Tuesday, September 30, 2008

ನಾವು ಏನನ್ನು ಕಳೆದುಕೊಂಡಿದ್ದೇವೆ

ಕರ್ಮಕಾಂಡ ಪ್ರಭುಗಳು ಎರಡು ತಿಂಗಳ ನಂತರ ಬ್ಲಾಗಿಸಲು ಶುರುಮಾಡಿದ್ದಾರೆ. ತಮ್ಮ ತಲೆಯಲ್ಲಿ ಇಷ್ಟು ದಿನ ಕೊರೆಯುತ್ತಿದ್ದ ಹುಳುಗಳನ್ನು ಈಗ ನಮ್ಮ ತಲೆಗೆ ಬಿಡುವ ಮಹಾನ್ ಪುಣ್ಯಕಾರ್ಯ ಮಾಡಿದ್ದಾರೆ.

ಕರ್ಮಕಾಂಡ ಪ್ರಭುಗಳೆ, ನಿಮ್ಮ ಬ್ಲಾಗನ್ನು ನಾನೂ ಓದಿದೆ. ಬೆಂಗಳೂರಿನವರು ಕಥೆಗಳನ್ನು ಏಕೆ ಬರೆಯಲು ಸಾಧ್ಯವಿಲ್ಲ ಎಂಬ ಪ್ರಶ್ನೆ ಸಖತ್ತಾಗಿದೆ. ಇದಕ್ಕೆ ನನ್ನ ಅನಿಸಿಕೆ ಇಷ್ಟು. ನಿಮ್ಮ ಕಮೆಂಟ್ ಬಾಕ್ಸ್ ನಲ್ಲಿ ಏಕೆ ಹಾಕಲಿಲ್ಲ ಅಂತ ಆಮೇಲೆ ಹೇಳುವೆ.

ಹಳ್ಳಿಯವರ ಜೀವನದ ಬಗ್ಗೆ ನಾವು ಅನಭಿಜ್ಞರು. ಬರೀ ಟಿವಿ, ಪುಸ್ತಕದಿಂದ ಮಾತ್ರ ತಿಳಿದುಕೊಳ್ಳಬೇಕಷ್ಟೆ. ನಾವು ಗ್ರಾಮ ವಾಸ್ತವ್ಯ ಹೂಡಿ ಬರೆಯಲು ಸಾಧ್ಯವಾಗತ್ತೆಯಾದರೂ, ಮೂರು ದಿನಗಳಿಗಿಂತಾ ಹೆಚ್ಚಾಗಿ ಅಲ್ಲಿರಲಿಕ್ಕೆ ನಮ್ಮ ಐಷಾರಮಕ್ಕೆ ಒಗ್ಗಿದ ಮೈ ಬಿಡುವುದಿಲ್ಲ. ನೀವು ದೇಹ ದಂಡಿಸಲು ತಯಾರೋ ? ಹಾಗಿದ್ರೆ ಸೂಪರ್.

ಹಳ್ಳಿಯ ಜೀವನದ ತಿರುಳುಗಳನ್ನ ನಾನು ಕಾನೂರು ಹೆಗ್ಗಡತಿ ಪುಸ್ತಕವನ್ನು ಓದುತ್ತಾ ಈಗೀಗ ಸಲ್ಪ ಅರ್ಥ ಮಾಡಿಕೊಳ್ಳುತ್ತಿದ್ದೇನೆ. ನನಗನ್ನಿಸಿದು ಇಷ್ಟು : they live, we survive.



ನಾವು ಬದುಕುತ್ತಿಲ್ಲ, ಬದುಕಲು ಹೋರಾಡುತ್ತಿದ್ದೇವೆ. ಐಸ್ ಥಂಡರ್ ನಲ್ಲಿ ಕಾಫಿ ಕುಡಿಯುತ್ತಿರಬೇಕಾದರೆ ನಿಮಗೆ ಪಾರ್ಕಿಂಗ್ ಲಾಟಲ್ಲಿ ನಿಂತ ನಿಮ್ಮ ಪಲ್ಸರ್ ಬಗ್ಗೆ ಒಂಚೂರು ಭಯವಿಲ್ಲದಿದ್ದರೆ ನೀವು ಪರಮಸುಖಿ ಸಿಟಿಯುವಕ. ಜೆ.ಸಿ.ರೋಡಿನ ಜಂಕ್ಷನ್ನಲ್ಲಿ ನನ್ನ ಬದುಕಿನ ಗತಿಯೇನೆಂದು ನೀವು " ಹಾಗೇ ಸುಮ್ಮನೆ" ಯಾದರೂ ಯೋಚನೆ ಮಾಡಿರುತ್ತೀರಿ . ಪೆಟ್ರೋಲ್ ಬೆಲೆ ಹೆಚ್ಚಾಯ್ತೆಂದು, ಸಂಬಳದಲ್ಲಿ ಇನ್ನು ಉಳಿತಾಯ ಮಾಡುವುದು ಕಡಿಮೆಯಾಗಬಹುದೆಂದು ನೀವು ಒಂದ್ ಸರ್ತಿ ನೂ ಯೋಚ್ನೆ ಮಾಡಿಲ್ಲ ಅಂತ ನನಗೆ ಹೇಳ್ಬೇಡಿ.



ಹಾಗಂತ ಅನ್ಯ ಊರಿನವರು ಬದುಕಲು ಹೋರಾಟ ನಡೆಸುತ್ತಿಲ್ಲ ಅಂತ ಅಲ್ಲ, ಆದರೆ ಅದರ intensity ಬಗ್ಗೆ ನನಗೆ ಗೊತ್ತಿಲ್ಲ. ಅವರಿಗೆ ಏನಾದರಾಗಲಿ, ಪ್ರಕೃತಿ ಮಾತೆ ಜೊತೆಗಿದ್ದಾಳೆ. ಅವರೆಂದೂ ಪ್ರಕೃತಿಗೆ ಅನ್ಯಾಯ ಮಾಡಿಲ್ಲ, ಅದಕ್ಕೆ ನ್ಯೂಟನ್ನಿನ ಮೂರನೆಯ ನಿಯಮವನ್ನು ಪ್ರಕೃತಿಯೂ ಅನುಸರಿಸಿದ್ದಾಳೆ .ಅವಳು ಅಲ್ಲಿ ಶಾಂತ ಸ್ವರೂಪಿ, ಚಿತ್ತಪ್ರಚೋದಕಿ. ಥರಥರದ ಹೊಸ ಕ್ರಿಯಾಶಕ್ತಿ ಪ್ರಚೋದಕ ಸಮಸ್ಯೆಗಳು ಅಲಲ್ಲಿ ಸಿಗುತ್ತವೆ, ಅದನ್ನು ಬಿಡಿಸುತ್ತಾ ಬಿಡಿಸುತ್ತಾ ಅವರ ನೋಟ, ಯೋಚನಾಶಕ್ತಿ, ಎಲ್ಲವೂ ನಮಗಿಂತ ಹೆಚ್ಚು ಚೆನ್ನಾಗಿ ಬೆಳೆಯುತ್ತದೆ ಅಂತ ನನ್ನ ಅನಿಸಿಕೆ. ಇದು ಸರಿಯಿಲ್ಲದಿರಲೂ ಬಹುದು.


ಊಟ ವಸತಿಗಾಗಿ ಹೋರಾಡುವವರನ್ನು ನಾನು ಹಳ್ಳಿಯಲ್ಲಿ ನೋಡಿಲ್ಲ...(ನನ್ನ ಅತ್ಯಲ್ಪ ಪ್ರಯಾಣದ ಅನುಭವಗಳಲ್ಲಿ). ಊಟ ವಸತಿಗಾಗಿ ಇಲ್ಲಿ ನಾವು ಹೋರಾಡುವಾಗ ಕಾವ್ಯಮಯ ಚಿಂತನೆ ಮಾಡಲು ಸಾಧ್ಯವೇ ? ದಿನ ನಿತ್ಯದ ತಾಕಾಟ, ನಮ್ಮ ಅಹಂಕಾರದ ಅಟ್ಟಹಾಸದ ಮಧ್ಯ ನಮ್ಮ ಬದುಕಿನ ಕ್ಷಣಕ್ಷಣವನ್ನು "ಬದುಕು"ವುದು ಶಾಪಿಂಗ್ ಮಾಲಲ್ಲಿ ಚಾಕಲೇಟು ಖರೀದಿಸಿದಷ್ಟು ಸುಲಭವೇ ?

ಅಲ್ಲಿ ನಾನು ಒಳ್ಳೇ ಮನಸ್ಸಿರುವವರನ್ನ ಹೆಚ್ಚು ನೋಡಿದ್ದೇನೆ. ಉದಾತ್ತಚಿತ್ತರನ್ನ ನೋಡಿದ್ದೀನಿ. ಅರಿಷಡ್ವರ್ಗಗಳು ಪ್ರತಿ ಮಾನವನಲ್ಲಿ ಇರುತ್ತದೆಯಾದರೂ, ಅದು ಹೆಚ್ಚು expressive ಆಗದಂತೆ ಅಲ್ಲಿನ ಪ್ರಕೃತಿ ನೋಡಿಕೊಂಡಿದೆ. ಮತ್ತು, ಹಳ್ಳಿಯವರ ಸಂಸ್ಕೃತಿಯಲ್ಲಿ ಸಹಿಷ್ಣುತೆ by default, ಇದೆ. ಇವುಗಳಲ್ಲಿ ಒಂದಾದರೂ ನಿಮಗೆ ಸಿಟಿಯಲ್ಲಿ ಕಾಣಸಿಗುತ್ತದೆಯೆ? ನಾವು ಸಹಿಷ್ಣುಗಳೇ ? ಒಂದು ದಿನವೂ ನಾವು ಗೊಣಗಾಡದೇ ಇದ್ದೇವೆಯೇ ?

ಇನ್ನೊಂದು ಮಹತ್ವಪೂರ್ಣವಾದ ಅಂಶ ಊರಿನಲ್ಲಿರುವವರ ಜೀವನ ಶೈಲಿ. ಈಗೀಗ ಡಿಶ್ಶುಗಳು ಅಲ್ಲಿ ಕಾಲಿಟ್ಟಿದ್ದರೂ, ಜಾನಪದ ಗೀತೆಗಳನ್ನ ಅವರು ಮರೆತಿಲ್ಲ. ಟ್ರಾಕ್ಟರ್ರುಗಳು ಬಂದಿದ್ದರು ಎತ್ತುಗಳು ಅನಾಥವಾಗಿಲ್ಲ. ಹೊಸದನ್ನು ಅವರು ಸ್ವಾಗಿತಿಸಿದ್ದಾರೆ, ಅಳವಡಿಸಿಕೊಂಡಿದ್ದಾರೆ ಹೊರತು ನಮ್ಮಂತೆ ಎಲ್ಲದಕ್ಕೂ ದಾಸರಾಗಿಲ್ಲ. ಅವರ ಸಂಸ್ಕಾರ ನಮ್ಮ ಸಂಸ್ಕಾರದಷ್ಟು ಬಲಹೀನ ಮತ್ತು ಸತ್ವಹೀನವಾಗಿಲ್ಲ.

ನಾವು ಕಥೆ ಬರೆಯಲು ನಮ್ಮ ಜೀವನಶೈಲಿ, ವಾತಾವರಣ ಮತ್ತು ಸಂಸ್ಕಾರ, ಇವು ಮೂರು ಮುಖ್ಯ. ನಮ್ಮ ಬದುಕಿನಲ್ಲಿ ಈಗ ಬಾಳೆಯ ಎಲೆಯ ಸಂಸ್ಕಾರದ ಬದಲು ಬಫೆಟ್ ಕಲ್ಚರ್ ಇದೆ. ಗ್ಲೋವ್ಸ್ ಹಾಕಿ ಸಣ್ಣ ಕೈಮಾಡಿ ಊಟ ಬಡಿಸುವ "sophisticated and hygenic " ಅಡುಗೆಭಟ್ಟರಿದ್ದಾರೆಯೇ ನಲ್ಮೆಯಿಂದ ಇನ್ನೊಂದು ಸ್ವಲ್ಪ ತಿನ್ನು ಎಂದು ಪ್ರೀತಿಯಿಂದ ಬಡಿಸುವ ಬಂಧುಗಳಿಲ್ಲ. ವಿಭಕ್ತ ಕುಟುಂಬಗಳಿಂದಾಗಿ ನಮ್ಮ ಮನಸ್ಸು ವಿಭಾಗಿಸಲ್ಪಟ್ಟಿದೆ. ಪ್ರೀತಿಯ ಬದಲು ನಮ್ಮಲ್ಲಿ ಸ್ವಾರ್ಥ ಮತ್ತು competitive minds ಹೆಚ್ಚಾಗಿದೆ.

ವಾತಾವರಣದಲ್ಲಿ ಶಾಂತಿಯನ್ನು ಕಿತ್ತೊಗೆಯಲು ನಾವು ಟೊಂಕಕಟ್ಟಿ ನಿಂತಿದ್ದೇವೆ. ಮನಶ್ಶಾಂತಿಯ spelling ಅನ್ನು ಮರೆತಿದ್ದೇವೆ. ಮನಸ್ಸಲ್ಲಿ ಶಾಂತಿಯಿಲ್ಲದಿರುವಾಗ, ವಾತಾವರಣ ಅಶುದ್ಧ ಮತ್ತು ಜಿಗುಪ್ಸಾದಾಯಕವಾಗಿರುವಾಗ, ಬದುಕು ದುಸ್ತರವಾಗಿರುವಾಗ ನಾವು ಕಥೆ ಬರೆಯಲು ಸಾಧ್ಯವೇ ?

ಗುರುಗಳು ಡಿವಿಜಿ ಮತ್ತು ಮಾಸ್ತಿಯವರ ಹೆಸರುಗಳನ್ನು ಕಮೆಂಟಿನಲ್ಲಿ ಉಲ್ಲೇಖಿಸಿದ್ದರು. ಗುರುಗಳು ಒಂದನ್ನು ಮರೆತಿದ್ದಾರೆ. ಅವರುಗಳಿದ್ದ ಕಾಲದಲ್ಲಿ ಬೆಂಗಳೂರು " ಉದ್ಯಾನಗಳ ನಗರಿ"ಯಾಗಿದ್ದು, ನವನವೋನ್ಮೇಶಶಾಲಿನಿಯಾಗಿ ಪ್ರಕೃತಿಮಾತೆ ನಳನಳಿಸುತ್ತಿದ್ದಳು. ಈಗ ಬೆಂಗಳೂರು ಬೃಹತ್ತಾಗಿ ಬೆಳೆದು "ಅದ್ವಾನಗಳ ನಗರಿ"ಆಗಿದೆ. ಸ್ಪುರ್ತಿಯ ಸೆಲೆಗಳು ನಾಮಾವಶೇಷವಾಗಿವೆ.

ಅಂಥಾ ಕವಿಪುಂಗವರಿಗೆ ಸ್ಫೂರ್ತಿ ನೀಡಲು ಅವರ ಬಾಲ್ಯ ಚೆನ್ನಾಗಿತ್ತು, ನಮಗಿಂತ ಕೋಟಿ ಪಾಲು ಚೆನ್ನಾಗಿತ್ತು. ಶಾಲೆಯ ಪುಸ್ತಕದ ಭಾರ, ಮಾಥ್ಸ್ ಟೆಸ್ಟಿನ ಭಯ, ಅಪ್ಪನ ಬೆತ್ತ, ಅಮ್ಮನ ವರಾತ, ಆಟದ ಬಯಲುಗಳಿಲ್ಲದ ನಮ್ಮ ಬಡಾವಣೆ ಇವುಗಳ ಮಧ್ಯ ನಮ್ಮ ಬಾಲ್ಯ ನಾಪತ್ತೆಯಾಗಿದೆ. ಕಥೆ ಬರೆಯಲು ಬಾಲ್ಯದ ನೆನಪುಗಳು ಮುಖ್ಯ. ನಮಗೆ ನೆನಪು ಮಾಡಿಕೊಳ್ಳುವಂತಹಾ ನೆನಪುಗಳು ಇವೆಯೇ ? ನನಗಂತೂ ಇಲ್ಲ.

ಚಿಕ್ಕವಯಸ್ಸಿನಲ್ಲಿ ಅವರು ಅವಿಭಕ್ತ ಕುಟುಂಬದಲ್ಲಿದ್ದರು, ಕಥೆ ಹೇಳಲು ಅಜ್ಜಿ ತಾತಂದಿರಿದ್ದರು. ಆಟವಾಡಲು ಅಣ್ಣ ತಮ್ಮ ದಾಯಾದಿಗಳಿದ್ದರು. ನಮಗೀಗ ಯಾರಿದ್ದಾರೆ ಕರ್ಮಕಾಂಡ ಪ್ರಭುಗಳೇ ?

ನಾವಿಲ್ಲಿ ಏನು ಮಾಡುತ್ತಿದ್ದೇವೆ ಗೊತ್ತಾ ಕರ್ಮಕಾಂಡ ಪ್ರಭುಗಳೆ ? ಬುದ್ಧಿವಂತರಾಗಲು ಹೋಗಿ ಹೃದಯಶೂನ್ಯರಾಗುತ್ತಿದ್ದೇವೆ. ನಾವು ಏನನ್ನು ಕಳೆದುಕೊಂಡಿದ್ದೇವೆ ಗೊತ್ತಾ ? ನಮ್ಮನ್ನೇ !!

ಸ್ವಾರ್ಥದಲ್ಲಿ ನಾವು ನಮ್ಮತನ ಮರೆತಿದ್ದೇವೆ. ಮನಸ್ಸನ್ನು ಬೆಳೆಯಲು ಬಿಡದೇ ಮುಠ್ಠಾಳರಾಗಿದ್ದೇವೆ. ನಾವು ಹೃದಯಶೀಲರಾಗದ ಹೊರತು ನಾವು ಉದ್ಧಾರವಾಗುವುದಿಲ್ಲ. ನಾವು ಉದ್ಧಾರವಾಗದೇ ಕಥೆಗಳನ್ನು ಬರೆಯಲು ಸಾಧ್ಯವಿಲ್ಲ.

ಬೇರೆ ಊರುಗಳಿಂದ ಬಂದವರಿಗೆ ನೆನಪಿನ ಸರಕಿದೆ. ಅವರು ಕಥೆ ಬರೀತಾರೆ. ನಾವು ?

ಮತ್ತೆ, ಸುಶ್ರುತರ ಕಮೆಂಟು :

ನಗರದ ಕಥೆಗಲನ್ನು ಜನ ಯಾಕೆ ಸ್ವೀಕರಿಸುವುದಿಲ್ಲ ಅಂತ ಪ್ರತಿಭಾ ನಂದಕುಮಾರ್ ಅವರು ಕೇಳಿದರೆಂದಿದ್ದಾರೆ. ನನಗನ್ನಿಸಿದ್ದು ಇಷ್ಟು :


ಜನಕ್ಕೆ ನಗರದ ಕಷ್ಟಗಳ ನೈಜ ಚಿತ್ರಣಕ್ಕಿಂತ ಕಾಣದ ಹಳ್ಳಿಯ ಕಲ್ಪನೆಯೇ ಹೆಚ್ಚು ಚೇತೋಹಾರಿ. ಕೆಲಕಾಲವಾದರೂ ಕಲ್ಪನಾಛಾಯೆಯಲ್ಲಿ ಮನಸ್ಸು ಶಾಂತವಾಗಿರಬೇಕೆಂದು ಇಚ್ಛೆಪಡುವ ಮಂದಿಯೇ ಜಾಸ್ತಿ ಅಂತ ನನ್ನ ಭಾವನೆ.

