ ಲಿಸ್ಟಿಗೆ ಸೇರ್ಸಿದ್ದು ತೀರಾ ಆಶ್ಚರ್ಯ ತಂದಿದೆ !

Z : i know....I am very very surprised !

ನಾನು : ಯಾವತ್ತಾದರೂ ಅವರು ನನ್ನೆದುರು ಕಾಣಿಸಿಕೊಂಡರೆ, ಈ ವಿಷಯದ ಬಗ್ಗೆ ಪ್ರಸ್ತಾಪ ಮಾಡಿ, ದ್ರೋಣಾಚಾರ್ಯ ಯಾರು, ಏಕಲವ್ಯ ಯಾರು ಅನ್ನೋದನ್ನ ನಿರ್ಧರಿಸಬೇಕಿದೆ. ನಾವು ಹುಲುಮಾನವರು, ಅವರೆಲ್ಲರ ಥರ ಪವಾಡಪುರುಷರಲ್ಲ ಅಂತ emphasize ಮಾಡಬೇಕಿದೆ.

Z : ಹೌದ್ ಹೌದ್ ! ಮಾಡ್ಬೇಕ್ . ನಾನು ಬರ್ತಿನಿ ಆಗ !

ನಾನು : you are most welcome.

Once again, thank you all !

Saturday, September 20, 2008

Definition of ಅಹಿತಕರ ಘಟನೆ

Z : ನೋಡೂ...ಪ್ಲೀಸ್ definitionಗಳನ್ನೆಲ್ಲ ಹೇಳಿ ನನ್ನ ಗೋಳುಹೊಯ್ಕೋಬೇಡ.

ನಾನು : ಇಲ್ಲ...ನಾನು ನಿನಗೆ definition ಹೇಳುತ್ತಿಲ್ಲ, ಕೇಳ್ತಿದಿನಿ, ನಿಂಗೆ ಗೊತ್ತಾ ಅಹಿತಕರ ಘಟನೆ ಅನ್ನೋ ನುಡಿಗಟ್ಟಿನ ಅರ್ಥ ಏನು ಅಂತ ?

Z : ಗೊತ್ತು.

ನಾನು : ಅಪ್ಪಣೆ ಕೊಡಿಸಿ.

Z : ಹಿತ ಅಂದರೆ ಏನು ? ಮನಸ್ಸಿಗೆ ಸಂತೋಷ ಉಂಟು ಮಾಡಿ, ಇಂದ್ರಿಯಗಳನ್ನು ಸಂತೋಷ ಪಡಿಸುವಂಥವು. ಅಹಿತ ಅದರ ವಿರುದ್ಧ ಪದ. ಯಾರ್ಗೂ ಸಂತೋಷ ಆಗದಿರುವ ಘಟನೆಯನ್ನು ಅಹಿತಕರ ಘಟನೆ ಅಂತ ಕರೀತಾರೆ.

ನಾನು : ಹೌದಾ ?

Z : ನಂಗೆ ಹಾಗನ್ನಿಸತ್ತೆ.

ನಾನು : ನಂಗೂ ಹಾಗೇ ತೋಚಿತ್ತು actually.

Z : ಮತ್ತೆ ಏನ್ ತೊಂದ್ರೆ ನಿಂದು ?

ನಾನು : ಮೊನ್ನೆ ಮಂಗಳೂರು ಬಂದ್ ಆಯ್ತಲ್ಲ...

Z : ಹೂ...

ನಾನು : ....ಆಗ ನ್ಯೂಸ್ ನವರು ಕೊಡುತ್ತಿದ್ದ ವರದಿ ನೋಡಿ, ನನಗೆ ಗೊತ್ತಿದ್ದ definition ಮೇಲೆ, for the first time ಅನುಮಾನ ಬಂತು.

Z : ಹೌದಾ ? ಏನಂದ್ರು ?

ನಾನು : ನ್ಯೂಸ್ ರೀಡರ್ ಹೀಗೆ ಹೇಳಿದ್ದು - " ಮತಾಂತರದ ಪ್ರಕರಣದಿಂದ ಎದ್ದ ಗಲಾಟೆಯಿಂದ ಶ್ರೀ ರಾಮ ಸೇನೆಯವರು ಮಂಗಳೂರಿನಲ್ಲಿ ಕರೆ ನೀಡಿದ್ದ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಗಳೂರು ಸಂಪೂರ್ಣ ಶಾಂತವಾಗಿದ್ದು, ಜನಜೀವನ ವಾಹನ ಸಂಚಾರವಿಲ್ಲದೇ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅಲ್ಲಲ್ಲಿ ಕಲ್ಲುತೂರಾಟ ಮತ್ತು ಒಬ್ಬರ ಮೇಲೆ ಮಾರಕಾಸ್ತ್ರದಿಂದ ಹಲ್ಲೆಯಾಗಿದೆ. ಯಾವ ಅಹಿತಕರ ಘಟನೆಯೂ ಸಂಭವಿಸಿಲ್ಲ "

ಇದರ ಅರ್ಥ ಏನು ?

Z : ಅಂದ್ರೆ...ಇವೆರಡೂ ಅಹಿತಕರ ಘಟನೆ ನೆ...ಆದ್ರೆ intensely ಅಹಿತಕರ ಘಟನೆ ಅಲ್ಲ.

ನಾನು : what ? ಅಹಿತಕರ ಘಟನೆ ಗೂ intensity ಗೂ ಏನ್ ಸಂಬಂಧ ?

Z : ನೋಡು, ಕಲ್ಲು ತೂರಾಟ ಆಯ್ತು...ಇದರಿಂದ ಅಂಗಡಿಯ ಮಾಲೀಕ ಸಾಯಲ್ಲ, ಬರೀ ಹಾರ್ಟ್ ಅಟಾಕ್ ಆಗತ್ತೆ. ಆದ್ದರಿಂದ ಅದು ಕಡಿಮೆ ಆಘಾತ ಮತ್ತು less intense ಅಹಿತಕರ ಘಟನೆ. ಆಮೇಲೆ ಮಾರಕಾಸ್ತ್ರದಿಂದ ಬರೀ ಇರಿದರು, ಕೊಚ್ಚಲಿಲ್ಲವಲ್ಲ ! ಆ ಘಟನೆಯಲ್ಲೂ ಏನೂ ದಮ್ಮಿಲ್ಲ.

ನಾನು : ಆಹಾ ! ಪಾಪ...ಕಲ್ಲು ತೂರಾಟದಿಂದ ಅಂಗಡಿಯವನು ಸಾಲ ಸೋಲ ಮಾಡಿ ಮತ್ತೆ ಗಾಜು ಹಾಕಿಸ್ಬೇಕಲ್ಲ...ಅದು ಕಡಿಮೆ ಅಹಿತಕರ ನ ? ಮಾರಕಾಸ್ತ್ರದಿಂದ ಇರಿದರೆ ಅವನು ಪಾಪ ಸಾವು ಬದುಕಿನ ಮಧ್ಯ ಹೋರಾಡುವುದು ಕಡಿಮೆ ಅಹಿತಕರ ನ ?

Z : ಶ್ !!!!!!!!! fundamental questions ಕೇಳ್ಬೇಡ.

ನಾನು : ಯಾಕೆ ಅಂತ ?

Z : ಹಾಗೆ !


ನಾನು : ನೋಡು...ಇವೆಲ್ಲ ಆಗಲ್ಲ. definition ಗೆ specific ಅರ್ಥ ಇರ್ಬೇಕು. ಇಷ್ಟ ಬಂದ ಹಾಗೆ ಪದಗಳನ್ನ ಉಪಯೋಗಿಸಿದರೆ ನಮ್ಮಂಥವರಿಗೆ ಅರ್ಥ ಮಾಡ್ಕೊಳ್ಳೊದು ಕಷ್ಟ. ಮೊದ್ಲೆ...ಕನ್ನಡದಲ್ಲಿ ನನ್ನ ಲೆವೆಲ್ಲು ಅಷ್ಟಕ್ಕಷ್ಟೇ! ಈಗ ಅಹಿತಕರ ಘಟನೆ ನ ಇವರು ಈ ಥರ ಡಿಫೈನ್ ಮಾಡಿದ್ರೆ, ನಾವು ಹೈಸ್ಕೂಲಲ್ಲಿ " ಈ ನುಡಿಗಟ್ಟನ್ನು ವಾಕ್ಯಗಳಲ್ಲಿ ಬಳಸಿ " exercise ಮಾಡ್ತಿದ್ವಲ್ಲಾ...ಅದು ನೆನ್ಪಾಗತ್ತೆ.

Z : ಒಹೋ !

ನಾನು : ಅಹಿತಕರ ಘಟನೆಯನ್ನು ವಾಕ್ಯದಲ್ಲಿ ಬಳಸೋದಾದ್ರೆ " ಜಗತ್ತಿನ ಜಲಪ್ರಳಯವಾಗುತ್ತಿದ್ದು ಎಲ್ಲಾ ಖಂಡಗಳೂ ನೀರಿನಿಂದ ಆವೃತವಾಗಿದೆ. ಪರಿಸ್ಥಿತಿ ಎಲ್ಲ ಖಂಡಗಳಲ್ಲೂ ಶಾಂತವಾಗಿದ್ದು, ಪರಿಸ್ಥಿತಿ ಹತೋಟಿ ಮೀರಿದೆ. ನಮ್ಮ ಖಂಡ ನಿಧಾನಕ್ಕೆ ಮುಳುಗುತ್ತಿದೆ. ಬೇರೆ ಯಾವ ಅಹಿತಕರ ಘಟನೆ ಸಂಭವಿಸಿಲ್ಲ !

Z :ನೋಡು....


ನಾನು : ನೋಡಲ್ಲ. ಯಾವ್ಯಾವ ಘಟನೆ ನ, ಎಂಥೆಂಥಾ ಘಟನೆಗಳನ್ನ ಅಹಿತಕರ ಅಂತ ಕ್ಲಾಸಿಫೈ ಮಾಡ್ತಾರೆ ಅಂತ ನನಗೆ ಗೊತ್ತಗ್ಬೇಕ್.

Z :ಯಾರಾದ್ರೂ ಇವಳಿಗೆ ತಿಳಿಸಿ ಪುಣ್ಯ ಕಟ್ಟಿಕೊಳ್ಳಿ ಪ್ಲೀಸ್ !!

Monday, September 15, 2008

ಪಾನಿ ಪಾನಿ ರೆ !

Z : ಏನ್ ಹಾಡ್ ಹೇಳ್ತಿದ್ಯ ?

ನಾನು : ಅಯ್ಯೋ ಒಂದು ಸಣ್ಣ ತಪ್ಪು ಒಂದು ದೊಡ್ಡ ಹಗರಣಕ್ಕೆ ಕಾರಣ ಆಗಿದೆ .ಅದಕ್ಕೆ ನಂಗೆ ಈ ಹಾಡು ನೆನ್ಪಾಯ್ತು.

Z : ಏನ್ ತಪ್ಪು ಮತ್ತು ಎಂಥಾ ಹಗರಣ ?

ನಾನು : ಶನಿವಾರ ಬೆಳಿಗ್ಗೆ ನಾನು ಗಾಂಧಿ ಬಜಾರ್ ಗೆ ವಾಕಿಂಗ್ ಹೋಗಿ ಬರುವ ಹೊತ್ತಿಗೆ ಮನೆಯಲ್ಲಿ ಸಿಕ್ಕಾಪಟ್ಟೆ ದೊಡ್ಡ ಹಗರಣ ಆಗಿತ್ತು. ಒಂಭತ್ತನೇ ತಾರೀಖು ಬೆಳಿಗ್ಗೆ ವಾಟರ್ ಬಿಲ್ಲಿನವ ಬಂದು ರೀಡಿಂಗ್ ತಗೊಂಡು ಹೋಗಿದಾನೆ. ಹದಿಮೂರನೆಯ ತಾರೀಖು ಶನಿವಾರ ಬಿಲ್ಲು ಹಾಕಿ ಹೋಗಿದ್ದಾನೆ. ಬಿಲ್ಲಿನ ಮೊತ್ತವನ್ನು ನೋಡಿ ಅಮ್ಮನ ಎದೆ ಒಡೆದು ಹೋಗಿದೆ.

Z : ಎಷ್ಟು ಬಂದಿತ್ತು ?

ಎರಡು ಸಾವಿರ ರುಪಾಯಿ .

Z : ಹಾ ? ! ಫೋನ್ ಬಿಲ್ಲೇ ಸಾವಿರ ದಾಟೊಲ್ಲ !!

ನಾನು : exactly.ನೀರಿನ ಬಿಲ್ಲು ಇಷ್ಟು ಬರಲು ಸಾಧ್ಯವೇ ಇಲ್ಲ ಎಂದು ನಮ್ಮಮ್ಮನಿಗೆ ಯೋಚನೆ ಬಂತಾದರೂ, ಹೊಸ ಕೆಲಸದವಳು ಎರ್ರಾಬಿರ್ರಿ ನೀರು ಉಪಯೋಗಿಸುತ್ತಿದ್ದಾಳಾ ? ನೀರಿನ ಟ್ಯಾಂಕ್ ನಲ್ಲಿ ಸೋರಿಕೆ ಉಂಟಾಗಿದಿಯಾ,ಪಂಪಿನ ಆಟೋ ಲೆವೆಲ್ ಕಂಟ್ರೋಲರ್ ಕೈಕೊಟ್ಟಿದ್ಯಾ ಇವೇ ಮುಂತಾದ ಯೋಚನೆಗಳು ಅಮ್ಮನ ತಲೆಯಲ್ಲಿ ಏಕಕಾಲಕ್ಕೆ ಬಂದಿವೆ. ಆದರೂ, ಏನೇ ಆಗಲಿ ಎರಡು ಸಾವಿರ ಬರಲು ಸಾಧ್ಯವೇ ಇಲ್ಲ, ಆ ಬಿಲ್ಲು ಹಾಕುವವರನ್ನು ಹಿಡಿಯಲೇ ಬೇಕೆಂದು ರಸ್ತೆಯಲ್ಲಿರುವ ಎಲ್ಲರ ಮನೆಗೂ ಹೋಗಿ "ವಾಟರ್ ಬಿಲ್ಲಿನವರು ಬಂದರಾ ? " ಅಂತ ಕೇಳಿ ಕೇಳಿ ರಸ್ತೆಯ ಕಡೆಯ ಮನೆಯಲ್ಲಿ ಅವರನ್ನ ಹಿಡಿದು ವಿಚಾರಿಸಿದ್ದಾರೆ.

ಅಮ್ಮ : ಅಲ್ಲಪ್ಪಾ...ಏನ್ ರೀಡಿಂಗೂ ಅಂತ ತಗೊಂಡಿದ್ಯಾ ? ನಾವು ನೀರು ಪೋಲಾಗದಿರಲಿ ಅಂತ ಎಲ್ಲ ಆಟೋಮ್ಯಾಟಿಕ್ ಮಾಡ್ಸ್ಕೊಂಡಿದಿವಿ ಅಣ್ಣಯ್ಯ...ನಮಗೆ ಮಿನಿಮುಮ್ ವಾಟರ್ ಬಿಲ್ಲಷ್ಟೇ ಬರದು...ಕರೆಂಟ್ ಬಿಲ್ಲು ಫೋನ್ ಬಿಲ್ಲುಗಳೇ ಸಾವಿರ ದಾಟೊಲ್ಲ ನಮ್ಮ ಮನೆಯಲ್ಲಿ, ನೀನು ನೀರಿನ ಬಿಲ್ಲನ್ನ ಏನ್ ಸಾವಿರಾರುಗಟ್ಟಲೆ ಹಾಕಿಬಿಟ್ಟರೆ,ನನಗೆ ಗಾಬರಿ ಆಗ್ತಿದೆ. ದಯವಿಟ್ಟು ಕಣ್ಣು ಬಿಟ್ಟು ನೋಡಯ್ಯ...

ಅವರು : ಮೇಡಮ್, ನನಗೂ ಗೊತ್ತು ನಿಮ್ಮ ಮನೆಗೆ ಹೀಗೆ ಬರಲ್ಲ ಅಂತ...ನೀವು ಸಿಕ್ಕಾಪಟ್ಟೆ ಉಪಯೋಗಿಸುತ್ತಿದ್ದೀರಿ ಅಂತ ಅನ್ನಿಸಲ್ಲ...ಮೋಸ್ಟ್ಲಿ ರೀಡಿಂಗ್ ತಪ್ಪಾಗಿರಬೇಕು. ಯಾವ್ದಕ್ಕೂ ಸೋಮವಾರ ಸಂಜೆ ನಾಲ್ಕಕ್ಕೆ ಬನಗಿರಿ ಗೆ ಬಂದುಬಿಡಿ. ಸರಿ ಮಾಡ್ಕೊಡ್ತಾರೆ.

ಅಮ್ಮ : ಅಲ್ಲಯ್ಯಾ...ಬನಗಿರಿಯ ದೇವಸ್ಥಾನ ಗೊತ್ತು, ಅಲ್ಲೆಲ್ಲಿದೆ ನಿಮ್ ಆಫೀಸು ?
ಅವರು : ಮೇಡಮ್ ದೇವಸ್ಥಾನದ ಪಕ್ಕದಲ್ಲೆ...ಯಾರನ್ನ ಕೇಳಿದರೂ ಹೇಳುತ್ತಾರೆ.
ಅಮ್ಮ :ಎಷ್ಟ್ ದಿನ ಅಲೆಸುತ್ತಾರಯ್ಯ ಆ ಆಫೀಸಿಂದ ಈ ಆಫೀಸಿಗೆ ?
ಅವರು : ಮೇಡಮ್ ಈಗ ಎಲ್ಲ ಕಂಪ್ಯೂಟರೈಸ್ಡ್ ! ಅರ್ಧ ಘಂಟೆ ನೂ ಆಗಲ್ಲ. ಗಾಬ್ರಿ ಆಗ್ಬೇಡಿ ಮೇಡಮ್...ಅಲೆಸಲ್ಲ ನಿಮ್ಮನ್ನ.
ಅಮ್ಮ : ನಾನ್ ಬರಲ್ಲ ಕಣಯ್ಯ...ಕೆಲ್ಸಕ್ಕೆ ಹೋಗ್ತಿನಿ. ನನ್ನ ಮಗಳನ್ನ ಕಳಿಸ್ತಿನಿ.
ಅವರು : ಸರಿ ಮೇಡಂ.

ನಾನು : ಇವನು ಹೋದ ಮುನ್ನೂರು ಸೆಕೆಂಡ್ ನಂತರ ನನ್ನ ಆಗಮನವಾಯ್ತು ಗಾಂಧಿ ಬಜಾರ್ ಇಂದ. ಬಂದದ್ದೇ ನಮ್ಮಮ್ಮ ಆದ ಹಗರಣದ ಪ್ರವರ ಊದಿದರು. ಈ ಸಮಸ್ಯೆಯ ಪರಿಹಾರಕ್ಕೆ ಸೋಮವಾರದ ಮಧ್ಯಾಹ್ನದ ನಿದ್ದೆ ತ್ಯಾಗ ಮಾಡಲೇಬೇಕಾಯ್ತು ನಾನು.

Z : ಹ್ಮ್ಮ್ಮ್ಮ್...........

ನಾನು : ಸರಿ ಇವತ್ತು ಮಧ್ಯಾಹ್ನ ನನ್ನ ಪಯಣ ಬನಗಿರಿಯ ಕಡೆ ಹೋಯ್ತು. ನನಗೆ BWSSB ಆಫೀಸಿಗೆ ರಸ್ತೆ ಗೊತ್ತಿರಲಿಲ್ಲ. ಪೆಟ್ಟಿಗೆ ಅಂಗಡಿಯವನ ಬಳಿ ವಿಚಾರಿಸಲು,ಅವರು- "ಮೇಡಮ್, ಈ ಅಪ್ಪನ್ನು ಹತ್ತಿಬಿಡೀ...ಅಲ್ಲೇ ಬಲಕ್ಕೆ ಕಾಣ್ಸತ್ತೆ." ಅಂತ horizontal ಗೆ ಸುಮಾರು 70 degrees ಅಷ್ಟು incline ಆಗಿರುವ ರಸ್ತೆಯನ್ನು ತೋರಿಸಿದ. ನನಗೆ ರಸ್ತೆ ನೋಡಿಯೇ ಗಾಬರಿ ಆಯ್ತು. ಚಾಮುಂಡಿ ಬೆಟ್ಟವನ್ನು ಕಾರಿನ ಬದಲು ಕಾಲಲ್ಲಿ ಹತ್ತಿ ಪ್ರಾಕ್ಟೀಸ್ ಮಾಡ್ಬೇಕಿತ್ತು ಅನ್ನಿಸಿತು. ಇರಲಿ ಏನಾದ್ರು ಆಗಿ ಹೋಗಲಿ, ಹತ್ತೇ ಬಿಡುವ ಅಂತ ಅಪ್ಪ್ ಹತ್ತಿ ಬಲಕ್ಕೆ ನೋಡಿದರೆ....

Z : ರೆ.....

ನಾನು : ಖಾಲಿ ಸೈಟು !

Z : ಹೆ ಹೆ....

ನಾನು : ಆಮೇಲೆ ಒಂದು ಮನೆ ಮುಂದಿರುವ ಸೆಕ್ಯೂರಿಟಿಯವರನ್ನ ಕೇಳಿದೆ. ಅವರು ಬಲಗಡೆ ತಿರುಗಿ ಇನ್ನೊಂದು ಅಪ್ಪ್ ಹತ್ತಿ ಮೇಡಮ್, ಬಲಕ್ಕೆ ಕಾಣಿಸುತ್ತದೆ ಅಂದರು. ಆ ಅಪ್ಪು 60 degrees ! ಶಿವನಾಮ ಜಪವನ್ನು ಎಡೆಬಿಡದೆ ಮಾಡುತ್ತಾ ಅಪ್ಪನ್ನು ಹತ್ತಿ ಕಡೆಗೂ bwssb ಆಫೀಸು ತಲುಪಿದೆ.ಅದು ಬನಗಿರಿಯ ದೇವಸ್ಥಾನದ ಪಕ್ಕದಲ್ಲಿರಲಿಲ್ಲ, ಪಕ್ಕದ ರಸ್ತೆಯಲ್ಲಿತ್ತು. ಸಾವಿವ ಅಂಚಿನಲ್ಲಿರುವ ಶ್ವಾನವೊಂದು ಬಾಲ ಅಲ್ಲಾಡಿಸುತ್ತಾ ನನಗೆ ಸ್ವಾಗತ ಬೇರೆ ಕೋರಿತು.

Z : ಆಮೇಲೆ ?

ನಾನು : ಒಳಗೆ ಹೋದ ತಕ್ಷಣ ಪ್ಯೂನೊಬ್ಬರು, "ಬನ್ನಿ ಮೇಡಮ್, ಕೂತ್ಕೋಳೀ...ಏನ್ ಆಯ್ತು ? " ಅಂತ ಡಾಕ್ತರ್ ಪೇಷೆಂಟ್ ನ ಕೇಳುವ ಹಾಗೆ ಕೇಳಿದರು.

ನಾನು :"ಸರ್, ಅದು ರೀಡಿಂಗ್ ತಪ್ಪಾಗಿ ತಗೊಂಡು ಬಿಲ್ಲು ಸಿಕ್ಕಾಪಟ್ಟೆ ಬಂದಿದೆ. ಕರೆಕ್ಷನ್ ಆಗ್ಬೇಕಿತ್ತು " ಅಂದೆ.
ಅವರು ಬಿಲ್ಲನ್ನು ನೋಡಿ..."ಏನ್ ಮೇಡಮ್ ಇದು, ಆಮೇಲೆ ತಗೊಂಡಿರೋ ರೀಡಿಂಗ್ ಗೂ ಮೊದ್ಲೆ ತಗೊಂಡಿರೋ ರೀಡಿಂಗ್ ಗೂ ಸಂಬಂಧನೇ ಇಲ್ವಲ್ಲ ? "

ನಾನು : "ಸಂಬಂಧ ಹುಡ್ಕಕ್ಕೇ ಬಂದಿರೋದು ಸರ್ ನಾನಿಲ್ಲಿ."