ಸಖತಾಗಿ ಕೊರೆದಿದ್ದೇನೆ ಅನ್ನಿಸುತ್ತಿದೆ ಅಲ್ವಾ ? ಅದಕ್ಕೆ ಕಮೆಂಟಿನಲ್ಲಿ ಹಾಕಲಿಲ್ಲ. ನನ್ನ ಕೊರೆತಕ್ಕಂತಲೇ ಇದಿರುವಾಗ ನಾನು ಅಲ್ಲಿ ಯಾಕೆ ಬಂದು ಕೊರೆಯಲಿ ?ಸಖತಾಗಿ ಕೊರೆದಿದ್ದೇನೆ ಅನ್ನಿಸುತ್ತಿದೆ ಅಲ್ವಾ ? ಅದಕ್ಕೆ ಕಮೆಂಟಿನಲ್ಲಿ ಹಾಕಲಿಲ್ಲ. ನನ್ನ ಕೊರೆತಕ್ಕಂತಲೇ ಇದಿರುವಾಗ ನಾನು ಅಲ್ಲಿ ಯಾಕೆ ಬಂದು ಕೊರೆಯಲಿ ?

ಮತ್ತೆ, head ruled ನೆನ್ನೆ "absolutely right" ಅಂತ ಒಂದೆಳೆಯ ಕಮೆಂಟ್ ಕುಟ್ಟಿದ್ದಳು. ಪುಣ್ಯ, ಬ್ಲಾಗರ್ ವರ...ಪಬ್ಲಿಷ್ ಆಗ್ಲಿಲ್ಲ. ಅದಕ್ಕೆ ಇವತ್ತು ನಾನು ಗಲಾಟೆ ಮಾಡಿ, ಅವಳಿಗೂ ಜ್ಞಾನೋದಯ ಮಾಡಿಸಲಿಕ್ಕೆ, ಅವಳನ್ನು ಮಾತಾಡಲು ಬಿಡದೇ, ನಾನು ಮಾತಾಡಿದ್ದೇನೆ. ನಿಮ್ಮ ಅನಿಸಿಕೆಯನ್ನ ಹೇಳಿ ದಯವಿಟ್ಟು.

-------Z

Wednesday, September 24, 2008

ನಿಜವಾದ ಐವತ್ತನೇ ಪೋಸ್ಟ್ !

Z : ಏನ್ ಅರ್ಥ ? ಹಿಂದೆ ಬರ್ದಿದ್ದು ಐವತ್ತನೇದಲ್ವ ?

ನಾನು : ಅಲ್ಲ.

Z : ಮತ್ತೆ....

ನಾನು : ಬ್ಲಾಗರ್ ಗೆ ಕೌಂಟಿಂಗ್ ಬರಲ್ಲ ಅಂತ ನಂಗೆ ಗೊತ್ತಿರ್ಲಿಲ್ಲ. ನಲವತ್ತೊಂಭತ್ತನ್ನ ಐವತ್ತು ಅಂತ ಹೇಳಿ ನನಗೆ ಮೋಸ ಮಾಡಿದೆ...ನಾನು ಯಾವ ಕೋರ್ಟಲ್ಲಿ ಕೇಸ್ ಫೈಲ್ ಮಾಡಲಿ ಅಂತ ಯೋಚ್ನೆ ಮಾಡ್ತಿದಿನಿ.

Z : ಬ್ಲಾಗರ್ ಗೆ ಕೌಂಟಿಂಗ್ ಬರಲ್ವ ?

ನಾನು : unfortunately, yes. Blogger does not know how to count.

Z : ನೀನು ಬ್ಲಾಗರ್ ಅನ್ನು ಬೈಯ್ಯುವ ಮುನ್ನ ನಿನಗೆ ಕೆಲವು ಜ್ಞಾನೋದಯವನ್ನು ಮಾಡಿಸಬೇಕಿದೆ.

ನಾನು : ಸುಮ್ನೆ ತೊಂದ್ರೆ ತಗೋಬೇಡ.

Z : ಇಲ್ಲ, ತೊಂದ್ರೆ ತಗೋತಿನಿ. ಇಲ್ಲಾಂದ್ರೆ, ನೀನು "ಬ್ಲಾಗರ್ ನ ಬೈಯಕ್ಕೆ ನನ್ನ ಹತ್ರ ಶಬ್ದ ಗಳೇ ಇಲ್ಲ, ಅದಕ್ಕೆ characters ನಲ್ಲಿ ಬೈತಿನಿ" ಅಂತ 10 ! (ten factorial ) ways ನಲ್ಲಿ ಬೈತೀಯಾ.

ನಾನು : ಇಷ್ಟ ಪಟ್ಕೊಂಡ್ ತೊಂದ್ರೆ ತಗೋಳೋದ್ರಲ್ಲಿ ನಿಸ್ಸೀಮೆ ! ಸರಿ, ತೊಂದ್ರೆ ತಗೊ.

Z : ನೋಡು, ಬ್ಲಾಗರ್ ನಲ್ಲಿ ಆಟೋ ಸೇವ್ ಆಪ್ಶನ್ ಇದೆ. ಅದು ಡ್ರಾಫ್ಟ್ ಗಳನ್ನ ಆಟೋ ಸೇವ್ ಮಾಡತ್ತೆ. ನೀನು ಪ್ರತೀ ಸಲ ಟೈಪ್ ಮಾಡಿ ಸೇವ್ ಮಾಡಿದ್ದ್ ಮೇಲೆ microsoft word ನಲ್ಲಿ ಒಂದು ಕಾಪಿ ಇಟ್ಟುಕೊಳ್ಳೊ ಅವಶ್ಯಕತೆ ಇಲ್ಲ.

ನಾನು : !!!!!!!

Z : ವೈಟ್...ಇಷ್ಟ್ ಬೇಗ ಗಾಬ್ರಿ ಆಗ್ಬೇಡ. ಇನ್ನೊಂದಿಷ್ಟ್ ಇದೆ. ನೀನು ಖಾಲಿ ಪೋಸ್ಟ್ ನ ಸ್ವಲ್ಪ ಹೊತ್ತು ಹಾಗೆ ಬಿಟ್ಟಿದ್ದರೆ ಅದು ಒಂದು ಹೊಸಾ ಪೋಸ್ಟ್ ಆಗಿ ಸೇವ್ ಆಗತ್ತೆ.

ನಾನು : !!!!!!!!!!!!!!!!!!!!

Z : ಬ್ಲಾಗರ್ ಪೋಸ್ಟ್ ಗಳನ್ನ published, unpublished ಅಂತ categorize ಮಾಡಲ್ಲ. ಡ್ರಾಪ್ಟ್ ಸಮೇತ ಕೌಂಟ್ ಮಾಡಿರತ್ತೆ.

ನಾನು : ಅದೇ ತಪ್ಪು. ಏನ್ ಧಾಡಿ ಅದಕ್ಕೆ ವಿಭಾಗೀಕರ್ಸಕ್ಕೆ ?

Z : ಬ್ಲಾಗರ್ ಪಾಪ ನಿಧಾನಕ್ಕೆ ಬೆಳಿತಿದೆ. ನೀನು growth ನ accelerate ಮಾಡ್ಬೇಡ.

ನಾನು : ಅನ್ಯಾಯ !!!!!!!!!!!!!!!!!!!!!!!!!!!!!!!

Z : ಶ್ !!!!!!!! ಕಿರ್ಚ್ಬೇಡ !! ಒಮ್ಮೊಮ್ಮೆ ಮೊಬೈಲಲ್ಲಿ ನಮಗೆ ನಮಗೆ ಗೊತ್ತಿರೋರಿಂದ್ಲೇ ಪೋನ್ ಬಂದಿರತ್ತೆ...ನಾವ್ ಹಲೋ ಹಲೋ ಅಂತ ಹೊಡ್ಕೋತಿರ್ತಿವಿ...ಅವ್ರಿಗೆ ಕಾಲ್ ಬಟನ್ ಪ್ರೆಸ್ ಆಗಿದೆ ಅಂತ ಗೊತ್ತೇ ಇರಲ್ಲ...ಆಮೇಲೆ ನಾವ್ ಫೋನ್ ಮಾಡಿ ಯಾಕ್ ಏನು ಮಾತಾಡ್ತಿಲ್ಲ ಅಂದ್ರೆ ನಾವ್ ಫೋನ್ ಮಾಡಿದ್ವಾ ಅಂತ ಅವ್ರು ನಮ್ಮನ್ನೇ ಕೇಳಲ್ವಾ....ಹಾಗೆ ಇದು ನು !!!

ನಾನು : ಗ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್.............

Z : ಶಾಂತಿ ಸಹನೆ ಧೈರ್ಯ ತಾಳ್ಮೆ !!!

ನಾನು : ಇವರು ಯಾರೂ ನನಗೆ ಗೊತ್ತಿಲ್ಲ !!!

Z : ಇವ್ರು ಮನುಷ್ಯರಲ್ವೆ ಹೋಪ್ಲೆಸ್ಸ್ ಫೆಲ್ಲೋ...

ನಾನು : ಓಹ್ !! ಅದಕ್ಕೆ ಗೊತ್ತಿಲ್ಲ.

Z : ಅದ್ ಹೋಗ್ಲಿ...ಹಿಂದೆ ತಾವು ಒಂದು ಬ್ಲಾಂಕ್ ಪೋಸ್ಟನ್ನು ಸೇವ್ ಮಾಡಿ ಅದನ್ನ ನೋಡದೇ ಇದ್ದುದರ ಪರಿಣಾಮವಾಗಿ, ನಲವತ್ತೊಂಭತ್ತು published ಪೋಸ್ಟ್ ಗಳು, ಒಂದು unpublished ಪೋಸ್ಟ್ ಸೇರಿ ಐವತ್ತಾಗಿದೆ.
ಜ್ಞಾನೋದಯ ಆಯ್ತ ?

ನಾನು : pling !!! ಆಯ್ತು.

Z : ನಲವತ್ತೊಂಭತ್ತನೇ ಪೋಸ್ಟ್ ನಲ್ಲಿ ಬರೆದಿದ್ದನ್ನ ಇಲ್ಲಿಗೆ carry forward ಮಾಡ್ಕೊಂಬಿಡಿ ಎಲ್ಲಾರು ದಯವಿಟ್ಟು... ಧನ್ಯವಾದಗಳು !!

Tuesday, September 23, 2008

50 !

ನಾನು : ಏರ್ಟೆಲ್, ಸ್ಪೈಸ್, ಹಚ್, ರಿಲೈಯನ್ಸ್, ಟಾಟಾ ಇಂಡಿಕಾಮ್, ಐಡಿಯಾ ಮತ್ತು ವರ್ಜಿನ್ ಮೊಬೈಲ್ ಕಂಪನಿಗಳ ಓನರ್ಸು ಸಾರಾಸಗಟಾಗಿ, ಸಂಪದ್ಭರಿತವಾಗಿ ಹೊಟ್ಟೆ ಉರ್ಕೊಂಡಿದ್ದಾರೆ ಅಂತ ಹೇಳಲು ನಗೆ ಅತೀವ ಸಂತೋಷವಾಗುತ್ತಿದೆ.

Z : ಹೆ ಹೆ ? ಯಾಕೆ ?

ನಾನು : just imagine...ನಮ್ಮ ಮಾತಿನ length ಗೆ ಐವತ್ತು ಕಾಲ್ ಗಳನ್ನ !!! as such crorepatis ಅವ್ರು... ನಾವು ಅವರ ಕನೆಕ್ಷನ್ ನಲ್ಲಿ ಮಾತಾಡಿದ್ದಿದ್ದ್ರೆ ಇನ್ನೂ ಉದ್ಧಾರ ಆಗಿ multi-billionaires ಆಗಿರ್ತಿದ್ರು...ಅವರನ್ನ millionaires ಆಗೇ ಉಳಿಸಿದೀವಲ್ಲ ಅವರ್ಯಾರಿಗೂ business ಕೊಡದೇ...ಅದೇ ದೊಡ್ಡ ಸಾಧನೆ ನಾವ್ ಮಾಡಿರೋದು .

Z : commendable.... ಅಲ್ವ ?

ನಾನು : undoubtedly. ಬ್ಲಾಗರ್ ಬಿಟ್ಟಿಯಾಗಿರೋದ್ರಿಂದ, ಬರಹ ಐ . ಎಮ್. ಈ. ಮತ್ತು ಬರಹ ಡೈರೆಕ್ಟ್ ಇರೋದ್ರಿಂದ, ಗೂಗಲ್ ಡಾಕ್ಯುಮೆಂಟ್ ಆಫ್ಲೈನಲ್ಲೂ ವರ್ಕ್ ಆಗತ್ತೆ ಆದ್ದರಿಂದ, ಮತ್ತು ಬಿ.ಎಸ್.ಎನ್ .ಎಲ್ ಇತ್ತೀಚೆಗೆ ಕಡಿಮೆ ವರಗಳನ್ನ ಕೊಡ್ತಿರೋದ್ರಿಂದ ನಾವು ಈಮಟ್ಟಿಗೆ ಮಾತಾಡಲು ಸಾಧ್ಯವಾಗಿದೆ. ಅವರಿಗೆಲ್ಲ ಒಂದೊಂದ್ ಥ್ಯಾಂಕ್ಸನ್ನು ಈ ಸಂದರ್ಭದಲ್ಲಿ ನಾವು ಹೇಳಲೇ ಬೇಕು.

ಥ್ಯಾಂಕ್ಸ್ ಆಲ್ ಆಫ್ ಯೂ ! ಥ್ಯಾಂಕ್ಸ್ ಫಾರ್ ಆಲ್ ದ ಹೆಲ್ಪ್ !

Z : ಡಿಟ್ಟೊ !

ನಾನು : ಮತ್ತು, ನಮ್ಮ ಮಾತನ್ನು ಕೇಳಿಸಿಕೊಂಡು, ತುಂಬಾ ಜನ ಸಿಕ್ಕಾಪಟ್ಟೆ ನಕ್ಕಿದ್ದಾರಂತೆ...

Z : ಯಾಕಂತೆ ?

ನಾನು : ಗೊತ್ತಿಲ್ಲ...ನಿಜ್ವಾಗ್ಲೂ ಗೊತ್ತಿಲ್ಲ. ಇವ್ರೆಲ್ಲಾ ಯಾಕ್ ನಕ್ಕಿದ್ರು ಅನ್ನೊದರ ಬಗ್ಗೆ ರಿಸರ್ಚ್ ಮಾಡಬೇಕಿದೆ.

Z : ಮಾಡ್ಬೇಕ್ ಮಾಡ್ಬೇಕ್. ನನಗನ್ನಿಸತ್ತೆ, ಅವರಿಗೆ ನಿನ್ನ ಪಾಡನ್ನು ನೋಡಿಯೇ ನಗು ಬಂದಿದೆ ಅಂತ.

ನಾನು : ಸೈಲೆನ್ಸ್ ಐ ಸೇ !

Z : (ನ ಬ್ರೂಯಾತ್ ಸತ್ಯಂ ಅಪ್ರಿಯಂ )...ಹೋಗ್ಲಿ ಬಿಡು. ಮಾತು ಕೇಳಿಸಿಕೊಂಡು ನಕ್ಕಿದವರಿಗೆಲ್ಲ ನಾನು ಥ್ಯಾಂಕ್ಸ್ ಹೇಳ್ತಿನಿ. ಎಲ್ಲಾರ್ಗೂ ಥ್ಯಾಂಕ್ಸು !!

ನಾನು : ನಮ್ಮನಾಡಿನ ಸದಸ್ಯರು, ಪ್ರಣತಿ ಟೀಮ್ ಮೆಂಬರ್ಸು, ಮತ್ತೆ ಮಾತ್ ಕೇಳ್ಸ್ಕೊಂಡು ತಮ್ಮ ಅಮೂಲ್ಯ ಕಮೆಂಟನ್ನು ನಮ್ಮ ಫೋನಿನ ಕಮೆಂಟೆಂಬ ಇನ್ ಬಾಕ್ಸ್ ನಲ್ಲಿ ಹಾಕಿರೋ ಸಮಸ್ತರಿಗೂ ನನ್ನ ಅನಂತಾನಂತ ವಂದನೆಗಳು.

Z : ಸಿಕ್ಕಾಪಟ್ಟೆ ದೊಡ್ಡ್ ಸೆಂಟೆನ್ಸು...ರಿಪೀಟ್ ಮಾಡಕ್ಕಾಗಲ್ಲ,ಅದಕ್ಕೆ---> ಡಿಟೋ !!

ನಾನು : ಇನ್ನೊಂದ್ ಆಶ್ಚರ್ಯಕರ ವಿಷಯ ಏನಪ್ಪಾ ಅಂದರೆ, ಇಲ್ಲೊಬ್ಬರಿಗೆ ನಮ್ಮ ಮಾತು ಕೇಳಿ ಹೊಟ್ಟೆಕಿಚ್ಚಾಗಿದೆಯಂತೆ ! ಯಾಕೆ ಅಂತ seriously ನನಗೆ ಅರ್ಥ ಆಗಿಲ್ಲ ! ಅಲ್ಲ, ಅಂಥಾ ಅಥಿರಥ ಮಹಾರಥರ ಹೆಸರುಗಳ ಮಧ್ಯ ನಮ್ಮ ಹೆಸರು ಇರೋದನ್ನ ನೋಡಿಯೇ ನನ್ನ ಹುಬ್ಬು ಹೈ ಜಂಪ್ ಹೊಡಿತಿದೆ.

Z : ಕರೆಕ್ಟ್ ! ಅಂಥವರ ಲಿಸ್ಟಲ್ಲಿ ನಮ್ಮ ಹೆಸರನ್ನ ಸೇರ್ಸಿರೋದು ಒಂಥರಾ ನಡುಕ ತರಿಸ್ತಿಲ್ವಾ ನಿನಗೆ ?

ನಾನು : sort of . ಅಲ್ಲ, ಹೊಟ್ಟೆ ಕಿಚ್ಚು ಪಟ್ಟುಕೊಂಡಿರೋರನ್ನೂ ಸೇರ್ಸಿ ಆ ಲಿಸ್ಟ್ ನಲ್ಲಿರೋರೆಲ್ಲ ಸಿಕ್ಕ್ ಸಿಕ್ಕಾಪಟ್ಟೆ ದೊಡ್ಡ್ ಮನುಷ್ಯರು. established bloggers-u. ಅತ್ಯದ್ಭುತ ಬರಹಗಾರರು. ಆ ಲಿಸ್ಟ್ನಲ್ಲಿರೋರ ಥರಾ ಎಲ್ಲ ನಾವು ಕಥೆ ಕವನ ಬರಿತಿವಾ ? ಅಥ್ವಾ ಅವರ ಥರ ವಿಧ ವಿಧ angle ಗಳಲ್ಲಿ ವಿಷಯಗಳನ್ನೆಲ್ಲಾ ವಿಮರ್ಶೆ ಎಲ್ಲಾ ಮಾಡ್ತಿವಾ ? ಬರೀ ಹರಟೆ ಕೊಚ್ಚ್ತೀವಿ ! ಅದಕ್ಕೆ ಇವರು ನಮ್ಮ ಮಾತನ್ನ ಆ ಲಿಸ್ಟಿಗೆ ಸೇರ್ಸಿದ್ದು ತೀರಾ ಆಶ್ಚರ್ಯ ತಂದಿದೆ !

Z : i know....I am very very surprised !

ನಾನು : ಯಾವತ್ತಾದರೂ ಅವರು ನನ್ನೆದುರು ಕಾಣಿಸಿಕೊಂಡರೆ, ಈ ವಿಷಯದ ಬಗ್ಗೆ ಪ್ರಸ್ತಾಪ ಮಾಡಿ, ದ್ರೋಣಾಚಾರ್ಯ ಯಾರು, ಏಕಲವ್ಯ ಯಾರು ಅನ್ನೋದನ್ನ ನಿರ್ಧರಿಸಬೇಕಿದೆ. ನಾವು ಹುಲುಮಾನವರು, ಅವರೆಲ್ಲರ ಥರ ಪವಾಡಪುರುಷರಲ್ಲ ಅಂತ emphasize ಮಾಡಬೇಕಿದೆ.

Z : ಹೌದ್ ಹೌದ್ ! ಮಾಡ್ಬೇಕ್ . ನಾನು ಬರ್ತಿನಿ ಆಗ !

ನಾನು : you are most welcome.

Once again, thank you all !

Saturday, September 20, 2008

Definition of ಅಹಿತಕರ ಘಟನೆ

Z : ನೋಡೂ...ಪ್ಲೀಸ್ definitionಗಳನ್ನೆಲ್ಲ ಹೇಳಿ ನನ್ನ ಗೋಳುಹೊಯ್ಕೋಬೇಡ.

ನಾನು : ಇಲ್ಲ...ನಾನು ನಿನಗೆ definition ಹೇಳುತ್ತಿಲ್ಲ, ಕೇಳ್ತಿದಿನಿ, ನಿಂಗೆ ಗೊತ್ತಾ ಅಹಿತಕರ ಘಟನೆ ಅನ್ನೋ ನುಡಿಗಟ್ಟಿನ ಅರ್ಥ ಏನು ಅಂತ ?

Z : ಗೊತ್ತು.

ನಾನು : ಅಪ್ಪಣೆ ಕೊಡಿಸಿ.

Z : ಹಿತ ಅಂದರೆ ಏನು ? ಮನಸ್ಸಿಗೆ ಸಂತೋಷ ಉಂಟು ಮಾಡಿ, ಇಂದ್ರಿಯಗಳನ್ನು ಸಂತೋಷ ಪಡಿಸುವಂಥವು. ಅಹಿತ ಅದರ ವಿರುದ್ಧ ಪದ. ಯಾರ್ಗೂ ಸಂತೋಷ ಆಗದಿರುವ ಘಟನೆಯನ್ನು ಅಹಿತಕರ ಘಟನೆ ಅಂತ ಕರೀತಾರೆ.

ನಾನು : ಹೌದಾ ?

Z : ನಂಗೆ ಹಾಗನ್ನಿಸತ್ತೆ.

ನಾನು : ನಂಗೂ ಹಾಗೇ ತೋಚಿತ್ತು actually.

Z : ಮತ್ತೆ ಏನ್ ತೊಂದ್ರೆ ನಿಂದು ?

ನಾನು : ಮೊನ್ನೆ ಮಂಗಳೂರು ಬಂದ್ ಆಯ್ತಲ್ಲ...

Z : ಹೂ...

ನಾನು : ....ಆಗ ನ್ಯೂಸ್ ನವರು ಕೊಡುತ್ತಿದ್ದ ವರದಿ ನೋಡಿ, ನನಗೆ ಗೊತ್ತಿದ್ದ definition ಮೇಲೆ, for the first time ಅನುಮಾನ ಬಂತು.

Z : ಹೌದಾ ? ಏನಂದ್ರು ?

ನಾನು : ನ್ಯೂಸ್ ರೀಡರ್ ಹೀಗೆ ಹೇಳಿದ್ದು - " ಮತಾಂತರದ ಪ್ರಕರಣದಿಂದ ಎದ್ದ ಗಲಾಟೆಯಿಂದ ಶ್ರೀ ರಾಮ ಸೇನೆಯವರು ಮಂಗಳೂರಿನಲ್ಲಿ ಕರೆ ನೀಡಿದ್ದ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಗಳೂರು ಸಂಪೂರ್ಣ ಶಾಂತವಾಗಿದ್ದು, ಜನಜೀವನ ವಾಹನ ಸಂಚಾರವಿಲ್ಲದೇ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅಲ್ಲಲ್ಲಿ ಕಲ್ಲುತೂರಾಟ ಮತ್ತು ಒಬ್ಬರ ಮೇಲೆ ಮಾರಕಾಸ್ತ್ರದಿಂದ ಹಲ್ಲೆಯಾಗಿದೆ. ಯಾವ ಅಹಿತಕರ ಘಟನೆಯೂ ಸಂಭವಿಸಿಲ್ಲ "

ಇದರ ಅರ್ಥ ಏನು ?

Z : ಅಂದ್ರೆ...ಇವೆರಡೂ ಅಹಿತಕರ ಘಟನೆ ನೆ...ಆದ್ರೆ intensely ಅಹಿತಕರ ಘಟನೆ ಅಲ್ಲ.

ನಾನು : what ? ಅಹಿತಕರ ಘಟನೆ ಗೂ intensity ಗೂ ಏನ್ ಸಂಬಂಧ ?

Z : ನೋಡು, ಕಲ್ಲು ತೂರಾಟ ಆಯ್ತು...ಇದರಿಂದ ಅಂಗಡಿಯ ಮಾಲೀಕ ಸಾಯಲ್ಲ, ಬರೀ ಹಾರ್ಟ್ ಅಟಾಕ್ ಆಗತ್ತೆ. ಆದ್ದರಿಂದ ಅದು ಕಡಿಮೆ ಆಘಾತ ಮತ್ತು less intense ಅಹಿತಕರ ಘಟನೆ. ಆಮೇಲೆ ಮಾರಕಾಸ್ತ್ರದಿಂದ ಬರೀ ಇರಿದರು, ಕೊಚ್ಚಲಿಲ್ಲವಲ್ಲ ! ಆ ಘಟನೆಯಲ್ಲೂ ಏನೂ ದಮ್ಮಿಲ್ಲ.

ನಾನು : ಆಹಾ ! ಪಾಪ...ಕಲ್ಲು ತೂರಾಟದಿಂದ ಅಂಗಡಿಯವನು ಸಾಲ ಸೋಲ ಮಾಡಿ ಮತ್ತೆ ಗಾಜು ಹಾಕಿಸ್ಬೇಕಲ್ಲ...ಅದು ಕಡಿಮೆ ಅಹಿತಕರ ನ ? ಮಾರಕಾಸ್ತ್ರದಿಂದ ಇರಿದರೆ ಅವನು ಪಾಪ ಸಾವು ಬದುಕಿನ ಮಧ್ಯ ಹೋರಾಡುವುದು ಕಡಿಮೆ ಅಹಿತಕರ ನ ?

Z : ಶ್ !!!!!!!!! fundamental questions ಕೇಳ್ಬೇಡ.

ನಾನು : ಯಾಕೆ ಅಂತ ?

Z : ಹಾಗೆ !


ನಾನು : ನೋಡು...ಇವೆಲ್ಲ ಆಗಲ್ಲ. definition ಗೆ specific ಅರ್ಥ ಇರ್ಬೇಕು. ಇಷ್ಟ ಬಂದ ಹಾಗೆ ಪದಗಳನ್ನ ಉಪಯೋಗಿಸಿದರೆ ನಮ್ಮಂಥವರಿಗೆ ಅರ್ಥ ಮಾಡ್ಕೊಳ್ಳೊದು ಕಷ್ಟ. ಮೊದ್ಲೆ...ಕನ್ನಡದಲ್ಲಿ ನನ್ನ ಲೆವೆಲ್ಲು ಅಷ್ಟಕ್ಕಷ್ಟೇ! ಈಗ ಅಹಿತಕರ ಘಟನೆ ನ ಇವರು ಈ ಥರ ಡಿಫೈನ್ ಮಾಡಿದ್ರೆ, ನಾವು ಹೈಸ್ಕೂಲಲ್ಲಿ " ಈ ನುಡಿಗಟ್ಟನ್ನು ವಾಕ್ಯಗಳಲ್ಲಿ ಬಳಸಿ " exercise ಮಾಡ್ತಿದ್ವಲ್ಲಾ...ಅದು ನೆನ್ಪಾಗತ್ತೆ.

Z : ಒಹೋ !

ನಾನು : ಅಹಿತಕರ ಘಟನೆಯನ್ನು ವಾಕ್ಯದಲ್ಲಿ ಬಳಸೋದಾದ್ರೆ " ಜಗತ್ತಿನ ಜಲಪ್ರಳಯವಾಗುತ್ತಿದ್ದು ಎಲ್ಲಾ ಖಂಡಗಳೂ ನೀರಿನಿಂದ ಆವೃತವಾಗಿದೆ. ಪರಿಸ್ಥಿತಿ ಎಲ್ಲ ಖಂಡಗಳಲ್ಲೂ ಶಾಂತವಾಗಿದ್ದು, ಪರಿಸ್ಥಿತಿ ಹತೋಟಿ ಮೀರಿದೆ. ನಮ್ಮ ಖಂಡ ನಿಧಾನಕ್ಕೆ ಮುಳುಗುತ್ತಿದೆ. ಬೇರೆ ಯಾವ ಅಹಿತಕರ ಘಟನೆ ಸಂಭವಿಸಿಲ್ಲ !

Z :ನೋಡು....


ನಾನು : ನೋಡಲ್ಲ. ಯಾವ್ಯಾವ ಘಟನೆ ನ, ಎಂಥೆಂಥಾ ಘಟನೆಗಳನ್ನ ಅಹಿತಕರ ಅಂತ ಕ್ಲಾಸಿಫೈ ಮಾಡ್ತಾರೆ ಅಂತ ನನಗೆ ಗೊತ್ತಗ್ಬೇಕ್.

Z :ಯಾರಾದ್ರೂ ಇವಳಿಗೆ ತಿಳಿಸಿ ಪುಣ್ಯ ಕಟ್ಟಿಕೊಳ್ಳಿ ಪ್ಲೀಸ್ !!

Monday, September 15, 2008

ಪಾನಿ ಪಾನಿ ರೆ !

Z : ಏನ್ ಹಾಡ್ ಹೇಳ್ತಿದ್ಯ ?

ನಾನು : ಅಯ್ಯೋ ಒಂದು ಸಣ್ಣ ತಪ್ಪು ಒಂದು ದೊಡ್ಡ ಹಗರಣಕ್ಕೆ ಕಾರಣ ಆಗಿದೆ .ಅದಕ್ಕೆ ನಂಗೆ ಈ ಹಾಡು ನೆನ್ಪಾಯ್ತು.

Z : ಏನ್ ತಪ್ಪು ಮತ್ತು ಎಂಥಾ ಹಗರಣ ?

ನಾನು : ಶನಿವಾರ ಬೆಳಿಗ್ಗೆ ನಾನು ಗಾಂಧಿ ಬಜಾರ್ ಗೆ ವಾಕಿಂಗ್ ಹೋಗಿ ಬರುವ ಹೊತ್ತಿಗೆ ಮನೆಯಲ್ಲಿ ಸಿಕ್ಕಾಪಟ್ಟೆ ದೊಡ್ಡ ಹಗರಣ ಆಗಿತ್ತು. ಒಂಭತ್ತನೇ ತಾರೀಖು ಬೆಳಿಗ್ಗೆ ವಾಟರ್ ಬಿಲ್ಲಿನವ ಬಂದು ರೀಡಿಂಗ್ ತಗೊಂಡು ಹೋಗಿದಾನೆ. ಹದಿಮೂರನೆಯ ತಾರೀಖು ಶನಿವಾರ ಬಿಲ್ಲು ಹಾಕಿ ಹೋಗಿದ್ದಾನೆ. ಬಿಲ್ಲಿನ ಮೊತ್ತವನ್ನು ನೋಡಿ ಅಮ್ಮನ ಎದೆ ಒಡೆದು ಹೋಗಿದೆ.

Z : ಎಷ್ಟು ಬಂದಿತ್ತು ?

ಎರಡು ಸಾವಿರ ರುಪಾಯಿ .

Z : ಹಾ ? ! ಫೋನ್ ಬಿಲ್ಲೇ ಸಾವಿರ ದಾಟೊಲ್ಲ !!

ನಾನು : exactly.ನೀರಿನ ಬಿಲ್ಲು ಇಷ್ಟು ಬರಲು ಸಾಧ್ಯವೇ ಇಲ್ಲ ಎಂದು ನಮ್ಮಮ್ಮನಿಗೆ ಯೋಚನೆ ಬಂತಾದರೂ, ಹೊಸ ಕೆಲಸದವಳು ಎರ್ರಾಬಿರ್ರಿ ನೀರು ಉಪಯೋಗಿಸುತ್ತಿದ್ದಾಳಾ ? ನೀರಿನ ಟ್ಯಾಂಕ್ ನಲ್ಲಿ ಸೋರಿಕೆ ಉಂಟಾಗಿದಿಯಾ,ಪಂಪಿನ ಆಟೋ ಲೆವೆಲ್ ಕಂಟ್ರೋಲರ್ ಕೈಕೊಟ್ಟಿದ್ಯಾ ಇವೇ ಮುಂತಾದ ಯೋಚನೆಗಳು ಅಮ್ಮನ ತಲೆಯಲ್ಲಿ ಏಕಕಾಲಕ್ಕೆ ಬಂದಿವೆ. ಆದರೂ, ಏನೇ ಆಗಲಿ ಎರಡು ಸಾವಿರ ಬರಲು ಸಾಧ್ಯವೇ ಇಲ್ಲ, ಆ ಬಿಲ್ಲು ಹಾಕುವವರನ್ನು ಹಿಡಿಯಲೇ ಬೇಕೆಂದು ರಸ್ತೆಯಲ್ಲಿರುವ ಎಲ್ಲರ ಮನೆಗೂ ಹೋಗಿ "ವಾಟರ್ ಬಿಲ್ಲಿನವರು ಬಂದರಾ ? " ಅಂತ ಕೇಳಿ ಕೇಳಿ ರಸ್ತೆಯ ಕಡೆಯ ಮನೆಯಲ್ಲಿ ಅವರನ್ನ ಹಿಡಿದು ವಿಚಾರಿಸಿದ್ದಾರೆ.

ಅಮ್ಮ : ಅಲ್ಲಪ್ಪಾ...ಏನ್ ರೀಡಿಂಗೂ ಅಂತ ತಗೊಂಡಿದ್ಯಾ ? ನಾವು ನೀರು ಪೋಲಾಗದಿರಲಿ ಅಂತ ಎಲ್ಲ ಆಟೋಮ್ಯಾಟಿಕ್ ಮಾಡ್ಸ್ಕೊಂಡಿದಿವಿ ಅಣ್ಣಯ್ಯ...ನಮಗೆ ಮಿನಿಮುಮ್ ವಾಟರ್ ಬಿಲ್ಲಷ್ಟೇ ಬರದು...ಕರೆಂಟ್ ಬಿಲ್ಲು ಫೋನ್ ಬಿಲ್ಲುಗಳೇ ಸಾವಿರ ದಾಟೊಲ್ಲ ನಮ್ಮ ಮನೆಯಲ್ಲಿ, ನೀನು ನೀರಿನ ಬಿಲ್ಲನ್ನ ಏನ್ ಸಾವಿರಾರುಗಟ್ಟಲೆ ಹಾಕಿಬಿಟ್ಟರೆ,ನನಗೆ ಗಾಬರಿ ಆಗ್ತಿದೆ. ದಯವಿಟ್ಟು ಕಣ್ಣು ಬಿಟ್ಟು ನೋಡಯ್ಯ...

ಅವರು : ಮೇಡಮ್, ನನಗೂ ಗೊತ್ತು ನಿಮ್ಮ ಮನೆಗೆ ಹೀಗೆ ಬರಲ್ಲ ಅಂತ...ನೀವು ಸಿಕ್ಕಾಪಟ್ಟೆ ಉಪಯೋಗಿಸುತ್ತಿದ್ದೀರಿ ಅಂತ ಅನ್ನಿಸಲ್ಲ...ಮೋಸ್ಟ್ಲಿ ರೀಡಿಂಗ್ ತಪ್ಪಾಗಿರಬೇಕು. ಯಾವ್ದಕ್ಕೂ ಸೋಮವಾರ ಸಂಜೆ ನಾಲ್ಕಕ್ಕೆ ಬನಗಿರಿ ಗೆ ಬಂದುಬಿಡಿ. ಸರಿ ಮಾಡ್ಕೊಡ್ತಾರೆ.

ಅಮ್ಮ : ಅಲ್ಲಯ್ಯಾ...ಬನಗಿರಿಯ ದೇವಸ್ಥಾನ ಗೊತ್ತು, ಅಲ್ಲೆಲ್ಲಿದೆ ನಿಮ್ ಆಫೀಸು ?
ಅವರು : ಮೇಡಮ್ ದೇವಸ್ಥಾನದ ಪಕ್ಕದಲ್ಲೆ...ಯಾರನ್ನ ಕೇಳಿದರೂ ಹೇಳುತ್ತಾರೆ.
ಅಮ್ಮ :ಎಷ್ಟ್ ದಿನ ಅಲೆಸುತ್ತಾರಯ್ಯ ಆ ಆಫೀಸಿಂದ ಈ ಆಫೀಸಿಗೆ ?
ಅವರು : ಮೇಡಮ್ ಈಗ ಎಲ್ಲ ಕಂಪ್ಯೂಟರೈಸ್ಡ್ ! ಅರ್ಧ ಘಂಟೆ ನೂ ಆಗಲ್ಲ. ಗಾಬ್ರಿ ಆಗ್ಬೇಡಿ ಮೇಡಮ್...ಅಲೆಸಲ್ಲ ನಿಮ್ಮನ್ನ.
ಅಮ್ಮ : ನಾನ್ ಬರಲ್ಲ ಕಣಯ್ಯ...ಕೆಲ್ಸಕ್ಕೆ ಹೋಗ್ತಿನಿ. ನನ್ನ ಮಗಳನ್ನ ಕಳಿಸ್ತಿನಿ.
ಅವರು : ಸರಿ ಮೇಡಂ.

ನಾನು : ಇವನು ಹೋದ ಮುನ್ನೂರು ಸೆಕೆಂಡ್ ನಂತರ ನನ್ನ ಆಗಮನವಾಯ್ತು ಗಾಂಧಿ ಬಜಾರ್ ಇಂದ. ಬಂದದ್ದೇ ನಮ್ಮಮ್ಮ ಆದ ಹಗರಣದ ಪ್ರವರ ಊದಿದರು. ಈ ಸಮಸ್ಯೆಯ ಪರಿಹಾರಕ್ಕೆ ಸೋಮವಾರದ ಮಧ್ಯಾಹ್ನದ ನಿದ್ದೆ ತ್ಯಾಗ ಮಾಡಲೇಬೇಕಾಯ್ತು ನಾನು.

Z : ಹ್ಮ್ಮ್ಮ್ಮ್...........

ನಾನು : ಸರಿ ಇವತ್ತು ಮಧ್ಯಾಹ್ನ ನನ್ನ ಪಯಣ ಬನಗಿರಿಯ ಕಡೆ ಹೋಯ್ತು. ನನಗೆ BWSSB ಆಫೀಸಿಗೆ ರಸ್ತೆ ಗೊತ್ತಿರಲಿಲ್ಲ. ಪೆಟ್ಟಿಗೆ ಅಂಗಡಿಯವನ ಬಳಿ ವಿಚಾರಿಸಲು,ಅವರು- "ಮೇಡಮ್, ಈ ಅಪ್ಪನ್ನು ಹತ್ತಿಬಿಡೀ...ಅಲ್ಲೇ ಬಲಕ್ಕೆ ಕಾಣ್ಸತ್ತೆ." ಅಂತ horizontal ಗೆ ಸುಮಾರು 70 degrees ಅಷ್ಟು incline ಆಗಿರುವ ರಸ್ತೆಯನ್ನು ತೋರಿಸಿದ. ನನಗೆ ರಸ್ತೆ ನೋಡಿಯೇ ಗಾಬರಿ ಆಯ್ತು. ಚಾಮುಂಡಿ ಬೆಟ್ಟವನ್ನು ಕಾರಿನ ಬದಲು ಕಾಲಲ್ಲಿ ಹತ್ತಿ ಪ್ರಾಕ್ಟೀಸ್ ಮಾಡ್ಬೇಕಿತ್ತು ಅನ್ನಿಸಿತು. ಇರಲಿ ಏನಾದ್ರು ಆಗಿ ಹೋಗಲಿ, ಹತ್ತೇ ಬಿಡುವ ಅಂತ ಅಪ್ಪ್ ಹತ್ತಿ ಬಲಕ್ಕೆ ನೋಡಿದರೆ....