ಅಷ್ಟರಲ್ಲಿ ಮತ್ತೊಬ್ಬರು ಬಂದರು, ಅವರು ಬಿಲ್ಲನ್ನು ಪರೀಕ್ಷಿಸಿ ಹೀಗೇ ಅಂದರು. ಆಮೇಲೆ ಅದು ಮಗದೊಬ್ಬರ ಕೈ ಸೇರಿತು. ಹೀಗೆ ಒಂದೈದು ನಿಮಿಷ ಎಲ್ಲರು ಪಾಸಿಂಗ್ ದ ಪಾರ್ಸಲ್ ಆಟದ ವಿಸ್ತೃತ ಭಾಗವಾದ ಪಾಸಿಂಗ್ ದ ವಾಟರ್ ಬಿಲ್ಲ್ ಆಟ ಆಡಿದರು. ಕಡೆಗೆ ಅದು ಮುಖ್ಯ ಇನ್ಸ್ಪೆಕ್ಟರ್ ಕೈ ಸೇರಿತು. ಅವರು " ಮೇಲೆ ಹೋಗಿ ಮಾ...ನಿಮ್ ಏರಿಯಾ ಇನ್ಸ್ಪೆಕ್ಟರ್ ಮೇಲಿದಾರೆ " ಅಂದರು.

ನಾನು ಮೆಟ್ಟಿಲು ಹುಡುಕುತ್ತಿದ್ದೆ. ಆ ಪ್ಯೂನು, "ಮೇಡಂ, ಮೆಟ್ಟಿಲು ಹೊರಗಿದೆ " ಅಂತ ಹೇಳಿಕಳಿಸಿದರು.

ಮೆಟ್ಟಿಲು ಹತ್ತಿ ಆಫೀಸಿನ ಒಳಗೆ ಹೋಗಿ ನಮ್ಮ ಏರಿಯಾ ಇನ್ಸ್ಪೆಕ್ಟರ್ ಇದಾರ ಅಂತ ಕೇಳಿದರೆ ಅವರು " ಈಗ್ ತಾನೆ ನಿಮ್ ಕಣ್ಣ್ ಮುಂದೆ ನೇ ಹೊರಗೆ ಹೋದ್ರಲ್ಲಮ್ಮ...ಕೆಳ್ಗಡೆ ಇರ್ತಾರೆ ನೊಡಿ ! " ಅಂದರು.

ನಾನು : "ಮೇಡಮ್, ಅಲ್ಲಿಲ್ಲ ಅವ್ರು ಅಂತಾನೇ ನನ್ನನ್ನ ಮೇಲೆ ಕಳಿಸಿದರು "

ಅವರು : "ಸರಿ, ಹೊರಗೆ ಹೋಗಿ ನೋಡಿ, ಅಲ್ಲಿ ಇನ್ನೊಂದು ಆಫೀಸಿದೆ. ಅಲ್ಲಿರ್ಬಹುದು"

ನಾನು ಇನ್ನೊಂದು ಆಫೀಸಿನಲ್ಲಿ ವಿಚಾರಿಸಲು " ಇಲ್ಲಿಲ್ಲ " ಅನ್ನುವ ಉತ್ತರ ಬಂತು. ನಾನಿನ್ನು ಹೊರಗೆ ಬಲಗಾಲನ್ನು ಇಟ್ಟಿದ್ದೆ ಅಷ್ಟೆ , "ನಾನಿಲ್ಲೇ ಇದಿನಿ, ಇಲ್ಲ ಅಂತೀರಲ್ರಿ ? " ಎಂಬ ದನಿಯು ಕೇಳಿಸಿತು. ಪ್ರಿಂಟರ್ ಹಿಂದೆ ಮಹಾಶಯರು ಬ್ಯುಸಿಯಾಗಿದ್ದರು. ಎನೋ ಕಾರಣಕ್ಕೆ ಟೇಬಲ್ ಕೆಳಗಿದ್ದವರು ಆಗ ಮೇಲಕ್ಕೆ ತಲೆ ಎತ್ತಿದರು.

ನಾನು : ಸರ್ ಅದು ರಿಡಿಂಗ್ ತಪ್ಪಾಗಿ....

ನೀವು ಗಾಬರಿಯಾಗಿ ನನ್ನನ್ನು ಹುಡುಕಿಕೊಂಡು ಬಂದು ಸಿಕ್ಕಾಪಟ್ಟೆ ವಿಚಾರಿಸಿದರಲ್ಲ, ಅವರ ಮಗಳಾ ?

ನಾನು ನಮ್ಮಮ್ಮನ ಸಾಹಸವನ್ನು ಒಳಗೇ ಮುಕ್ತಕಂಠದಿಂದ ಶ್ಲಾಘಿಸಿ, ಹೌದು ಸಾರ್ ಅಂದೆ.

ಬನ್ನಿ ಬನ್ನಿ ಅಂತ ನನಗೆ ಹೇಳಿ ಆಫೀಸಿನ ಒಳಗೆ ಮಿಂಚಿನಂತೆ ಮಾಯವಾದರು !

Z : ಹೆಹೆಹೆಹೆ....

ನಾನು : ನಗ್ಬೇಡಾ ! ಅವರು ಇನ್ನರ್ಧ ಘಂಟೆ ಬರಲ್ಲ ಅಂದುಕೊಂಡು ನಾನು ಬೆಂಚಿನ ಮೇಲೆ ಕುಳಿತು ನಿದ್ದೆ ಮಾಡುವ ಪ್ಲಾನ್ ಹಾಕಿದ್ದೆ.

Z : ವರ್ಕ್ ಔಟ್ ಆಯ್ತ ?

ನಾನು : ಇಲ್ಲ...ಮೂರೇ ನಿಮಿಷಕ್ಕೆ ಮಹಾಶಯರು ಪುಸ್ತಕ ಸಮೇತ ಪ್ರತ್ಯಕ್ಷ ! ನಾನು ಕಣ್ಣು ಮುಚ್ಹಕ್ಕೇ ಆಗ್ಲಿಲ್ಲ !

Z : ಅಯ್ಯೋ ಪಾಪ ! ಆಮೇಲೆ ?

ನಾನು : ಅವರು ಬಂದದ್ದೇ, " ನೋಡಿ ಮೇಡಂ ಡಬ್ ಡಬಲ್ ಕೆಲ್ಸ ಮಾಡ್ಸ್ತಾರೆ, ನಾನು 1018000 ಅಂತ ಬರ್ದಿದ್ರೆ ಇವ್ರು 1081000 ಅಂತ ಟೈಪ್ ಮಾಡೋದೆ ? ನೋಡ್ಬಿಡಿ ನೀವೂ ಒಮ್ಮೆ" ಅಂತ ಲೆಡ್ಜರ್ ತೋರಿಸಿದರು.

Z : ನೀನು " ನೋಡಿ ನಮ್ಗೂ ಸಿಮ್ ಸಿಂಪ್ಲಿ ಬರೋ ಹಾಗಾಯ್ತು. ಸೀರ್ ಸೀರಿಯಸ್ಸಾಗಿ ಖಂಡಿಸ್ತಿನಿ ಇದನ್ನ " ಅಂತ ಅಂದೆಯ ?

ನಾನು : ಇಲ್ಲ, ಸುಮ್ಮನೆ ನೋಡಿದೆ.

Z : ಛೆ ! ಅನ್ಯಾಯ...ಈ ಡೈಲಾಗ್ ಹೇಳ್ಬೇಕಿತ್ತು ನೀನು !

ನಾನು : ತೋಚಲಿಲ್ಲ.

Z : ಸರಿ ಬಿಡು. ಆಮೇಲೆ ?

ಅವರು " ಒಳಗೆ ಬನ್ನಿ ಮೇಡಮ್, ಬೇರೆ ಬಿಲ್ಲನ್ನು ಹಾಕ್ಸಿ ಕೊಡ್ತಿನಿ " ಅಂತ ಇನ್ನೊಂದು ಆಫೀಸಿಗೆ ಕರೆದುಕೊಂಡು ಹೋದರು. ಅಲ್ಲಿ ಒಬ್ಬರು ಆಂಟಿ, " ಏನಪ್ಪಾ ? " ಅಂತ ವಿಚಾರಿಸಲು ಇವರು ನನ್ನ ಸಮಸ್ಯೆ ಮತ್ತು ನಮ್ಮಮ್ಮನೊಂದಿಗೆ ಆಡಿದ ಮಾತುಕಥೆಯನ್ನೆಲ್ಲ ಚಾಚೂ ತಪ್ಪದೆ ವಿವರಿಸಿದರು. ಅದಕ್ಕೆ ಆ ಆಂಟಿ, " ನನಗೂ ಅನುಮಾನ ಬಂತು ಬಿಲ್ಲನ್ನು ಸ್ಕ್ರೂಟಿನಿ ಮಾಡ್ಬೇಕಾದ್ರೆ, ಖರ್ಚು ಆಗಿದ್ರೂ ಇರ್ಬಹುದೇನೋ ಅಂತ ಹಾಗೇ ಬಿಟ್ಟೆ. ನೋಡಪ್ಪ, ಈ ತಿಂಗಳಲ್ಲಿ ಇದು ಮೂರನೆಯ ಕೇಸು. ಶುಕ್ರವಾರ ಇಬ್ಬರು ಬಂದು ಗಲಾಟೆ ಮಾಡಿದರು. ಇವತ್ತು ಇವರು ಬಂದಿದ್ದಾರೆ. ಡಾಟಾ ಎಂಟ್ರಿ ಮಾಡುವವರಿಗೆ ಹೇಳ್ಬೇಕಪ್ಪ ! ನನಗೆ ಡಬ್ ಡಬಲ್ ಕೆಲ್ಸ ! ಛೆ !" ಅನ್ನುತ್ತಲೇ ಬೇರೆ ಬಿಲ್ಲನ್ನು ಪ್ರಿಂಟ್ ಮಾಡಿ ಕೊಟ್ಟರು. ನಮಗೆ ತಿಂಗಳು ತಿಂಗಳು ಬಿಲ್ಲು ಬರುವಷ್ಟೆ ಈ ತಿಂಗಳೂ ಬಂದಿತ್ತು !

Z : ಸದ್ಯ !

ನಾನು : ಹು. ಆಮೇಲೆ ನಾನು ಅಲ್ಲಿಂದ ಹೊರಬಿದ್ದೆ.

Z : ಹೆ ಹೆಹೆಹೆಹ್ !

ನಾನು : ನನಗೆ ಮಾಚಿಸ್ ಚಿತ್ರದ ಹಾಡು ನೆನ್ಪಾಯ್ತು... " ಪಾನೀ ಪಾನಿ ರೆ, ಖಾರೆ ಪಾನಿ ರೆ, ...."

I think these mistakes are of immense value on marks cards :-) 81 instead of 18 can do wonders !!!

Sunday, September 7, 2008

ಅಥ ಉದ್ಯಾನೋಪಾಖ್ಯಾನಃ

ನಮಸ್ತೇಸ್ತು ಮಹಾಮಾಯೇ....ಲಕ್ಷ್ಮೀ ಏಳು...ಶ್ರೀಪೀಠೆ ಸುರಪೂಜಿತೆ....ಶಂಖ ಚಕ್ರಗದಾ ಹಸ್ತೇ...ಎದ್ದೇಳ್ತ್ಯೋ ಇಲ್ವೋ... ಮಹಾಲಕ್ಷ್ಮೀ ನಮೋಸ್ತುತೆ...ನಮಸ್ತೆ ಗರುಡಾರೂಢೆ ಕೋಲಾಸುರ...ಲಕ್ಷ್ಮೀ.....ಭಯಂಕರೀ...ಸರ್ವದುಃಖಹರೇ...ಏಳೇ......ದೇವೀ ಮಹಾಲಕ್ಷ್ಮೀ ನಮೋಸ್ತುತೆ...ಸರ್ವಜ್ಞೇ ಸರ್ವವರದೇ...ಎದ್ದೇಳೇ ಘಂಟೆ ಏಳೂಕಾಲು...ಸರ್ವದುಷ್ಟ...ಎದ್ದೇಳ್ತ್ಯೋ ಇಲ್ಲವೋ ಹೋಪ್ಲೆಸ್ಸ್ ಫೆಲ್ಲೋ...ಭಯಂಕರಿ....

Z : ಅಮ್ಮ ನಿನ್ನನ್ನ ಹೀಗೆ ಎಬ್ಬಿಸೋದಲ್ವ ದಿನಾ?

ನಾನು: ಯೆಸ್. ಇದೇ ನನ್ನ ಸುಪ್ರಭಾತ. high pitchನಲ್ಲಿ ಅಮ್ಮ ಹೀಗೆ ಸ್ತೋತ್ರ ಹೇಳ್ಕೋತಾ ನನ್ನನ್ನ ಬೈದು ಎಬ್ಬಿಸದಿದ್ದರೆ ನನಗೆ ಅದೇನೋ ಬೆಳಿಗ್ಗೆ ಅಂತ ಅನ್ನಿಸೋದೇ ಇಲ್ಲ.

Z : ನಿನ್ನದೂನೂ ಅತಿ ಅಂತ ಇಟ್ಕೋ. ನಾನ್ ಆರುವರೆಗೆ ಎದ್ದಿರ್ತಿನಿ. ನೀನ್ ಕಣ್ಮುಚ್ಕೊಂಡ್ ಅದ್ ಏನ್ ಯೋಚ್ನೆ ಮಾಡ್ತಿರ್ತ್ಯ ?

ನಾನು : ನಾನು ಮಲ್ಗಿದ್ರೆ ಲೋಕಕ್ಕೆ ಜಾಸ್ತಿ ಉಪಯೋಗನಾ...ಎದ್ದ್ರೆ ಲೋಕಕ್ಕೆ ಜಾಸ್ತಿ ಉಪ್ಯೋಗಾನಾ ಅಂತ !

Z :ಆಹಾ !

ನಾನು : ಹು.. see, instead of constructively destroying the world by getting up, working, studying etc., I can as well sleep ! ಅಲ್ವಾ ?

Z : ಥುಥ್ ! ಅಲಾರಂ ಇಟ್ಟು ನನ್ನನ್ನ ಎಬ್ಬಿಸಿ ನೀನು ಮಲ್ಗೋದನ್ನ ಏನಂತ ಕರೀತಾರೋ !!

ನಾನು : ಸಕ್ಕರೆ ನಿದ್ದೆ ಅಂತ ! ನಿನಗೆ ಅಲಾರಮ್ ಹೊಡಿಯೋದು ಕೇಳ್ಸತ್ತ ? ಸಂತೋಷ. ನನಗೆ ಕೇಳ್ಸಲ್ಲ. ನೀನು ಕೇಳ್ಸ್ಕೊ. ಆ ಮ್ಯೂಸಿಕ್ ನ ಎಂಜಾಯ್ ಮಾಡ್ತಾ ಮಜಾ ಮಾಡು. ನೀನ್ ಏಳ್ತ್ಯ...ಅಲಾರಮ್ ನ ಆಫ್ ಮಾಡ್ತ್ಯ...ಹರಿಹರ ಬ್ರಹ್ಮಾದಿಗಳನ್ನೆಲ್ಲಾ ನೆನ್ಸ್ಕೋತ್ಯಾ....ಗುಡ್...ಕೀಪ್ ಇಟ್ ಅಪ್. ಊಟ, ತಿಂಡಿ, ಪುಸ್ತಕ, ನಾಟಕ , ಕಾಫಿ ಬಿಟ್ಟು ನನಗೆ ಇನ್ನೇನಾದರೂ ಸಖತ್ ಇಷ್ಟ ಅಂದ್ರೆ ಅದು ನಿದ್ದೆ ನೆ. ನಾನು ಅರೆ ನಿದ್ದೆಲಿ ಮಾಡಿದ calculation, analysis and thinking perfect ಆಗಿರತ್ತೆ. ಈದಿನ ನಾನು ಎಷ್ಟೊತ್ತು ಮಲಗಬೇಕು ಅನ್ನೋದೆ ನನ್ನ ಪ್ರೈಮರಿ ಯೋಚ್ನೆ ಆಗಿರತ್ತೆ ಯಾವಾಗ್ಲು....

Z : ಶಿವ ಶಂಕರ ಸದ್ಯೋಜಾತ !

ನಾನು :ಸುಮ್ನೆ ಅವರನ್ನೆಲ್ಲಾ ಕರ್ದು disturb ಮಾಡ್ಬೇಡ. ಅವ್ರೂ ನಿದ್ದೆ ಮಾಡ್ತಿರ್ತಾರೆ.

Z : ರಾಮ ರಾಮ !

ನಾನು : ಹೇ...ಯಾರನ್ನ ಕರೆದರೂ ಪಾಪ ರಾಮನ್ನ ಮಾತ್ರ ಕರಿಬೇಡ. he is too busy ಪಾಪ.

Z : ಯಾಕೆ ?

ನಾನು : ಅವನು ಹುಟ್ಟಿದ ಅಯೋಧ್ಯೆಯಲ್ಲಿ ಗಲಾಟೆ. ಅವನು ಕಟ್ಟಿಸಿದ ರಾಮಸೇತುವೆಯಲ್ಲಿ ಗಲಾಟೆ. ಅವನೇ ಚಿಂತೆಯಲ್ಲಿ ಮುಳ್ಗೋಗಿದಾನಂತೆ...ನಾವ್ಯಾಕ್ ನಮ್ ಗೋಳನ್ನ ಹೇಳಿಕೊಂಡು ಅವನನ್ನ further ಚಿಂತಾಕ್ರಾಂತಗೊಳಿಸಬೇಕು ? dont trouble him.

Z : ok.

ನಾನು : ಅಮ್ಮನ ಸ್ತೋತ್ರಪೂರಿತ ಬೈಗುಳಯುಕ್ತ ಸುಪ್ರಭಾತ ಕೇಳಿ ನಾನು ಎದ್ದು ಫ್ರೆಶ್ಶಾಗಿ ಮೇಲಿಂದ ಧರೆಗಿಳಿದ ಮೇಲೆ ನನಗೆ ಕ್ಷೀರದ ನೈವೇದ್ಯವಾಗುತ್ತದೆ. ಅದಾದ ಮೇಲೆ ನನ್ನನ್ನು ವಾಕಿಂಗ್ ಗೆ ಹೊರಡಿಸಲಾಗುತ್ತದೆ.

Z : ಯಾಕ್ ವಾಕಿಂಗ್ ಮಾಡ್ಬೇಕು ?

ನಾನು : ದಿನಕ್ಕೆ ಏನಿಲ್ಲ ಅಂದ್ರೂ ಕಂಪ್ಯೂಟರ್ ಮುಂದೆ ಒಂಧತ್ತು ಘಂಟೆ ಕಾಲ ಕೂತು ಏನನ್ನೋ ಹುಡುಕುತ್ತಾ...ಸ್ಟಂಬಲ್ಲಿಸುತ್ತಾ, ಆರ್ಕುಟ್ಟುತ್ತಾ, ಬ್ಲಾಗಿಸುತ್ತಾ ಇರುತ್ತೇನಾದ್ದರಿಂದ, ನಮ್ಮಮ್ಮನಿಗೆ ನನ್ನ ಕಣ್ಣು ತೂತಾಗಿ ಹೋಗುತ್ತೆ ಅಂತ ಕನಸು ಬಿದ್ದಿರತ್ತೆ. ಅದಕ್ಕೆ ತಕ್ಕಂತೆ ಅಣ್ಣ ಕೂಡಾ ಅಮ್ಮನ್ನ ನಿನ್ ಮಗಳು ನೋಡು ಒಂದು ದಿನ ನಮ್ಮನ್ನೂ ಮಾನಿಟರ್ ಅಂತಾ ನೇ ಅಂದುಕೋತಾಳೆ ಅಂತ ಹೆದರ್ಸಿರ್ತಾರೆ. ಟೋಟಲಿ ಗಾಬ್ರಿಫೈಡ್ ಆದ ಅಮ್ಮ, ಸಿಟಿಯಲ್ಲಿ ಸಿಗುವ ಸ್ವಲ್ಪವೇ ಸ್ವಲ್ಪಹಸಿರು ಪ್ರದೇಶವಾದ ಪಾರ್ಕಿಗೆ ಹೋಗಿ ವಾಕಿಂಗ್ ಮಾಡಿ, ಹಸಿರನ್ನು ನೋಡು...ಕಣ್ಣು ಸರಿಹೋಗತ್ತೆ ಅಂತ ನನ್ನ ಮುಂದೆ ಕಿನ್ನರಿ ಬಾರಿಸುತ್ತಾರೆ.

Z : ಅಂದರೆ ನೀನು ಕೋಣ ಅಂತ ಆಯ್ತು.

ನಾನು : ನೋ ನೋ !! ಅವರು ಹೇಳಿದ್ದನ್ನೆಲ್ಲ ಲೇಟಾಗಾದ್ರೂ ಸರಿ, ಪಾಲಿಸಿಯೇ ಪಾಲಿಸುತ್ತೇನೆ. ಎಂಟು ಘಂಟೆ ಸುಮಾರಿಗೆ ನನ್ನ ಸವಾರಿ ಹೊರಡತ್ತೆ ಪಾರ್ಕಿಗೆ.

Z : ಹೇಗಿರತ್ತೆ ಪಾರ್ಕಲ್ಲಿ ವಾಕಿಂಗ್ ?

ನಾನು : glorified ಹೆಜ್ಜೆ ನಮಸ್ಕಾರ.

Z : ಹಾ ?

ನಾನು : ಹು ! ನೀನ್ ನೋಡ್ಬೇಕು Z... ನಡಿಯಕ್ಕೆ ಜಾಗಾನೇ ಇರಲ್ಲ....ಸದಾಕಾಲ ಪಾರ್ಕಲ್ಲಿ ಜನ ತುಂಬಿ ತುಳುಕ್ತಿರ್ತಾರೆ. ಆದ್ರೆ ಏನ್ ಸಿಗ್ಲಿ ಬಿಡ್ಲಿ...ಪಾರ್ಕಿನಲ್ಲಿ entertainment ಗೆ ಏನೂ ಕಮ್ಮಿ ಇಲ್ಲ.

Z : ಹ ಹ !! ಹೌದಾ ?