Z : ರೆ.....

ನಾನು : ಖಾಲಿ ಸೈಟು !

Z : ಹೆ ಹೆ....

ನಾನು : ಆಮೇಲೆ ಒಂದು ಮನೆ ಮುಂದಿರುವ ಸೆಕ್ಯೂರಿಟಿಯವರನ್ನ ಕೇಳಿದೆ. ಅವರು ಬಲಗಡೆ ತಿರುಗಿ ಇನ್ನೊಂದು ಅಪ್ಪ್ ಹತ್ತಿ ಮೇಡಮ್, ಬಲಕ್ಕೆ ಕಾಣಿಸುತ್ತದೆ ಅಂದರು. ಆ ಅಪ್ಪು 60 degrees ! ಶಿವನಾಮ ಜಪವನ್ನು ಎಡೆಬಿಡದೆ ಮಾಡುತ್ತಾ ಅಪ್ಪನ್ನು ಹತ್ತಿ ಕಡೆಗೂ bwssb ಆಫೀಸು ತಲುಪಿದೆ.ಅದು ಬನಗಿರಿಯ ದೇವಸ್ಥಾನದ ಪಕ್ಕದಲ್ಲಿರಲಿಲ್ಲ, ಪಕ್ಕದ ರಸ್ತೆಯಲ್ಲಿತ್ತು. ಸಾವಿವ ಅಂಚಿನಲ್ಲಿರುವ ಶ್ವಾನವೊಂದು ಬಾಲ ಅಲ್ಲಾಡಿಸುತ್ತಾ ನನಗೆ ಸ್ವಾಗತ ಬೇರೆ ಕೋರಿತು.

Z : ಆಮೇಲೆ ?

ನಾನು : ಒಳಗೆ ಹೋದ ತಕ್ಷಣ ಪ್ಯೂನೊಬ್ಬರು, "ಬನ್ನಿ ಮೇಡಮ್, ಕೂತ್ಕೋಳೀ...ಏನ್ ಆಯ್ತು ? " ಅಂತ ಡಾಕ್ತರ್ ಪೇಷೆಂಟ್ ನ ಕೇಳುವ ಹಾಗೆ ಕೇಳಿದರು.

ನಾನು :"ಸರ್, ಅದು ರೀಡಿಂಗ್ ತಪ್ಪಾಗಿ ತಗೊಂಡು ಬಿಲ್ಲು ಸಿಕ್ಕಾಪಟ್ಟೆ ಬಂದಿದೆ. ಕರೆಕ್ಷನ್ ಆಗ್ಬೇಕಿತ್ತು " ಅಂದೆ.
ಅವರು ಬಿಲ್ಲನ್ನು ನೋಡಿ..."ಏನ್ ಮೇಡಮ್ ಇದು, ಆಮೇಲೆ ತಗೊಂಡಿರೋ ರೀಡಿಂಗ್ ಗೂ ಮೊದ್ಲೆ ತಗೊಂಡಿರೋ ರೀಡಿಂಗ್ ಗೂ ಸಂಬಂಧನೇ ಇಲ್ವಲ್ಲ ? "

ನಾನು : "ಸಂಬಂಧ ಹುಡ್ಕಕ್ಕೇ ಬಂದಿರೋದು ಸರ್ ನಾನಿಲ್ಲಿ."

ಅಷ್ಟರಲ್ಲಿ ಮತ್ತೊಬ್ಬರು ಬಂದರು, ಅವರು ಬಿಲ್ಲನ್ನು ಪರೀಕ್ಷಿಸಿ ಹೀಗೇ ಅಂದರು. ಆಮೇಲೆ ಅದು ಮಗದೊಬ್ಬರ ಕೈ ಸೇರಿತು. ಹೀಗೆ ಒಂದೈದು ನಿಮಿಷ ಎಲ್ಲರು ಪಾಸಿಂಗ್ ದ ಪಾರ್ಸಲ್ ಆಟದ ವಿಸ್ತೃತ ಭಾಗವಾದ ಪಾಸಿಂಗ್ ದ ವಾಟರ್ ಬಿಲ್ಲ್ ಆಟ ಆಡಿದರು. ಕಡೆಗೆ ಅದು ಮುಖ್ಯ ಇನ್ಸ್ಪೆಕ್ಟರ್ ಕೈ ಸೇರಿತು. ಅವರು " ಮೇಲೆ ಹೋಗಿ ಮಾ...ನಿಮ್ ಏರಿಯಾ ಇನ್ಸ್ಪೆಕ್ಟರ್ ಮೇಲಿದಾರೆ " ಅಂದರು.

ನಾನು ಮೆಟ್ಟಿಲು ಹುಡುಕುತ್ತಿದ್ದೆ. ಆ ಪ್ಯೂನು, "ಮೇಡಂ, ಮೆಟ್ಟಿಲು ಹೊರಗಿದೆ " ಅಂತ ಹೇಳಿಕಳಿಸಿದರು.

ಮೆಟ್ಟಿಲು ಹತ್ತಿ ಆಫೀಸಿನ ಒಳಗೆ ಹೋಗಿ ನಮ್ಮ ಏರಿಯಾ ಇನ್ಸ್ಪೆಕ್ಟರ್ ಇದಾರ ಅಂತ ಕೇಳಿದರೆ ಅವರು " ಈಗ್ ತಾನೆ ನಿಮ್ ಕಣ್ಣ್ ಮುಂದೆ ನೇ ಹೊರಗೆ ಹೋದ್ರಲ್ಲಮ್ಮ...ಕೆಳ್ಗಡೆ ಇರ್ತಾರೆ ನೊಡಿ ! " ಅಂದರು.

ನಾನು : "ಮೇಡಮ್, ಅಲ್ಲಿಲ್ಲ ಅವ್ರು ಅಂತಾನೇ ನನ್ನನ್ನ ಮೇಲೆ ಕಳಿಸಿದರು "

ಅವರು : "ಸರಿ, ಹೊರಗೆ ಹೋಗಿ ನೋಡಿ, ಅಲ್ಲಿ ಇನ್ನೊಂದು ಆಫೀಸಿದೆ. ಅಲ್ಲಿರ್ಬಹುದು"

ನಾನು ಇನ್ನೊಂದು ಆಫೀಸಿನಲ್ಲಿ ವಿಚಾರಿಸಲು " ಇಲ್ಲಿಲ್ಲ " ಅನ್ನುವ ಉತ್ತರ ಬಂತು. ನಾನಿನ್ನು ಹೊರಗೆ ಬಲಗಾಲನ್ನು ಇಟ್ಟಿದ್ದೆ ಅಷ್ಟೆ , "ನಾನಿಲ್ಲೇ ಇದಿನಿ, ಇಲ್ಲ ಅಂತೀರಲ್ರಿ ? " ಎಂಬ ದನಿಯು ಕೇಳಿಸಿತು. ಪ್ರಿಂಟರ್ ಹಿಂದೆ ಮಹಾಶಯರು ಬ್ಯುಸಿಯಾಗಿದ್ದರು. ಎನೋ ಕಾರಣಕ್ಕೆ ಟೇಬಲ್ ಕೆಳಗಿದ್ದವರು ಆಗ ಮೇಲಕ್ಕೆ ತಲೆ ಎತ್ತಿದರು.

ನಾನು : ಸರ್ ಅದು ರಿಡಿಂಗ್ ತಪ್ಪಾಗಿ....

ನೀವು ಗಾಬರಿಯಾಗಿ ನನ್ನನ್ನು ಹುಡುಕಿಕೊಂಡು ಬಂದು ಸಿಕ್ಕಾಪಟ್ಟೆ ವಿಚಾರಿಸಿದರಲ್ಲ, ಅವರ ಮಗಳಾ ?

ನಾನು ನಮ್ಮಮ್ಮನ ಸಾಹಸವನ್ನು ಒಳಗೇ ಮುಕ್ತಕಂಠದಿಂದ ಶ್ಲಾಘಿಸಿ, ಹೌದು ಸಾರ್ ಅಂದೆ.

ಬನ್ನಿ ಬನ್ನಿ ಅಂತ ನನಗೆ ಹೇಳಿ ಆಫೀಸಿನ ಒಳಗೆ ಮಿಂಚಿನಂತೆ ಮಾಯವಾದರು !

Z : ಹೆಹೆಹೆಹೆ....

ನಾನು : ನಗ್ಬೇಡಾ ! ಅವರು ಇನ್ನರ್ಧ ಘಂಟೆ ಬರಲ್ಲ ಅಂದುಕೊಂಡು ನಾನು ಬೆಂಚಿನ ಮೇಲೆ ಕುಳಿತು ನಿದ್ದೆ ಮಾಡುವ ಪ್ಲಾನ್ ಹಾಕಿದ್ದೆ.

Z : ವರ್ಕ್ ಔಟ್ ಆಯ್ತ ?

ನಾನು : ಇಲ್ಲ...ಮೂರೇ ನಿಮಿಷಕ್ಕೆ ಮಹಾಶಯರು ಪುಸ್ತಕ ಸಮೇತ ಪ್ರತ್ಯಕ್ಷ ! ನಾನು ಕಣ್ಣು ಮುಚ್ಹಕ್ಕೇ ಆಗ್ಲಿಲ್ಲ !

Z : ಅಯ್ಯೋ ಪಾಪ ! ಆಮೇಲೆ ?

ನಾನು : ಅವರು ಬಂದದ್ದೇ, " ನೋಡಿ ಮೇಡಂ ಡಬ್ ಡಬಲ್ ಕೆಲ್ಸ ಮಾಡ್ಸ್ತಾರೆ, ನಾನು 1018000 ಅಂತ ಬರ್ದಿದ್ರೆ ಇವ್ರು 1081000 ಅಂತ ಟೈಪ್ ಮಾಡೋದೆ ? ನೋಡ್ಬಿಡಿ ನೀವೂ ಒಮ್ಮೆ" ಅಂತ ಲೆಡ್ಜರ್ ತೋರಿಸಿದರು.

Z : ನೀನು " ನೋಡಿ ನಮ್ಗೂ ಸಿಮ್ ಸಿಂಪ್ಲಿ ಬರೋ ಹಾಗಾಯ್ತು. ಸೀರ್ ಸೀರಿಯಸ್ಸಾಗಿ ಖಂಡಿಸ್ತಿನಿ ಇದನ್ನ " ಅಂತ ಅಂದೆಯ ?

ನಾನು : ಇಲ್ಲ, ಸುಮ್ಮನೆ ನೋಡಿದೆ.

Z : ಛೆ ! ಅನ್ಯಾಯ...ಈ ಡೈಲಾಗ್ ಹೇಳ್ಬೇಕಿತ್ತು ನೀನು !

ನಾನು : ತೋಚಲಿಲ್ಲ.

Z : ಸರಿ ಬಿಡು. ಆಮೇಲೆ ?

ಅವರು " ಒಳಗೆ ಬನ್ನಿ ಮೇಡಮ್, ಬೇರೆ ಬಿಲ್ಲನ್ನು ಹಾಕ್ಸಿ ಕೊಡ್ತಿನಿ " ಅಂತ ಇನ್ನೊಂದು ಆಫೀಸಿಗೆ ಕರೆದುಕೊಂಡು ಹೋದರು. ಅಲ್ಲಿ ಒಬ್ಬರು ಆಂಟಿ, " ಏನಪ್ಪಾ ? " ಅಂತ ವಿಚಾರಿಸಲು ಇವರು ನನ್ನ ಸಮಸ್ಯೆ ಮತ್ತು ನಮ್ಮಮ್ಮನೊಂದಿಗೆ ಆಡಿದ ಮಾತುಕಥೆಯನ್ನೆಲ್ಲ ಚಾಚೂ ತಪ್ಪದೆ ವಿವರಿಸಿದರು. ಅದಕ್ಕೆ ಆ ಆಂಟಿ, " ನನಗೂ ಅನುಮಾನ ಬಂತು ಬಿಲ್ಲನ್ನು ಸ್ಕ್ರೂಟಿನಿ ಮಾಡ್ಬೇಕಾದ್ರೆ, ಖರ್ಚು ಆಗಿದ್ರೂ ಇರ್ಬಹುದೇನೋ ಅಂತ ಹಾಗೇ ಬಿಟ್ಟೆ. ನೋಡಪ್ಪ, ಈ ತಿಂಗಳಲ್ಲಿ ಇದು ಮೂರನೆಯ ಕೇಸು. ಶುಕ್ರವಾರ ಇಬ್ಬರು ಬಂದು ಗಲಾಟೆ ಮಾಡಿದರು. ಇವತ್ತು ಇವರು ಬಂದಿದ್ದಾರೆ. ಡಾಟಾ ಎಂಟ್ರಿ ಮಾಡುವವರಿಗೆ ಹೇಳ್ಬೇಕಪ್ಪ ! ನನಗೆ ಡಬ್ ಡಬಲ್ ಕೆಲ್ಸ ! ಛೆ !" ಅನ್ನುತ್ತಲೇ ಬೇರೆ ಬಿಲ್ಲನ್ನು ಪ್ರಿಂಟ್ ಮಾಡಿ ಕೊಟ್ಟರು. ನಮಗೆ ತಿಂಗಳು ತಿಂಗಳು ಬಿಲ್ಲು ಬರುವಷ್ಟೆ ಈ ತಿಂಗಳೂ ಬಂದಿತ್ತು !

Z : ಸದ್ಯ !

ನಾನು : ಹು. ಆಮೇಲೆ ನಾನು ಅಲ್ಲಿಂದ ಹೊರಬಿದ್ದೆ.

Z : ಹೆ ಹೆಹೆಹೆಹ್ !

ನಾನು : ನನಗೆ ಮಾಚಿಸ್ ಚಿತ್ರದ ಹಾಡು ನೆನ್ಪಾಯ್ತು... " ಪಾನೀ ಪಾನಿ ರೆ, ಖಾರೆ ಪಾನಿ ರೆ, ...."

I think these mistakes are of immense value on marks cards :-) 81 instead of 18 can do wonders !!!

Sunday, September 7, 2008

ಅಥ ಉದ್ಯಾನೋಪಾಖ್ಯಾನಃ

ನಮಸ್ತೇಸ್ತು ಮಹಾಮಾಯೇ....ಲಕ್ಷ್ಮೀ ಏಳು...ಶ್ರೀಪೀಠೆ ಸುರಪೂಜಿತೆ....ಶಂಖ ಚಕ್ರಗದಾ ಹಸ್ತೇ...ಎದ್ದೇಳ್ತ್ಯೋ ಇಲ್ವೋ... ಮಹಾಲಕ್ಷ್ಮೀ ನಮೋಸ್ತುತೆ...ನಮಸ್ತೆ ಗರುಡಾರೂಢೆ ಕೋಲಾಸುರ...ಲಕ್ಷ್ಮೀ.....ಭಯಂಕರೀ...ಸರ್ವದುಃಖಹರೇ...ಏಳೇ......ದೇವೀ ಮಹಾಲಕ್ಷ್ಮೀ ನಮೋಸ್ತುತೆ...ಸರ್ವಜ್ಞೇ ಸರ್ವವರದೇ...ಎದ್ದೇಳೇ ಘಂಟೆ ಏಳೂಕಾಲು...ಸರ್ವದುಷ್ಟ...ಎದ್ದೇಳ್ತ್ಯೋ ಇಲ್ಲವೋ ಹೋಪ್ಲೆಸ್ಸ್ ಫೆಲ್ಲೋ...ಭಯಂಕರಿ....

Z : ಅಮ್ಮ ನಿನ್ನನ್ನ ಹೀಗೆ ಎಬ್ಬಿಸೋದಲ್ವ ದಿನಾ?

ನಾನು: ಯೆಸ್. ಇದೇ ನನ್ನ ಸುಪ್ರಭಾತ. high pitchನಲ್ಲಿ ಅಮ್ಮ ಹೀಗೆ ಸ್ತೋತ್ರ ಹೇಳ್ಕೋತಾ ನನ್ನನ್ನ ಬೈದು ಎಬ್ಬಿಸದಿದ್ದರೆ ನನಗೆ ಅದೇನೋ ಬೆಳಿಗ್ಗೆ ಅಂತ ಅನ್ನಿಸೋದೇ ಇಲ್ಲ.

Z : ನಿನ್ನದೂನೂ ಅತಿ ಅಂತ ಇಟ್ಕೋ. ನಾನ್ ಆರುವರೆಗೆ ಎದ್ದಿರ್ತಿನಿ. ನೀನ್ ಕಣ್ಮುಚ್ಕೊಂಡ್ ಅದ್ ಏನ್ ಯೋಚ್ನೆ ಮಾಡ್ತಿರ್ತ್ಯ ?

ನಾನು : ನಾನು ಮಲ್ಗಿದ್ರೆ ಲೋಕಕ್ಕೆ ಜಾಸ್ತಿ ಉಪಯೋಗನಾ...ಎದ್ದ್ರೆ ಲೋಕಕ್ಕೆ ಜಾಸ್ತಿ ಉಪ್ಯೋಗಾನಾ ಅಂತ !

Z :ಆಹಾ !

ನಾನು : ಹು.. see, instead of constructively destroying the world by getting up, working, studying etc., I can as well sleep ! ಅಲ್ವಾ ?

Z : ಥುಥ್ ! ಅಲಾರಂ ಇಟ್ಟು ನನ್ನನ್ನ ಎಬ್ಬಿಸಿ ನೀನು ಮಲ್ಗೋದನ್ನ ಏನಂತ ಕರೀತಾರೋ !!

ನಾನು : ಸಕ್ಕರೆ ನಿದ್ದೆ ಅಂತ ! ನಿನಗೆ ಅಲಾರಮ್ ಹೊಡಿಯೋದು ಕೇಳ್ಸತ್ತ ? ಸಂತೋಷ. ನನಗೆ ಕೇಳ್ಸಲ್ಲ. ನೀನು ಕೇಳ್ಸ್ಕೊ. ಆ ಮ್ಯೂಸಿಕ್ ನ ಎಂಜಾಯ್ ಮಾಡ್ತಾ ಮಜಾ ಮಾಡು. ನೀನ್ ಏಳ್ತ್ಯ...ಅಲಾರಮ್ ನ ಆಫ್ ಮಾಡ್ತ್ಯ...ಹರಿಹರ ಬ್ರಹ್ಮಾದಿಗಳನ್ನೆಲ್ಲಾ ನೆನ್ಸ್ಕೋತ್ಯಾ....ಗುಡ್...ಕೀಪ್ ಇಟ್ ಅಪ್. ಊಟ, ತಿಂಡಿ, ಪುಸ್ತಕ, ನಾಟಕ , ಕಾಫಿ ಬಿಟ್ಟು ನನಗೆ ಇನ್ನೇನಾದರೂ ಸಖತ್ ಇಷ್ಟ ಅಂದ್ರೆ ಅದು ನಿದ್ದೆ ನೆ. ನಾನು ಅರೆ ನಿದ್ದೆಲಿ ಮಾಡಿದ calculation, analysis and thinking perfect ಆಗಿರತ್ತೆ. ಈದಿನ ನಾನು ಎಷ್ಟೊತ್ತು ಮಲಗಬೇಕು ಅನ್ನೋದೆ ನನ್ನ ಪ್ರೈಮರಿ ಯೋಚ್ನೆ ಆಗಿರತ್ತೆ ಯಾವಾಗ್ಲು....

Z : ಶಿವ ಶಂಕರ ಸದ್ಯೋಜಾತ !

ನಾನು :ಸುಮ್ನೆ ಅವರನ್ನೆಲ್ಲಾ ಕರ್ದು disturb ಮಾಡ್ಬೇಡ. ಅವ್ರೂ ನಿದ್ದೆ ಮಾಡ್ತಿರ್ತಾರೆ.

Z : ರಾಮ ರಾಮ !

ನಾನು : ಹೇ...ಯಾರನ್ನ ಕರೆದರೂ ಪಾಪ ರಾಮನ್ನ ಮಾತ್ರ ಕರಿಬೇಡ. he is too busy ಪಾಪ.

Z : ಯಾಕೆ ?

ನಾನು : ಅವನು ಹುಟ್ಟಿದ ಅಯೋಧ್ಯೆಯಲ್ಲಿ ಗಲಾಟೆ. ಅವನು ಕಟ್ಟಿಸಿದ ರಾಮಸೇತುವೆಯಲ್ಲಿ ಗಲಾಟೆ. ಅವನೇ ಚಿಂತೆಯಲ್ಲಿ ಮುಳ್ಗೋಗಿದಾನಂತೆ...ನಾವ್ಯಾಕ್ ನಮ್ ಗೋಳನ್ನ ಹೇಳಿಕೊಂಡು ಅವನನ್ನ further ಚಿಂತಾಕ್ರಾಂತಗೊಳಿಸಬೇಕು ? dont trouble him.

Z : ok.

ನಾನು : ಅಮ್ಮನ ಸ್ತೋತ್ರಪೂರಿತ ಬೈಗುಳಯುಕ್ತ ಸುಪ್ರಭಾತ ಕೇಳಿ ನಾನು ಎದ್ದು ಫ್ರೆಶ್ಶಾಗಿ ಮೇಲಿಂದ ಧರೆಗಿಳಿದ ಮೇಲೆ ನನಗೆ ಕ್ಷೀರದ ನೈವೇದ್ಯವಾಗುತ್ತದೆ. ಅದಾದ ಮೇಲೆ ನನ್ನನ್ನು ವಾಕಿಂಗ್ ಗೆ ಹೊರಡಿಸಲಾಗುತ್ತದೆ.

Z : ಯಾಕ್ ವಾಕಿಂಗ್ ಮಾಡ್ಬೇಕು ?

ನಾನು : ದಿನಕ್ಕೆ ಏನಿಲ್ಲ ಅಂದ್ರೂ ಕಂಪ್ಯೂಟರ್ ಮುಂದೆ ಒಂಧತ್ತು ಘಂಟೆ ಕಾಲ ಕೂತು ಏನನ್ನೋ ಹುಡುಕುತ್ತಾ...ಸ್ಟಂಬಲ್ಲಿಸುತ್ತಾ, ಆರ್ಕುಟ್ಟುತ್ತಾ, ಬ್ಲಾಗಿಸುತ್ತಾ ಇರುತ್ತೇನಾದ್ದರಿಂದ, ನಮ್ಮಮ್ಮನಿಗೆ ನನ್ನ ಕಣ್ಣು ತೂತಾಗಿ ಹೋಗುತ್ತೆ ಅಂತ ಕನಸು ಬಿದ್ದಿರತ್ತೆ. ಅದಕ್ಕೆ ತಕ್ಕಂತೆ ಅಣ್ಣ ಕೂಡಾ ಅಮ್ಮನ್ನ ನಿನ್ ಮಗಳು ನೋಡು ಒಂದು ದಿನ ನಮ್ಮನ್ನೂ ಮಾನಿಟರ್ ಅಂತಾ ನೇ ಅಂದುಕೋತಾಳೆ ಅಂತ ಹೆದರ್ಸಿರ್ತಾರೆ. ಟೋಟಲಿ ಗಾಬ್ರಿಫೈಡ್ ಆದ ಅಮ್ಮ, ಸಿಟಿಯಲ್ಲಿ ಸಿಗುವ ಸ್ವಲ್ಪವೇ ಸ್ವಲ್ಪಹಸಿರು ಪ್ರದೇಶವಾದ ಪಾರ್ಕಿಗೆ ಹೋಗಿ ವಾಕಿಂಗ್ ಮಾಡಿ, ಹಸಿರನ್ನು ನೋಡು...ಕಣ್ಣು ಸರಿಹೋಗತ್ತೆ ಅಂತ ನನ್ನ ಮುಂದೆ ಕಿನ್ನರಿ ಬಾರಿಸುತ್ತಾರೆ.

Z : ಅಂದರೆ ನೀನು ಕೋಣ ಅಂತ ಆಯ್ತು.

ನಾನು : ನೋ ನೋ !! ಅವರು ಹೇಳಿದ್ದನ್ನೆಲ್ಲ ಲೇಟಾಗಾದ್ರೂ ಸರಿ, ಪಾಲಿಸಿಯೇ ಪಾಲಿಸುತ್ತೇನೆ. ಎಂಟು ಘಂಟೆ ಸುಮಾರಿಗೆ ನನ್ನ ಸವಾರಿ ಹೊರಡತ್ತೆ ಪಾರ್ಕಿಗೆ.

Z : ಹೇಗಿರತ್ತೆ ಪಾರ್ಕಲ್ಲಿ ವಾಕಿಂಗ್ ?

ನಾನು : glorified ಹೆಜ್ಜೆ ನಮಸ್ಕಾರ.

Z : ಹಾ ?

ನಾನು : ಹು ! ನೀನ್ ನೋಡ್ಬೇಕು Z... ನಡಿಯಕ್ಕೆ ಜಾಗಾನೇ ಇರಲ್ಲ....ಸದಾಕಾಲ ಪಾರ್ಕಲ್ಲಿ ಜನ ತುಂಬಿ ತುಳುಕ್ತಿರ್ತಾರೆ. ಆದ್ರೆ ಏನ್ ಸಿಗ್ಲಿ ಬಿಡ್ಲಿ...ಪಾರ್ಕಿನಲ್ಲಿ entertainment ಗೆ ಏನೂ ಕಮ್ಮಿ ಇಲ್ಲ.

Z : ಹ ಹ !! ಹೌದಾ ?

ನಾನು : ಹೂ...ನೋಡು ಬೆಳಿಗ್ಗೆ ಬೆಳಿಗ್ಗೆ ಎಂಟು ಘಂಟೆ ಗೆ ನಾನು ಹೋಗ್ತಿನಾ ? ಆಗ ಬರೀ ಅತ್ತೆಮಾವಂದಿರದ್ದೇ ಕಾರುಬಾರು. ಕೆಲವರು ಅರ್ಥರೈಟಿಸ್ ಗೋಳಿಂದ ನಿಧಾನಕ್ಕೆ ನಡೆಯುತ್ತಿದ್ದರೆ, ಇನ್ನು ಕೆಲವರು ವಾಕಿಂಗ್ ಟ್ರಾಕ್ನಲ್ಲಿ ಜಾಗಿಂಗ್ ಮಾಡುತ್ತಿರುತ್ತಾರೆ. ಮಧ್ಯವಯಸ್ಕರು ಪಾರ್ಕಿನ ಹೊರಗೆ ಜಾಗಿಂಗ್ ಕಮ್ ಪ್ರದಕ್ಷಿಣೆ ಹಾಕುತ್ತಿರುತ್ತಾರೆ. ಮಕ್ಕಳು (ಒಂದೆರಡು ವರ್ಷದವು) ಉಯ್ಯಾಲೆ ಮೇಲೆ ಹತ್ತಿ ಇಳಿಯಲು ಆಗದೆ ಗೊಳೋ ಎಂದು ಅಳತ್ತಿದ್ದರೆ, ಸ್ವಲ್ಪ ದೊಡ್ಡ ಮಕ್ಕಳು ಜಾರುವ ಬಂಡೆ ಹತ್ತಿ ಜಾರಲು ಹೆದರಿ ಅಮ್ಮ ಅಮ್ಮ ಅಂತ ಕಿರುಚುತ್ತಿರುತ್ತಾರೆ. ಕಾಲೇಜು ಮಕ್ಕಳು ಶಾಂತ (?) ವಾತಾವರಣಾದಲ್ಲಿ ಓದಲು ಬಂದರೆ, ಇನ್ನು ಕೆಲವರು ಮುಂಜಾನೆ ಪ್ರೇಮದ ಗುಂಗಲ್ಲಿರುತ್ತಾರೆ. ತೀರಾ ವಯಸ್ಸಾದವರ ಲಾಫಿಂಗ್ ಕ್ಲಬ್ಬು, ಯೋಗಪಟುಗಳ ಪ್ರಾಣಾಯಾಮ, ಇವೆಲ್ಲ ನೋಡಸಿಗುತ್ತವೆ ಪಾರ್ಕಿನಲ್ಲಿ. ಆದರೆ ಜಬರ್ದಸ್ತ್ ಮಜಾ ಸಿಗುವುದೆಂದರೆ ಒಂದು ರೌಮ್ಡ್ ಹಾಕುವುದರೊಳಗೆ ನನ್ನ ಕಿವಿಗೆ ಬೀಳುವ ಅರ್ಧಮರ್ಧ ಮಾತುಗಳು.

Z : ಹೆ ಹೆ...ಹೇಗಿರತ್ವೆ ಅವೆಲ್ಲಾ....

ನಾನು : ನಾನು ಇದುವರೆಗೂ ಕೇಳಿದ ಮಾತುಗಳಾನ್ನೆಲ್ಲಾ ಹಾಕಿದರೆ ಇದು ಮಹಾಕಾವ್ಯವಾಗುತ್ತದೆ. ನೆನಪಿದ್ದಷ್ಟು ಹಾಕುತ್ತೇನೆ. ಅಂದರೆ ಒಂದು ರೌಂಡಿನಲ್ಲಿ ನಮಗೆ ಕೆಳಸಿಗುವಷ್ಟು. ಒಂದೊಂದು ಲೈನೂ ಒಂದೊಂದು ಬೆಂಚಿನವರದ್ದು, ಮತ್ತು ಮಧ್ಯ ಮಧ್ಯ ನಡೆಯುತ್ತಾ ಮಾತಾಡುವವರದ್ದು.

.....ಏನ್ರೀ ಹೇಗಿದ್ದೀರಾ ?...ಏನ್ ಇಷ್ಟ್ ಬೇಗ..
....ಸತ್ತೋದ್ನಂತೆ ರೀ ಮೊನ್ನೆ.....ನನಗೆ ಇವತ್ತು....
...ವಾಕಿಂಗ್ ಆಧ್ಮೇಲೆ ಹೋಟೆಲಲ್ಲಿ ಬಜ್ಜಿ ಕೊಡಿಸುವುದನ್ನ ಮರೆಯಬೇಡಿ ಮಹಾರಾಯರೇ....
...ನಮ್ಮ ಯೆಡಿಯೂರಪ್ಪ ಮುಖ್ಯಮಂತ್ರಿಯಾದ ಮೇಲೆ....
...ಹೆಂಡತಿ ಮಾತ್ ಕೇಳಿ ಕೆಟ್ಟೋದಾ ರೀ ನನ್ನ ಮಗ.....
....ಸಂಸಾರ ಅಂದ್ರೆ ಏನಂತಾ ತಿಳ್ಕೊಂಡಿದೀರಾ ?
.....(a+b) (a-b) = a2 - b2......
....ನನ್ನ ಮಗಳು ಮದ್ವೆಯಾದ್ಮೇಲೆ ಈಕಡೆ ......
....ತ್ರಿಶಂಕು ಸ್ವರ್ಗ ಆಗೋಗಿದೆ ನನ್ನ ಸ್ಥಿತಿ.....
....ತೂ ಮಿಲೆ...ದಿಲ್ ಖಿಲೇ ಔರ್ ಜೀನೆ ಕೊ ಕ್ಯಾ ಚಾಹಿಯೇ...[ನಡೆಯುವವರ ಎಫ್ ಎಮ್ ಹೊಡೆದುಕೊಳ್ಳುತ್ತಿರುತ್ತದೆ]
...ಮೂರು ದಿನದಿಂದ ನೀರಿಲ್ಲದೇ ನರಳುತ್ತಿದ್ದೇವೆ ರಿ....ಆ ಕೊಳಾಯಿಯವ.....
....ದಿನ ಬೆಳಿಗ್ಗೆ ಒಂದೇ ಸಮನೆ ನನ್ನ ಮಗ ಸೊಸೆ...
...ವರ್ಣಮಾಲೆ ಹೇಳುತ್ತಾ ನಗಿ ಎಲ್ಲಾರು...ಅ ಆಆಆಆ.....ಇ ಈಈಈಈಈಈಈ........
......ನೆನ್ನೆ ಮುಕ್ತಾ ಮುಕ್ತಾ ಸೀರಿಯಲ್ಲಲ್ಲಿ ಏನಾಯ್ತು ರಿ ?
...ಅವ್ನು ಮಾಡಿರೋ ಪಾಪಕ್ಕೆ ನೆಗದ್ ಬಿದ್ದು ನಲ್ಲಿಕಾಯಾಗಿ ಹೋಗ !!......
....ಸ್ಟಾಕ್ ಮಾರ್ಕೆಟ್ಟು ಯಾವ್ ರೀತಿ ಮೊಗಚ್ಕೋತು ರಿ....
.....ನೆನ್ನೆ ಅಕ್ಸಾಲಿ ಹತ್ರ ನೆಕ್ಲೇಸಿಗೆ ಹಾಕ್ ಬಂದೆ ರಿ...ಮೂವತ್ತ್ ಗ್ರಾಮು....
....ಪ್ರಾಫಿಟ್ ಎಷ್ಟು ಅಂತ .....
....ನಾನೂರೈವತ್ತಕ್ಕಿಂತ ಹೆಚ್ಚ್ ಕೊಡ್ಕೂಡದು ರೀ ಕೆಲ್ಸದವರಿಗೆ.......
....ವಿದ್ಯಾರಣ್ಯಪುರದಲ್ಲಿ ನನ್ನ ತಂಗಿ.....
....ಯೆ......ಕ್ಯಾ ಹುಆ......[ರಿಂಗ್ ಟೋನು]
....ಹೊಸಾ ಕಾರ್ ತಗೊಳ್ಳಣಾ ಅಂತ ಹೋದೆ ನೆನ್ನೆ.....
....ಹತ್ತ್ ಸಾವ್ರ ಅಂತೆ ರೀ...ಏನ್ ಬೆಲೆ ಏನ್ ಕಥೆ......
...ನನಗೆ ನನ್ನ ಮನೆ ಪ್ರಾಬ್ಲೆಮ್ ಏ ಸಾಲ್ವ್ ಮಾಡಾಕ್ಕೆ ಆಗ್ತಿಲ್ಲಾ.... ಏನ್ ಹೇಳಲಿ ನನ್ನ ಮಗನಿಗೆ ?...
...I love you I love you !!!I really love you...pleeeeeeasssssssssseeeeeeeeeee......
...ಎಲ್ಲ್ಲಾರು ನಿಮ್ಮ ಇಷ್ಟದೇವತೆಯನ್ನ ನೆನೆಸುತ್ತಾ ಧ್ಯಾನ ಮಾಡಿ...ಓಂ....
..ಜಲಜಲಜಲಜಲಜಾಕ್ಷೀ ಮಿಣ ಮಿಣ ಮಿಣ ಮೀನಾಕ್ಷೀ ಕಮಕಮಕಮಕಮಲಾಕ್ಷೀ ಪಟ ಪಟಪಟ ಪಂಚರಂಗಿ ಬಾರೆ...ಐಥಲಕಡಿ ಬಾರೆ !...[ಮ್ಯೂಸಿಕ್ ಪ್ಲೇಯರ್ರು...ಎನ್ ಸೀರೀಸು]

Z : ಉಹಹಹಹಹ !!!!!!!!!!!!!!

ನಾನು : ಇನ್ನು ಇದೆ...ಎಲ್ಲರ ಮನೆಯ ಪ್ರಾಬ್ಲೆಂ ಗಳನ್ನು ಕೇಳಿ ಇವರಿಗೆ ಮನಶ್ಶಾಂತಿ ದೊರೆಯುತ್ತದೆ. ಹುಡುಗ ಹುಡುಗಿಯರು ಮದುವೆಗೆ ಇದ್ದರೆ ಆ ವಿಷಯವೆಲ್ಲವೂ ಪಾರ್ಕಿನಲ್ಲಿ ಗೊತ್ತಾಗುತ್ತದೆ. ಇದ್ದದ್ದನ್ನು ಇದ್ದಂತೆಯೇ ಇಲ್ಲಿ ಒಬ್ಬರೂ ಹೇಳಲೊಲ್ಲರು. ಕೆಲವರು ಅವರ ಮಕ್ಕಳು ಕೆಲಸ ಮಾಡುತ್ತಿರುವ ಕಂಪನಿಯ ಹೆಸರು ಹೇಳಲು ತಡವರಿಸುತ್ತಿದ್ದರೆ, ಮತ್ತೆ ಕೆಲವ job designation ಹೇಳಲಾಗದೇ ಒದ್ದಾಡುತ್ತಿರುತ್ತಾರೆ. ಇಲ್ಲಿ ಮೌನವಾಗಿ ವಾಕಿಂಗ್ ಮಾಡುವವರು ತೀರಾ ಕಮ್ಮಿ. ನಾನು ಮೌನವಾಗಿರಲು ಬಯಸಿ ಸ್ವಲ್ಪ ಲೇಟಾಗೇ ಹೋಗುತ್ತೇನೆ. ಆದರೂ ದುರಾದೃಷ್ಟಕ್ಕೆ ನಮ್ಮ ಅಮ್ಮನ ಶ್ರೋತೃಬಂಧುಗಳೋ, ಶಿಷ್ಯಕೋಟಿಗಳು, ಅಥವಾ ಅಣ್ಣನ ಸ್ನೇಹಿತರೋ ಸಿಕ್ಕರೆ ನನ್ನ ಗತಿ ಅಷ್ಟೆ. ನಾನು ಅವರ ಪ್ರಶ್ನೆಯ ಸುರಿಮಳೆಯನ್ನು ತಾಳಲಾಗದೇ, ಅವರ ಕಣ್ಣು ತಪ್ಪಿಸಲು ವಾಕಿಂಗ್ ಬದಲು ರನ್ನಿಂಗ್ ಶುರು ಮಾಡಬೇಕಾಗುತ್ತದೆ.


ಎಲ್ಲದಕ್ಕಿಂತಾ ದೊಡ್ಡ entertainment ಅಂದರೆ, ಕೆಲವರು ವಾಕಿಂಗ್ ಮಾಡತ್ತಾ ಕೈ ಕಾಲು ಅಲ್ಲಾಡಿಸುವುದು ಮತ್ತು ಚಪ್ಪಾಳೆ ತಟ್ಟುತಾ ವಾಕಿಂಗ್ ಮಾಡುವುದು. ಅವರನ್ನು ನೋಡುವ ಸಣ್ನ ಮಕ್ಕಳು ..."ಮಮ್ಮಿ...ಐ ವೋಂಟ್ ಕಮ್...ದೇರ್ ಇಸ್ ಪಿ ಟಿ ಟೀಚರ್ ದೇರ್...ಹಿ ವಿಲ್ಲ್ ಬೀಟ್"...ಎಂದು ಅಳುತ್ತಿರುತಾರೆ. ನನಗೆ ನಗು ತಡೆಯದಾಗುತ್ತದೆಯಾದರೂ ನಾನು ನಗುವ ಹಾಗಿಲ್ಲ.

Z : :-) :-) ನಗು ಬಂದಾಗ ನಗೋದಪ್ಪ...