ನಾನು : ಹೂ...ನೋಡು ಬೆಳಿಗ್ಗೆ ಬೆಳಿಗ್ಗೆ ಎಂಟು ಘಂಟೆ ಗೆ ನಾನು ಹೋಗ್ತಿನಾ ? ಆಗ ಬರೀ ಅತ್ತೆಮಾವಂದಿರದ್ದೇ ಕಾರುಬಾರು. ಕೆಲವರು ಅರ್ಥರೈಟಿಸ್ ಗೋಳಿಂದ ನಿಧಾನಕ್ಕೆ ನಡೆಯುತ್ತಿದ್ದರೆ, ಇನ್ನು ಕೆಲವರು ವಾಕಿಂಗ್ ಟ್ರಾಕ್ನಲ್ಲಿ ಜಾಗಿಂಗ್ ಮಾಡುತ್ತಿರುತ್ತಾರೆ. ಮಧ್ಯವಯಸ್ಕರು ಪಾರ್ಕಿನ ಹೊರಗೆ ಜಾಗಿಂಗ್ ಕಮ್ ಪ್ರದಕ್ಷಿಣೆ ಹಾಕುತ್ತಿರುತ್ತಾರೆ. ಮಕ್ಕಳು (ಒಂದೆರಡು ವರ್ಷದವು) ಉಯ್ಯಾಲೆ ಮೇಲೆ ಹತ್ತಿ ಇಳಿಯಲು ಆಗದೆ ಗೊಳೋ ಎಂದು ಅಳತ್ತಿದ್ದರೆ, ಸ್ವಲ್ಪ ದೊಡ್ಡ ಮಕ್ಕಳು ಜಾರುವ ಬಂಡೆ ಹತ್ತಿ ಜಾರಲು ಹೆದರಿ ಅಮ್ಮ ಅಮ್ಮ ಅಂತ ಕಿರುಚುತ್ತಿರುತ್ತಾರೆ. ಕಾಲೇಜು ಮಕ್ಕಳು ಶಾಂತ (?) ವಾತಾವರಣಾದಲ್ಲಿ ಓದಲು ಬಂದರೆ, ಇನ್ನು ಕೆಲವರು ಮುಂಜಾನೆ ಪ್ರೇಮದ ಗುಂಗಲ್ಲಿರುತ್ತಾರೆ. ತೀರಾ ವಯಸ್ಸಾದವರ ಲಾಫಿಂಗ್ ಕ್ಲಬ್ಬು, ಯೋಗಪಟುಗಳ ಪ್ರಾಣಾಯಾಮ, ಇವೆಲ್ಲ ನೋಡಸಿಗುತ್ತವೆ ಪಾರ್ಕಿನಲ್ಲಿ. ಆದರೆ ಜಬರ್ದಸ್ತ್ ಮಜಾ ಸಿಗುವುದೆಂದರೆ ಒಂದು ರೌಮ್ಡ್ ಹಾಕುವುದರೊಳಗೆ ನನ್ನ ಕಿವಿಗೆ ಬೀಳುವ ಅರ್ಧಮರ್ಧ ಮಾತುಗಳು.

Z : ಹೆ ಹೆ...ಹೇಗಿರತ್ವೆ ಅವೆಲ್ಲಾ....

ನಾನು : ನಾನು ಇದುವರೆಗೂ ಕೇಳಿದ ಮಾತುಗಳಾನ್ನೆಲ್ಲಾ ಹಾಕಿದರೆ ಇದು ಮಹಾಕಾವ್ಯವಾಗುತ್ತದೆ. ನೆನಪಿದ್ದಷ್ಟು ಹಾಕುತ್ತೇನೆ. ಅಂದರೆ ಒಂದು ರೌಂಡಿನಲ್ಲಿ ನಮಗೆ ಕೆಳಸಿಗುವಷ್ಟು. ಒಂದೊಂದು ಲೈನೂ ಒಂದೊಂದು ಬೆಂಚಿನವರದ್ದು, ಮತ್ತು ಮಧ್ಯ ಮಧ್ಯ ನಡೆಯುತ್ತಾ ಮಾತಾಡುವವರದ್ದು.

.....ಏನ್ರೀ ಹೇಗಿದ್ದೀರಾ ?...ಏನ್ ಇಷ್ಟ್ ಬೇಗ..
....ಸತ್ತೋದ್ನಂತೆ ರೀ ಮೊನ್ನೆ.....ನನಗೆ ಇವತ್ತು....
...ವಾಕಿಂಗ್ ಆಧ್ಮೇಲೆ ಹೋಟೆಲಲ್ಲಿ ಬಜ್ಜಿ ಕೊಡಿಸುವುದನ್ನ ಮರೆಯಬೇಡಿ ಮಹಾರಾಯರೇ....
...ನಮ್ಮ ಯೆಡಿಯೂರಪ್ಪ ಮುಖ್ಯಮಂತ್ರಿಯಾದ ಮೇಲೆ....
...ಹೆಂಡತಿ ಮಾತ್ ಕೇಳಿ ಕೆಟ್ಟೋದಾ ರೀ ನನ್ನ ಮಗ.....
....ಸಂಸಾರ ಅಂದ್ರೆ ಏನಂತಾ ತಿಳ್ಕೊಂಡಿದೀರಾ ?
.....(a+b) (a-b) = a2 - b2......
....ನನ್ನ ಮಗಳು ಮದ್ವೆಯಾದ್ಮೇಲೆ ಈಕಡೆ ......
....ತ್ರಿಶಂಕು ಸ್ವರ್ಗ ಆಗೋಗಿದೆ ನನ್ನ ಸ್ಥಿತಿ.....
....ತೂ ಮಿಲೆ...ದಿಲ್ ಖಿಲೇ ಔರ್ ಜೀನೆ ಕೊ ಕ್ಯಾ ಚಾಹಿಯೇ...[ನಡೆಯುವವರ ಎಫ್ ಎಮ್ ಹೊಡೆದುಕೊಳ್ಳುತ್ತಿರುತ್ತದೆ]
...ಮೂರು ದಿನದಿಂದ ನೀರಿಲ್ಲದೇ ನರಳುತ್ತಿದ್ದೇವೆ ರಿ....ಆ ಕೊಳಾಯಿಯವ.....
....ದಿನ ಬೆಳಿಗ್ಗೆ ಒಂದೇ ಸಮನೆ ನನ್ನ ಮಗ ಸೊಸೆ...
...ವರ್ಣಮಾಲೆ ಹೇಳುತ್ತಾ ನಗಿ ಎಲ್ಲಾರು...ಅ ಆಆಆಆ.....ಇ ಈಈಈಈಈಈಈ........
......ನೆನ್ನೆ ಮುಕ್ತಾ ಮುಕ್ತಾ ಸೀರಿಯಲ್ಲಲ್ಲಿ ಏನಾಯ್ತು ರಿ ?
...ಅವ್ನು ಮಾಡಿರೋ ಪಾಪಕ್ಕೆ ನೆಗದ್ ಬಿದ್ದು ನಲ್ಲಿಕಾಯಾಗಿ ಹೋಗ !!......
....ಸ್ಟಾಕ್ ಮಾರ್ಕೆಟ್ಟು ಯಾವ್ ರೀತಿ ಮೊಗಚ್ಕೋತು ರಿ....
.....ನೆನ್ನೆ ಅಕ್ಸಾಲಿ ಹತ್ರ ನೆಕ್ಲೇಸಿಗೆ ಹಾಕ್ ಬಂದೆ ರಿ...ಮೂವತ್ತ್ ಗ್ರಾಮು....
....ಪ್ರಾಫಿಟ್ ಎಷ್ಟು ಅಂತ .....
....ನಾನೂರೈವತ್ತಕ್ಕಿಂತ ಹೆಚ್ಚ್ ಕೊಡ್ಕೂಡದು ರೀ ಕೆಲ್ಸದವರಿಗೆ.......
....ವಿದ್ಯಾರಣ್ಯಪುರದಲ್ಲಿ ನನ್ನ ತಂಗಿ.....
....ಯೆ......ಕ್ಯಾ ಹುಆ......[ರಿಂಗ್ ಟೋನು]
....ಹೊಸಾ ಕಾರ್ ತಗೊಳ್ಳಣಾ ಅಂತ ಹೋದೆ ನೆನ್ನೆ.....
....ಹತ್ತ್ ಸಾವ್ರ ಅಂತೆ ರೀ...ಏನ್ ಬೆಲೆ ಏನ್ ಕಥೆ......
...ನನಗೆ ನನ್ನ ಮನೆ ಪ್ರಾಬ್ಲೆಮ್ ಏ ಸಾಲ್ವ್ ಮಾಡಾಕ್ಕೆ ಆಗ್ತಿಲ್ಲಾ.... ಏನ್ ಹೇಳಲಿ ನನ್ನ ಮಗನಿಗೆ ?...
...I love you I love you !!!I really love you...pleeeeeeasssssssssseeeeeeeeeee......
...ಎಲ್ಲ್ಲಾರು ನಿಮ್ಮ ಇಷ್ಟದೇವತೆಯನ್ನ ನೆನೆಸುತ್ತಾ ಧ್ಯಾನ ಮಾಡಿ...ಓಂ....
..ಜಲಜಲಜಲಜಲಜಾಕ್ಷೀ ಮಿಣ ಮಿಣ ಮಿಣ ಮೀನಾಕ್ಷೀ ಕಮಕಮಕಮಕಮಲಾಕ್ಷೀ ಪಟ ಪಟಪಟ ಪಂಚರಂಗಿ ಬಾರೆ...ಐಥಲಕಡಿ ಬಾರೆ !...[ಮ್ಯೂಸಿಕ್ ಪ್ಲೇಯರ್ರು...ಎನ್ ಸೀರೀಸು]

Z : ಉಹಹಹಹಹ !!!!!!!!!!!!!!

ನಾನು : ಇನ್ನು ಇದೆ...ಎಲ್ಲರ ಮನೆಯ ಪ್ರಾಬ್ಲೆಂ ಗಳನ್ನು ಕೇಳಿ ಇವರಿಗೆ ಮನಶ್ಶಾಂತಿ ದೊರೆಯುತ್ತದೆ. ಹುಡುಗ ಹುಡುಗಿಯರು ಮದುವೆಗೆ ಇದ್ದರೆ ಆ ವಿಷಯವೆಲ್ಲವೂ ಪಾರ್ಕಿನಲ್ಲಿ ಗೊತ್ತಾಗುತ್ತದೆ. ಇದ್ದದ್ದನ್ನು ಇದ್ದಂತೆಯೇ ಇಲ್ಲಿ ಒಬ್ಬರೂ ಹೇಳಲೊಲ್ಲರು. ಕೆಲವರು ಅವರ ಮಕ್ಕಳು ಕೆಲಸ ಮಾಡುತ್ತಿರುವ ಕಂಪನಿಯ ಹೆಸರು ಹೇಳಲು ತಡವರಿಸುತ್ತಿದ್ದರೆ, ಮತ್ತೆ ಕೆಲವ job designation ಹೇಳಲಾಗದೇ ಒದ್ದಾಡುತ್ತಿರುತ್ತಾರೆ. ಇಲ್ಲಿ ಮೌನವಾಗಿ ವಾಕಿಂಗ್ ಮಾಡುವವರು ತೀರಾ ಕಮ್ಮಿ. ನಾನು ಮೌನವಾಗಿರಲು ಬಯಸಿ ಸ್ವಲ್ಪ ಲೇಟಾಗೇ ಹೋಗುತ್ತೇನೆ. ಆದರೂ ದುರಾದೃಷ್ಟಕ್ಕೆ ನಮ್ಮ ಅಮ್ಮನ ಶ್ರೋತೃಬಂಧುಗಳೋ, ಶಿಷ್ಯಕೋಟಿಗಳು, ಅಥವಾ ಅಣ್ಣನ ಸ್ನೇಹಿತರೋ ಸಿಕ್ಕರೆ ನನ್ನ ಗತಿ ಅಷ್ಟೆ. ನಾನು ಅವರ ಪ್ರಶ್ನೆಯ ಸುರಿಮಳೆಯನ್ನು ತಾಳಲಾಗದೇ, ಅವರ ಕಣ್ಣು ತಪ್ಪಿಸಲು ವಾಕಿಂಗ್ ಬದಲು ರನ್ನಿಂಗ್ ಶುರು ಮಾಡಬೇಕಾಗುತ್ತದೆ.


ಎಲ್ಲದಕ್ಕಿಂತಾ ದೊಡ್ಡ entertainment ಅಂದರೆ, ಕೆಲವರು ವಾಕಿಂಗ್ ಮಾಡತ್ತಾ ಕೈ ಕಾಲು ಅಲ್ಲಾಡಿಸುವುದು ಮತ್ತು ಚಪ್ಪಾಳೆ ತಟ್ಟುತಾ ವಾಕಿಂಗ್ ಮಾಡುವುದು. ಅವರನ್ನು ನೋಡುವ ಸಣ್ನ ಮಕ್ಕಳು ..."ಮಮ್ಮಿ...ಐ ವೋಂಟ್ ಕಮ್...ದೇರ್ ಇಸ್ ಪಿ ಟಿ ಟೀಚರ್ ದೇರ್...ಹಿ ವಿಲ್ಲ್ ಬೀಟ್"...ಎಂದು ಅಳುತ್ತಿರುತಾರೆ. ನನಗೆ ನಗು ತಡೆಯದಾಗುತ್ತದೆಯಾದರೂ ನಾನು ನಗುವ ಹಾಗಿಲ್ಲ.

Z : :-) :-) ನಗು ಬಂದಾಗ ನಗೋದಪ್ಪ...

ನಾನು : ಹಾಗಾಗಲ್ಲ Z ... ಲಾಫಿಂಗ್ ಕ್ಲಬ್ಬಿನಲ್ಲಿ ಪ್ರಯತ್ನಪೂರ್ವಕವಾಗಿ ನಕ್ಕರೆ ಅದು ತಪ್ಪಲ್ಲ .ಆದರೆ ಇದನ್ನೆಲ್ಲ ನೋಡಿ ನಾನು ಸಹಜವಾಗಿ ಹೊಟ್ಟೆ ಹಿಡಿದು ನಕ್ಕರೆ ಅದು ಸಖತ್ ದೊಡ್ಡ ತಪ್ಪು !

Z : pity !

ನಾನು : yes. ಒಮ್ಮೊಮ್ಮೆ ನಾನು ಸಾಯಂಕಾಲವೂ ವಾಕಿಂಗ್ ಹೋಗುತ್ತೇನೆ. ಆಗ ಯಂಗ್ ಜನರೇಷನ್ ಮಾತಿನಲ್ಲಿ ನಿರತವಾಗಿರುತ್ತದೆ.
ಆಗ ಕೇಳಸಿಗುವಂತಹ ಅಣಿಮುತ್ತುಗಳು.
i tell you....my project leader...
......extremely hot !!!!!!!!!!....i just cant...
...what do you think we can do about...
chuck the whole damn project man.....
...i was googling today about....
...man !! huge money in there !!....
...where's the party tonight ?...
...i quit the job....
...i just cant tell my parents that....
....money waste...no use..
....i love you....
...new MP4 ?
....man !! whatta car !!...
... I love his specs...
.....seriously....
...you are more important than my phone....
...i ransacked his room....
...hopeless cubicle life.....
....shut up !!!...
.....oops ! no shopping today ?...
...i really love you....
...i have decided to break up....
...life is never satisfying I tell you....
...all gyan...just gyaan...all meetings are about...
...good biscuits and hopeless coffee...
...when are you tying the knot ?....
...divorces are inevitable consequences of marriages....
....i am sick and tired....
...i am loving it !!...

ಇವೇ ಮುಂತಾದವು !!

Z : ROFL....

ನಾನು : ಸರಿ..ನಗ್ತಿರು ! ನಾನ್ ಹೊರಟೆ ವಾಕಿಂಗ್ ಗೆ !

ಅಥ ಉದ್ಯಾನೋಪಾಖ್ಯಾನಃ ಸಂಪೂರ್ಣಃ

Thursday, September 4, 2008

ಕಳಚಿ ಬಿದ್ದ ಕಿರೀಟ !

ನಾನು : ಎಷ್ಟ್ ಬಕೆಟ್ ಕಣ್ಣೀರು ಆಯ್ತು ?

Z : hiccup !! 1...2..3..sniff !! 4..5..6..7..8..9..10..sob !!!! 11..12...13..14...sniff !!! 15..16...17..18..19..20 !

ಇಪ್ಪತ್ತು ಬಕೆಟ್ ಆಯ್ತು.

ನಾನು : ನೆನ್ನೆ ಯಾವ ವಾರ ?

Z : ಬುಧವಾರ.

ನಾನು : ನಾಳೆ ಯಾವ ವಾರ ?

Z : ಶುಕ್ರವಾರ

ನಾನು : ಇವತ್ತು ?

Z : ಗುರುವಾರ.

ನಾನು : ಅಶಶ್ಶೋ !!!!

Z : ಯಾಕಮ್ಮ ಏನಾಯ್ತು ?

ನಾನು : ನಿನ್ನನ್ನ ಈಡಿಯಟ್ ಅಂತ ಕರಿಯೋ ಹಾಗಿಲ್ಲ ಇನ್ನು ನಾನು ! ಯಾಕಂದ್ರೆ ನಿನಗೆ ೧-೨೦ ರವರೆಗೆ ಎಣಿಸಲು ಬರುತ್ತದೆ ! ಮತ್ತು ವಾರಗಳು ನೆನಪಿನಲ್ಲಿದೆ ! Idiot is not the word for you !

Z : sorry ಅಂತ ಬೇಡ್ಕೊತಿದಿನಲ್ಲ.....ಮತ್ತೆ ಯಾಕ್ ಈ ಥರ ಅವಮಾನ ಮಾಡ್ತಿದ್ಯಾ ?

ನಾನು : ಅವಮಾನ ಮಾಡ್ತಿಲ್ಲ...ನಿಜ್ವಾದ್ ಸತ್ಯ ಹೇಳ್ತಿದಿನಿ. ಇನ್ಮೇಂದ ಇಷ್ಟ ಬಂದಾಗೆಲ್ಲ ಯಾರ್ಯಾರ್ನು ಈಡಿಯಟ್ ಅಂತ ಕರಿಯೋ ಹಾಗಿಲ್ಲ.

Z : ಹೌದಾ ?

ನಾನು : ಹು !

Z : ಅನ್ಯಾಯ ಒಂದು ಬೈಗುಳ ಕಮ್ಮಿಯಾಗೊಯ್ತಲ್ಲ ನಮ್ dictionary ಲಿ !

ನಾನು : ಹು....ಬಿಡು ಒಂದು ಹೊಸ ಪದ ನ coin ಮಾಡಿದ್ರೆ ಆಯ್ತು. more than that,ನನಗಿದ್ದ ಕಿರೀಟ ಗೊತ್ತಲ್ಲ ? ಅದು ಕಳಚಿ ಬಿತ್ತು !! :( :( :(

Z : ಹೌದಾ ? ಅದೆ " invincible bargain queen " ಕಿರೀಟ ? ಬಿದ್ದೊಯ್ತ ? ಎಲ್ಲಿ ? ಯಾವಾಗ ? ಹೇಗೆ ?

ನಾನು : answer to question number 1: N.R colony market ನಲ್ಲಿ
answer to question number 2:ಸೋಮವಾರ ಬೆಳಿಗ್ಗೆ.
answer to question number 3: ಹೇಗ್ ಬಿತ್ತಪ್ಪಾ ಅಂದ್ರೆ....
ಠೊಪ್ !!
ಕಿಲಿಕಿಲಿಕಿಲಿಕಿಲಿಕಿಲಿಕಿಲಿಕಿಲಿಕಿಲಿಕಿಲಿಕಿಲಿ.......
ಕಿಲ್
ಕಿಲಿ ಕಿಲಿ
ಕಿಲ್ ಕಿಲ್ ಕಿಲಿ
ಕ್ಲುಂಗ್ ಕ್ಲಿಂಗ್ ಕ್ಲೆಂಗ್
ಕಿಲ್ ಕಿಲ್ ಕಿಲಿ
ಚಿಳ್ಳ್ಳ್......
ಟಿಣ್!
ಅಂತ ಬಿತ್ತು.

Z : ಯಾಕೋ ನೋಟ್ ಮತ್ತು ಚಿಲ್ಲರೆ ಬಿದ್ದ ಶಬ್ದ ಕೇಳಿಸುತ್ತಿದೆಯಲ್ಲಾ ?

ನಾನು : ಮತ್ತೆ ? ನಾನು bargain ಮಾಡಿ ಉಳಿಸಿದ್ದ ದುಡ್ಡನ್ನೆಲ್ಲಾ ಸೇರಿಸಿ ಮಾಡಿದ ಕಿರೀಟ ಅದು ! ಸಾವಿರದ ನೋಟು ನವಿಲ್ಗರಿ ಥರ ಇತ್ತು ನನ್ ಕಿರೀಟದ ಮೇಲೆ. ಅದರ ಕೆಳಗೆ, ಮಿಕ್ಕೆಲ್ಲಾ denomination ಗಳ ಒಂದ್ part. base ನಲ್ಲಿ ನಾಣ್ಯಗಳ ಎಲ್ಲಾ ಡಿನಾಮಿನೇಷನ್ ಗಳೂ ಇದ್ದವು. ಥಳ ಥಳ ಹೊಳಿತಿತ್ತು ನನ್ನ ಕಿರೀಟ !! ಓಡೆದು ಹೋಯ್ತು !!! ವಾಆಆಆಆಆಆಆಆಆಆಆಆಆಆಆಆಆಆಆಆಆ !!!!!!!!!!!!!!!!!!!!!!!!

Z : ಆದದ್ದಾಯ್ತು. ಅಳಬೇಡ. ಕಿರೀಟ ಬಿದ್ರೆ ಬೀಳಲಿ, ಮತ್ತೆ ಮಾಡಿಸ್ಕೋಬಹುದು. ನಿನಗೆ ಒಂದು ಇಷ್ಟು ಬಿರುದುಗಳಿತ್ತಲ್ವ ? "ಜಿಪುಣ ಸಾಮ್ರಾಜ್ಯ ಸಂಸ್ಥಾಪಕಿ, ಜಿಪುಣ ಸಾಮ್ರಾಜ್ಯಏಕಚಕ್ರಾಧಿಪತ್ನಿ, ಸ್ನೇಹಿತರಿಗೆ ಗಿಫ್ಟ್, ಪುಸ್ತಕ, ನಾಟಕ ಮತ್ತು ಕಾಪಿ ಮತ್ತು ಭೇಲ್ ಪುರಿಗೆ ಮಾತ್ರ ದುಡ್ಡು ಖರ್ಚು ಮಾಡಲು ಯೋಚಿಸದೇ, ಮಿಕ್ಕಿದ್ದೆಲ್ಲಕ್ಕೂ ಮಿನಿಮಮ್ ಒಂದು ಲಕ್ಷ ಸರ್ತಿ ಯೋಚನೆ ಮಾಡುವ ಏಕಮೇವಾದ್ವಿತೀಯ ಏಕಮಾತ್ರ ವ್ಯಕ್ತಿ....ಅಂತೆಲ್ಲ !!!

ನಾನು : ಪ್ಲೀಸ್ ನೆನಪಿಸಿ ಹೊಟ್ಟೆ ಉರ್ಸ್ಬೇಡ....ಆ ಬಿರುದುಗಳೂ ಬಿದ್ದುಹೋದವು !!!

Z : ಛೆ ಛೆ ಛೆ !!! ಅನ್ಯಾಯ...ಹೀಗಾಗ್ಬಾರ್ದಿತ್ತು. ಈ ಬಿರುದುಗಳನ್ನ ಮತ್ತೆ ಸಂಪಾದಿಸೋದು ಸ್ವಲ್ಪ ಕಷ್ಟ. ಇರ್ಲಿ...ಹೇಗಾಯ್ತು ಇದೆಲ್ಲ ?

ನಾನು : ಕೇಳ್ಸ್ಕೋ ಕಥೆ ನ.

Z : ಹೇಳಮ್ಮ...

ನಾನು : ಸೋಮವಾರ ಬೆಳಿಗ್ಗೆ ಅಮ್ಮ ಕೊಟ್ಟ 200 cms long list ಅನ್ನು ಹಿಡಿದು ಶಾಪಿಂಗ್ ಹೊರಟೆ. ಮೊದಲು ದಿನಸಿ ಅಂಗಡಿಯವನಿಗೆ one part of the list ಕೊಟ್ಟು, ಸಾಮಾನೆಲ್ಲ ಹಾಕಿಟ್ಟಿರಿ, ಬೇರೆ ಶಾಪಿಂಗ್ ಮುಗಿಸಿ ಬಂದು ತೆಗೆದುಕೊಳ್ಳುವೆ ಎಂದು ಹೇಳಿದೆ. ಅವನೂ ಒಪ್ಪಿದ. ಅಲ್ಲಿಂದ ಸೀದಾ n.r.colony market ಗೆ ಹೋದೆ. ನಾನು, ನನ್ನ ಹಿಂದೆ ನಮ್ಮ ಡ್ರೈವರ್...ಸಾಮಾನೆಲ್ಲಾ ಹಿಡಿದುಕೊಳ್ಳಕ್ಕೆ ಹೆಲ್ಪ್ ಮಾಡಬೇಕೆಂದು ಅಣ್ಣ ಅಮ್ಮ ಅವನಿಗೆ ಹೇಳಿಬಿಟ್ಟಿದ್ದರು. ಅವನು ಬಹಳ ಶಿಸ್ತಿನ ಆಜ್ಞಾಪಾಲಕ. ಹಿಂದೆಯೇ ಬ್ಯಾಗ್ ಹಿಡಿದು ಬಂದ. ಕಾರಲ್ಲಿ ಹೋಗಿ ಗಾಡಿ ಮುಂದೆ ಇಳಿದರೆ ರೇಟು ಯದ್ವಾ ತದ್ವಾ ಏರಿಸುತ್ತಾರೆಂದು ನನಗೆ ಗೊತ್ತಿತ್ತು. ಆದ್ದರಿಂದಲೆ, ಕಾರನ್ನು ಒಂದು ಗಲ್ಲಿಯಲ್ಲಿ ನಿಲ್ಲಿಸಿ ನಡೆದು ಹೋದೆವು. ನನ್ನ ಕಿರೀಟಕ್ಕೆ ಮೊದಲ ಹೊಡೆತ ಬಿದ್ದಿದ್ದು ಹೂವಿನವಳಿಂದ.