ನಾನು : ಹಾಗಾಗಲ್ಲ Z ... ಲಾಫಿಂಗ್ ಕ್ಲಬ್ಬಿನಲ್ಲಿ ಪ್ರಯತ್ನಪೂರ್ವಕವಾಗಿ ನಕ್ಕರೆ ಅದು ತಪ್ಪಲ್ಲ .ಆದರೆ ಇದನ್ನೆಲ್ಲ ನೋಡಿ ನಾನು ಸಹಜವಾಗಿ ಹೊಟ್ಟೆ ಹಿಡಿದು ನಕ್ಕರೆ ಅದು ಸಖತ್ ದೊಡ್ಡ ತಪ್ಪು !

Z : pity !

ನಾನು : yes. ಒಮ್ಮೊಮ್ಮೆ ನಾನು ಸಾಯಂಕಾಲವೂ ವಾಕಿಂಗ್ ಹೋಗುತ್ತೇನೆ. ಆಗ ಯಂಗ್ ಜನರೇಷನ್ ಮಾತಿನಲ್ಲಿ ನಿರತವಾಗಿರುತ್ತದೆ.
ಆಗ ಕೇಳಸಿಗುವಂತಹ ಅಣಿಮುತ್ತುಗಳು.
i tell you....my project leader...
......extremely hot !!!!!!!!!!....i just cant...
...what do you think we can do about...
chuck the whole damn project man.....
...i was googling today about....
...man !! huge money in there !!....
...where's the party tonight ?...
...i quit the job....
...i just cant tell my parents that....
....money waste...no use..
....i love you....
...new MP4 ?
....man !! whatta car !!...
... I love his specs...
.....seriously....
...you are more important than my phone....
...i ransacked his room....
...hopeless cubicle life.....
....shut up !!!...
.....oops ! no shopping today ?...
...i really love you....
...i have decided to break up....
...life is never satisfying I tell you....
...all gyan...just gyaan...all meetings are about...
...good biscuits and hopeless coffee...
...when are you tying the knot ?....
...divorces are inevitable consequences of marriages....
....i am sick and tired....
...i am loving it !!...

ಇವೇ ಮುಂತಾದವು !!

Z : ROFL....

ನಾನು : ಸರಿ..ನಗ್ತಿರು ! ನಾನ್ ಹೊರಟೆ ವಾಕಿಂಗ್ ಗೆ !

ಅಥ ಉದ್ಯಾನೋಪಾಖ್ಯಾನಃ ಸಂಪೂರ್ಣಃ

Thursday, September 4, 2008

ಕಳಚಿ ಬಿದ್ದ ಕಿರೀಟ !

ನಾನು : ಎಷ್ಟ್ ಬಕೆಟ್ ಕಣ್ಣೀರು ಆಯ್ತು ?

Z : hiccup !! 1...2..3..sniff !! 4..5..6..7..8..9..10..sob !!!! 11..12...13..14...sniff !!! 15..16...17..18..19..20 !

ಇಪ್ಪತ್ತು ಬಕೆಟ್ ಆಯ್ತು.

ನಾನು : ನೆನ್ನೆ ಯಾವ ವಾರ ?

Z : ಬುಧವಾರ.

ನಾನು : ನಾಳೆ ಯಾವ ವಾರ ?

Z : ಶುಕ್ರವಾರ

ನಾನು : ಇವತ್ತು ?

Z : ಗುರುವಾರ.

ನಾನು : ಅಶಶ್ಶೋ !!!!

Z : ಯಾಕಮ್ಮ ಏನಾಯ್ತು ?

ನಾನು : ನಿನ್ನನ್ನ ಈಡಿಯಟ್ ಅಂತ ಕರಿಯೋ ಹಾಗಿಲ್ಲ ಇನ್ನು ನಾನು ! ಯಾಕಂದ್ರೆ ನಿನಗೆ ೧-೨೦ ರವರೆಗೆ ಎಣಿಸಲು ಬರುತ್ತದೆ ! ಮತ್ತು ವಾರಗಳು ನೆನಪಿನಲ್ಲಿದೆ ! Idiot is not the word for you !

Z : sorry ಅಂತ ಬೇಡ್ಕೊತಿದಿನಲ್ಲ.....ಮತ್ತೆ ಯಾಕ್ ಈ ಥರ ಅವಮಾನ ಮಾಡ್ತಿದ್ಯಾ ?

ನಾನು : ಅವಮಾನ ಮಾಡ್ತಿಲ್ಲ...ನಿಜ್ವಾದ್ ಸತ್ಯ ಹೇಳ್ತಿದಿನಿ. ಇನ್ಮೇಂದ ಇಷ್ಟ ಬಂದಾಗೆಲ್ಲ ಯಾರ್ಯಾರ್ನು ಈಡಿಯಟ್ ಅಂತ ಕರಿಯೋ ಹಾಗಿಲ್ಲ.

Z : ಹೌದಾ ?

ನಾನು : ಹು !

Z : ಅನ್ಯಾಯ ಒಂದು ಬೈಗುಳ ಕಮ್ಮಿಯಾಗೊಯ್ತಲ್ಲ ನಮ್ dictionary ಲಿ !

ನಾನು : ಹು....ಬಿಡು ಒಂದು ಹೊಸ ಪದ ನ coin ಮಾಡಿದ್ರೆ ಆಯ್ತು. more than that,ನನಗಿದ್ದ ಕಿರೀಟ ಗೊತ್ತಲ್ಲ ? ಅದು ಕಳಚಿ ಬಿತ್ತು !! :( :( :(

Z : ಹೌದಾ ? ಅದೆ " invincible bargain queen " ಕಿರೀಟ ? ಬಿದ್ದೊಯ್ತ ? ಎಲ್ಲಿ ? ಯಾವಾಗ ? ಹೇಗೆ ?

ನಾನು : answer to question number 1: N.R colony market ನಲ್ಲಿ
answer to question number 2:ಸೋಮವಾರ ಬೆಳಿಗ್ಗೆ.
answer to question number 3: ಹೇಗ್ ಬಿತ್ತಪ್ಪಾ ಅಂದ್ರೆ....
ಠೊಪ್ !!
ಕಿಲಿಕಿಲಿಕಿಲಿಕಿಲಿಕಿಲಿಕಿಲಿಕಿಲಿಕಿಲಿಕಿಲಿಕಿಲಿ.......
ಕಿಲ್
ಕಿಲಿ ಕಿಲಿ
ಕಿಲ್ ಕಿಲ್ ಕಿಲಿ
ಕ್ಲುಂಗ್ ಕ್ಲಿಂಗ್ ಕ್ಲೆಂಗ್
ಕಿಲ್ ಕಿಲ್ ಕಿಲಿ
ಚಿಳ್ಳ್ಳ್......
ಟಿಣ್!
ಅಂತ ಬಿತ್ತು.

Z : ಯಾಕೋ ನೋಟ್ ಮತ್ತು ಚಿಲ್ಲರೆ ಬಿದ್ದ ಶಬ್ದ ಕೇಳಿಸುತ್ತಿದೆಯಲ್ಲಾ ?

ನಾನು : ಮತ್ತೆ ? ನಾನು bargain ಮಾಡಿ ಉಳಿಸಿದ್ದ ದುಡ್ಡನ್ನೆಲ್ಲಾ ಸೇರಿಸಿ ಮಾಡಿದ ಕಿರೀಟ ಅದು ! ಸಾವಿರದ ನೋಟು ನವಿಲ್ಗರಿ ಥರ ಇತ್ತು ನನ್ ಕಿರೀಟದ ಮೇಲೆ. ಅದರ ಕೆಳಗೆ, ಮಿಕ್ಕೆಲ್ಲಾ denomination ಗಳ ಒಂದ್ part. base ನಲ್ಲಿ ನಾಣ್ಯಗಳ ಎಲ್ಲಾ ಡಿನಾಮಿನೇಷನ್ ಗಳೂ ಇದ್ದವು. ಥಳ ಥಳ ಹೊಳಿತಿತ್ತು ನನ್ನ ಕಿರೀಟ !! ಓಡೆದು ಹೋಯ್ತು !!! ವಾಆಆಆಆಆಆಆಆಆಆಆಆಆಆಆಆಆಆಆಆಆ !!!!!!!!!!!!!!!!!!!!!!!!

Z : ಆದದ್ದಾಯ್ತು. ಅಳಬೇಡ. ಕಿರೀಟ ಬಿದ್ರೆ ಬೀಳಲಿ, ಮತ್ತೆ ಮಾಡಿಸ್ಕೋಬಹುದು. ನಿನಗೆ ಒಂದು ಇಷ್ಟು ಬಿರುದುಗಳಿತ್ತಲ್ವ ? "ಜಿಪುಣ ಸಾಮ್ರಾಜ್ಯ ಸಂಸ್ಥಾಪಕಿ, ಜಿಪುಣ ಸಾಮ್ರಾಜ್ಯಏಕಚಕ್ರಾಧಿಪತ್ನಿ, ಸ್ನೇಹಿತರಿಗೆ ಗಿಫ್ಟ್, ಪುಸ್ತಕ, ನಾಟಕ ಮತ್ತು ಕಾಪಿ ಮತ್ತು ಭೇಲ್ ಪುರಿಗೆ ಮಾತ್ರ ದುಡ್ಡು ಖರ್ಚು ಮಾಡಲು ಯೋಚಿಸದೇ, ಮಿಕ್ಕಿದ್ದೆಲ್ಲಕ್ಕೂ ಮಿನಿಮಮ್ ಒಂದು ಲಕ್ಷ ಸರ್ತಿ ಯೋಚನೆ ಮಾಡುವ ಏಕಮೇವಾದ್ವಿತೀಯ ಏಕಮಾತ್ರ ವ್ಯಕ್ತಿ....ಅಂತೆಲ್ಲ !!!

ನಾನು : ಪ್ಲೀಸ್ ನೆನಪಿಸಿ ಹೊಟ್ಟೆ ಉರ್ಸ್ಬೇಡ....ಆ ಬಿರುದುಗಳೂ ಬಿದ್ದುಹೋದವು !!!

Z : ಛೆ ಛೆ ಛೆ !!! ಅನ್ಯಾಯ...ಹೀಗಾಗ್ಬಾರ್ದಿತ್ತು. ಈ ಬಿರುದುಗಳನ್ನ ಮತ್ತೆ ಸಂಪಾದಿಸೋದು ಸ್ವಲ್ಪ ಕಷ್ಟ. ಇರ್ಲಿ...ಹೇಗಾಯ್ತು ಇದೆಲ್ಲ ?

ನಾನು : ಕೇಳ್ಸ್ಕೋ ಕಥೆ ನ.

Z : ಹೇಳಮ್ಮ...

ನಾನು : ಸೋಮವಾರ ಬೆಳಿಗ್ಗೆ ಅಮ್ಮ ಕೊಟ್ಟ 200 cms long list ಅನ್ನು ಹಿಡಿದು ಶಾಪಿಂಗ್ ಹೊರಟೆ. ಮೊದಲು ದಿನಸಿ ಅಂಗಡಿಯವನಿಗೆ one part of the list ಕೊಟ್ಟು, ಸಾಮಾನೆಲ್ಲ ಹಾಕಿಟ್ಟಿರಿ, ಬೇರೆ ಶಾಪಿಂಗ್ ಮುಗಿಸಿ ಬಂದು ತೆಗೆದುಕೊಳ್ಳುವೆ ಎಂದು ಹೇಳಿದೆ. ಅವನೂ ಒಪ್ಪಿದ. ಅಲ್ಲಿಂದ ಸೀದಾ n.r.colony market ಗೆ ಹೋದೆ. ನಾನು, ನನ್ನ ಹಿಂದೆ ನಮ್ಮ ಡ್ರೈವರ್...ಸಾಮಾನೆಲ್ಲಾ ಹಿಡಿದುಕೊಳ್ಳಕ್ಕೆ ಹೆಲ್ಪ್ ಮಾಡಬೇಕೆಂದು ಅಣ್ಣ ಅಮ್ಮ ಅವನಿಗೆ ಹೇಳಿಬಿಟ್ಟಿದ್ದರು. ಅವನು ಬಹಳ ಶಿಸ್ತಿನ ಆಜ್ಞಾಪಾಲಕ. ಹಿಂದೆಯೇ ಬ್ಯಾಗ್ ಹಿಡಿದು ಬಂದ. ಕಾರಲ್ಲಿ ಹೋಗಿ ಗಾಡಿ ಮುಂದೆ ಇಳಿದರೆ ರೇಟು ಯದ್ವಾ ತದ್ವಾ ಏರಿಸುತ್ತಾರೆಂದು ನನಗೆ ಗೊತ್ತಿತ್ತು. ಆದ್ದರಿಂದಲೆ, ಕಾರನ್ನು ಒಂದು ಗಲ್ಲಿಯಲ್ಲಿ ನಿಲ್ಲಿಸಿ ನಡೆದು ಹೋದೆವು. ನನ್ನ ಕಿರೀಟಕ್ಕೆ ಮೊದಲ ಹೊಡೆತ ಬಿದ್ದಿದ್ದು ಹೂವಿನವಳಿಂದ.

ಮಲ್ಲಿಗೆ ಹೂವಿನ ಒಂದು ಮಳಕ್ಕೆ ಮಾರಿನ ರೇಟು ಹೇಳಿದಂತೆ ಆಯ್ತು ನನಗೆ. ಕನ್ಫರ್ಮ್ ಮಾಡಿಕೊಳ್ಳಲು ಮತ್ತೆ ಕೇಳಿದರೆ " ಮೇಡಮ್...ಇದು ಹಬ್ಬದ ಸೀಸನ್ನು...ಒಂದು ಮಾರಿಗೆ ನೂರಿಪ್ಪತ್ತು ರುಪಾಯಿ. ಮೊಳಕ್ಕೆ ಮೂವತ್ತು. ತೆಗೆದುಕೊಳ್ಳುವ ಹಾಗಿದ್ದರೆ ತೆಗೆದಿಕೊಳ್ಳಿ...ಇಲ್ಲಾಂದ್ರೆ ಬಿಡಿ."

ಸರಿ, ಮಲ್ಲಿಗೆಯ ಆಸೆ ಬಿಟ್ಟಿದ್ದಾಯಿತು. ಸೇವಂತಿಗೆ ರೇಟ್ ಕೇಳಿ ನನಗೆ ತಲೆ ಕೆಟ್ಟು ಹೋಯ್ತು. ನೂರು ಗ್ರಾಮ್ ಇಪ್ಪತ್ತು ರೂಪಾಯಿ !! "oh my god ! " ಅಂತ ನನಗರಿವಲ್ಲದೆಯೇ ನನ್ನ ಬಾಯಿಂದ ಹೊರಬಂತು. ಸುಧಾರಿಸಿಕೊಂಡು ಕೇಳಿದೆ..."ವರಮಹಾಲಕ್ಷ್ಮಿ ಹಬ್ಬದ ಹಿಂದಿನ ದಿನ ಕಾಲು ಕೆ.ಜಿ.ಗೆ ಇಪ್ಪತ್ತು ರುಪಾಯಿತ್ತಲ್ವಾ ? "

ಅವಳು: "ಮೇಡಮ್...ಇದು ಗೌರಿ ಗಣೇಶ...ಸಿಕ್ಕಾಪಟ್ಟೆ ದೋಡ್ಡ್ ಹಬ್ಬ . ಈಗಲ್ದೆ ಇನ್ಯಾವಾಗ್ ನಾವ್ ಯಾವಾಗ್ ಕಾಸ್ ಮಾಡದು ? ನಾವೇನ್ ನಿಮ್ ತಲೆ ಮೇಲೆ ಹೊಡಿತಿದಿವಿ ಅಂದುಕೊಂಡ್ರಾ ? ನಾವು ಒಂದಕ್ಕ್ ಡಬಲ್ ರೇಟು ಕೊಟ್ಟು ತರ್ತೀವಿ ಮಾರ್ಕೆಟ್ ಇಂದ ತಿಳ್ಕೊಳಿ ನೀವೂನು. ಹೂವುಗಳೆ ಸಿಗ್ತಿಲ್ಲ ಈವಾಗ ಗೊತ್ತಾ ನಿಮ್ಗೆ ? ನೀವ್ ನಮ್ ಹೊಟ್ಟೆ ಮೇಲೆ ಹೊಡಿಬೇಡಿ ಚೌಕಾಸಿ ಮಾಡಿ. ದುಡ್ಡ್ ಕೊಡ್ತಿರೋ ಇಲ್ವೊ ?

ಬೇರೆ ಕಡೆಯೆಲ್ಲಾ ಸುತ್ತಾಡಿದರೂ ಒಳ್ಳೆ ಹೂವುಗಳು ಕಾಣಿಸದಿದ್ದುದರ ಕಾರಣ ಅಲ್ಲೇ ಕೊಳ್ಳಬೇಕಾಯ್ತು. ಬೇರೆ ಕಡೆ ಸುತ್ತಾಡಿದರೂ ನೂರು ರುಪಾಯಿಗಿಂತ ಕಡಿಮೆ ನೋಟನ್ನು ತೆಗೆಯುವ ಭಾಗ್ಯ ನನ್ನದಾಗಲಿಲ್ಲ. ಮಲ್ಲಿಗೆ ಮಾರನ್ನು ಹೂವಿನವರು ಅಳೆಯುತ್ತಿದ್ದನ್ನು ನೋಡಿ ನನಗೆ ಗೊತ್ತಿದ್ದ ಮೇಟರ್ ಸ್ಕೇಲಿನ ಉದ್ದಳತೆ, clarke's tables conversion units ಎಲ್ಲಾ ಮರ್ತೋಯ್ತು..ನನಗೆ ಇದನ್ನು ತಡೆಯಲಾಗಲಿಲ್ಲ...that too as a physicist !! ನಮ್ಮ ಡ್ರೈವರ್ ಇದನ್ನು ನೋಟಿಸ್ ಮಾಡಿ " ಅಮ್ಮಾವ್ರೆ...ನಾವು ಮಾತಾಡುವ ಹಾಗಿಲ್ಲ , ಮಾತಾಡಿದ್ರೆ ಏನೂ ಸಿಗಲ್ಲ. " ಅಂದ. ನಾನು ನನ್ನ ಬೀಳುತ್ತಿದ್ದ ಕಿರೀಟವನ್ನು ಸಂಭಾಳಿಸುತ್ತಾ ತಲೆಯಲ್ಲಾಡಿಸಿದೆ.

ನನ್ನ ಕಿರೀಟಕ್ಕೆ ಎರಡನೆಯ ಪೆಟ್ಟು ಬಿದ್ದಿದ್ದು ತೆಂಗಿನಕಾಯಿಂದ. 3 cms diameter,17-18 cms length ಇರೊ ಒಂದು ಚಿಲ್ಟಾರಿ ಕಾಯಿಗೆ ಏಳು ರೂಪಾಯಿ ಹೇಳಿದ ಅವ. ನನಗೆ ಬಂದ ಕೋಪಕ್ಕೆ ಅದೇ ತೆಂಗಿನ ಕಾಯನ್ನು ಅವನ ತಲೆ ಮೇಲೆ ಹೊಡೆಯಬೇಕು ಅಂತ ತೋಚಿತು.

Z : ತೋಚಿದ್ದನ್ನ ಮಾಡ್ಬಿಡ್ಬೇಕು head ruled !! ಅವನ ತಲೆ ಮೇಲೆ ಹೊಡೆದ ಹಾಗೂ ಆಗ್ತಿತ್ತು, ಕಾಯಿಯ quality check ಮಾಡಿದ ಹಾಗೂ ಆಗ್ತಿತ್ತು !

ನಾನು : I thought so. ಆದರೆ ಅದು ಕಾಯಿಗೆ ಅವಮಾನ ಅನ್ನಿಸಿತು....ಬಿಟ್ಟುಬಿಟ್ಟೆ...ಅಕಸ್ಮಾತ್ ಆ ಕಾಯಿ ಸೂಪರ್ರಾಗಿದ್ದು, ಅದು " ನನ್ನನ್ನ ಇವನ ತಲೆ ಮೇಲೆ ಯಾಕ್ ಹೊಡೆದೆ" ಅಂತ ಒಂದು ಪ್ರಶ್ನಾರ್ಥಕ ಲುಕ್ ಕೊಟ್ಟಿದ್ದಿದ್ರೆ ನಾನ್ ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ. ಆದ್ರೆ ಕಾಯಿಯ quality check ಮಾಡಲೇ ಬೇಕಿತ್ತು. ನಾನು ಸ್ವಲ್ಪ ಕುಟ್ಟಿ ನೋಡಿದೆ. ಶಬ್ದ ಓಕೆ. ನೀರು ಇತ್ತು. ನನ್ನ ಬಾರ್ಗೈನ್ ಶುರು ಮಾಡಿದೆ . " ನೋಡಿ, ಐದು ರುಪಾಯಿ ಮಾಡ್ಕೊಳ್ಳಿ , ಇಪ್ಪತ್ತೈದು ತೆಂಗಿನಕಾಯಿ ಹಾಕಿ" ಅಂದೆ. ಅವ " ಆಗಲ್ಲ ಮೇಡಮ್, ನೋಡಿ, ಇದು ಐದು ರುಪಾಯಿ ಕಾಯಿ, ನೋಡಿ. ಇದನ್ನ ತಗೊಳ್ಳಿ " ಅಂತ ಕಡ್ಲೆಕಾಯಿ ಪರ್ಷೆ ಆಟದ ಸಾಮಾನಿನಂಥಾ ಒಂದು ಪುಟ್ಟ ಕಾಯನ್ನು ತೋರಿಸಿದ. ನನ್ನ ಕಣ್ಣಲ್ಲಿ ಕಾಣುತ್ತಿದ್ದ ಕೋಪ ನೋಡಿ ನಮ್ಮ ಡ್ರೈವರ್ ಎಂಥಹಾ ಅನಾಹುತವಾಗಬಹುದು ಇನ್ನೊಂದು ಕ್ಷಣದಲ್ಲಿ ಎಂದು ಊಹಿಸಿ ಮಧ್ಯಪ್ರವೇಶಿಸಿದ. " ನೋಡಿ, ನಿಮಗೂ ಬೇಡ ನಮಗೂ ಬೇಡ, ಆರು ರುಪಾಯಿ ಮಾಡ್ಕೊಳ್ಳಿ " ಅಂದ. ಅವನು ಅದಕ್ಕೂ ಒಪ್ಪಲಿಲ್ಲ. ನಾನಂದೆ " ನೋಡಿ ಅಂಕಲ್, ಕೊಡೊ ಹಾಗಿದ್ರೆ ಆರು ರುಪಾಯಿಗೆ ಕೊಡಿ...ಇಲ್ಲಾಂದ್ರೆ ನಾನ್ ಬೇರೆ ಕಡೆ ಹೋಗ್ತಿನಿ" ಅಂದೆ. ಅವನು "ಮೇಡಮ್...ಹಾಗನ್ನಬೇಡಿ..ನೀವೆ ಮೊದಲನೆಯ ಗಿರಾಕಿ . ಸರಿ ಆರು ರುಪಾಯಿಗೆ ಕೊಡ್ತಿನಿ ಬನ್ನಿ" ಅಂದ. ಇಪ್ಪತ್ತದು ರೂಪಾಯಿ ಯಲ್ಲಿ ಎರಡು ಭೇಲ್ ಪುರಿ ಮತ್ತೊಂದು ಡೈರಿ ಮಿಲ್ಕು ಬರ್ತಿತ್ತು. ಅನ್ಯಾಯ ಆಯ್ತು ಅಂತ ಶಪಿಸುತ್ತಲೇ ಆರು ರುಪಾಯಿಗೆ ಒಪ್ಪಿದೆ. ಇದು ಎರಡನೆಯ ಪೆಟ್ಟು ನನ್ನ ಕಿರೀಟಕ್ಕೆ.

ನನ್ನ ಕಿರೀಟ ಕಳಚಿ ಬಿದ್ದಿದ್ದು ಹಣ್ಣು ತರಕಾರಿ ಅಂಗಡಿಯಲ್ಲಿ. ಐದು ಥರದ ಹಣ್ಣುಗಳನ್ನು ಪ್ಯಾಕ್ ಮಾಡಿ ಅಂದೆ. " ಅವನು ಎಲ್ಲಾ ಒಂದೊಂದು ಕೆ.ಜಿ ನಾ ಮಾ...ಐನೂರು ರುಪಾಯಿ ಕೊಡಿ " ಅಂದ ! ನನ್ನ ಕೈಯಲ್ಲಿದ್ದ ಬ್ಯಾಗುಗಳು ಥಪ್ಪನೆ ನೆಲಕಚ್ಚಿದವು. ಡ್ರೈವರ್ ಪಾಪ ಅದನ್ನ ಎತ್ತಿ ಹಿಡಿದುಕೊಂಡ. ನಾನಂದೆ "ಎಲ್ಲಾ ಒಂದೊಂದು ಕೆ.ಜಿ ಅಲ್ಲ, ಎಲ್ಲಾ ಒಂದೊಂದು." ಅವನು ಸೊಪ್ಪೆ ಮೋರೆ ಮಾಡಿಕೊಂಡ. ಆಪಲ್ ಮುಟ್ಟಿದೆ ಅಷ್ಟೆ..."ಕೆ.ಜಿ ನೂರಿಪ್ಪತ್ತು" ಅಂದ. ನಾನಂದೆ "ಮೊನ್ನೆ ತೊಂಭತ್ತಿತ್ತಲ್ಲ ? " ಅವನು " ಮೇಡಮ್...ಸಿಮ್ಲಾದಲ್ಲಿ ಆಪಲ್ಗಳೇ ಬಿಡುತ್ತಿಲ್ಲ ಇತ್ತೀಚೆ ಗೆ...ನಮಗೆ ಹಣ್ಣುಗಳೇ ಸಿಗುತ್ತಿಲ್ಲ...ಎಲ್ಲಾದರೂ ಹೋಗಿ ನೋಡಿ ಬನ್ನಿ...ನೂರಿಪ್ಪತ್ತಕ್ಕಿಂತ ಕಡಿಮೆ ಕೊಟ್ಟರೆ ನಾನು ನನ್ನ ಮೂಗು ಮುರಿದುಕೊಳ್ಳುವೆ " ಎಂದು ಪ್ರತಿಜ್ಞೆ ಬೇರೆ ಮಾಡಿದ. ನಾನು ಎರಡು ಆಪಲ್ ಹಾಕಿಸಿದೆ. ಬಾಳೇಹಣ್ಣಿನ ಕಡೆ ದೃಷ್ಟಿ ಹಾಯಿಸಿದ್ದೇ ತಡ, " ಮೂವತ್ತೈದು ಮೇಡಮ್, ನೋ ಬಾರ್ಗೈನ್ " ಅಂದ. ನಾನು ನನ್ನ ಜೀವನದಲ್ಲಿ ಇಪ್ಪತ್ತು ರುಪಾಯಿಗಿಂತ ಹೆಚ್ಚು ಕೊಟ್ಟಿದ್ದೇ ಇಲ್ಲ ಒಂದು ಕೆ.ಜಿ. ಬಾಳೇಹಣ್ಣಿಗೆ. ಹದಿನೈದು ರೂಪಾಯಿ ಹೆಚ್ಚು ಕೊಟ್ಟು ಕಾಂತಿ ಸ್ವೀಟ್ಸಿನ ಬಾದಾಮಿ ಹಾಲನ್ನು ಕಳೆದುಕೊಳ್ಳಲು ನಾನು ಸುತಾರಾಂ ತಯಾರಿರಲಿಲ್ಲ . It would be too high a price to pay !! ಆದರೂ ಏಕ್ದಮ್ ಇಳಿಸಬಾರದೆಂದು ಇಪ್ಪತ್ತೈದಕ್ಕೆ ಕೇಳಿದೆ. ಅವನು " ನೋಡಿ ಮೇಡಮ್, ಇನ್ ಫ್ಲೇಷನ್ ಎಷ್ಟು ಏರಿದೆ ಗೊತ್ತಾ ? ಪಾಪ...ನಿಮಗೇನು ಗೊತ್ತಿಲ್ಲ ಬಿಡಿ. ಆದರೆ ಒಂದು ಮಾತು . ಬಾರ್ಗೈನ್ನ್ ಮಾಡೋದಿದ್ದರೆ ದಯವಿಟ್ಟು ಬೇರೆ ಅಂಗಡಿ ಗೆ ಹೋಗಿ. ನೀವಲ್ಲದಿದ್ದರೆ ನಮಗೆ ಬೇಕಾದಷ್ಟು ಜನ ಕಸ್ಟಮರ್ಸ್ ಸಿಗ್ತಾರೆ. " ಅಂದ. inflation ಅರ್ಥ ಇರಲಿ, spelling ಆದ್ರೂ ಗೊತ್ತ ನಿನಗೆ ಅಂತ ನಾನು ಕೇಳಿ, ಅವನು ಇನ್ನೇನೋ ಅಂದು, ನಾನು ಮತ್ತಿನ್ನೇನೋ ಅಂದು, ಜಗಳ ವಿಪರೀತಕ್ಕೆ ಹೋಗಿ, ಡ್ರೈವರ್ ಅಣ್ಣನಿಗೆ ಫೋನ್ ಮಾಡಿ, ಅಣ್ಣ ಬಂದು ನನ್ನನು ತುಂಬಿದ ಮಾರ್ಕೆಟ್ ನಲ್ಲಿ ದರದರ ಎಳೆದುಕೊಂಡು ಹೋಗುವ ದೃಶ್ಯ ಯಾಕೋ ಹಾಗೆ ಕಣ್ಣ ಮುಂದೆ ಬಂತು ನನಗೆ. ಇದರ ಕಲ್ಪನೆಯಲ್ಲಿ ಮುಳುಗಿದ್ದ ನನ್ನನ್ನು ವಾಸ್ತವಕ್ಕೆ ತಂದಿದ್ದು ನನ್ನ ಬೀಳುತ್ತಿದ್ದ ಕಿರೀಟದ ಶಬ್ದ. ಇನ್ನೇನು ಮಾತನಾಡದೇ, ಬಾಳೆಹಣ್ಣು ಒಂದು ಕೆ.ಜಿ ಖರೀದಿಸಿ, ಮಿಕ್ಕಿದ್ದೆಲ್ಲಾ ಹಣ್ಣನ್ನು ಒಂದೊಂದೇ ಹಾಕಿಸಿ ಅದು ಕೆ.ಜಿ ಎಪ್ಪತ್ತು !! ಮಾತಿಲ್ಲದೇ ಕೊಟ್ಟು ನಡೆದೆ. ಜೀವನದಲ್ಲಿ ನಾನು ಬಾರ್ಗೈನ್ ನಲ್ಲಿ ಸೋತಿರಲಿಲ್ಲ...ಛೆ !

Z : i know ! M.G road ನಲ್ಲಿ chess set ಗೆ 250 rupees ಅಂದವನ ಜೊತೆ ಮುಕ್ಕಾಲು ಘಂಟೆ bargain ಮಾಡಿ 100 rupees ಗೆ ಇಳಿಸಿ ಸ್ನೇಹಿತೆಯರಿಂದ ಹಾಕಿಸಿಕೊಂಡಿದ್ದ ಕಿರೀಟ ಅಲ್ಲವೇನೆ ಅದು ?

ನಾನು : ಹೂ !!!

Z : ಅಲಂಕಾರ್ ಪ್ಲಾಜಾ ಐನೂರು ರುಪಾಯಿ ಬಟ್ಟೆಗೆ ಇನ್ನೂರು ರುಪಾಯಿ ಇಟ್ಟು ಮಾತಾಡದೇ ಬಟ್ಟೆ ತೆಗೆದುಕೊಂಡು ಬಂದು ಹೊಸ ಥರ ಬಾರ್ಗೈನ್ ಸ್ಟೈಲ್ ಬೇರೆ ಕಂಡು ಹಡಿದಿದ್ದೆ ನೀನು....

ನಾನು : ಯೆಸ್ !

Z : ಮನೆಯ ಹತ್ತಿರ ನೀನು ತರಕಾರಿ ವ್ಯಾಪಾರ ಮಾಡಲು ಹೋದರೆ ಅಂಗಡಿಯವರಿಗೆ ಮೈಲ್ಡ್ ಆಗಿ ಭಯ ಇರುತ್ತಿತ್ತಲ್ಲವಾ ?

ನಾನು : ಯಾ. ಈಗ ಎಲ್ಲಾ ಹೊಟೋಯ್ತು Z ...ನನ್ನ ಕಿರೀಟ..ನನ್ನ ಬಿರುದುಬಾವಲಿಗಳು...ಎಲ್ಲಾ !!!! ವಾಆಆಆಆಆಆಆಆ......!!!

Z : ಅಳಬೇಡ.

ನಾನು : ಮತ್ತಿನ್ನೇನು ಮಾಡಲಿ ? ಇದಕ್ಕಿಂತ ದೊಡ್ಡ ಆಘಾತ ಕಾದಿದ್ದು ನನಗೆ ದಿನಸಿ ಅಂಗಡಿಯಲ್ಲಿ. ನಾನಲ್ಲಿಗೆ ಹೋಗುವ ಮುಂಚೆಯೇ ಅಣ್ಣ ದಾರಿಯಲ್ಲಿ ಸಿಕ್ಕಿ ನನ್ನ ಕೋಪಗ್ರಸ್ಥ ಮುಖವನ್ನು ನೋಡಿ, ನನ್ನ ಬದಲು ಅವರು ದಿನಸಿ ಅಂಗಡಿಗೆ ಹೋಗುವೆನೆಂದರೂ, ನಾನೇ ಹೋಗಿ, ಅಲ್ಲಿನ ರೇಟುಗಳನ್ನು ನೋಡಿ ನನ್ನ ಬಿಪಿ ಏರಿ, ಕೆಲವು ಎಕ್ ಸ್ಟ್ರಾ ಸಾಮಾನುಗಳನ್ನು ಹಾಕಿದ್ದನೆಂದು ಸ್ವಲ್ಪ ಲೋ ಟೋನಲ್ಲಿ ಜಗಳವಾಡಿದೆ. ಯಾಕಂದರೆ ನಾನು ಕಿರುಚಿದ್ದರೆ ಡ್ರೈವರ್ ಅಣ್ಣನಿಗೆ ಫೋನ್ ಮಾಡುತ್ತಿದ್ದ ಗ್ಯಾರಂಟೀ. ಅವನು ಕಡೆಗೆ ತಪ್ಪೊಪ್ಪಿಕೊಂಡ. ನಾವು expect ಮಾಡಿದ್ದಕ್ಕಿಂತ double ದುಡ್ಡು ಕೊಟ್ಟು ಎಲ್ಲಾ ಕಾರಿನಲ್ಲಿ ಹಾಕಿಸಿಕೊಂಡು ಮನೆಗೆ ಮ್ಲಾನವದನಳಾಗಿ ಮರಳಿದೆ.

Z : very sad !!

ನಾನು : really ! ಮನೆಗೆ ಬಂದ ಮೇಲೆ ಅಮ್ಮನ 200 cms long list ತರಲು ನಾನು ಕೊಟ್ಟ ದುಡ್ಡಿನ ಮೊತ್ತ ತೋರಿಸಿದೆ. ಒಂದು ರುಪಾಯಿಯೂ ಇಲ್ಲದ ಖಾಲಿ ಪರ್ಸು ನೋಡಿ, ಸ್ವಲ್ಪವೇ ಸ್ವಲ್ಪ ಸಾಮಾನು ನೋಡಿ ಗಾಬರಿಯಾಗುವ ಸರದಿ ಅಮ್ಮನದ್ದಾಗಿತ್ತು !

Z : :-)

ನಾನು : ಇಷ್ಟು ಸೋಮವಾರ ನಡೆದ ಕಥೆ !

Monday, September 1, 2008

I want ಮಳೆ !

Z : ಛೆ ಛೆ ಛೆ ಛೆ ಛೆ ಛೆ !!!!!!!!!!!!!

ನಾನು : ನಾನು ಪಾಪಗುಟ್ಟಿದ್ದೇನೆ ಎಂದು ನೀನು competition ಮೇಲೆ ಛೆಗುಟ್ಟೋದು ಸರಿಯಲ್ಲ ನೋಡು !

Z : competition ಅಲ್ಲ... I am very much disappointed.

ನಾನು : ಯಾಕೆಂದು ಪೇಳುವಂಥವಳಾಗು !

Z : ನೋಡು,ಎಷ್ಟೋಂದ್ ಜನ bloggers ಮಳೆ ಮೇಲೆ blogs ಬರ್ದಿದಾರೆ ! ಕವಿತೆಗಳು ಬೇರೆ ! ನಾನು ಏನಾದರೂ ಬರೆಯೋಣಾ ಅಂತ ನನ್ನ ನೆನಪಿನ ಕಂತೆನೆಲ್ಲಾ ತೆಗ್ದು ತಿರ್ಗ್ಸಿ ಮುರ್ಗ್ಸಿ ನೋಡಿದೆ...ನಾನ್ ಮಳೆಲಿ ನೆನೆದಿದ್ದಾಗಲೀ, ಸಿಕ್ಕಾಕೊಂಡಿದ್ದಾಗಲೀ, ಮಳೆ ನೀರು ನೋಡುತ್ತಾ ಕಾಫಿ, ಪಕೋಡಾ, ಬೋಂಡಾ ತಿಂದಿದ್ದಾಗಲಿ....ಒಂದೂ ಮಾಡೆ ಇಲ್ಲ ಅನ್ನೋದು ನನಗೆ ಆಗ ಜ್ಞಾನೋದಯವಾಯ್ತು ! ಈ ನಷ್ಟ ಆಗಿದ್ದು ನಿನ್ನಿಂದಲೇ !!

ನಾನು : ನಾನೇನು ಮಾಡಿದೆ ?

Z : ಏನ್ ಮಾಡ್ಲಿಲ್ಲ ಅಂತ ಕೇಳು !

ನಾನು : ಸರಿ. ಏನು ಮಾಡಲಿಲ್ಲ ?

Z : ಮಳೆ ಲಿ ನೀನು ನೆನೆಯದೇ ಇರುವುದು ನಿನ್ನ ಮೊದಲನೇ ದೊಡ್ಡ ತಪ್ಪು. ಮಳೆ ಇರಲಿ, ಚಳಿ ಇರಲಿ, ಗಾಳಿ ಇರಲಿ, ಯಾವುದನ್ನೂ ಲೆಕ್ಕಿಸದೇ, ಹೊಂವರ್ಕ್, ಅಸ್ಸೈನ್ಮೆಂಟ್ ಮತ್ತು ಪ್ರಾಜೆಕ್ಟುಗಳ ಮೇಲೆ ಗಮನ ಹರಿಸಿದ್ದು ಅತೀ ಭೀಕರವಾದ ಎರಡನೆಯ ತಪ್ಪು. ಎಲ್ಲದಕ್ಕಿಂತಾ ದೊಡ್ಡ ಪ್ರಮಾದವೆಂದರೆ, ಮಳೆ ಬಂದಾಗ ನೀಬು " ಯಾಕೋ weather change ಆಯ್ತು, ನಿದ್ದೆ ಮಾಡುವ " ಅಂತ ರಗ್ ಹೊದ್ದಿಕೊಂಡು ಮಲಗುವುದು !