ಮಲ್ಲಿಗೆ ಹೂವಿನ ಒಂದು ಮಳಕ್ಕೆ ಮಾರಿನ ರೇಟು ಹೇಳಿದಂತೆ ಆಯ್ತು ನನಗೆ. ಕನ್ಫರ್ಮ್ ಮಾಡಿಕೊಳ್ಳಲು ಮತ್ತೆ ಕೇಳಿದರೆ " ಮೇಡಮ್...ಇದು ಹಬ್ಬದ ಸೀಸನ್ನು...ಒಂದು ಮಾರಿಗೆ ನೂರಿಪ್ಪತ್ತು ರುಪಾಯಿ. ಮೊಳಕ್ಕೆ ಮೂವತ್ತು. ತೆಗೆದುಕೊಳ್ಳುವ ಹಾಗಿದ್ದರೆ ತೆಗೆದಿಕೊಳ್ಳಿ...ಇಲ್ಲಾಂದ್ರೆ ಬಿಡಿ."

ಸರಿ, ಮಲ್ಲಿಗೆಯ ಆಸೆ ಬಿಟ್ಟಿದ್ದಾಯಿತು. ಸೇವಂತಿಗೆ ರೇಟ್ ಕೇಳಿ ನನಗೆ ತಲೆ ಕೆಟ್ಟು ಹೋಯ್ತು. ನೂರು ಗ್ರಾಮ್ ಇಪ್ಪತ್ತು ರೂಪಾಯಿ !! "oh my god ! " ಅಂತ ನನಗರಿವಲ್ಲದೆಯೇ ನನ್ನ ಬಾಯಿಂದ ಹೊರಬಂತು. ಸುಧಾರಿಸಿಕೊಂಡು ಕೇಳಿದೆ..."ವರಮಹಾಲಕ್ಷ್ಮಿ ಹಬ್ಬದ ಹಿಂದಿನ ದಿನ ಕಾಲು ಕೆ.ಜಿ.ಗೆ ಇಪ್ಪತ್ತು ರುಪಾಯಿತ್ತಲ್ವಾ ? "

ಅವಳು: "ಮೇಡಮ್...ಇದು ಗೌರಿ ಗಣೇಶ...ಸಿಕ್ಕಾಪಟ್ಟೆ ದೋಡ್ಡ್ ಹಬ್ಬ . ಈಗಲ್ದೆ ಇನ್ಯಾವಾಗ್ ನಾವ್ ಯಾವಾಗ್ ಕಾಸ್ ಮಾಡದು ? ನಾವೇನ್ ನಿಮ್ ತಲೆ ಮೇಲೆ ಹೊಡಿತಿದಿವಿ ಅಂದುಕೊಂಡ್ರಾ ? ನಾವು ಒಂದಕ್ಕ್ ಡಬಲ್ ರೇಟು ಕೊಟ್ಟು ತರ್ತೀವಿ ಮಾರ್ಕೆಟ್ ಇಂದ ತಿಳ್ಕೊಳಿ ನೀವೂನು. ಹೂವುಗಳೆ ಸಿಗ್ತಿಲ್ಲ ಈವಾಗ ಗೊತ್ತಾ ನಿಮ್ಗೆ ? ನೀವ್ ನಮ್ ಹೊಟ್ಟೆ ಮೇಲೆ ಹೊಡಿಬೇಡಿ ಚೌಕಾಸಿ ಮಾಡಿ. ದುಡ್ಡ್ ಕೊಡ್ತಿರೋ ಇಲ್ವೊ ?

ಬೇರೆ ಕಡೆಯೆಲ್ಲಾ ಸುತ್ತಾಡಿದರೂ ಒಳ್ಳೆ ಹೂವುಗಳು ಕಾಣಿಸದಿದ್ದುದರ ಕಾರಣ ಅಲ್ಲೇ ಕೊಳ್ಳಬೇಕಾಯ್ತು. ಬೇರೆ ಕಡೆ ಸುತ್ತಾಡಿದರೂ ನೂರು ರುಪಾಯಿಗಿಂತ ಕಡಿಮೆ ನೋಟನ್ನು ತೆಗೆಯುವ ಭಾಗ್ಯ ನನ್ನದಾಗಲಿಲ್ಲ. ಮಲ್ಲಿಗೆ ಮಾರನ್ನು ಹೂವಿನವರು ಅಳೆಯುತ್ತಿದ್ದನ್ನು ನೋಡಿ ನನಗೆ ಗೊತ್ತಿದ್ದ ಮೇಟರ್ ಸ್ಕೇಲಿನ ಉದ್ದಳತೆ, clarke's tables conversion units ಎಲ್ಲಾ ಮರ್ತೋಯ್ತು..ನನಗೆ ಇದನ್ನು ತಡೆಯಲಾಗಲಿಲ್ಲ...that too as a physicist !! ನಮ್ಮ ಡ್ರೈವರ್ ಇದನ್ನು ನೋಟಿಸ್ ಮಾಡಿ " ಅಮ್ಮಾವ್ರೆ...ನಾವು ಮಾತಾಡುವ ಹಾಗಿಲ್ಲ , ಮಾತಾಡಿದ್ರೆ ಏನೂ ಸಿಗಲ್ಲ. " ಅಂದ. ನಾನು ನನ್ನ ಬೀಳುತ್ತಿದ್ದ ಕಿರೀಟವನ್ನು ಸಂಭಾಳಿಸುತ್ತಾ ತಲೆಯಲ್ಲಾಡಿಸಿದೆ.

ನನ್ನ ಕಿರೀಟಕ್ಕೆ ಎರಡನೆಯ ಪೆಟ್ಟು ಬಿದ್ದಿದ್ದು ತೆಂಗಿನಕಾಯಿಂದ. 3 cms diameter,17-18 cms length ಇರೊ ಒಂದು ಚಿಲ್ಟಾರಿ ಕಾಯಿಗೆ ಏಳು ರೂಪಾಯಿ ಹೇಳಿದ ಅವ. ನನಗೆ ಬಂದ ಕೋಪಕ್ಕೆ ಅದೇ ತೆಂಗಿನ ಕಾಯನ್ನು ಅವನ ತಲೆ ಮೇಲೆ ಹೊಡೆಯಬೇಕು ಅಂತ ತೋಚಿತು.

Z : ತೋಚಿದ್ದನ್ನ ಮಾಡ್ಬಿಡ್ಬೇಕು head ruled !! ಅವನ ತಲೆ ಮೇಲೆ ಹೊಡೆದ ಹಾಗೂ ಆಗ್ತಿತ್ತು, ಕಾಯಿಯ quality check ಮಾಡಿದ ಹಾಗೂ ಆಗ್ತಿತ್ತು !

ನಾನು : I thought so. ಆದರೆ ಅದು ಕಾಯಿಗೆ ಅವಮಾನ ಅನ್ನಿಸಿತು....ಬಿಟ್ಟುಬಿಟ್ಟೆ...ಅಕಸ್ಮಾತ್ ಆ ಕಾಯಿ ಸೂಪರ್ರಾಗಿದ್ದು, ಅದು " ನನ್ನನ್ನ ಇವನ ತಲೆ ಮೇಲೆ ಯಾಕ್ ಹೊಡೆದೆ" ಅಂತ ಒಂದು ಪ್ರಶ್ನಾರ್ಥಕ ಲುಕ್ ಕೊಟ್ಟಿದ್ದಿದ್ರೆ ನಾನ್ ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ. ಆದ್ರೆ ಕಾಯಿಯ quality check ಮಾಡಲೇ ಬೇಕಿತ್ತು. ನಾನು ಸ್ವಲ್ಪ ಕುಟ್ಟಿ ನೋಡಿದೆ. ಶಬ್ದ ಓಕೆ. ನೀರು ಇತ್ತು. ನನ್ನ ಬಾರ್ಗೈನ್ ಶುರು ಮಾಡಿದೆ . " ನೋಡಿ, ಐದು ರುಪಾಯಿ ಮಾಡ್ಕೊಳ್ಳಿ , ಇಪ್ಪತ್ತೈದು ತೆಂಗಿನಕಾಯಿ ಹಾಕಿ" ಅಂದೆ. ಅವ " ಆಗಲ್ಲ ಮೇಡಮ್, ನೋಡಿ, ಇದು ಐದು ರುಪಾಯಿ ಕಾಯಿ, ನೋಡಿ. ಇದನ್ನ ತಗೊಳ್ಳಿ " ಅಂತ ಕಡ್ಲೆಕಾಯಿ ಪರ್ಷೆ ಆಟದ ಸಾಮಾನಿನಂಥಾ ಒಂದು ಪುಟ್ಟ ಕಾಯನ್ನು ತೋರಿಸಿದ. ನನ್ನ ಕಣ್ಣಲ್ಲಿ ಕಾಣುತ್ತಿದ್ದ ಕೋಪ ನೋಡಿ ನಮ್ಮ ಡ್ರೈವರ್ ಎಂಥಹಾ ಅನಾಹುತವಾಗಬಹುದು ಇನ್ನೊಂದು ಕ್ಷಣದಲ್ಲಿ ಎಂದು ಊಹಿಸಿ ಮಧ್ಯಪ್ರವೇಶಿಸಿದ. " ನೋಡಿ, ನಿಮಗೂ ಬೇಡ ನಮಗೂ ಬೇಡ, ಆರು ರುಪಾಯಿ ಮಾಡ್ಕೊಳ್ಳಿ " ಅಂದ. ಅವನು ಅದಕ್ಕೂ ಒಪ್ಪಲಿಲ್ಲ. ನಾನಂದೆ " ನೋಡಿ ಅಂಕಲ್, ಕೊಡೊ ಹಾಗಿದ್ರೆ ಆರು ರುಪಾಯಿಗೆ ಕೊಡಿ...ಇಲ್ಲಾಂದ್ರೆ ನಾನ್ ಬೇರೆ ಕಡೆ ಹೋಗ್ತಿನಿ" ಅಂದೆ. ಅವನು "ಮೇಡಮ್...ಹಾಗನ್ನಬೇಡಿ..ನೀವೆ ಮೊದಲನೆಯ ಗಿರಾಕಿ . ಸರಿ ಆರು ರುಪಾಯಿಗೆ ಕೊಡ್ತಿನಿ ಬನ್ನಿ" ಅಂದ. ಇಪ್ಪತ್ತದು ರೂಪಾಯಿ ಯಲ್ಲಿ ಎರಡು ಭೇಲ್ ಪುರಿ ಮತ್ತೊಂದು ಡೈರಿ ಮಿಲ್ಕು ಬರ್ತಿತ್ತು. ಅನ್ಯಾಯ ಆಯ್ತು ಅಂತ ಶಪಿಸುತ್ತಲೇ ಆರು ರುಪಾಯಿಗೆ ಒಪ್ಪಿದೆ. ಇದು ಎರಡನೆಯ ಪೆಟ್ಟು ನನ್ನ ಕಿರೀಟಕ್ಕೆ.

ನನ್ನ ಕಿರೀಟ ಕಳಚಿ ಬಿದ್ದಿದ್ದು ಹಣ್ಣು ತರಕಾರಿ ಅಂಗಡಿಯಲ್ಲಿ. ಐದು ಥರದ ಹಣ್ಣುಗಳನ್ನು ಪ್ಯಾಕ್ ಮಾಡಿ ಅಂದೆ. " ಅವನು ಎಲ್ಲಾ ಒಂದೊಂದು ಕೆ.ಜಿ ನಾ ಮಾ...ಐನೂರು ರುಪಾಯಿ ಕೊಡಿ " ಅಂದ ! ನನ್ನ ಕೈಯಲ್ಲಿದ್ದ ಬ್ಯಾಗುಗಳು ಥಪ್ಪನೆ ನೆಲಕಚ್ಚಿದವು. ಡ್ರೈವರ್ ಪಾಪ ಅದನ್ನ ಎತ್ತಿ ಹಿಡಿದುಕೊಂಡ. ನಾನಂದೆ "ಎಲ್ಲಾ ಒಂದೊಂದು ಕೆ.ಜಿ ಅಲ್ಲ, ಎಲ್ಲಾ ಒಂದೊಂದು." ಅವನು ಸೊಪ್ಪೆ ಮೋರೆ ಮಾಡಿಕೊಂಡ. ಆಪಲ್ ಮುಟ್ಟಿದೆ ಅಷ್ಟೆ..."ಕೆ.ಜಿ ನೂರಿಪ್ಪತ್ತು" ಅಂದ. ನಾನಂದೆ "ಮೊನ್ನೆ ತೊಂಭತ್ತಿತ್ತಲ್ಲ ? " ಅವನು " ಮೇಡಮ್...ಸಿಮ್ಲಾದಲ್ಲಿ ಆಪಲ್ಗಳೇ ಬಿಡುತ್ತಿಲ್ಲ ಇತ್ತೀಚೆ ಗೆ...ನಮಗೆ ಹಣ್ಣುಗಳೇ ಸಿಗುತ್ತಿಲ್ಲ...ಎಲ್ಲಾದರೂ ಹೋಗಿ ನೋಡಿ ಬನ್ನಿ...ನೂರಿಪ್ಪತ್ತಕ್ಕಿಂತ ಕಡಿಮೆ ಕೊಟ್ಟರೆ ನಾನು ನನ್ನ ಮೂಗು ಮುರಿದುಕೊಳ್ಳುವೆ " ಎಂದು ಪ್ರತಿಜ್ಞೆ ಬೇರೆ ಮಾಡಿದ. ನಾನು ಎರಡು ಆಪಲ್ ಹಾಕಿಸಿದೆ. ಬಾಳೇಹಣ್ಣಿನ ಕಡೆ ದೃಷ್ಟಿ ಹಾಯಿಸಿದ್ದೇ ತಡ, " ಮೂವತ್ತೈದು ಮೇಡಮ್, ನೋ ಬಾರ್ಗೈನ್ " ಅಂದ. ನಾನು ನನ್ನ ಜೀವನದಲ್ಲಿ ಇಪ್ಪತ್ತು ರುಪಾಯಿಗಿಂತ ಹೆಚ್ಚು ಕೊಟ್ಟಿದ್ದೇ ಇಲ್ಲ ಒಂದು ಕೆ.ಜಿ. ಬಾಳೇಹಣ್ಣಿಗೆ. ಹದಿನೈದು ರೂಪಾಯಿ ಹೆಚ್ಚು ಕೊಟ್ಟು ಕಾಂತಿ ಸ್ವೀಟ್ಸಿನ ಬಾದಾಮಿ ಹಾಲನ್ನು ಕಳೆದುಕೊಳ್ಳಲು ನಾನು ಸುತಾರಾಂ ತಯಾರಿರಲಿಲ್ಲ . It would be too high a price to pay !! ಆದರೂ ಏಕ್ದಮ್ ಇಳಿಸಬಾರದೆಂದು ಇಪ್ಪತ್ತೈದಕ್ಕೆ ಕೇಳಿದೆ. ಅವನು " ನೋಡಿ ಮೇಡಮ್, ಇನ್ ಫ್ಲೇಷನ್ ಎಷ್ಟು ಏರಿದೆ ಗೊತ್ತಾ ? ಪಾಪ...ನಿಮಗೇನು ಗೊತ್ತಿಲ್ಲ ಬಿಡಿ. ಆದರೆ ಒಂದು ಮಾತು . ಬಾರ್ಗೈನ್ನ್ ಮಾಡೋದಿದ್ದರೆ ದಯವಿಟ್ಟು ಬೇರೆ ಅಂಗಡಿ ಗೆ ಹೋಗಿ. ನೀವಲ್ಲದಿದ್ದರೆ ನಮಗೆ ಬೇಕಾದಷ್ಟು ಜನ ಕಸ್ಟಮರ್ಸ್ ಸಿಗ್ತಾರೆ. " ಅಂದ. inflation ಅರ್ಥ ಇರಲಿ, spelling ಆದ್ರೂ ಗೊತ್ತ ನಿನಗೆ ಅಂತ ನಾನು ಕೇಳಿ, ಅವನು ಇನ್ನೇನೋ ಅಂದು, ನಾನು ಮತ್ತಿನ್ನೇನೋ ಅಂದು, ಜಗಳ ವಿಪರೀತಕ್ಕೆ ಹೋಗಿ, ಡ್ರೈವರ್ ಅಣ್ಣನಿಗೆ ಫೋನ್ ಮಾಡಿ, ಅಣ್ಣ ಬಂದು ನನ್ನನು ತುಂಬಿದ ಮಾರ್ಕೆಟ್ ನಲ್ಲಿ ದರದರ ಎಳೆದುಕೊಂಡು ಹೋಗುವ ದೃಶ್ಯ ಯಾಕೋ ಹಾಗೆ ಕಣ್ಣ ಮುಂದೆ ಬಂತು ನನಗೆ. ಇದರ ಕಲ್ಪನೆಯಲ್ಲಿ ಮುಳುಗಿದ್ದ ನನ್ನನ್ನು ವಾಸ್ತವಕ್ಕೆ ತಂದಿದ್ದು ನನ್ನ ಬೀಳುತ್ತಿದ್ದ ಕಿರೀಟದ ಶಬ್ದ. ಇನ್ನೇನು ಮಾತನಾಡದೇ, ಬಾಳೆಹಣ್ಣು ಒಂದು ಕೆ.ಜಿ ಖರೀದಿಸಿ, ಮಿಕ್ಕಿದ್ದೆಲ್ಲಾ ಹಣ್ಣನ್ನು ಒಂದೊಂದೇ ಹಾಕಿಸಿ ಅದು ಕೆ.ಜಿ ಎಪ್ಪತ್ತು !! ಮಾತಿಲ್ಲದೇ ಕೊಟ್ಟು ನಡೆದೆ. ಜೀವನದಲ್ಲಿ ನಾನು ಬಾರ್ಗೈನ್ ನಲ್ಲಿ ಸೋತಿರಲಿಲ್ಲ...ಛೆ !

Z : i know ! M.G road ನಲ್ಲಿ chess set ಗೆ 250 rupees ಅಂದವನ ಜೊತೆ ಮುಕ್ಕಾಲು ಘಂಟೆ bargain ಮಾಡಿ 100 rupees ಗೆ ಇಳಿಸಿ ಸ್ನೇಹಿತೆಯರಿಂದ ಹಾಕಿಸಿಕೊಂಡಿದ್ದ ಕಿರೀಟ ಅಲ್ಲವೇನೆ ಅದು ?

ನಾನು : ಹೂ !!!

Z : ಅಲಂಕಾರ್ ಪ್ಲಾಜಾ ಐನೂರು ರುಪಾಯಿ ಬಟ್ಟೆಗೆ ಇನ್ನೂರು ರುಪಾಯಿ ಇಟ್ಟು ಮಾತಾಡದೇ ಬಟ್ಟೆ ತೆಗೆದುಕೊಂಡು ಬಂದು ಹೊಸ ಥರ ಬಾರ್ಗೈನ್ ಸ್ಟೈಲ್ ಬೇರೆ ಕಂಡು ಹಡಿದಿದ್ದೆ ನೀನು....

ನಾನು : ಯೆಸ್ !

Z : ಮನೆಯ ಹತ್ತಿರ ನೀನು ತರಕಾರಿ ವ್ಯಾಪಾರ ಮಾಡಲು ಹೋದರೆ ಅಂಗಡಿಯವರಿಗೆ ಮೈಲ್ಡ್ ಆಗಿ ಭಯ ಇರುತ್ತಿತ್ತಲ್ಲವಾ ?

ನಾನು : ಯಾ. ಈಗ ಎಲ್ಲಾ ಹೊಟೋಯ್ತು Z ...ನನ್ನ ಕಿರೀಟ..ನನ್ನ ಬಿರುದುಬಾವಲಿಗಳು...ಎಲ್ಲಾ !!!! ವಾಆಆಆಆಆಆಆಆ......!!!

Z : ಅಳಬೇಡ.

ನಾನು : ಮತ್ತಿನ್ನೇನು ಮಾಡಲಿ ? ಇದಕ್ಕಿಂತ ದೊಡ್ಡ ಆಘಾತ ಕಾದಿದ್ದು ನನಗೆ ದಿನಸಿ ಅಂಗಡಿಯಲ್ಲಿ. ನಾನಲ್ಲಿಗೆ ಹೋಗುವ ಮುಂಚೆಯೇ ಅಣ್ಣ ದಾರಿಯಲ್ಲಿ ಸಿಕ್ಕಿ ನನ್ನ ಕೋಪಗ್ರಸ್ಥ ಮುಖವನ್ನು ನೋಡಿ, ನನ್ನ ಬದಲು ಅವರು ದಿನಸಿ ಅಂಗಡಿಗೆ ಹೋಗುವೆನೆಂದರೂ, ನಾನೇ ಹೋಗಿ, ಅಲ್ಲಿನ ರೇಟುಗಳನ್ನು ನೋಡಿ ನನ್ನ ಬಿಪಿ ಏರಿ, ಕೆಲವು ಎಕ್ ಸ್ಟ್ರಾ ಸಾಮಾನುಗಳನ್ನು ಹಾಕಿದ್ದನೆಂದು ಸ್ವಲ್ಪ ಲೋ ಟೋನಲ್ಲಿ ಜಗಳವಾಡಿದೆ. ಯಾಕಂದರೆ ನಾನು ಕಿರುಚಿದ್ದರೆ ಡ್ರೈವರ್ ಅಣ್ಣನಿಗೆ ಫೋನ್ ಮಾಡುತ್ತಿದ್ದ ಗ್ಯಾರಂಟೀ. ಅವನು ಕಡೆಗೆ ತಪ್ಪೊಪ್ಪಿಕೊಂಡ. ನಾವು expect ಮಾಡಿದ್ದಕ್ಕಿಂತ double ದುಡ್ಡು ಕೊಟ್ಟು ಎಲ್ಲಾ ಕಾರಿನಲ್ಲಿ ಹಾಕಿಸಿಕೊಂಡು ಮನೆಗೆ ಮ್ಲಾನವದನಳಾಗಿ ಮರಳಿದೆ.

Z : very sad !!

ನಾನು : really ! ಮನೆಗೆ ಬಂದ ಮೇಲೆ ಅಮ್ಮನ 200 cms long list ತರಲು ನಾನು ಕೊಟ್ಟ ದುಡ್ಡಿನ ಮೊತ್ತ ತೋರಿಸಿದೆ. ಒಂದು ರುಪಾಯಿಯೂ ಇಲ್ಲದ ಖಾಲಿ ಪರ್ಸು ನೋಡಿ, ಸ್ವಲ್ಪವೇ ಸ್ವಲ್ಪ ಸಾಮಾನು ನೋಡಿ ಗಾಬರಿಯಾಗುವ ಸರದಿ ಅಮ್ಮನದ್ದಾಗಿತ್ತು !