ನಾನು : ನೋಡು , ಇದರಲ್ಲಿ ನನ್ನದು 0.001 % ಅಷ್ಟೂ ತಪ್ಪಿಲ್ಲ. ನಾನು ಮಳೆಯಲ್ಲಿ ನೆನೆಯಲು ಹೋದಾಗಲೆಲ್ಲ ಅಣ್ಣ ಅಥವಾ ಅಮ್ಮ " ಜ್ವರ ಬರತ್ತೆ ! ಒಳಗೆ ನಡಿ ! " ಅಂತ ದರ ದರ ಎಳೆದುಕೊಂಡು ಹೋಗಿಬಿಡುತ್ತಿದ್ದರು. ಊರಿನಲ್ಲಿ ಅಜ್ಜಿ ಮನೆಯಿದೆಯಾ ? ಅದೂ ಇಲ್ಲ ! ಎಲ್ಲಾ ಬೆಂಗಳೂರಿನಲ್ಲೇ ಸ್ಥಿತರು! ಅಲ್ಲಾದರೂ ಹೋಗಿ ನೆನೆಯೋಣಾ ಅಂದರೆ ಅದೂ ಸಾಧ್ಯವಿಲ್ಲ. ಇನ್ನು ಸ್ಕೂಲಿನಲ್ಲಾಗಲೀ, ಕಾಲೇಜಿನಲ್ಲಾಗಲೀ ಮಳೆ ನಿಲ್ಲುವ ತನಕ ಹೊರಗೇ ಬಿಡುತ್ತಿರಲಿಲ್ಲ. ಅಣ್ಣ ಅಮ್ಮ ನಡೆಯದೇ, ಆಟೋ ಅಥವಾ ಕಾರಿನಲ್ಲಿ ಬಂದು ನನಗೆ ಹನಿಯನ್ನೂ ಸೋಕಿಸದೇ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಎಮ್. ಎಸ್ಸಿಗೆ ಬರುವ ಹೊತ್ತಿಗೆ " ನೆನೆಯುವಂಥಾ, ಸಿಕ್ಕಿಹಾಕಿಕೊಳ್ಳುವಂಥಾ ಮಳೆ" ನಾನಂತೂ ನೋಡಲೇ ಇಲ್ಲ !! ಸಿಟಿ ಮನೆಗಳಲ್ಲಿ ಟೆರೇಸು ದಂಡ... ಎಲ್ಲರ ಮನೆಗಳೂ ನಾಕಂತಸ್ತು...ಯಾರಿಗೂ ಹೇಳದೇ ಟೆರೇಸಿನ ಮೇಲೆ ನೆನೆಯುವಾ ಅಂದರೆ ಮೂರನೆಯ ಅಂತಸ್ತಿನವರು ನಮ್ಮ ಮನೆಗೆ ಫೋನಿಸಿ, " ನಿಮ್ಮ ಮಗಳು ಮಳೆಯಲ್ಲಿ ನೆನೆಯುತ್ತಿದ್ದಾಳಲ್ಲ....ಯಾಕೆ ?" ಎಂದು ಪ್ರಶ್ನೆ ಕೇಳುವ ಮೂಲಕ ಅವರ ಸಮಾಜ ಸೇವಾ ಕಳಕಳಿಯನ್ನು ತೋರಿಸಿಕೊಳ್ಳುತ್ತಾರೆ ! ಈಗ ಹೇಳು ಇದರಲ್ಲಿ ನನ್ನ ತಪ್ಪೇನು ಇದೆ ?

Z : ನೀನು ಕೊಟ್ಟ ಕಾರಣಗಳು ಪರಿಗಣಿಸಲು ಅರ್ಹವಾದರೂ, ನೀನು ಇವೆಲ್ಲವನ್ನೂ ಮೀರಿ ಮಳೆಯಲ್ಲಿ ನೆನೆಯಲು ಪ್ರಯತ್ನಿಸಬಹುದಿತ್ತು. ಚಿಕ್ಕವಯಸ್ಸಿನಲ್ಲಿ ಅಪ್ಪ ಅಮ್ಮನ ಎಲ್ಲಾ ಮಾತು ಕೇಳಿ " ಮಾತಾಪಿತೃವಿಧೇಯ ಮಗಳು " ಅನ್ನುವ ಕೆಲಸಕ್ಕೆ ಬಾರದ ಸರ್ಟಿಫಿಕೇಟನ್ನು ಸಂಪಾದಿಸುವ ಬದಲು ಚಂಡಿ ಚಾಮುಂಡಿ ಥರ ಗಲಾಟೆ ಮಾಡಿದ್ದಿದ್ದರೆ ನಿನ್ನನ್ನು ಊಟಿಯ ಬೋರ್ಡಿಂಗ್ ಸ್ಕೂಲ್ ಗೆ ಸೇರಿಸುತ್ತಿದ್ದರು.ನನ್ಗೆ ಅದೇ ಬೇಕಿತ್ತು ! ಯಾರಿಗೂ ಕಾಣಿಸಿಕೊಳ್ಳದೇ ನಾನು ನಿನ್ನ ಜೊತೆ ಬಂದುಬಿಡುತ್ತಿದ್ದೆ . ಏನ್ ಸಖತ್ತಾಗಿರ್ತಿದ್ದೆ ಆಗ ! ಮಳೆಲಿ ಆಟ ಆಡ್ಕೊಂಡ್, nature ನ enjoy ಮಾಡ್ಕೊಂಡ್.....ಆ ಆಸೆ ಮಣ್ಣುಪಾಲಾಗಿದ್ದು ನಿನ್ನ ವಿಧೇಯತೆಯಿಂದ. ಇನ್ನು ನಿನ್ನ ಎಮ್ಮೆಸ್ಸಿ ಮುಗಿದ ಮೇಲೆ ನಾನು ಶೃಂಗೇರಿಯಲ್ಲಿ ಸೆಟ್ಟ್ಲಾಗಲು ಎಂಥಾ foolproof plan ಮಾಡಿದ್ದೆ. ಅನ್ಯಾಯ ಅದು workout ಆಗಲಿಲ್ಲ !! ಇಲ್ಲಾಂದಿದ್ದ್ರೆ....ಏನ್ ಸೈಲೆಂಟಾಗೋದೆ ?

ನಾನು : ತಾವು ಮಾತಾಡಿ. happy independence day.

Z : thanks. But I will not wish you the same ! ಎಂಥಾ ಒಳ್ಳೆ ಮೆಮೋರಿಗಳು ಕಾಣಸಿಗ್ತಾವೆ ಒಬ್ಬೊಬ್ಬರ ಬ್ಲಾಗಿನಲ್ಲು ! ಏನ್ ಮಜಾ ಮಾಡಿದ್ದಾರೆ ಒಬ್ಬೊಬ್ಬರೂ !!! ನಾನು ಇದ್ದೀನಿ....ಪ್ಲಸ್ ನೀನು ಇದ್ದೀಯ... ಶುದ್ಧ ನಿಷ್ಪ್ರಯೋಜಕರು ! ಅವರೆಲ್ಲ ಮಳೆನೀರಲ್ಲಿ ದೋಣಿ ಮಾಡಿಬಿಟ್ಟಿದ್ದಾರೆ, ನೀನು ಅದನ್ನ ಕೆ.ಜಿ. ಕಾರ್ಡ್ಬೋರ್ಡ್ ಮೇಲೆ ಅಂಟಿಸಿ, "this is a boat which sails on water " ಅಂತ ಬರ್ದಿದೀಯ ಅಷ್ಟೆ ! ಛತ್ರಿ ಜಗಳ ಎಲ್ಲಾ ಆಡಿದಾರೆ ...ನೀನು ? ಛತ್ರಿ ಹಿಡ್ಕೊಂಡು school ನಲ್ಲಿ dance ಮಾಡಿದ್ಯ ಅಷ್ಟೆ ! ಮಳೆ ನೋಡ್ಕೊಂಡ್ ಕಾಫಿ ನ ಎಂಜಾಯ್ ಮಾಡಿದ್ದಾರೆ..ನೀನು ಮಲ್ಕೊಂಡಿರ್ತೀಯ !! ನಾನು stranded ಆಗ. ಎಷ್ಟ್ ಕಷ್ಟಪಟ್ಟರೂ ನೀನಂತೂ ಎದ್ದೇಳೊಲ್ಲ !! ನಿನ್ನಿಂದ ನನಗೆ ಒಂದು ಬ್ಲಾಗ್ ಪೋಸ್ಟ್ ನಷ್ಟವಾಗಿದೆಯಾದ್ದರಿಂದ ಆ ನಷ್ಟವನ್ನು ನೀನು ಭರಿಸಿಕೊಡಬೇಕು. ನನಗೆ ಮಳೆ ಬೇಕು...ಎಲ್ಲರು ಬಹಳ ಇಷ್ಟ ಪಟ್ಟು, enjoy ಮಾಡಿ, cherish ಮಾಡಿದ್ದಾರಲ್ಲ, ಅದೇ....same to same ಅದೇ ಮಳೆ ಬೇಕು. ಎಲ್ಲಿಂದನಾದ್ರು ಸರಿ...ಅದನ್ನ ತಂದುಕೊಡು !!

ನಾನು : ನೋಡು...ನಾನು ಎಲ್ಲಾರನ್ನೂ "ನಿಮ್ ಹತ್ರ ಮಳೆ ಇದ್ದ್ರೆ ಕೊಡಿ ..." ಅಂತ ಕೇಳಕ್ಕಾಗಲ್ಲ. ಅದು ತೀರಾ ಕಷ್ಟ ಆಗತ್ತೆ.

Z : ಬೇರೆ ಎಲ್ಲಾದ್ರು try ಮಾಡು.

ನಾನು : ಪೆಟ್ಟಿಗೆ ದಿನಸಿ ಅಂಗಡಿಯಿಂದ ಹಿಡಿದು ದೊಡ್ಡ ದೊಡ್ಡ shopping malls ವರೆಗೂ ಎಲ್ಲಾ ಕಡೆ ಬೀಟ್ ಹೊಡೆದು ಬಂದಾಯ್ತು. ಎಲ್ಲೂ ಮಳೆ ಸಿಗ್ಲಿಲ್ಲ.

Z : ಎಂಟೆಂಟು ಫ್ಲೋರ್ ಕಟ್ಟ್ತಾರೆ...." ಮಳೆ sold here." ಅಂತ ಟೆರೇಸ್ ಮೇಲೆ ಒಂದು ಬೋರ್ಡ್ ಹಾಕಿದ್ರೆ ಮಾಲ್ ಯಜಮಾನ ಅರ್ಧರಾತ್ರಿಯಲ್ಲಿ ಕರೋಡ್ಪತಿಯಾಗ್ತಾನೆ ತಿಳ್ಕೋ !! ಹೀಗೆ ಮಾಡಿ ಟೆರೇಸಿಗೆ entry allow ಮಾಡ್ಬಾರ್ದ ? hopeless fellows !

ನಾನು : ನಿಂಗೆ ಬೇಕಾಗಿದ್ದು ಸಿಗ್ಲಿಲ್ಲ ಅಂತ ಅನ್ಯಾಯ ಅವ್ರನ್ನೆಲ್ಲ ಯಾಕ್ ಬೈಯುತ್ತೀಯ ? ಮಳೆ ಎಲ್ಲಾ ಸಿಗಲ್ಲ...ಸಿಟಿ ಹುಡುಗಿಯಾದ ನಿನಗೆ ಮಳೆಯಲ್ಲಿ ನೆನೆಯೋ ಅದೃಷ್ಟ ಇಲ್ಲ...face the fact and accept the truth. ಅದೂ ಎಲ್ಲಾರು enjoy ಮಾಡೋ ಅಂಥಾ ಮಳೆ ಇಲ್ಲೆಲ್ಲೂ ಸಿಗಲ್ಲ....ಇಲ್ಲೆಲ್ಲಾ ಬರೀ ಜನ ಕೊಚ್ಚಿಕೊಂಡು ಹೋಗುವಂಥಾ, ಗೋಡೆ ಬಿದ್ದು ಆಸ್ತಿ ಪಾಸ್ತಿ ನಷ್ಟವಾಗುವಂಥಾ ಮಳೆ ಮಾತ್ರ ಸಿಗೋದು.

Z : ಇಲ್ಲಾ ನನಗೆ ಮಳೆ ಬೇಕೇ ಬೇಕು...ಅವರೆಲ್ಲ ಎಂಜಾಯ್ ಮಾಡಿ ಬ್ಲಾಗ್ ನಲ್ಲಿ ಉಲ್ಲೇಖಿಸಿದ ಮಳೆನೇ ಬೇಕು. ಒಂದು ಹನಿನೂ change ಇರಬಾರದು.

ನಾನು : ಏನ್ ಮಳೆ ಅಂದ್ರೆ ಸೀರೆ ಶಾಪಿಂಗ್ ಅಂದುಕೊಂಡೆಯಾ ? "same type ಕೊಡಿ " ಅಂತ ಕೇಳೋಕೆ ? ನೋಡು...ದಯವಿಟ್ಟು ಹಠ ಮಾಡ್ಬೇಡಾ . ನಿಂಗೆ ಭೇಲ್ ಪುರಿ ಕೊಡ್ಸ್ತಿನಿ.

Z : ಬೇಡ.

ನಾನು : ಪಾನಿ ಪುರಿ ? ಬೀದಿ ಪಾನಿಪುರಿ ಅಂಗಡಿಯ ಸಕಲ ಚಾಟ್ಸ್ ನ ನೈವೇದ್ಯ ಮಾಡ್ತಿನಿ.

Z : ಬೇಡ.

ನಾನು : ದ್ವಾರಕಾ ಭವನದ ಖಾಲಿ ದೋಸೆ ?

Z : ಬೇಡ.

ನಾನು : ಉಪಹಾರ ದರ್ಶಿನಿ ಶಾವಿಗೆ ಬಾತ್ ?

Z : ಉಹು.

ನಾನು : ವಿದ್ಯಾರ್ಥಿ ಭವನದ ಮಸಾಲೆ ದೋಸೆ ? ಇದಕ್ಕಾದ್ರೂ ಒಪ್ಕೊ.

Z : no chance.

ನಾನು : ಶ್ರೀನಿವಾಸ ಬೇಕರಿಯಲ್ಲಿ ಸಕಲ ಬೇಕರಿ ತಿಂಡಿ ? capsicum puff ?

Z : ಬೇಡ ಬೇಡ ಬೇಡ.

ನಾನು : k.c. das ನ ಸಕಲ ಬಂಗಾಳಿ ಸ್ವೀಟ್ಸು ?

Z : ಇಲ್ಲ ಬೇಡ.

ನಾನು : ಬ್ಯೂಗಲ್ ರಾಕ್ ಭೇಲ್ ಪುರಿ ಗಾಡಿಯ ಸಕಲ ಖಾದ್ಯಗಳು ?

Z : ನೊ.

ನಾನು : cane-o-la ಜ್ಯೂಸ್ ?

Z : ಸಾಲ್ದು !

ನಾನು : ಕದಂಬದ ಸಕ್ಕರೆ ಪೊಂಗಲ್ಲು, ಪುಳಿಯೋಗರೆ, ಬಿಸಿಬೇಳೇಬಾತ್ ? ಕಾಫಿ ?

Z : ಬೇಡ.

ನಾನು : ಗಾಂಧಿಬಜಾರ್ ಬೋಂಡಾ ಅಂಗಡಿಯ ಆಲೂ ಬೊಂಡಾ ?

Z : ಮಳೆಲಿ ನೆನೆಯುತ್ತಾ ಕೊಡಿಸುವುದಾದರೆ ಮಾತ್ರ ಒಕೆ.

ನಾನು : ಮಳೆಲಿ ಆಗಲ್ಲ ಪುಟ್ಟ...ಅದ್ ಬಿಟ್ಟ್ ಇನ್ನೇನ್ ಬೇಕಾದ್ರು ಕೇಳು.

Z : ಇಲ್ಲಾ ನಂಗೆ ಇದೇ ಬೇಕು !

ನಾನು : national high school ಹಿಂಭಾಗದ ಗಾಡಿಯಲ್ಲಿನ ಹೆಸರು ಬೇಳೆ ? ಬೇಡ್ವಾ ?

Z : ಬೇಡ.

ನಾನು : vishwesharapuram chat street ನಲ್ಲಿ ಒಂದು round? pleeeeeeeease ಒಪ್ಕೊ !

Z : ಬೇಡ. ನಾನ್ ಬರಲ್ಲ !

ನಾನು : kamat minerva ಜೋಳದ ರೊಟ್ಟಿ ?

Z : ನೊ.

ನಾನು : MTR ನಲ್ಲಿ ದೋಸೆ, ರವೆ ಇಡ್ಲಿ, ಊಟ, fruit mixture, ಬಾದಾಮಿ ಹಾಲು , ಖಾರದ cashew ?

Z : ಇಲ್ಲ ಇಲ್ಲ...ನಂಗೆ ಮಳೆ ನೇ ಬೇಕು.

ನಾನು : ಪ್ಲೀಸ್ ಹಠ ಮಾಡ್ಬೇಡ...ನೋಡು ಗುರುರಾಜ ಖಾರ ಸ್ಟಾಲಿನ ಬೇಸನ್ ಲಾಡು, ಕೋಡ್ಬಳೆ, ಚಕ್ಕುಲಿ, ಕೊಬ್ರಿಮಿಠಾಯಿ, ಕುಂದಾ, ಕರದಂಟು ....ಇದೆಲ್ಲಾ ನೂ ಬೇಡ್ವಾ ?

Z : ಬೇಡ ಬೇಡ ಬೇಡ.

ನಾನು : ಧಾರವಾಡದ ಪೇಡಾ ?

Z : ಉಹು.

ನಾನು : uffffffffffffffffff !!!!!!!!!!!!!!!!!!!!!! atleast ಸುಖ್ ಸಾಗರ್ ಜ್ಯೂಸ್ ಗಾದ್ರೂ ಒಪ್ಕೊಳ್ಳೆ !!

Z : ಒಪ್ಪಲ್ಲ. ಯಾವ್ದೂ ಬೇಡ. ನನಗೆ ಮಳೆನೇ ಬೇಕು ಒಂದ್ ಸರ್ತಿ, ನಂಗೆ ಮಳೆನೇ ಬೇಕು ಎರಡ್ ಸರ್ತಿ, ನಂಗೆ ಮಳೆ ನೇ ಬೇಕು ಮೂರ್ ಸರ್ತಿ !

ಗಲಾಟೆ ಜಾಸ್ತಿಯಾಯ್ತು ನಿಂದು. ಮಳೆ ಎಲ್ಲ ಸಿಗಲ್ಲ. ನನ್ನ ಮಾತು ಕೇಳ್ತ್ಯೋ ಇಲ್ವೊ ?

Z : ವಾಆಆಆಆಆಆಆಆಆಆಆಆಆಆಆಆಆಆಆಆಆಆಆ !!!!!!!!!!!!!!!!!!!!!!!!!!!!!!!!!boo hoooooooooooooooo !!!!!!!!!!!!!!!!!!!!!!!!!!!!!!!!!!!!!!!!!!!!!

ಮಾತ್ ಕೇಳೆ hopeless fellow !!

ವಾಆಆಆಆಆಆಆಆಆಆಆಆಆಆಆಆಆಆಆಆಆಆಆಆಆಅ !!!!!!!!!!!!!!!!!!!!!!!!!!!!!!!!!!!!!!!!!!!!!!

ಅತ್ತು ಅತ್ತು ಅದ್ ಎಷ್ಟ್ ಬಕೆಟ್ ಕಣ್ಣೀರು ತುಂಬಿಸ್ತಾಳೋ ನಾನು ನೋಡೇಬಿಡ್ತಿನಿ. ಎಲ್ಲ್ ಹೋಗ್ತಾಳೆ.. ಆಮೇಲೆ sorry ಅಂತ ಅಂದೇ ಅಂತಾಳೆ. ಅವಳು sorry ಅಂತ ಕೇಳೋವರ್ಗೂ...

line on hold.

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...