Z : :-)

ನಾನು : ಇಷ್ಟು ಸೋಮವಾರ ನಡೆದ ಕಥೆ !

Monday, September 1, 2008

I want ಮಳೆ !

Z : ಛೆ ಛೆ ಛೆ ಛೆ ಛೆ ಛೆ !!!!!!!!!!!!!

ನಾನು : ನಾನು ಪಾಪಗುಟ್ಟಿದ್ದೇನೆ ಎಂದು ನೀನು competition ಮೇಲೆ ಛೆಗುಟ್ಟೋದು ಸರಿಯಲ್ಲ ನೋಡು !

Z : competition ಅಲ್ಲ... I am very much disappointed.

ನಾನು : ಯಾಕೆಂದು ಪೇಳುವಂಥವಳಾಗು !

Z : ನೋಡು,ಎಷ್ಟೋಂದ್ ಜನ bloggers ಮಳೆ ಮೇಲೆ blogs ಬರ್ದಿದಾರೆ ! ಕವಿತೆಗಳು ಬೇರೆ ! ನಾನು ಏನಾದರೂ ಬರೆಯೋಣಾ ಅಂತ ನನ್ನ ನೆನಪಿನ ಕಂತೆನೆಲ್ಲಾ ತೆಗ್ದು ತಿರ್ಗ್ಸಿ ಮುರ್ಗ್ಸಿ ನೋಡಿದೆ...ನಾನ್ ಮಳೆಲಿ ನೆನೆದಿದ್ದಾಗಲೀ, ಸಿಕ್ಕಾಕೊಂಡಿದ್ದಾಗಲೀ, ಮಳೆ ನೀರು ನೋಡುತ್ತಾ ಕಾಫಿ, ಪಕೋಡಾ, ಬೋಂಡಾ ತಿಂದಿದ್ದಾಗಲಿ....ಒಂದೂ ಮಾಡೆ ಇಲ್ಲ ಅನ್ನೋದು ನನಗೆ ಆಗ ಜ್ಞಾನೋದಯವಾಯ್ತು ! ಈ ನಷ್ಟ ಆಗಿದ್ದು ನಿನ್ನಿಂದಲೇ !!

ನಾನು : ನಾನೇನು ಮಾಡಿದೆ ?

Z : ಏನ್ ಮಾಡ್ಲಿಲ್ಲ ಅಂತ ಕೇಳು !

ನಾನು : ಸರಿ. ಏನು ಮಾಡಲಿಲ್ಲ ?

Z : ಮಳೆ ಲಿ ನೀನು ನೆನೆಯದೇ ಇರುವುದು ನಿನ್ನ ಮೊದಲನೇ ದೊಡ್ಡ ತಪ್ಪು. ಮಳೆ ಇರಲಿ, ಚಳಿ ಇರಲಿ, ಗಾಳಿ ಇರಲಿ, ಯಾವುದನ್ನೂ ಲೆಕ್ಕಿಸದೇ, ಹೊಂವರ್ಕ್, ಅಸ್ಸೈನ್ಮೆಂಟ್ ಮತ್ತು ಪ್ರಾಜೆಕ್ಟುಗಳ ಮೇಲೆ ಗಮನ ಹರಿಸಿದ್ದು ಅತೀ ಭೀಕರವಾದ ಎರಡನೆಯ ತಪ್ಪು. ಎಲ್ಲದಕ್ಕಿಂತಾ ದೊಡ್ಡ ಪ್ರಮಾದವೆಂದರೆ, ಮಳೆ ಬಂದಾಗ ನೀಬು " ಯಾಕೋ weather change ಆಯ್ತು, ನಿದ್ದೆ ಮಾಡುವ " ಅಂತ ರಗ್ ಹೊದ್ದಿಕೊಂಡು ಮಲಗುವುದು !

ನಾನು : ನೋಡು , ಇದರಲ್ಲಿ ನನ್ನದು 0.001 % ಅಷ್ಟೂ ತಪ್ಪಿಲ್ಲ. ನಾನು ಮಳೆಯಲ್ಲಿ ನೆನೆಯಲು ಹೋದಾಗಲೆಲ್ಲ ಅಣ್ಣ ಅಥವಾ ಅಮ್ಮ " ಜ್ವರ ಬರತ್ತೆ ! ಒಳಗೆ ನಡಿ ! " ಅಂತ ದರ ದರ ಎಳೆದುಕೊಂಡು ಹೋಗಿಬಿಡುತ್ತಿದ್ದರು. ಊರಿನಲ್ಲಿ ಅಜ್ಜಿ ಮನೆಯಿದೆಯಾ ? ಅದೂ ಇಲ್ಲ ! ಎಲ್ಲಾ ಬೆಂಗಳೂರಿನಲ್ಲೇ ಸ್ಥಿತರು! ಅಲ್ಲಾದರೂ ಹೋಗಿ ನೆನೆಯೋಣಾ ಅಂದರೆ ಅದೂ ಸಾಧ್ಯವಿಲ್ಲ. ಇನ್ನು ಸ್ಕೂಲಿನಲ್ಲಾಗಲೀ, ಕಾಲೇಜಿನಲ್ಲಾಗಲೀ ಮಳೆ ನಿಲ್ಲುವ ತನಕ ಹೊರಗೇ ಬಿಡುತ್ತಿರಲಿಲ್ಲ. ಅಣ್ಣ ಅಮ್ಮ ನಡೆಯದೇ, ಆಟೋ ಅಥವಾ ಕಾರಿನಲ್ಲಿ ಬಂದು ನನಗೆ ಹನಿಯನ್ನೂ ಸೋಕಿಸದೇ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಎಮ್. ಎಸ್ಸಿಗೆ ಬರುವ ಹೊತ್ತಿಗೆ " ನೆನೆಯುವಂಥಾ, ಸಿಕ್ಕಿಹಾಕಿಕೊಳ್ಳುವಂಥಾ ಮಳೆ" ನಾನಂತೂ ನೋಡಲೇ ಇಲ್ಲ !! ಸಿಟಿ ಮನೆಗಳಲ್ಲಿ ಟೆರೇಸು ದಂಡ... ಎಲ್ಲರ ಮನೆಗಳೂ ನಾಕಂತಸ್ತು...ಯಾರಿಗೂ ಹೇಳದೇ ಟೆರೇಸಿನ ಮೇಲೆ ನೆನೆಯುವಾ ಅಂದರೆ ಮೂರನೆಯ ಅಂತಸ್ತಿನವರು ನಮ್ಮ ಮನೆಗೆ ಫೋನಿಸಿ, " ನಿಮ್ಮ ಮಗಳು ಮಳೆಯಲ್ಲಿ ನೆನೆಯುತ್ತಿದ್ದಾಳಲ್ಲ....ಯಾಕೆ ?" ಎಂದು ಪ್ರಶ್ನೆ ಕೇಳುವ ಮೂಲಕ ಅವರ ಸಮಾಜ ಸೇವಾ ಕಳಕಳಿಯನ್ನು ತೋರಿಸಿಕೊಳ್ಳುತ್ತಾರೆ ! ಈಗ ಹೇಳು ಇದರಲ್ಲಿ ನನ್ನ ತಪ್ಪೇನು ಇದೆ ?

Z : ನೀನು ಕೊಟ್ಟ ಕಾರಣಗಳು ಪರಿಗಣಿಸಲು ಅರ್ಹವಾದರೂ, ನೀನು ಇವೆಲ್ಲವನ್ನೂ ಮೀರಿ ಮಳೆಯಲ್ಲಿ ನೆನೆಯಲು ಪ್ರಯತ್ನಿಸಬಹುದಿತ್ತು. ಚಿಕ್ಕವಯಸ್ಸಿನಲ್ಲಿ ಅಪ್ಪ ಅಮ್ಮನ ಎಲ್ಲಾ ಮಾತು ಕೇಳಿ " ಮಾತಾಪಿತೃವಿಧೇಯ ಮಗಳು " ಅನ್ನುವ ಕೆಲಸಕ್ಕೆ ಬಾರದ ಸರ್ಟಿಫಿಕೇಟನ್ನು ಸಂಪಾದಿಸುವ ಬದಲು ಚಂಡಿ ಚಾಮುಂಡಿ ಥರ ಗಲಾಟೆ ಮಾಡಿದ್ದಿದ್ದರೆ ನಿನ್ನನ್ನು ಊಟಿಯ ಬೋರ್ಡಿಂಗ್ ಸ್ಕೂಲ್ ಗೆ ಸೇರಿಸುತ್ತಿದ್ದರು.ನನ್ಗೆ ಅದೇ ಬೇಕಿತ್ತು ! ಯಾರಿಗೂ ಕಾಣಿಸಿಕೊಳ್ಳದೇ ನಾನು ನಿನ್ನ ಜೊತೆ ಬಂದುಬಿಡುತ್ತಿದ್ದೆ . ಏನ್ ಸಖತ್ತಾಗಿರ್ತಿದ್ದೆ ಆಗ ! ಮಳೆಲಿ ಆಟ ಆಡ್ಕೊಂಡ್, nature ನ enjoy ಮಾಡ್ಕೊಂಡ್.....ಆ ಆಸೆ ಮಣ್ಣುಪಾಲಾಗಿದ್ದು ನಿನ್ನ ವಿಧೇಯತೆಯಿಂದ. ಇನ್ನು ನಿನ್ನ ಎಮ್ಮೆಸ್ಸಿ ಮುಗಿದ ಮೇಲೆ ನಾನು ಶೃಂಗೇರಿಯಲ್ಲಿ ಸೆಟ್ಟ್ಲಾಗಲು ಎಂಥಾ foolproof plan ಮಾಡಿದ್ದೆ. ಅನ್ಯಾಯ ಅದು workout ಆಗಲಿಲ್ಲ !! ಇಲ್ಲಾಂದಿದ್ದ್ರೆ....ಏನ್ ಸೈಲೆಂಟಾಗೋದೆ ?

ನಾನು : ತಾವು ಮಾತಾಡಿ. happy independence day.

Z : thanks. But I will not wish you the same ! ಎಂಥಾ ಒಳ್ಳೆ ಮೆಮೋರಿಗಳು ಕಾಣಸಿಗ್ತಾವೆ ಒಬ್ಬೊಬ್ಬರ ಬ್ಲಾಗಿನಲ್ಲು ! ಏನ್ ಮಜಾ ಮಾಡಿದ್ದಾರೆ ಒಬ್ಬೊಬ್ಬರೂ !!! ನಾನು ಇದ್ದೀನಿ....ಪ್ಲಸ್ ನೀನು ಇದ್ದೀಯ... ಶುದ್ಧ ನಿಷ್ಪ್ರಯೋಜಕರು ! ಅವರೆಲ್ಲ ಮಳೆನೀರಲ್ಲಿ ದೋಣಿ ಮಾಡಿಬಿಟ್ಟಿದ್ದಾರೆ, ನೀನು ಅದನ್ನ ಕೆ.ಜಿ. ಕಾರ್ಡ್ಬೋರ್ಡ್ ಮೇಲೆ ಅಂಟಿಸಿ, "this is a boat which sails on water " ಅಂತ ಬರ್ದಿದೀಯ ಅಷ್ಟೆ ! ಛತ್ರಿ ಜಗಳ ಎಲ್ಲಾ ಆಡಿದಾರೆ ...ನೀನು ? ಛತ್ರಿ ಹಿಡ್ಕೊಂಡು school ನಲ್ಲಿ dance ಮಾಡಿದ್ಯ ಅಷ್ಟೆ ! ಮಳೆ ನೋಡ್ಕೊಂಡ್ ಕಾಫಿ ನ ಎಂಜಾಯ್ ಮಾಡಿದ್ದಾರೆ..ನೀನು ಮಲ್ಕೊಂಡಿರ್ತೀಯ !! ನಾನು stranded ಆಗ. ಎಷ್ಟ್ ಕಷ್ಟಪಟ್ಟರೂ ನೀನಂತೂ ಎದ್ದೇಳೊಲ್ಲ !! ನಿನ್ನಿಂದ ನನಗೆ ಒಂದು ಬ್ಲಾಗ್ ಪೋಸ್ಟ್ ನಷ್ಟವಾಗಿದೆಯಾದ್ದರಿಂದ ಆ ನಷ್ಟವನ್ನು ನೀನು ಭರಿಸಿಕೊಡಬೇಕು. ನನಗೆ ಮಳೆ ಬೇಕು...ಎಲ್ಲರು ಬಹಳ ಇಷ್ಟ ಪಟ್ಟು, enjoy ಮಾಡಿ, cherish ಮಾಡಿದ್ದಾರಲ್ಲ, ಅದೇ....same to same ಅದೇ ಮಳೆ ಬೇಕು. ಎಲ್ಲಿಂದನಾದ್ರು ಸರಿ...ಅದನ್ನ ತಂದುಕೊಡು !!

ನಾನು : ನೋಡು...ನಾನು ಎಲ್ಲಾರನ್ನೂ "ನಿಮ್ ಹತ್ರ ಮಳೆ ಇದ್ದ್ರೆ ಕೊಡಿ ..." ಅಂತ ಕೇಳಕ್ಕಾಗಲ್ಲ. ಅದು ತೀರಾ ಕಷ್ಟ ಆಗತ್ತೆ.

Z : ಬೇರೆ ಎಲ್ಲಾದ್ರು try ಮಾಡು.

ನಾನು : ಪೆಟ್ಟಿಗೆ ದಿನಸಿ ಅಂಗಡಿಯಿಂದ ಹಿಡಿದು ದೊಡ್ಡ ದೊಡ್ಡ shopping malls ವರೆಗೂ ಎಲ್ಲಾ ಕಡೆ ಬೀಟ್ ಹೊಡೆದು ಬಂದಾಯ್ತು. ಎಲ್ಲೂ ಮಳೆ ಸಿಗ್ಲಿಲ್ಲ.

Z : ಎಂಟೆಂಟು ಫ್ಲೋರ್ ಕಟ್ಟ್ತಾರೆ...." ಮಳೆ sold here." ಅಂತ ಟೆರೇಸ್ ಮೇಲೆ ಒಂದು ಬೋರ್ಡ್ ಹಾಕಿದ್ರೆ ಮಾಲ್ ಯಜಮಾನ ಅರ್ಧರಾತ್ರಿಯಲ್ಲಿ ಕರೋಡ್ಪತಿಯಾಗ್ತಾನೆ ತಿಳ್ಕೋ !! ಹೀಗೆ ಮಾಡಿ ಟೆರೇಸಿಗೆ entry allow ಮಾಡ್ಬಾರ್ದ ? hopeless fellows !

ನಾನು : ನಿಂಗೆ ಬೇಕಾಗಿದ್ದು ಸಿಗ್ಲಿಲ್ಲ ಅಂತ ಅನ್ಯಾಯ ಅವ್ರನ್ನೆಲ್ಲ ಯಾಕ್ ಬೈಯುತ್ತೀಯ ? ಮಳೆ ಎಲ್ಲಾ ಸಿಗಲ್ಲ...ಸಿಟಿ ಹುಡುಗಿಯಾದ ನಿನಗೆ ಮಳೆಯಲ್ಲಿ ನೆನೆಯೋ ಅದೃಷ್ಟ ಇಲ್ಲ...face the fact and accept the truth. ಅದೂ ಎಲ್ಲಾರು enjoy ಮಾಡೋ ಅಂಥಾ ಮಳೆ ಇಲ್ಲೆಲ್ಲೂ ಸಿಗಲ್ಲ....ಇಲ್ಲೆಲ್ಲಾ ಬರೀ ಜನ ಕೊಚ್ಚಿಕೊಂಡು ಹೋಗುವಂಥಾ, ಗೋಡೆ ಬಿದ್ದು ಆಸ್ತಿ ಪಾಸ್ತಿ ನಷ್ಟವಾಗುವಂಥಾ ಮಳೆ ಮಾತ್ರ ಸಿಗೋದು.

Z : ಇಲ್ಲಾ ನನಗೆ ಮಳೆ ಬೇಕೇ ಬೇಕು...ಅವರೆಲ್ಲ ಎಂಜಾಯ್ ಮಾಡಿ ಬ್ಲಾಗ್ ನಲ್ಲಿ ಉಲ್ಲೇಖಿಸಿದ ಮಳೆನೇ ಬೇಕು. ಒಂದು ಹನಿನೂ change ಇರಬಾರದು.

ನಾನು : ಏನ್ ಮಳೆ ಅಂದ್ರೆ ಸೀರೆ ಶಾಪಿಂಗ್ ಅಂದುಕೊಂಡೆಯಾ ? "same type ಕೊಡಿ " ಅಂತ ಕೇಳೋಕೆ ? ನೋಡು...ದಯವಿಟ್ಟು ಹಠ ಮಾಡ್ಬೇಡಾ . ನಿಂಗೆ ಭೇಲ್ ಪುರಿ ಕೊಡ್ಸ್ತಿನಿ.

Z : ಬೇಡ.

ನಾನು : ಪಾನಿ ಪುರಿ ? ಬೀದಿ ಪಾನಿಪುರಿ ಅಂಗಡಿಯ ಸಕಲ ಚಾಟ್ಸ್ ನ ನೈವೇದ್ಯ ಮಾಡ್ತಿನಿ.

Z : ಬೇಡ.

ನಾನು : ದ್ವಾರಕಾ ಭವನದ ಖಾಲಿ ದೋಸೆ ?

Z : ಬೇಡ.

ನಾನು : ಉಪಹಾರ ದರ್ಶಿನಿ ಶಾವಿಗೆ ಬಾತ್ ?

Z : ಉಹು.

ನಾನು : ವಿದ್ಯಾರ್ಥಿ ಭವನದ ಮಸಾಲೆ ದೋಸೆ ? ಇದಕ್ಕಾದ್ರೂ ಒಪ್ಕೊ.

Z : no chance.

ನಾನು : ಶ್ರೀನಿವಾಸ ಬೇಕರಿಯಲ್ಲಿ ಸಕಲ ಬೇಕರಿ ತಿಂಡಿ ? capsicum puff ?

Z : ಬೇಡ ಬೇಡ ಬೇಡ.

ನಾನು : k.c. das ನ ಸಕಲ ಬಂಗಾಳಿ ಸ್ವೀಟ್ಸು ?

Z : ಇಲ್ಲ ಬೇಡ.

ನಾನು : ಬ್ಯೂಗಲ್ ರಾಕ್ ಭೇಲ್ ಪುರಿ ಗಾಡಿಯ ಸಕಲ ಖಾದ್ಯಗಳು ?

Z : ನೊ.

ನಾನು : cane-o-la ಜ್ಯೂಸ್ ?

Z : ಸಾಲ್ದು !

ನಾನು : ಕದಂಬದ ಸಕ್ಕರೆ ಪೊಂಗಲ್ಲು, ಪುಳಿಯೋಗರೆ, ಬಿಸಿಬೇಳೇಬಾತ್ ? ಕಾಫಿ ?

Z : ಬೇಡ.

ನಾನು : ಗಾಂಧಿಬಜಾರ್ ಬೋಂಡಾ ಅಂಗಡಿಯ ಆಲೂ ಬೊಂಡಾ ?

Z : ಮಳೆಲಿ ನೆನೆಯುತ್ತಾ ಕೊಡಿಸುವುದಾದರೆ ಮಾತ್ರ ಒಕೆ.

ನಾನು : ಮಳೆಲಿ ಆಗಲ್ಲ ಪುಟ್ಟ...ಅದ್ ಬಿಟ್ಟ್ ಇನ್ನೇನ್ ಬೇಕಾದ್ರು ಕೇಳು.

Z : ಇಲ್ಲಾ ನಂಗೆ ಇದೇ ಬೇಕು !

ನಾನು : national high school ಹಿಂಭಾಗದ ಗಾಡಿಯಲ್ಲಿನ ಹೆಸರು ಬೇಳೆ ? ಬೇಡ್ವಾ ?

Z : ಬೇಡ.

ನಾನು : vishwesharapuram chat street ನಲ್ಲಿ ಒಂದು round? pleeeeeeeease ಒಪ್ಕೊ !

Z : ಬೇಡ. ನಾನ್ ಬರಲ್ಲ !

ನಾನು : kamat minerva ಜೋಳದ ರೊಟ್ಟಿ ?

Z : ನೊ.

ನಾನು : MTR ನಲ್ಲಿ ದೋಸೆ, ರವೆ ಇಡ್ಲಿ, ಊಟ, fruit mixture, ಬಾದಾಮಿ ಹಾಲು , ಖಾರದ cashew ?

Z : ಇಲ್ಲ ಇಲ್ಲ...ನಂಗೆ ಮಳೆ ನೇ ಬೇಕು.

ನಾನು : ಪ್ಲೀಸ್ ಹಠ ಮಾಡ್ಬೇಡ...ನೋಡು ಗುರುರಾಜ ಖಾರ ಸ್ಟಾಲಿನ ಬೇಸನ್ ಲಾಡು, ಕೋಡ್ಬಳೆ, ಚಕ್ಕುಲಿ, ಕೊಬ್ರಿಮಿಠಾಯಿ, ಕುಂದಾ, ಕರದಂಟು ....ಇದೆಲ್ಲಾ ನೂ ಬೇಡ್ವಾ ?

Z : ಬೇಡ ಬೇಡ ಬೇಡ.

ನಾನು : ಧಾರವಾಡದ ಪೇಡಾ ?

Z : ಉಹು.

ನಾನು : uffffffffffffffffff !!!!!!!!!!!!!!!!!!!!!! atleast ಸುಖ್ ಸಾಗರ್ ಜ್ಯೂಸ್ ಗಾದ್ರೂ ಒಪ್ಕೊಳ್ಳೆ !!

Z : ಒಪ್ಪಲ್ಲ. ಯಾವ್ದೂ ಬೇಡ. ನನಗೆ ಮಳೆನೇ ಬೇಕು ಒಂದ್ ಸರ್ತಿ, ನಂಗೆ ಮಳೆನೇ ಬೇಕು ಎರಡ್ ಸರ್ತಿ, ನಂಗೆ ಮಳೆ ನೇ ಬೇಕು ಮೂರ್ ಸರ್ತಿ !

ಗಲಾಟೆ ಜಾಸ್ತಿಯಾಯ್ತು ನಿಂದು. ಮಳೆ ಎಲ್ಲ ಸಿಗಲ್ಲ. ನನ್ನ ಮಾತು ಕೇಳ್ತ್ಯೋ ಇಲ್ವೊ ?

Z : ವಾಆಆಆಆಆಆಆಆಆಆಆಆಆಆಆಆಆಆಆಆಆಆಆ !!!!!!!!!!!!!!!!!!!!!!!!!!!!!!!!!boo hoooooooooooooooo !!!!!!!!!!!!!!!!!!!!!!!!!!!!!!!!!!!!!!!!!!!!!

ಮಾತ್ ಕೇಳೆ hopeless fellow !!

ವಾಆಆಆಆಆಆಆಆಆಆಆಆಆಆಆಆಆಆಆಆಆಆಆಆಆಅ !!!!!!!!!!!!!!!!!!!!!!!!!!!!!!!!!!!!!!!!!!!!!!

ಅತ್ತು ಅತ್ತು ಅದ್ ಎಷ್ಟ್ ಬಕೆಟ್ ಕಣ್ಣೀರು ತುಂಬಿಸ್ತಾಳೋ ನಾನು ನೋಡೇಬಿಡ್ತಿನಿ. ಎಲ್ಲ್ ಹೋಗ್ತಾಳೆ.. ಆಮೇಲೆ sorry ಅಂತ ಅಂದೇ ಅಂತಾಳೆ. ಅವಳು sorry ಅಂತ ಕೇಳೋವರ್ಗೂ...

line on hold.

Saturday, August 16, 2008

ಪಾಪ !

ನಾನು : ಪಾಪ ! ಪಾಪ ! ಪಾಪ !!!!!!!!!!

Z : ಏನಾಯ್ತು ? ಪಾಪಗುಟ್ಟುತ್ತಿದ್ದೀಯಾ ?

ನಾನು : ಮೊನ್ನೆ ಮಂಗಳೂರಿನ ಬಳಿ ಪಾಪ ಪುಟ್ಟ ಪಾಪುಗಳು ಹೋಗುತ್ತಿದ್ದ ಬಸ್ಸು ನದಿ ನೀರಿಗೆ ಉರುಳಿ ಎಲ್ಲಾ ಪಾಪುಗಳು ನೀರುಪಾಲಾದವಂತೆ Z !

Z : ಛೆ ! ಅನ್ಯಾಯ !

ನಾನು : ಇದು ಒಂಥರಾ ವಿವವರಿಸಲು ಆಗದ, ತರ್ಕಕ್ಕೆ ನಿಲುಕದ ಸಂಗತಿ. ಅನ್ಯಾಯ...ಅವೇನು ಮಾಡಿದ್ದವು ಪಾಪ...ಪಾಪದಂಥವು, ಶಾಲೆಗೆ ಹೊರಟಿದ್ದವು...ಕುಂಭದ್ರೋಣ ಮಳೆಯನ್ನೂ ಲೆಕ್ಕಿಸದೇ...ತಮ್ಮದೇ ಲೋಕದಲ್ಲಿ ಕುಣಿದಾಡುತ್ತಾ, ಅವರದ್ದೇ ಕನಸಿನ ಸಮುದ್ರದಲ್ಲಿ ತೇಲುತ್ತಾ ಇದ್ದವು...ಛೆ ! ಮುಳುಗಿ ಹೋದವು ! ಪ್ರಳಯ ರೂಪ ತಾಳಿದ ನದಿನೀರಿನಲ್ಲಿ ! ನನಗಂತೂ tv9ನಲ್ಲಿ ನ್ಯೂಸ್ ನೋಡಿದ್ದೇ ವಿಪರೀತ ಸಂಕಟವಾಯ್ತು. ಕಣ್ಣಿಂದ ಧುಮುಕಲು ಯತ್ನಿಸುತ್ತಿದ್ದ ನೀರನ್ನು ಅದು ಹೇಗೆ ತಡೆದೆನೋ ನನಗಿನ್ನೂ ಅರ್ಥವಾಗುತ್ತಿಲ್ಲ. ಆ ಮೂವತ್ತು ಮಕ್ಕಳಲ್ಲಿ ಎಷ್ಟು ವಿಜ್ಞಾನಿಗಳಿದ್ದರೋ, ಎಷ್ಟು ವೈದ್ಯರಿದ್ದರೋ, ಯಾರು ಅವರಲ್ಲಿ ವಿಶ್ವೇಶ್ವರಯ್ಯನಾಗಬಹುದಿತ್ತೋ, ಯಾರು ಕಾರಂತರಂಥವರೋ, ಯಾರು ರಾಧಕೃಷ್ಣರಾಗುತ್ತಿದ್ದರೋ ? ಅನ್ಯಾಯ Z ... ಭವಿಷ್ಯ ರೂಪುಗೊಳ್ಳಬೇಕಿದ್ದ ಮಕ್ಕಳ ಈ ತರಹದ ಸಾವು ನಿಜವಾಗಿಯೂ ನನ್ನನ್ನು ಏನೂ ಹೇಳಲಾಗದ ಮೌನ ಸ್ಥಿತಿಗೆ ನೂಕಿತ್ತು ಎರಡು ದಿನ ! ನೆನ್ನೆ ಹಬ್ಬ ಇತ್ತಾದರೂ, ಒಂದು ಕ್ಷಣ ಆ ಮಕ್ಕಳ ಮನೆಯಲ್ಲಿರಬಹುದಾದ ಸೂತಕದ ಛಾಯೆ ನನ್ನ ಕಣ್ಣು ಮುಂದೆ ಹಾಗೇ ಹಾದು ಹೋಯ್ತು .

ಆಗುವುದನ್ನು ತಡೆಯಲಸಾಧ್ಯವಾದಾಗಲೇ ಪ್ರಾಯಶಃ ಅಪಘಾತ ಸಂಭವಿಸುವುದು. ಅಪಘಾತದ ಹಿಂದಿನ ನೋವಿನ ಅರಿವು ನನಗಿದೆ. ಆಗಬಾರದಿತ್ತು...ಆಗಿಹೋಯ್ತು. ಆ ಮಕ್ಕಳ ತಂದೆ ತಾಯಿಗಳಿಗೆ ಮತ್ತೆ ಅವರ ಕಂದಮ್ಮಗಳನ್ನು ಮರಳಿ ದೊರಕಿಸಿಕೊಡಲು ನಮ್ಮ ಬಳಿ ಸಂಜೀವಿನಿ ಪರ್ವತವಾಗಲಿ, ದ್ರೋಣಗಿರಿಯಾಗಲಿ, ಚಿಂತಾಮಣಿಯಾಗಲಿ ಇಲ್ಲ ! ಇದು ಭರಿಸಲಾಗದ ನಷ್ಟ. ನಾವು ನಮ್ಮ ಸಹಾನುಭೂತಿ ಮತ್ತು ಶೋಕವನ್ನು ವ್ಯಕ್ತಪಡಿಸಬಹುದಷ್ಟೇ ವಿನಃ ಇನ್ನೇನೂ ಸಾಧ್ಯವಿಲ್ಲ. ಆ ಕಂದಮ್ಮಗಳ ಅಕಾಲ ಮೃತ್ಯುವಿಗೆ ಇದು ಭಾವಪೂರ್ಣ ಅಶ್ರುತರ್ಪಣ.

Z : sniff ! ನನ್ನದೂ ಶ್ರಧ್ಧಾಂಜಲಿ !

Wednesday, August 13, 2008

hopeless fellow ಪದದ ತರ್ಜುಮೆ !

Z : ಇತ್ತೀಚೆಗೆ ನೀನು ಟೈಂ ಪಾಸ್ ಬಿಟ್ಟು ಇನ್ನೇನೂ ಮಾಡುತ್ತಿಲ್ಲ ಅಲ್ಲಾ ?

ನಾನು : ಹಾಗೇನಿಲ್ಲ. ಟೈಂ ಪಾಸ್ ಬಿಟ್ಟು ಬೇಕಾದಷ್ಟು ಕೆಲ್ಸ ಮಾಡ್ತಿದಿನಿ. for example : ನಿದ್ದೆ, ಊಟ, etc.

Z : ಕರ್ಮಕಾಂಡ !

ನಾನು : ಸಾಕು ನಿನ್ನ ಉದ್ಗಾರ . ಇವತ್ತೇನಾಯ್ತಪ್ಪಾ ಅಂದ್ರೆ...

ಮದ್ಯಾಹ್ನ ನಾನು ಆನ್ಲೈನ್ ಬಂದೆ..ಶ್ರೀಕಾಂತ್ ಇದ್ದರು..ನಾನೇ ನನ್ನ ಕೆಟ್ಟುಹೋಗಿದ್ದ ಮೈಕ್ ನ ರಿಪೇರಿ ಮಾಡಿದ ಖುಶಿ ಲಿ ಗೂಗಲ್ ಟಾಕಿನಲ್ಲಿ ಫೋನಿಸಿದೆ. ತರ್ಜುಮೆಗಳ ಬಗ್ಗೆ ಸಲ್ಪ ಮಾತಾಡೋದಿತ್ತು. ಮಾತಾಯ್ತು. ನಂತರ ಪಾಪ ಶ್ರೀಕಾಂತರ ಬೈಕ್ ಇವತ್ತು ಕೆಟ್ಟು ಅವರು ಪಟ್ಟ ಅವಸ್ಥೆ / ಅವ್ಯವಸ್ಥೆಗಳನ್ನು ಕೇಳುತ್ತಿರುವಾಗ ಎಲ್ಲಿಂದಲೋ ಸಡನ್ನಾಗಿ ನನ್ನ ತಲೆಯಲ್ಲಿ ಒಂದು ಪ್ರಶ್ನೆ ಉದ್ಭವವಾಯಿತು.

Z : ಏನ್ ಪ್ರಶ್ನೆ ?

ನಾನು : hopeless fellow ಅನ್ನುವ ನುಡಿಗಟ್ಟನ್ನು ಶುದ್ಧ ಕನ್ನಡದಲ್ಲಿ ಏನನ್ನುತ್ತಾರೆ ?

Z : ಆಹಾ ! million dollar question-ನ್ನು !

ನಾನು : ಹೂ ಮತ್ತೆ ! ನಾನು ಪ್ರಶ್ನೆ ಕೇಳುವ ಹೊತ್ತಿಗೇ ಕರ್ಮಕಾಂಡ ಪ್ರಭುಗಳು ಆನ್ಲೈನ್ ಬಂದರು. ನಮಸ್ಕಾರ ಮತ್ತು ಉಭಯಕುಶಲೋಪರಿ ಸಾಂಪ್ರತದ ನಂತರ ಏನು ಮಾಡುತ್ತಿದ್ದೀರಿ ಅಂತ ಅವರು ನನ್ನ ಕೇಳಿದರು. ನಾನು ಶ್ರೀಕಾಂತರ ಜೊತೆ ಟಾಕಿಸುತ್ತಿರುವುದನ್ನು ತಿಳಿಸಿದೆ. ಯಥಾ ಪ್ರಕಾರ "ಗೂದ್ " ಎಂದರು. " ಗೂದ್" ಅನ್ನುವುದು ಅವರು ಪೇಟೆಂಟಿಸಿಕೊಂಡಿರುವ ಶಬ್ದ. ಈ ಪ್ರಶ್ನೆ ಉದ್ಭವವಾದ ಕೂಡಲೆ ನಾನು ಶ್ರೀಕಾಂತರನ್ನು ಕೇಳಿದೆ. ಅವರು ಒಡನೆಯೇ ಉತ್ತರಿಸಿದರು -

"ನಿರಾಶಾದಾಯಕ ಮನುಷ್ಯ " ರಿ...

ಆಮೇಲೆ ಕರ್ಮಕಾಂಡ ಪ್ರಭುಗಳನ್ನ ಕೇಳಿದೆ . ಅವರು ಕೊಟ್ಟ ಉತ್ತರಗಳು ಮತ್ತು ನಮ್ಮಿಬ್ಬರ ನಡುವೆ ನಡೆದ ಸಂಭಾಷಣೆಯ ತಿರುಳು ಇಷ್ಟು :
goodh boy.. :) ಅಂದರು ಮೊದಲು. ನಂತರ hoplessa fella... ಆಮೇಲೆ.. hope = aashe..less = kammi fellow = mansha.. aashekammi mansha..
aashekammi maanava... ಇದಾದ ಮೇಲೆ ಅವರು ಉಪದೇಶ ಶುರು ಮಾಡಿದರು...ಕೆಲವು ಪದಗಳೆ ಅದೇ ಭಾಷೆಯಲ್ಲಿ ಇದ್ದರೆ ಚೆನ್ನ...ತರ್ಜುಮೆ ಮಾಡಬೇಡಿ ಅಂತ. ನಾನು ಬಿಡಲಿಲ್ಲ. ಶ್ರೀಕಾಂತರೂ ! ಅವರ ಕಾಲೆಳೆಯಲು, ಅವರನ್ನು ಮರ ಹತ್ತಿಸಲು ನಾವು ನಿರ್ಧಾರ ಮಾಡಿಬಿಟ್ಟಿವು ! ಇದರ ಮಧ್ಯದಲ್ಲಿ ನಾನು ಶ್ರೀಕಾಂತರಿಗೆ ಇದೇ ಪ್ರಶ್ನೆಯನ್ನು ಅರುಣ್ ಗೆ ಮತ್ತು ಶ್ರೀನಿವಾಸರಿಗೆ ಕೇಳಿ ಅಂತ ಹೇಳಿದೆ. ಅವರು ಮೆಸೇಜಿಸಿದರು. ನನಗೆ ಮತ್ತು ಕರ್ಮಕಾಂಡಪ್ರಭುಗಳಿಗೂ ಸೇರಿ !

Z : ನಿನಗೆ ಯಾಕೆ ?

ನಾನು : ರೆಕಾರ್ಡ್ ಗೆ !

Z : ಆಹಾ ! ಅದ್ಭುತ ! ಆಮೇಲೆ ?

ಇದನ್ನು ನೋಡಿದ ಕರ್ಮಕಾಂಡ ಪ್ರಭುಗಳು ನಾವು ಅವರಿಗೆ ಮರ ಹತ್ತಿಸಲು ನಿರ್ಧರಿಸಿದ್ದೀವಿ ಅಂತ ಗೊತ್ತಾಗಿ..." ಏನ್ ಗಲಾಟೆ ನಿಮ್ಮದು ? " ಅಂತ ಕೇಳಿದರು. ನಾನು ಏನೂ ಗೊತ್ತಿಲ್ಲದವರಂತೆ " ಏನೂ ಇಲ್ಲಪ್ಪ ! " ಅಂತ ಅಂದೆ ! ಸರಿ ಅವರು.."ನಾನು ಹೊರಟೆ" ಅಂತ ಹೇಳಿ escape ಆಗೋದ್ರು ! ಮರ ಹತ್ತಲಿಲ್ಲ ಚಾಣಾಕ್ಷರು !

Z : ಸರಿ ಹೋಯ್ತು !

ನಾನು : ಹೆ ಹೆ...ಇದರ ಮಧ್ಯೆ ಶ್ರೀಕಾಂತರು ತಮ್ಮ ತರ್ಜುಮೆಯನ್ನು ಸಂಸ್ಕೃತದಲ್ಲೂ ಮಾಡಲಿಚ್ಛಿಸಿ, ಇದರ ತರ್ಜುಮೆಯನ್ನು ಎರಡೂ ರೀತಿಯಲ್ಲಿ ಮಾಡಿ ಕಳಿಸಿದರು. ಒಂದು - ನಿರಾಶಾಮಗ್ನ ಮನುಷ್ಯ. ಎರಡು - ಆಶಾಧಮ ಸಖ (ಸಂಸ್ಕೃತ ತರ್ಜುಮೆ ).

ಇದಾಗುವ ಹೊತ್ತಿಗೆ ಗುರುಗಳು ತಮ್ಮ ತರ್ಜುಮೆ ಕಳಿಸಿದ್ದರು :

ನಿರಾಶಾದಾಯಕ ಮನುಷ್ಯ ಅಂತ

ಅವರ ಮೆಸೇಜಿನ ಹಿಂದೆಯೇ ಗಂಡಭೇರುಂಡರ ಮೆಸೇಜು..ಪದವಿಭಾಗ ಸಮೇತ :
aashaa ( hope )
kammi (less )
aaLu ( fellow )

ನಾವಂತೂ...ನಕ್ಕು ನಕ್ಕೂ ಸುಸ್ತು !!

Z : ಆಹಾ ! ಒಬ್ಬೊಬ್ಬರೂ ಸರೀಗಿದ್ದೀರಿ ತರ್ಜುಮೆ ಪ್ರವೀಣರು !! ನಿನ್ನ ತರ್ಜುಮೆ ?

ನಾನು : ನಾನು ತುಂಬಾ ಚಿಕ್ಕವಳು. ಶ್ರೀ ಸಾಮಾನ್ಯೆ ! ಆದ್ದರಿಂದ ಈಗ ನಾನು ತರ್ಜುಮೆ ಮಾಡಲು ಆಗುವುದಿಲ್ಲ. by the way, this question is open to all. ಎಲ್ಲರೂ ಈ ನುಡಿಗಟ್ಟಿನ ಕನ್ನಡ ತರ್ಜುಮೆಯನ್ನು ಮಾಡಬಹುದು. ಎಲ್ಲರದ್ದೂ ಆಗಲಿ...ಆಮೇಲೆ ನಾನು ನನ್ನ ತರ್ಜುಮೆಯನ್ನು ಮಾಡಲು ಪ್ರಯತ್ನಿಸುವೆ !

Z : :) :) : ) ಸರಿ !

ನಾನು : ಎಲ್ಲರೂ ಪ್ರಯತ್ನಿಸಿ ! ಆಲ್ ದಿ ಬೆಸ್ಟ್ !
ಅತಿವಿಶೇಷ ಸೂಚನೆ : ತರ್ಜುಮೆ "ಶುದ್ಧ" ಕನ್ನಡದಲ್ಲಿರಬೇಕು.

Friday, August 8, 2008

ಇವತ್ತಿನ ದಿನ ಚೆನ್ನಾಗಿದೆಯಂತೆ !

Z : ಏನ್ ವಿಶೇಷ ಇವತ್ತು ?

ನಾನು : ಗೊತ್ತಿಲ್ವಾ ? ಇವತ್ತಿನ ಡೇಟ್ ನೋಡು - 08-08-08 !! ಬರೀ ಎಂಟುಗಳು ! ಚೆನ್ನಾಗಿದೆ ಅಲ್ವ ?

Z : looks nice !! ಇವತ್ತು Olympics ಬೇರೆ start ಆಗತ್ತೆ ಅಲ್ವ ?

ನಾನು : ಹೂ...start ಆಗೋಗಿದೆ. ನನಗೆ ಅದರ ಬಗ್ಗೆ ಇಂಟೆರಸ್ಟ್ ಇಲ್ಲ. ನಾನು ನಿನಗೆ ಹೇಳಬೇಕಾಗಿರುವ ವಿಷಯ ಒಂದಿದೆ.

Z : ಬೇಗ ಹೇಳು...ನೀನಿಥರ ಕುಣಿಯುತ್ತಿರುವುದನ್ನ ನೋಡಿದರೆ ವಿಷಯ ಏನೋ ಇದ್ದಹಾಗಿದೆ.

ನಾನು : ಯೆಸ್ !! ವಿಷಯ ಏನಪ್ಪ ಅಂದರೆ - ನಾಗರಪಂಚಮಿಯ ದಿನ ಗುರು ದೊಡ್ಡಪ್ಪ ನಾನು ಎಮ್. ಎಸ್ಸಿ ನ distinction ನಲ್ಲಿ clear ಮಾಡಿದ್ದಕ್ಕೆ ಆಶೀರ್ವಾದ ಪೂರ್ವಕವಾಗಿ ಐನೂರು ರುಪಾಯಿ ಕೊಟ್ಟರು. ಬಟ್ಟೆ, ಬಳೆ ಇವೇ ಮುಂತಾದವುಗಳನ್ನ ತಗೋ ಅಂತ.

Z : ತಗೊಂಡ್ಯಾ ?

ನಾನು : ಇಲ್ಲ.

Z : ಇಷ್ಟೇನಾ ? ಇದು ವಿಷಯ ನಾ ?

ನಾನು : ಥುಥ್ ! ಇದಲ್ಲ ವಿಷಯ. ವಿಷಯ ಏನಪ್ಪಾ ಅಂದರೆ...ಆ ಐನೂರು ರುಪಾಯಿಯನ್ನು ನಾನು ಹೇಗೆ ಖರ್ಚು ಮಾಡಿದೆ ಅನ್ನೋದರ ಬಗ್ಗೆ. ಇವತ್ತು ಸಾಯಂಕಾಲ ಅಂಕಿತ ಪುಸ್ತಕಕ್ಕೆ ಹೋಗಿ exactly Rs. 490 ಬಿಲ್ಲ್ ಆಗುವಂತೆ ಪುಸ್ತಕಗಳನ್ನ ಖರೀದಿ ಮಾಡಿದೆ !!

Z : :- ) :-) :-) good ! ಏನ್ ತಗೊಂಡೆ ?

ನಾನು : ಅಮೇರಿಕಾದಲ್ಲಿ ಗೊರೂರು ಅನ್ನೋ ಪುಸ್ತಕ ನ ಜೀವನದಲ್ಲಿ ಒಂದು ಸರ್ತಿ ಓದಲೇ ಬೇಕು ಅಂತ 8th standard ನಲ್ಲಿ ಇರೋವಾಗ ನಮ್ಮ ಕನ್ನಡ ಟೀಚರ್ ವಿಜಯವಳ್ಳಿ ಮೇಡಮ್ ಹೇಳಿದ್ದರು. ಈ ಪುಸ್ತಕವನ್ನು ನಾನು ಹುಡುಕದ ಲೈಬ್ರರಿಯಿಲ್ಲ. ಪ್ರತಿಸಲ ಗೌರಿ ಹಬ್ಬಕ್ಕೆ ಬಂದ ದುಡ್ಡು ಹೀಗೆ ಬಂದು ಹಾಗೆ ಹೊರಟುಹೋಗುತ್ತಿದ್ದವು. ನನಗೆ ಹುಟ್ಟು ಹಬ್ಬದ ಗಿಪ್ಟುಗಳಾಗಿ ನಾಯಿ ಬೆಕ್ಕುಗಳು, ಟೆಡ್ಡಿ ಬೇರುಗಳು, ಬಳೆ, ಸರ ಇತ್ಯಾದಿಗಳೇ ಬರುತ್ತಿದ್ದವು.ಮತ್ತೂ, ನಾನು ದುಡ್ಡು ಕೂಡಿಸಿ ಪೋಸ್ಟ್ ಗ್ರಾಡುಯೇಷನ್ ಗೆ ಬೇಕಾದ ಪುಸ್ತಕಗಳನನ್ನೇ ಖರೀದಿಸಬೇಕಾಗಿ ಬರುತ್ತಿತ್ತು. ಒಂದು ವಿಷಯಕ್ಕೆ ಮಿನಿಮಮ್ ಎರಡು ಪುಸ್ತಕ ಓದಲೇ ಬೇಕಿತ್ತು. ನಾಲ್ಕು ಪುಸ್ತಕಗಳು reference ಗೆ. ವಿಷಯಕ್ಕೆ ಎರಡರಂತೆ ನಾಲ್ಕಕ್ಕೆ ಎಂಟು ಪುಸ್ತಕಗಳು. ಮಿಕ್ಕಿದ್ದು ಲೈಬ್ರರಿಯಲ್ಲಿ ಹುಡುಕಾಡುವುದು. ಪುಸ್ತಕಗಳೋ, ಮುಟ್ಟಿದರೆ ಐನೂರರ ಕಡಿಮೆ ಇರುತ್ತಿರಲಿಲ್ಲ. ಡಿಸ್ಕೌಂಟ್ ಗಾಗಿ ಮಲ್ಲೇಶ್ವರದ ಟಾಟಾ ಬುಕ್ ಹೌಸ್ ಗೆ ಹೋಗುತ್ತಿದ್ದೆಯಾದರೂ, ಸೆಮೆಸ್ಟರ್ ಗೆ ಮೂರು ಸಾವಿರದ ವರೆಗೂ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಣ್ಣ ಮರುಮಾತಿಲ್ಲದೇ ಪುಸ್ತಕ ಅಂದ ತಕ್ಷಣ ಹೇಗೋ ದುಡ್ಡು ಕೊಡುತ್ತಿದ್ದರು. ವಿಪರ್ಯಾಸ ಏನಂದರೆ ಒಂದು ರುಪಾಯಿಯೂ ಮಿಗುತ್ತಿರಲಿಲ್ಲ, ಇಂತಹ ಪುಸ್ತಗಳನ್ನ ಕೊಳ್ಳಲು ! :-(

ಇವತ್ತು ನನ್ನ ಹೆಬ್ಬಯಕೆ ಈಡೇರಿತು. ಎಂಟು ವರ್ಷದ ನನ್ನ ಅವಿರತ ಬೇಟೆಯ ಫಲವಾಗಿ ಇವತ್ತು ಆ ಪುಸ್ತಕ ನನ್ನ ಕಣ್ಣಿಗೆ ಬಿತ್ತು ! ಅದನ್ನ ನೋಡಿದ ತಕ್ಷಣ ತಿಂಗಳುಗಟ್ಟಲೆ ಅನ್ನ ಕಾಣದೇ ಹಸಿದ ಮನುಷ್ಯನೊಬ್ಬನಿಗೆ ಅನ್ನದ ಅಗಳು ಕಂಡರೆ ಅವನು ಅದನ್ನ ಬಾಚಿಕೊಳ್ಳುವ ಹಾಗೆ, ಆ ಪುಸ್ತಕ ರಾಕ್ ನಲ್ಲಿ ಕಂಡದ್ದೇ ಅದನ್ನು ಹಾಗೇ ತೆಗೆದು ಎದೆಗೊತ್ತಿಕೊಂಡೆ ! ತಪಸ್ಸು ಸಾರ್ಥಕವಾದ ಫೀಲಿಂಗು ಒಂಥರಾ ! ನಿಧಿ ಸಿಕ್ಕಿದಷ್ಟು ಸಂತೋಷ ! ೦೮-೦೮-೦೮ ರಂದು ಎಂಟನೇ ಕ್ಲಾಸಿನಿಂದ ಹುಡುಕಿದ ಪುಸ್ತಕ ಸಿಕ್ಕಿತು !

Z : ಆಹಾ !! ಸಂತೋಷ !!

ನಾನು : ಬರೀ ಸಂತೋಷ ಅಲ್ಲ, ಮಹದಾನಂದ ! ಇದಾದ ಮೇಲೆ ನಾನು ಬಹಳ ದಿನಗಳಿಂದ ಖರೀದಿಸಲಿಚ್ಛಿಸಿದ ಮತ್ತೊಂದು ಪುಸ್ತಕ ಪೂರ್ಣಚಂದ್ರ ತೇಜಸ್ವಿಯವರ ಪಾಕಕ್ರಾಂತಿ ಮತ್ತು ಇತರ ಕಥೆಗಳು . ನಮ್ಮ ನಾಡಿನ ನನ್ನ ಮಿತ್ರವರ್ಗದವರು ಇದನ್ನ ತಗೊಂಡು ಓದಿಯಾಗೋಗಿತ್ತು. ನಾನೊಬ್ಬಳೇ ಹಿಂದೆ ಬಿದ್ದಿದ್ದೆ. ಒಂಥರಾ ಅನ್ನಿಸುತ್ತಿತ್ತು . ಕರ್ಮಕಾಂಡ ಪ್ರಭುಗಳು " ಇನ್ನೂ ಓದಿಲ್ವಾ ? ಅದೂ ನೀವು ?" ಅಂತ ಬೇರೆ ಕೇಳಿಬಿಟ್ಟರು. ಶ್ರೀಕಾಂತ್ ಕೂಡಾ ಓದಿಯಾಗಿದೆ ಅನ್ನಿಸುತ್ತದೆ. ಗಂಡಭೇರುಂಡ ಶ್ರೀನಿವಾಸ ರಾಜನ್ " ಯಾವಾಗ್ಲೋ ಓದ್ಬಿಟ್ಟೆ ನಾನು !" ಅಂದಾಗಲಂತೂ ನನಗೆ ಸಿಕ್ಕ್ ಸಿಕ್ಕಾಪಟ್ಟೇ ಬೇಜಾರಾಗೋಯ್ತು ! ಇವತ್ತು ತಗೊಂಡೇ ಬಿಟ್ಟೆ !

Z : ಭೇಷ್ ! ಆಮೇಲೆ ?

ನಾನು : ನಾಗೇಶ್ ಹೆಗಡೆ ಅಂತ ಒಬ್ಬರು ಬರಹಗಾರರಿದ್ದಾರೆ. ಪ್ರಜಾವಾಣಿಯಲ್ಲಿ ಕನ್ನಡದಲ್ಲಿ ವಿಜ್ಞಾನ ಲೇಖನಗಳನ್ನು ಬರೆಯುತ್ತಿದ್ದವರು. ಸರಳ, ಸುಲಲಿತ ಬರವಣಿಗೆಗೆ ಹೆಸರಾದವರು. ಇವರ ಪುಸ್ತಕಗಳನ್ನು ಕೊಂಡು ಓದು ಎಂದು ಪವನಜ ಸರ್ ನನಗೆ ಸಲಹೆ ಕೊಟ್ಟಿದ್ದರು. ಅವರ ಸಲಹೆಯಂತೆ, " ಎಂಥದ್ದೋ ತುಂತುರು " ಮತ್ತು " ಆಚಿನ ಲೋಕದಲ್ಲಿ ಕಾಲಕೋಶ " ಅನ್ನುವ ಎರಡು ಪುಸ್ತಕಗಳನ್ನು ಖರೀದಿಸಿದೆ.

Z : ಸರಿ...ಸಂತೋಷ . ಆಮೇಲೆ ?

ನಾನು : ಮತ್ತೊಬ್ಬ ವಿಜ್ಞಾನ ಬರಹಗಾರರಾದ ಜಿ.ಟಿ. ನಾರಯಣರಾವ್ ಅವರು ನಮ್ಮನ್ನು ಹೋದ ತಿಂಗಳಷ್ಟೇ ಅಗಲಿದರು. ಅವರ ನೆನಪಿಗಾಗಿ " ವೈಜ್ಞಾನಿಕ ಮನೋಧರ್ಮ " ಪುಸ್ತಕವನ್ನೂ ಖರೀದಿಸಿ ಅಂಕಿತ್ತ ಪುಸ್ತಕದಿಂದ ಅತೀ ಸಂತುಷ್ಟಳಾಗಿ ಹೊರನಡೆದೆ. .

Z : :-) :-) :-)

ನಾನು : ಇನ್ನು ಈ ಪುಸ್ತಕಗಳನ್ನು ಓದಲಾರಂಭಿಸುತ್ತೇನೆ...ಇಂದಿನಿಂದಲೇ ! ಇವತ್ತು ದಿನ ಚೆನ್ನಾಗಿದೆ Z ....ಎಂಟುಗಳು ಒಂದೇ ಕಡೆ ಸೇರಿವೆ !

Z : Happy reading !

ನಾನು : thanks !

Tuesday, August 5, 2008

ಗ್ರಹಣ

ನಾನು : ಆಗಸ್ಟ್ ಮೊದಲನೇ ತಾರೀಖು ಖಂಡಗ್ರಾಸ ಸೂರ್ಯಗ್ರಹಣ ಇತ್ತು.

Z : ಗೊತ್ತು.

ನಾನು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾನು ಹುಟ್ಟಿದ ರಾಶಿಗೆ ಸೂರ್ಯಗ್ರಹಣದ ಸಕಲ ಪ್ರಭಾವಗಳೂ ಯದ್ವಾ ತದ್ವಾ ಬೀಳಲಿದ್ದವು. ನಮ್ಮಮ್ಮ ದೇವಸ್ಥಾನಕ್ಕೆ ಹೋಗಿ ನನ್ನ ಹೆಸರಿನಲ್ಲಿ ನವಗ್ರಹಶಾಂತಿ ಹೋಮಕ್ಕೆ ಕೊಟ್ಟು ಬಂದರು.

Z: ಆಗ ತಾವೇನು ಮಾಡುತ್ತಿದ್ದಿರಿ ?

ನಾನು : planetarium ನಲ್ಲಿ ಗ್ರಹಣ ನೋಡುವ ವ್ಯವಸ್ಥೆ ಇದೆಯಾ ಅಂತ ತಿಳಿದುಕೊಳ್ಳಲು website browse ಮಾಡುತ್ತಿದ್ದೆ. ಅಷ್ಟೊತ್ತಿಗೆ ಸರಿಯಾಗಿ ನಮ್ಮಜ್ಜಿಯ ಫೋನ್ ಬಂತು ನಮ್ಮಮನ ಮೊಬೈಲಿಗೆ.

ಅಮ್ಮ:" ....ಹು ಕಣಮ್ಮ...ಲಕ್ಷ್ಮಿ ಗೆ ಗ್ರಹಣ ಹಿಡ್ದಿದೆ.... "

ನಾನು : ಅಮ್ಮ...ಗ್ರಹಣ ಹಿಡ್ದಿರೋದು ನಂಗಲ್ಲ...ಸೂರ್ಯಂಗೆ ! ಇನ್ನು ಹಿಡಿದಿಲ್ಲ...ಐದು ಘಂಟೆಗೆ ಹಿಡಿಯತ್ತೆ, once again, ಸೂರ್ಯಂಗೆ, ನಂಗಲ್ಲ.

Z : ಹೆ ಹೆ ಹೆಹೆ ......ಲಕ್ಷ್ಮೀ ಗೆ ಗ್ರಹಣ ! ಜಬರ್ದಸ್ತ್ dialogue !

ನಾನು :Grrrrrrrrrrrrrr !!!!!!!!!!!!!!!!!!!!!

Z : uhahahahahahah !!!!!!!!!!! Continue.

ನಾನು : ಅಮ್ಮ ಅಜ್ಜಿಗೆ ವರದಿ ಕೊಡ್ದ್ತಿದ್ರು...... "ಈಗ್ ತಾನೆ ಇವ್ರ ಕೈಲಿ ಜ್ಯೋತಿರ್ಭೀಮೇಶ್ವರ ವ್ರತ ಮಾಡ್ಸ್ದೆ. ಹತ್ತು ಘಂಟೆಯಾದ ಮೇಲೆ ಗ್ರಹಣ ಮುಗಿಯುವ ವರೆಗೂ ಏನೂ ತಿನ್ನಬಾರದು ಬೇರೆ. ಇವ್ರಿಬ್ಬ್ರು ಗ್ರಹಣದ ಟೈಮ್ ಗೆ ನೋಡು ಏನ್ ಮಾಡ್ತಿವಿ ಅಂತ ಹೆದರ್ಸ್ತಿದಾರೆ. ನೋಡಮ್ಮ... ಅಕ್ಕ ತಂಗಿ ಇಬ್ರು ಎಗರಿ ಎಗರಿ ಕುಣಿತಿದ್ದಾರೆ planetarium ಗೆ ಹೋಗಿ ಗ್ರಹಣ ನೋಡ್ತಿವಿ ಅಂತ..."
ಅಜ್ಜಿ ಮಾತಾಡಿದ್ದೇನೂ ಗೊತ್ತಾಗ್ಲಿಲ್ಲ. ಅಮ್ಮ ಬರೀ ಹೂಗುಟ್ಟುತ್ತಿದ್ದರು. ಅವರಿಬ್ಬರ secret ಮಾತುಕಥೆ ನನಗೆ ಮತ್ತಷ್ಟು ಕೋಪ ತರಿಸಿತು. ಅಮ್ಮ ಮಾತು ಮುಗಿಸಿದ ಮೇಲೆ ನಾನು ವಾದಕ್ಕಿಳಿಯಲು ಎದ್ದೆ.

Z : tittidiiidiiiiii..tiiiiiiiiiiitittiiidiididiiiiiiiiiii....

ನಾನು : ಏನಿದು ?

Z : bugle. sound effect ಗೆ.

ನಾನು : silent ಆಗಿ ಕಥೆ ಕೇಳಿದ್ರೆ ಸರಿ !

Z : ok ok !

ನಾನು : " ಅಮ್ಮಾ !!!!!!!" ಗುಡುಗಿದೆ.

ಅಮ್ಮ :" silent ಆಗಿ ಸುಮ್ನಿದ್ದ್ರೆ ಸರಿ. ಹೊರ್ಗಡೆ ಎಲ್ಲಾದ್ರು ತಲೆ ಹಾಕ್ತಿನಿ ಅಂತ ಚಕಾರ ಎತ್ತ್ಬೇಕಲ್ಲ.....ಅಷ್ಟೆ ! ಯಾವ್ದ್ ಮೂಢ ನಂಬಿಕೆ, ಯಾವುದು ಅಲ್ಲ ಅಂತ ನಮ್ಗೂ ಗೊತ್ತಿದೆ...ಸುಮ್ನೆ ವಾದ ಮಾಡಕ್ಕ್ ಬರ್ಬೇಡ. ಹೋಗಿ ಕೀಬೋರ್ಡ್ ಕುಟ್ಟ್ಕೋ !"

ನಾನು ಸೈಲೆಂಟಾಗಿ ರೂಮಿಗೆ ವಾಪಸ್ ಬಂದೆ.

Z : ಹ ಹ ಹಹ !!! all gathered energy wasted !!! ಚೆ ಚೆ...ಹುಲಿ ಥರ ಹೋದೋಳು ಇಲಿ ಥರ ವಾಪಸ್ ಬಂದ್ಯಲ್ಲೇ !!

ನಾನು : ಸುಮ್ನೆ ಉರ್ಸ್ಬೇಡ. ನಾನು ವಾಪಸ್ ಬಂದಿದ್ದೇನೋ ನಿಜ. ಆದ್ರೆ ನನ್ನ ತಲೆ ಲಿ ಒಂದು ಭೀಕರವಾದ ಪ್ಲಾನ್ ಹೊಳಿತಿತ್ತು.

Z : ಅದೇ compound ಹಾರಿ escape ಆಗೋದು ! ನೀನೋ...ನಿನ್ನ ಹೋಪ್ಲೆಸಾತೀತ ಐಡಿಯಾಗಳೋ !!

ನಾನು : shut up ! ಅಂಥಾ ಐಡಿಯಾಗಳೆಲ್ಲ fail ಆಗತ್ತೆ ಅಂತ ಗೊತ್ತಿತ್ತು ಕಣೆ ಲೆ ! ಇದೊಂದು ಮಹಾ ಇಡಿಯಾ...ಹಿಂದೆ ಯಾರ್ಗೂ ತೋಚಿರ್ಲಿಲ್ಲ, ಮುಂದಕ್ಕೆ ಯಾರ್ಗೂ ತೋಚಲ್ಲ.

Z: ಏನಮ್ಮ ಅದು ಅರಿಭಯಂಕರವಾದ ಐಡಿಯಾ ?

ನಾನು : ಇದು outline ಮಾತ್ರ. exact idea is top secret. ಗ್ರಹಣ ಸ್ಟಾರ್ಟ್ ಆಗೋ ಟೈಮ್ ಗೆ ಹೇಗಾದ್ರು ಮಾಡಿ ಬಾಗಿಲು ತೆಗಿಯಬೇಕು. ಮನೆಯವರು ಹೊರಗೆ ಹೋದ ಹಾಗೆ ನಾನು ಹಿಂದೆ ಓಡಿ ಹೋಗಿ, for a second, pin hole ನಲ್ಲಿ ಗ್ರಹಣ ನೋಡಿ ಜನ್ಮ ಸಾರ್ಥಕ ಮಾಡಿಕೊಳ್ಳೋದು ಅಂತ full fledged ಆಗಿ sketch ಹಾಕಿದ್ದೆ. ಐಡಿಯಾ ನ execute ಮಾಡಲು ready ನೂ ಆದೆ. ಅಣ್ಣ ಮೀಟಿಂಗ್ ಗೆ ಹೋಗಿದ್ದರು, ಹೊಸಕೋಟೆಗೆ. ಅವರು ಬರುತ್ತಲೇ ಯಾರಿಗೂ ತಿಳೀಯದ ಹಾಗೆ ಕೆಲ್ಸ ಮುಗಿಸ್ಬೇಕು ಅಂತ ಪ್ಲಾನ್ ಮಾಡಿದೆ. ಕರೆಂಟ್ in the pond on the bank ಆಟ ಆಡುತ್ತಿದ್ದ ಕಾರಣ ನಾನು ಕೀಬೋರ್ಡ್ ನ ಕುಟ್ಟಿ ಕಂಪ್ಯೂಟರ್ ನ ಉದ್ಧಾರ ಮಾಡಲಾಗದೇ, ಏನೂ ತೋಚದೇ ಹಾಗೆ ಮಲಗಿದೆ. ಕನಸ್ಸಿನಲ್ಲೇ ನಾನು ಗ್ರಹಣ ನೋಡುತ್ತಿದ್ದೆ. ಆಗ ನನ್ನನ್ನು ಫೋನ್ ಮಾಡಿ ಎಬ್ಬಿಸಿದವರು ಕರ್ಮಕಾಂಡ ಪ್ರಭು ಶ್ರೀಧರ್ .

ಫೋನ್ ಮಾಡಿದ್ದೇ, " ರೀ ಲಕ್ಷ್ಮೀ, ಗ್ರಹಣದ ಟೈಮ್ ನಲ್ಲಿ ಊಟ ತಿಂಡಿ ತಿಂದರೆ ಏನಾದ್ರು ಆಗತ್ತಾ ?" ಅಂದರು. ನಾನು " ಏನೂ ಆಗಲ್ಲ ರೀ...ಮಸ್ತ್ ಮಜಾ ಮಾಡಿ ತಿಂದುಕೊಂಡು ಊಟ ನಾ ! " ಅಂದೆ. ಅದಕ್ಕೆ ಅವರು " ಮತ್ತೆ ತಿನ್ನಬಾರದು ಏನೂ ಅಂತ ಯಾಕ್ ಹೇಳ್ತಾರೆ ಮತ್ತೆ ?" ಅಂದ್ರು . ನಾನಂದೆ " ಅದು ಗ್ರಹಣ ಆಗೋ ಟೈಂ ಮೇಲೆ depend ಆಗತ್ತೆ ಕರ್ಮಕಾಂಡ ಪ್ರಭುಗಳೆ. ಊಟ digest ಆಗೋಕೆ 4 hours ಬೇಕು. ಗ್ರಹಣಕ್ಕೆ 4 hours ಮುಂಚೆ ಗಡತ್ತಾಗಿ ತಿಂದಿದ್ದರೆ, ಮಧ್ಯ ಮಧ್ಯ ನೀರು ಕುಡಿದು ಗ್ರಹಣ ಮುಗಿಯೋ ತನಕ ಕಾಯಬಹುದು. irregular food habits ಇದ್ರೆ normal days ನಲ್ಲೇ ಹೊಟ್ಟೆ ಕೆಡತ್ತೆ. ಸುಮ್ನೆ ಗ್ರಹಣದ ಮೇಲೆ ಗೂಬೆ ಕೂರ್ಸ್ತಾರೆ ಜನ ಅವತ್ತು ತಿಂದು ಹೊಟ್ಟೆ ಕೆಟ್ಟರೆ.ಗ್ರಹಣದ ಟೈಮ್ ನಲ್ಲಿ ಹೊಟ್ಟೆ ಹಸಿವಾದರೆ ಮಾತ್ರ ತಿನ್ನಿ. ನನ್ನಾಣೆ, ಹೊಟ್ಟೆ ಕೆಡಲ್ಲ, ಸುಮ್ ಸುಮ್ನೆ ತಿಂದ್ರೆ ಕೆಡತ್ತೆ, ಅದಕ್ಕೆ ಗ್ರಹಣ ನ ಬೈಬೇಡಿ, ಪಾಪದಂಥದ್ದು ಗ್ರಹಣ " ಅಂದೆ. ಪಾಪಗುಟ್ಟಿದರು ಅವರು.

ಅವರು ನ್ಯಾಷನಲ್ ಕಾಲೇಜು ಬಸವನಗುಡಿಯಲ್ಲಿ ಓದಿದಂಥವರು,ನಾನು ನ್ಯಾಷನಲ್ ಕಾಲೇಜು ಜಯನಗರದ product, ನಮ್ಮಿಬ್ಬರ common link Dr. H. Narasimhaiah. ಅವರು ಗ್ರಹಣದ ಮೂಢನಂಬಿಕಗಳ ಮೇಲೆ ಮಾಡಿದ ಭಾಷಣಗಳನ್ನೆಲ್ಲಾ, ನಾವು ನೋಡಿದ ಡಾಕ್ಯುಮೆಂಟರಿಗಳನ್ನೆಲ್ಲಾ ನೆನಪಿಸಿಕೊಂಡೆವು. ಆಗ ಕರ್ಮಕಾಂಡ ಪ್ರಭುಗಳು " ಅಲ್ಲಾ ರಿ...ಇದನ್ನೆಲ್ಲ ನೋಡಿದ ಮೇಲೆ , ಅದು ಮೂಢನಂಬಿಕೆ ಅಂತ ಗೊತ್ತಿದ್ದರೂನೂ ನಾವು blind ಆಗಿ ಕೆಲವು ಆಚರಣೆಗಳನ್ನ follow ಮಾಡ್ತಿವಲ್ಲ, ನಾವೇಕೆ ಹೀಗೆ ? ಅಂತ ಬ್ಲಾಗ್ ಬರೀರಿ...ಇದು ನನ್ನ ಕೋರಿಕೆ, ಖಂಡಿತಾ ಇಲ್ಲಾ ಅನ್ನಬೇಡಿ, ಪ್ಲೀಸ್ " ಅಂತ ಕೇಳಿಕೊಂಡರು.

Z : ತಾವು ಟೋಟಲಿ ರೈಲ್ ಹತ್ತಿದಿರಿ.

ನಾನು : ಏನಿಲ್ಲ. ಅವರೇನು ರೈಲ್ ಹತ್ತಿಸಲಿಲ್ಲ. ನಿಜವಾಗಲೂ ಕೇಳಿಕೊಂಡರು. ನಾನಂದೆ -
" ಇಲ್ಲ. ಇದನ್ನ ನಾವೇಕೆ ಹೀಗೆ ಲಿ ಹಾಕೊಲ್ಲ. ಕುತೂಹಲಿ ನಲ್ಲಿ ಹಾಕ್ತಿನಿ "

ಅವರು : "ಎಲ್ಲಾದ್ರು ಹಾಕಿ...ಆದ್ರೆ ಬರಿರಿ ಮಾತ್ರ...ಬಿಡ್ಬೇಡಿ. ಓಳ್ಳೇ ವಿಷಯ ನ ತಿಳ್ಸೋ ನಿಮ್ಮಂಥವರು ಬೇಕು ರೀ ಲೋಕಕ್ಕೆ" ಅಂತ ಸಿಕ್ಕಾಪಟ್ಟೆ ದೊಡ್ಡ dialogue ಹೊಡೆದರು. ನಾನು ಆ ಡೈಲಾಗ್ ಭಾರನ ತಡಿಯಕ್ಕಾಗದೇ ಒಪ್ಪಿಕೊಂಡೆ.

Z : ಏನಂತ ಬರೀಬೇಕಿತ್ತಂತೆ ನೀನು ?

ನಾನು : ಅದೇ...ಈ ಗ್ರಹಣದ ಟೈಮ್ ನಲ್ಲಿ ದರ್ಭೆ ಇಡೋದು, pregnant women ನ ಕತ್ತಲೆ ಕೋಣೆ ಲಿ ಕೂಡಿ ಹಾಕೋದು, ಅವರಿರುವ ಕೋಣೆಯ ಬಾಗಿಲ key hole ಗೂ ಬಟ್ಟೆ ತುರ್ಕೋದು, ಗ್ರಹಣ ಆದ್ಮೇಲೆ ದೇವರನ್ನ ತೊಳೆಯೋದು, ಹಳೆ ನೀರೆಲ್ಲ ಚೆಲ್ಲೋದು, ಊಟ ಮಾಡದೇ ಇರೋದು, ಆಮೇಲೆ ಇನ್ನೆಷ್ಟೋ ಆಚರಣೆಗಳು !

Z : ಹೌದಾ ? ಇಷ್ಟೆಲ್ಲಾ ಮಾಡ್ತಾರ ಜನ ? ಯಾಕೆ ?

ನಾನು : ನೋಡು. ಈ problem ನ ಎರಡು ರೀತಿಯಲ್ಲಿ analyze ಮಾಡಬಹುದು. ಒಂದು, ನಮಗೆ ನಿಜವಾಗಲೂ ಕಾಣುವ ಸತ್ಯ, ಇನ್ನೊಂದು ನಮಗೆ ಕಾಣದೇ ಇರುವ ಕೆಲವು ಅಂಶಗಳು.

Z : ನಮಗೆ ಕಾಣದೇ ಇರುವ ಕೆಲವು ಅಂಶಗಳು ಅಂದರೆ ?

ನಾನು : ಇದನ್ನು ಹೇಳಬೇಕೆಂದರೆ ಮೊದಲು ನಮ್ಮ ಕಾಣಿಗೆ ಕಾಣುವ ಕೆಲವು ಅಂಶಗಳ ಬಗ್ಗೆ ತಿಳ್ಕೋಬೇಕು.
ಈಗ ನೋಡು ಗ್ರಹಣ ಆದಾಗ ಏನಾಗತ್ತೆ ? temporary darkness create ಆಗತ್ತೆ. Sudden ಆಗಿ ಕತ್ತಲಾಗಿದುದರ ಪರಿಣಾಮವಾಗಿ ಪ್ರಾಣಿ ಪಕ್ಷಿಗಳು ಒಂದೆರಡು ಸೆಕೆಂಡು ಗಾಬರಿಗೊಳ್ಳಬಹುದು. ಕೀಟಗಳು ರಾತ್ರಿಯಾಯ್ತೆಂದು ಭಾವಿಸಿ ಹೊರಬರಬಹುದು. ನೋಡು, ಆಗಿನ ಕಾಲದಲ್ಲಿ ಬಲ್ಬಾಗಲಿ, ಟ್ಯೂಬ್ ಲೈಟಾಗಲಿ ಇರಲಿಲ್ಲ. ಕತ್ತಲಾದ ಬಳಿಕ ಮೇಣದ ಬತ್ತಿಯನ್ನೋ, ಸೀಮೆಯೆಣ್ಣೆಯ ದೀಪವನ್ನೋ, ಪಂಜನ್ನೋ ಹಚ್ಚುತ್ತಿದ್ದರು. ಇವೆರಡನ್ನೂ ಹಚ್ಚಿಟ್ಟ ತಕ್ಷಣ ರಾತ್ರಿಯೇ ಎಂದು ಭಾವಿಸುವ ಹೆಗ್ಗಣಗಳು ಮತ್ತಿತರ ಪ್ರಾಣಿಗಳು ಅಡುಗೆಮನೆಗೆ ದಾಳಿಯಿಡಬಹುದು. ಅವು ಓಡುವ ರಭಸದಲ್ಲಿ ಹಾಲಿನ ಪಾತ್ರೆಗೆ ಮೊಸರು ಚೆಲ್ಲಬಹುದು, ಅಗ್ಗಿಷ್ಟಿಕೆಗಳು ಅಲ್ಲೋಲ ಕಲ್ಲೋಲವಾಗಬಹುದು. ವಸ್ತು ಕೆಡಬಹುದು. ಇದು ಗ್ರಹಣದ ತೀಕ್ಷ್ಣ ಪ್ರಭಾವವಲ್ಲ, ಆಗಿರಬಹುದಾದ ವಸ್ತು ಸ್ಥಿತಿ.
ದರ್ಭೆಗಳನ್ನು ಏಕೆ ಇಡುತ್ತಿದ್ದರಪ್ಪಾ ಎನ್ನುವುದರ ಬಗ್ಗೆ ಇನ್ನೂ ವೈಜ್ಞಾನಿಕ ಸಂಶೋಧನೆ ಮಾಡಬೇಕಾಗಿದೆಯಾದರೂ, ದರ್ಭೆಯನ್ನು ಉಪಯೋಗಿಸುವುದರ ಹಿಂದಿನ ಉದ್ದೇಶದ ಬಗ್ಗೆ ನನ್ನ ಅನಿಸಿಕೆ ಇಷ್ಟು :
೧. ದರ್ಭೆಯ ರುಚಿ ಕಹಿಯಿರಬಹುದು.
೨. ದರ್ಭೆಗಳನ್ನು ಒಟ್ಟು ಗೂಡೆಹಾಕಿದರೆ ಮೂಡುವ ಕಗ್ಗತ್ತಲು ಆ ಕ್ಷಣಕ್ಕೆ ಅಭೇದ್ಯ ಎಂದು ಪ್ರಾಣಿಗಳಿಗೆ ಅನ್ನಿಸಬಹುದು. ಏಕೆಂದರೆ ಹೊರಗಾಗಲೇ ಕತ್ತಲೆಯಾಗಿರುತ್ತದೆ. ಪ್ರಾಣಿಗಳ ದಿಕ್ಕುತಪ್ಪಿಸಲು ಇದೊಂದು ಮಾರ್ಗ ಹುಡುಕಿರಬಹುದು ಹಿಂದಿನಕಾಲದವರು.
೩. ದರ್ಭೆಗಳನ್ನು ಒತ್ತು ಒತ್ತಾಗಿ ಕೂಡಿಹಾಕಿದರೆ ಅವು ಸುತ್ತುವರಿದ ಗಾಳಿಯ ಶಾಖವನ್ನು ಹೊರಬಿಡದೇ ತಮ್ಮಲ್ಲಿಯೇ ಉಳಿಸಿಕೊಳ್ಳಬಹುದು. they might be insulators. ಆ ಶಾಖವು ಆಹಾರದಲ್ಲಿ ಆಗಬಹುದಾದ ಸಹಜ microbial activity ಯನ್ನು ಕಡಿಮೆ ಮಾಡಬಹುದು. ಇದು ಹೇಗೆ ಸಾಧ್ಯ ಅಂದರೆ microbes are very temperature specific. ಅವು ತಮ್ಮ ಕೆಲಸಗಳನ್ನು ಸರಿಯಾಗಿ ಮಾಡಲು ಹವೆಯ ಉಷ್ಣಾಂಶ ಬಹು ಮುಖ್ಯ. ದರ್ಭೆಗಳಿಗೆ " thermos flasks" ನಂತೆ temperature maintain ಮಾಡುವ ಶಕ್ತಿ ಇರಲಿಕ್ಕೂ ಸಾಧ್ಯ. ನಾನಂದುಕೊಂಡದ್ದು ಸರಿಯೂ ಇರಬಹುದು, ತಪ್ಪೂ ಇರಬಹುದು.

ಇನ್ನು ಗ್ರಹಣದ ಸಮಯದಲ್ಲಿ ಊಟ ತಿನ್ನುವುದರ ಬಗ್ಗೆ ನಾನು ಆಗಲೇ ಹೇಳಿದ್ದೇನೆ. ಹೋದ ತಿಂಗಳು ಜುಲೈ ಹದಿನಾಲ್ಕನೇ ತಾರೀಖು ಬೆಂಗಳೂರು ವಿಜ್ಞಾನ ವೇದಿಕೆಯಲ್ಲಿ ನಡೆದ ವಿಜ್ಞಾನೋತ್ಸವದಲ್ಲಿ ಮಾತನಾಡಿದ ಜವಾಹರ್ಲಾಲ್ ನೆಹ್ರೂ ತಾರಾಲಯದ ಹಿರಿಯ ವೈಜ್ಞಾನಿಕ ಅಧಿಕಾರಿ ಡಾ||ಬಿ.ಎಸ್. ಶೈಲಜಾ ಅವರು "ಗ್ರಹಣವನ್ನು ಏಕೆ ಅಧ್ಯಯನ ಮಾಡಬೇಕು " ಎನ್ನುವುದರ ಬಗ್ಗೆ ಮಾತಾಡುತ್ತಾ ಕೆಲವು ಮುಖ್ಯವಾದ ಅಂಶಗಳನ್ನು , ಪ್ರಯೋಗದ ಫಲಿತಾಂಶಗಳನ್ನು ಬೆಳಕಿಗೆ ತಂದರು.
ಸೂರ್ಯಗ್ರಹಣ ಯಾವಾಗಲೂ ಅಮಾವಾಸ್ಯೆಯಂದು ಆಗುತ್ತದೆ. ಅಮಾವಾಸ್ಯೆ ದಿನ ಹುಚ್ಚರಿಗೆ ಹುಚ್ಚು ಹೆಚ್ಚಾಗುತ್ತದೆಂದು ಎಲ್ಲರೂ ನಂಬಿದ್ದಾರೆ. ಗ್ರಹಣಾ್ದ ದಿನ ಅದು ವೈಪರೀತ್ಯ ಮುಟ್ಟುತ್ತದೆ ಎಂದು ಎಲ್ಲರ ನಂಬಿಕೆ. ನಿಮ್ಹಾನ್ಸ್ ಆಸ್ಪತ್ರೆಯ ವೈದ್ಯೆಯೊಬ್ಬರು ಅಂದು ಯಾವ ರೋಗಿಗೂ ಅಮಾವಾಸ್ಯೆ ಆವತ್ತು ಎಂದು, ಅವತ್ತು ಗ್ರಹಣ ಸಂಭವಿಸುತ್ತದೆ ಎಂದೂ ಕೂಡಾ ತಿಳಿಸದೇ, extra dose of medicines administer ಮಾಡದೇ ಹಾಗೆಯೇ ಸುಮ್ಮನಿದ್ದಾರೆ. ಯಾವ ರೋಗಿಯೂ ಪ್ರತಿಕೂಲವಾಗಿ ವರ್ತಿಸಲಿಲ್ಲ, ಗ್ರಹಣ ಸಂಭವಿಸಿದಾಗಲೂ ! That was a negative result ! ಆದ್ದರಿಂದ, ರೋಗಿಗಳಿಗೆ ಅಮಾವಸ್ಯೆ ಎಂದು ಹೇಳಿದರೆ ಮಾತ್ರ violent ಆಗಿ react ಮಾಡ್ತಾರೆ ಎಂಬುದು ಸಾಬೀತಾಯ್ತು.

Z : ಅರೆ ವಾಹ್ !

ನಾನು : ಹೂ ! ಇನ್ನು ಗರ್ಭಿಣಿಯರ ವಿಷಯ. ಖ್ಯಾತ ವಿಜ್ಞಾನಿ , ಪ್ರಸ್ತುತ ಬೆಂಗಳೂರು ವಿಜ್ಞಾನ ವೇದಿಕೆಯ ಕೋಶಾಧಿಕಾರಿಯಾಗಿರುವ ಡಾ|| ಎಚ್.ಆರ್. ರಾಮಕೃಷ್ಣ ರಾವ್ ಅವರು ನಮಗೆ ಒಮ್ಮೆ ಪಾಠ ಮಾಡುತ್ತಾ ಕುತೂಹಲಕರವಾದ ಒಂದು ವಿಷಯವನ್ನು ಹೇಳಿದರು. ಬಹಳ ವರ್ಷಗಳ ಹಿಂದಿನ ಮಾತಂತೆ ಇದು. ಪೂರ್ಣ ಸೂರ್ಯಗ್ರಹಣ ಯೂರೋಪ್ ಖಂಡದ ನಾರ್ವೇ ದೇಶದಲ್ಲಿ ಸಂಭವಿಸಲಿತ್ತು. ಗ್ರಹಣಗಳ ಅಧ್ಯಯನದಲ್ಲಿ ಆಸಕ್ತರಾದ ಇವರು ನಾರ್ವೇ ದೇಶಕ್ಕೆ ಗ್ರಹಣ ನೋಡಲು ಹೋದರು. ಬೆಟ್ಟವೊಂದರ ಮೇಲೆ ಗ್ರಹಣ ವೀಕ್ಷಿಸಲು ಸಕಲ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಅಲ್ಲಿ ಕಿಕ್ಕಿರಿದಿದ್ದ ನೋಡುಗರಲ್ಲಿ ನವಮಾಸ ತುಂಬಿದ ಗರ್ಭಿಣಿ ಸ್ತ್ರೀಯೂ ಇದ್ದಳು. ಎಹ್.ಆರ್.ಆರ್. ಹೀಗೆ ಯೋಚನೆ ಮಾಡಿದರಂತೆ: ಭಾರತದಲ್ಲಿ ಗ್ರಹಣವನ್ನು ನೋಡಲು ಗರ್ಭಿಣಿಯರಿಗೆ ಬಿಡದಿರುವ ಕಾರಣವೇನೆಂದರೆ ಹುಟ್ಟುವ ಮಕ್ಕಳು ಅಂಗವಿಕಲರಾಗುತ್ತಾರೆ ಎನ್ನುವ ಭಯ. ಭೂಮಿಗೆ ಸೂರ್ಯ ಒಬ್ಬನೇ, ಪ್ರತೀಸಲ ಗ್ರಹಣ ಸಂಭವಿಸಿದಾಗ ಆಗುವ ವಿದ್ಯಮಾನ ಒಂದೇ. ಅದಕ್ಕೆ ದೇಶಕಾಲಗಳ ಹಂಗಿಲ್ಲ. ಆದ್ದರಿಂದ ಈ ಗರ್ಭಿಣಿಯು ಇಲ್ಲಿ ಗ್ರಹಣವನ್ನುವೀಕ್ಷಿಸಿದಳೇ ಆದರೆ ಇವಳ ಮಗುವಿಗೂ ಏನಾದರು ಊನವಾಗಲೇ ಬೇಕು. ಇದನ್ನು ಹೇಗಾದರೂ ಮಾಡಿ ಪತ್ತೆ ಹಚ್ಚಬೇಕೆಂದುಕೊಂಡು, ಆ ಗರ್ಭಿಣಿಯ ಪರಿಚಯ ಮಾಡಿಕೊಂಡು, ಇವರ ಮನೆ ವಿಳಾಸ ಕೊಟ್ಟು, ಮಗು ಹುಟ್ಟಿದ ತಕ್ಷಣ ಫೋಟೋ ಒಂದನ್ನು ತೆಗುದು ಅತೀ ತುರ್ತಾಗಿ ಭಾರತಕ್ಕೆ ಕಳಿಸಬೇಕೆಂದು ಮನವಿ ಮಾಡಿಕೊಂಡರು. ಅವರೂ ಒಪ್ಪಿದರು. ಇವರು ವಾಪಸ್ಸು ಬಂದ ಎರಡೇ ವಾರಕ್ಕೆ ಕಾಗದ ಬಂತು.The child was born with no defects ! It was as fit as a fiddle !

Z : wow !!

ನಾನು : ನೋಡು....ಇವೆಲ್ಲ ಪ್ರಯೋಗ ಮಾಡಿ ತಿಳಿದ ಸತ್ಯಗಳು. ಇನ್ನು ದೇವರನ್ನು ತೊಳೆಯುವುದು ಅವರವರ ಇಷ್ಟ ಕಷ್ಟಗಳಿಗೆ ಬಿಟ್ಟಿದ್ದು. ಟೈಮ್ ಪಾಸಿಗಂತಲೋ ಏನೋ...ಮಾಡಲಿ ಪಾಪ. ದೇವರನ್ನು ತೊಳೆಯದಿದ್ದರೆ ದೇವರು ಖಂಡಿತಾ ಶಾಪ ಕೊಡುವುದಿಲ್ಲ. I can guarantee that. :-)

Z : ಹಂಗಂತೀಯ ?

ನಾನು : ಹೂ...ಇದು ಡೌಟಾತೀತ ಸತ್ಯ !! ಆದರೆ ನೀರನ್ನು ಚೆಲ್ಲುವುದನ್ನು ಕಂಡರೆ ನನಗೆ ತಡಿಯಕ್ಕಾಗ್ದೇ ಇರೋ ಅಷ್ಟು ಕೋಪ ಬರತ್ತೆ ! ಅಲ್ಲಾ...ಇವರು ಮನೆಲಿರೋ ನೀರ್ ಚೆಲ್ಲಿ ಬರೋ ಕಾರ್ಪೋರೇಷನ್ ನೀರ್ ನ ಹಿಡ್ಕೋತಾರೆ...ಗ್ರಹಣ ಕಾರ್ಪೋರೆಷನ್ ನೀರನ್ನ affect ಮಾಡಲ್ವಾ ? ಗ್ರಹಣ ಭೂಮಿಮೇಲೆ ಆಗ್ತಿರ್ಬೇಕಾದ್ರೆ ನದಿಗಳ ಮೇಲೂ ಅದರ ಪ್ರಭಾವ ಬಿದ್ದಿರತ್ತೆ...ಇವ್ರು ನದಿ ನೀರ್ನೆಲ್ಲ ಚೆಲ್ಲಿ ಸಮುದ್ರಕ್ಕೆ ಹಾಕ್ತಾರ ? ಯೋಚನೇ ನೇ ಮಾಡದೇ ಸುಮ್ಮನೆ ಈ ಥರ ಆಚರಣೆಗಳನ್ನೆಲ್ಲ ಮಾಡಿದ್ರೆ ಏನನ್ನೋದು ?

Z : ಹೌದು...ಹೌದು...ಆಚರಣೆಗೆ ಒಂದು ಅರ್ಥ ಬೇಕು. ಹಿಂದಿನ ಕಾಲದವರು ನೀರೂ ಕೂಡ ಈ ಪ್ರಾಣಿಗಳ ಹಾವಳಿಗೆ ತುತ್ತಾಗಿರಬಹುದೆಂದು ಭಾವಿಸಿ ಚೆಲ್ಲುತ್ತಿದ್ದರೇನೋ...ಆಗ ಈಗಿನಷ್ಟು facilities ಇರ್ತಿರ್ಲಿಲ್ಲ...aqua guard, refrigerator ಇತ್ಯಾದಿ. ಈಗ ಅವೆಲ್ಲ ಇದೆ ಅಲ್ವ ? ದರ್ಭೆ, ನೀರು ಚೆಲ್ಲುವಿಕೆಯ ಅವಶ್ಯಕತೆನೇ ಇಲ್ಲ ತಾನೆ ?

ನಾನು : ಹೌದು...ಆದರೆ ಕೆಲವರು ಫ್ರಿಡ್ಜ್ ಮೇಲೂ ದರ್ಭೆ ಇಡ್ತಾರೆ ! :-)

Z : ಹೆ ಹೆ...ಇದಿಷ್ಟೂ ಕಣ್ಣಿಗೆ ಕಾಣುವಂಥವು...ಕಣ್ಣಿಗೆ ಕಾಣದ್ದು ಏನು ?

ನಾನು : ಮನಸ್ಸು...Z ...ಮನಸ್ಸು. ಈ ಮನಸ್ಸು ಒಂದು multi-dimensional entity. It responds very quickly to vibrations. ಗ್ರಹಣದ ಟೈಮ್ ನಲ್ಲಿ ಏನೂ ಆಗಲ್ಲ ಅಂತ ಪಾಸಿಟಿವ್ vibrations ನ induce ಮಾಡಿದ್ರೆ ಏನೂ ಆಗಲ್ಲ...for example, that pregnant woman. ಆಗತ್ತೆ ಅಂದ್ರೆ ಏನ್ ಬೇಕಾದ್ರೂ ಆಗತ್ತೆ. ನಂಬಿಕೆ ಅನ್ನೋದು ಒಂದು vibration-ನ್ನೆ. ಇಂಥದ್ದು ಓದಿ ಏನೂ ಆಗಲ್ಲ ಅಂತ ನಂಬಿಸಿದರೆ ಏನೂ ಆಗಲ್ಲ. ಹಾಗೇ ಗ್ರಹಣ ನೋಡಿ ಏನೂ ಆಗಲ್ಲ ಅಂತ ನಂಬಿದರೆ ನಿಜ್ವಾಗ್ಲೂ ಏನೂ ಆಗಲ್ಲ. ಈ ಮಂತ್ರವಾದಿಗಳೂ, ಅಂಥಿಂಥವರು exploit ಮಾಡೊದು ಇದೇ vibration-ಅನ್ನೇ ! ಇದಾಗತ್ತೆ ಅದಾಗತ್ತೆ ಅಂತ ನೆಗೆಟಿವ್ ವೈಬ್ಸ್ ನ induce ಮಾಡಿ ಹೆದರಿಸುತ್ತಾರೆ. ನಾವ್ ಹೆದ್ರುಕೊಂಡ್ರೆ ದೇಹ ಕೂಡಾ respond ಮಾಡತ್ತೆ. ಗ್ರಹಣಕ್ಕೂ ಇದಕ್ಕೂ ಸಂಬಂಧವೇ ಇಲ್ಲ. ಪಾಪ ಎಲ್ಲಾರು ಗ್ರಹಣದ ಮೇಲೆ ಗೂಬೆ ಕೂರ್ಸ್ತಾರೆ.

Z : oh ! very true. ಮನೇಲಿ ಕಥೆ ಏನಾಯ್ತು ?

ನಾನು : ಹಾ...ಯೆಸ್...ಕಮಿಂಗ್ ಬ್ಯಾಕ್ ಟು ದ ಸ್ಟೋರಿ, ಅಣ್ಣ ಕಾರ್ ನ ಮನೆ ಒಳಗೇ ಪಾರ್ಕ್ ಮಾಡಿಬಿಟ್ಟರು !! so, plan flopped ! ಅಮ್ಮ ಫ್ರಿಡ್ಜ್ ಮೇಲೆ ದರ್ಭೆ ಇಡಲಿಲ್ಲ, ಅಣ್ಣ ಗ್ರಹಣ ಆದ ಮೇಲೆ ದೇವರು ತೊಳೆಯಲಿಲ್ಲ.ನಾನು ಜ್ವರದಿಂದ ಎದ್ದು exactly 86400 seconds ಆಗಿತ್ತು. ಆದ್ದರಿಂದ ನನಗೆ ಒಂದೇ ಚೊಂಬು ತಲೆ ಮೇಲೆ ನೀರು ಹಾಕಿಕೊಳ್ಳಲು ಹೇಳಿದರು. ಇಲ್ಲಾಂದ್ರೆ ಸ್ಪರ್ಶಕ್ಕೊಂದು ನೀರು, ಮೋಕ್ಷಕ್ಕೊಂದು ನೀರು ಹಾಕಿಕೊಂಡಿದ್ದಿದ್ದರೆ ನಾನು ಆಸ್ಪತ್ರೆಯಲ್ಲಿರುತ್ತಿದ್ದೆ. ಅವರು ನನ್ನ ವಿಜ್ಞಾನ ಸಿದ್ಧಾಂತಕ್ಕೆ ಬೆಲೆ ಕೊಟ್ಟರು. ನಾನು ಗ್ರಹಣದ ಕಾಲದಲ್ಲಿ ಮಹಾಮೃತ್ಯುಂಜಯ ಮಂತ್ರ ಜಪ, ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದೆ ಅವರ " vibrations" ಗೆ ಬೆಲೆ ಕೊಡಲು. ಅವರೂ ನನ್ನ ಎಡಬಲದಲ್ಲಿ ಕೂತಿದ್ದರು, ತಮ್ಮ ಮಗಳು ಕ್ಷೇಮವಾಗಿರಲಪ್ಪ ಅಂತ ಕೇಳ್ಕೋತಿದ್ರು ಸದ್ಯೋಜಾತನ್ನ. ಅವರ ಆ strong feeling of possessiveness, care and compassion ನ overlook ಮಾಡೋಕೆ ನನಗೆ ಇಷ್ಟ ಇರಲಿಲ್ಲ. ನಾನು blind ಆದೆ, vibration ಗೆ ! ಆದ್ರೆ ಅವರು ಕೆಲವು ಆಚರಣೆಗಳನ್ನು ಮಾಡದೆ ನನ್ನ ವಿಜ್ಞಾನಕ್ಕೆ ಬೆಲೆ ಕೊಟ್ಟರು." ಜ್ಞಾನಂ ವಿಜ್ಞಾನ ಸಹಿತಂ" ಎಂಬ ಮಾತಿಗೆ ಪೂರಕವಾಗಿ, ನಾವು ಮಾಡಿದ ಪ್ರತಿಯೊಂದು ಆಚರಣೆಗೂ ಒಂದು ಆರ್ಥವಿತ್ತು. vibration part ಅವರದ್ದು...science part ನನ್ನದು !

Z : :-) nice ! ಗ್ರಹಣ ನೋಡಿದ್ಯ ?

ನಾನು : ಏನ್ ನೋಡೋದು ಮಣ್ಣಾಂಗಟ್ಟಿ !ಮಳೆ ! ಆಕಾಶವೇ ಕಿತ್ತೋಗೋ ಮಳೆ ! :-(

Z : there is always a next time !

ನಾನು : ಹೂ ! ಹಂಗಂದುಕೊಂಡು ಕಾಯಬೇಕು....ಕಾಯ್ತಿನಿ !

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...